Advertisement

ಉಡುಪಿ -ಮಣಿಪಾಲ ರಸ್ತೆಗಿಲ್ಲ ಬೆಳಕಿನ ಭಾಗ್ಯ

07:25 PM Jan 24, 2022 | Team Udayavani |

ಉಡುಪಿ: ಕಳೆದ ಮೂರು ವರ್ಷಗಳಿಂದ ಉಡುಪಿ-ಮಣಿಪಾಲ ಮುಖ್ಯರಸ್ತೆಗೆ ಕಗ್ಗತ್ತಲಿನಿಂದ ಮುಕ್ತಿ ದೊರೆ
ತಿಲ್ಲ. ಉತ್ತಮ ರಸ್ತೆಗಾಗಿ ವರ್ಷಾನುಗಟ್ಟಲೆ ಪರಿತಪಿಸುತ್ತಿದ್ದ ಜನರಿಗೆ ರಸ್ತೆ ಸೌಕರ್ಯ ಮೇಲ್ದರ್ಜೆಗೇರಿದರೂ ಲೈಟ್‌ ಇಲ್ಲದೆ ಸಂಕಷ್ಟ ಅನುಭವಿಸು ವಂತಾಗಿದೆ.

Advertisement

ಕುಂಜಿಬೆಟ್ಟು-ಎಂಜಿಎಂ-ಇಂದ್ರಾಳಿ-ಲಕ್ಷ್ಮೀಂದ್ರನಗರ ಮಣಿಪಾಲವರೆಗೂ ಕತ್ತಲ ಸಂಚಾರ ಸಾರ್ವಜನಿಕರಿಗೆ ಭಯ ಹುಟ್ಟಿಸುತ್ತಿದೆ. ಅಕ್ಕಪಕ್ಕದ ಕಟ್ಟಡಗಳ ಲೈಟಿಂಗ್‌, ಜಾಹೀರಾತು ಫ‌ಲಕಗಳ ವಿದ್ಯುತ್‌ಬೆಳಕ್ಕೆ ಸದ್ಯಕ್ಕೆ ಆಸರೆಯಾಗಿದೆ. ಈ ಚತುಷ್ಪಥ ರಸ್ತೆಯನ್ನು ಉತ್ತಮವಾಗಿ ನಿರ್ಮಾಣ ಮಾಡಲಾಗಿದೆ. ಇಂದ್ರಾಳಿ ಸೇತುವೆ ಬಳಿ ಹೊರತುಪಡಿಸಿದರೆ ಉಡುಪಿ-ಮಣಿಪಾಲ ಸಂಚಾರ ಈಗ ಸಲೀಸು, ಆದರೆ ಸಂಜ 6.30ರ ಬಳಿಕ ಕತ್ತಲ ಸಂಚಾರ ಕಳೆದ ಎರಡು-ಮೂರು ವರ್ಷಗಳಿಂದ ಸವಾರರನ್ನು, ಪಾದಚಾರಿಗಳನ್ನು ಸಾಕಷ್ಟು ಬೇಸರ ಹುಟ್ಟಿಸುತ್ತದೆ.

ತಾತ್ಕಾಲಿಕ ವ್ಯವಸ್ಥೆಯಾದರೂ ಕಲ್ಪಿಸಿ
ಈ ಮುಖ್ಯ ರಸ್ತೆಯಲ್ಲಿ ರಾತ್ರಿ ಸಂಚಾರ ಭೀತಿ ಹುಟ್ಟಿಸುವಂತಿದೆ, ಹೆದ್ದಾರಿ ಪ್ರಾಧಿಕಾರ ತಾಂತ್ರಿಕ ಕಾರಣ ನೀಡಿ ವರ್ಷಗಟ್ಟಲೆ ವಿಳಂಬಮಾಡಿಕೊಂಡು ಬಂದಿದೆ. ರಾತ್ರಿ 7ರಗಂಟೆ ಅನಂತರ ಓಡಾಟಕ್ಕೆ ಅನುಕೂಲ ವಾಗುವಂತೆ ಜಿಲ್ಲಾಡಳಿತ, ನಗರಸಭೆ ವತಿಯಿಂದ ತಾತ್ಕಾಲಿಕ ದೀಪದ ವ್ಯವಸ್ಥೆಯಾದರೂ ಮಾಡುವಂತೆ ಮತ್ತು ಸಂಸದರು, ಶಾಸಕರು ಸಹಿತ ಜನಪ್ರತಿನಿಧಿಗಳು ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸುವಂತೆ ಇಂದ್ರಾಳಿ, ಎಂಜಿಎಂ ಭಾಗದ ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ.

