ಉಡುಪಿ: KSRTC ಬಸ್ ನಿಲ್ದಾಣದಲ್ಲಿ 15 ದಿನಗಳಿಂದ ವಿದ್ಯುತ್ ಇಲ್ಲದೆ ಇರುವ ಕುರಿತು ಜು. 31ರಂದು ‘ಉದಯವಾಣಿ’ ವರದಿಗೆ ನಗರಸಭೆ ಸ್ಪಂದಿಸಿದೆ. ಮಂಗಳವಾರ ಬೆಳಗ್ಗೆ ಬಸ್ ನಿಲ್ದಾಣದ ಹೊರಗೆ ಹಳೆಯ ವಿದ್ಯುತ್ ದೀಪಗಳನ್ನು ಕ್ರೇನ್ ಮೂಲಕ ತೆರವುಗೊಳಿಸಿ, ಎಲ್.ಇ.ಡಿ. ದೀಪಗಳನ್ನು ಅಳವಡಿಸಲಾಗಿದೆ. ಒಳಗೆ ಇರುವ ಹಳೆಯ ವಿದ್ಯುತ್ ತಂತಿಗಳನ್ನು ಪರಿಶೀಲನೆ ನಡೆಸಿ ದೋಷವನ್ನು ಪರಿಹರಿಸಲಾಗಿದೆ. ವಿದ್ಯುದ್ದೀಪಗಳನ್ನೂ ಸರಿಪಡಿಸಲಾಗಿದೆ.
ವರದಿಗೆ ಶ್ಲಾಘನೆ
ನಿಲ್ದಾಣದಲ್ಲಿ ಕಳೆದ 15 ದಿನಗಳಿಂದ ವಿದ್ಯುತ್ ವ್ಯವಸ್ಥೆ ಹದಗೆಟ್ಟು ಹೋಗಿದ್ದರೂ ಸರಿಪಡಿಸಿರಲಿಲ್ಲ.
‘ಉದಯವಾಣಿ’ ವರದಿ ಪ್ರಕಟಿಸಿದ ಬೆನ್ನಲ್ಲೇ ನಗರಸಭೆ ಎಚ್ಚೆತ್ತು ವಿದ್ಯುತ್ ವ್ಯವಸ್ಥೆ ದುರಸ್ತಿಪಡಿಸಿದ್ದಕ್ಕೆ KSRTC ಸಿಬಂದಿ ಮತ್ತು ಸ್ಥಳೀಯ ಅಂಗಡಿ ಮಾಲಕರು ಶ್ಲಾಘಿಸಿದ್ದಾರೆ.