ಹೆದ್ದಾರಿ ಪ್ರಾಧಿಕಾರದ ಉತ್ತರವೇನು ?
ಇಂದ್ರಾಳಿ ರೈಲ್ವೇ ಸೇತುವೆ, ಮಣಿಪಾಲ-ಉಡುಪಿ ವಿದ್ಯುತ್‌ ದೀಪದ ವ್ಯವಸ್ಥೆ, ಮತ್ತಿತರೆ ಕಾಮಗಾರಿಗಳಿಗೆ ಹೆಚ್ಚುವರಿ ಅನುದಾನದ ಮರು ಪ್ರಸ್ತಾವನೆಯನ್ನು ಹೆದ್ದಾರಿ ಸಚಿವಾಲಯಕ್ಕೆ ಸಲ್ಲಿಸಲಾಗಿದ್ದು, ಹಣಕಾಸು ಅನುಮೋದನೆಗಾಗಿ ಪರಿಶೀಲನೆ ಹಂತದಲ್ಲಿದೆ ಎಂದು ಹೇಳಿದ್ದಾರೆ. ಇದಕ್ಕೆ ಎರಡು, ಮೂರು ತಿಂಗಳಾದರೂ ಸಮಯ ತೆಗೆದುಕೊಳ್ಳಲಿದೆ, ಅನು ಮೋದನೆ ಸಿಕ್ಕೊಡನೆ ಕೆಲಸ ಆರಂಭಿಸಲಾಗುವುದು ಎಂದು ಪ್ರಾಧಿಕಾರದ ಅಧಿಕೃತ ಮೂಲಗಳು ತಿಳಿಸಿದೆ.

ಹೆಣ್ಮಕ್ಕಳಿಗೆ ಆತಂಕ
ಶೈಕ್ಷಣಿಕ, ಆರೋಗ್ಯ, ಆಭರಣ, ಜವಳಿ, ಮುದ್ರಣ ಸೇರಿದಂತೆ ವಿವಿಧ ಉದ್ಯಮಗಳ ಉದ್ಯೋಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮಣಿಪಾಲ, ಉಡುಪಿ ಭಾಗದಲ್ಲಿ ಹೆಣ್ಣು ಮಕ್ಕಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಎಂಜಿಎಂ, ಇಂದ್ರಾಳಿ, ಕುಂಜಿಬೆಟ್ಟು, ಲಕ್ಷ್ಮೀಂದ್ರನಗರ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಿಜಿ ಮತ್ತು ಹೆಣ್ಣು ಮಕ್ಕಳ ವಸತಿ ಗೃಹಗಳು ಕಾರ್ಯ ನಿರ್ವಹಿಸುತ್ತಿದೆ. ಎಂಜಿಎಂ ಕಾಲೇಜು ಸಮೀಪವು ವಿದ್ಯಾರ್ಥಿನಿಯರ ಹಾಸ್ಟೆಲ್‌
ಇದ್ದು, ಈ ಭಾಗದಲ್ಲಿ ರಾತ್ರಿ 7 ಗಂಟೆ ಅನಂತರ ಆಚೀಚೆ ತಿರುಗಾಡಲು ಭಯ ವಾಗುತ್ತದೆ. ಅಪರಿಚಿತರು ಕೆಲವೊಮ್ಮೆ ಕತ್ತಲೆಯಲ್ಲಿ ಚುಡಾಯಿಸುವುದು, ಒಮ್ಮೊಮ್ಮೆ ಹಿಂಬಾಲಿಸುವುದು ನಡೆಯುತ್ತದೆ. ನಗರದ ಮುಖ್ಯ ಹೆದ್ದಾರಿ ರಸ್ತೆ ಬದಿಯಲ್ಲಿ ಹೆಣ್ಣು ಮಕ್ಕಳು, ಮಹಿಳೆಯರು ನಡೆದುಕೊಂಡು ಹೋಗಲು ಆತಂಕ ಪಡುವಂತ
ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಅನುದಾನಕ್ಕೆ ಮರು ಪ್ರಸ್ತಾವನೆ
ರಾ. ಹೆ. ಪ್ರಾಧಿಕಾರವು ಇಂದ್ರಾಳಿ ರೈಲ್ವೇ ಸೇತುವೆ, ನಗರದ ಮಧ್ಯೆ ಹೆದ್ದಾರಿ ದೀಪದ ವ್ಯವಸ್ಥೆ ಸಹಿತ ಹೆಚ್ಚುವರಿ ಅನುದಾನಕ್ಕಾಗಿ ಮರು ಪ್ರಸ್ತಾವನೆ ಸಲ್ಲಿಸಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಈ ಬಗ್ಗೆ ಮುತುವರ್ಜಿ ವಹಿಸಿ ಮಾತುಕತೆ ನಡೆಸುತ್ತಿದ್ದಾರೆ. ಈ ಬಗ್ಗೆ ಹೆದ್ದಾರಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಜಿಲ್ಲಾಡಳಿತ ಸಿಎಸ್‌ಆರ್‌ ಅನುದಾನದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲು ಸಾಧ್ಯವೇ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಕೆಲವೇ ದಿನಗಳಲ್ಲಿ ಪರ್ಯಾಯ ಸಭೆ ನಡೆಯಲಿದ್ದು, ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.
-ಕೂರ್ಮಾರಾವ್‌, ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ.

-ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next