Advertisement

Udupi ತಮಿಳುನಾಡಿನ ಎಳನೀರು; ಸ್ಥಳೀಯ ಕಾರ್ಮಿಕರ ಕೊರತೆ

02:58 PM Sep 20, 2024 | Team Udayavani |

ಉಡುಪಿ: ನಗರದ ಮಾರುಕಟ್ಟೆಯಲ್ಲಿ ಎಳನೀರು ಕೊರತೆ ಎದುರಾಗಿದೆ. ಇಲ್ಲಿಯವರೆಗೆ ಆಸರೆಯಾಗಿದ್ದ ಹೊರಜಿಲ್ಲೆಯ ಎಳನೀರೂ ಇದೀಗ ಪೂರೈಕೆಯಾಗುತ್ತಿಲ್ಲ. ಅನಿವಾರ್ಯವಾಗಿ ತಮಿಳುನಾಡಿನಿಂದ ಜಿಲ್ಲೆಯ ಅಂಗಡಿಗಳಿಗೆ ಎಳನೀರು ತರಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಎಳನೀರು ದರ ಸಹ ಗಗನಕ್ಕೇರಿದ್ದು, ಪಂಚಮಿ ಮತ್ತು ಚೌತಿ ಮುಗಿದರೂ ಎಳನೀರು ಮತ್ತು ಬಾಳೆ ಹಣ್ಣಿನ ದರ ಇಳಿಕೆಯಾಗಿಲ್ಲ. ಸ್ಥಳೀಯವಾಗಿ ಬಾರಕೂರು, ಕುಂದಾಪುರದಿಂದ ಎಳನೀರು ಪೂರೈಕೆಯಾಗುತ್ತಿತ್ತು. ಕಾರ್ಮಿಕರ ಕೊರತೆ, ತೆಂಗು ಬೆಳೆಗೆ ಇಲ್ಲದ ಹೆಚ್ಚಿನ ಒಲವು, ಕೊಬ್ಬರಿ ಎಣ್ಣೆಗೆ ಆದ್ಯತೆ ನೆಲೆಯಲ್ಲಿ ಸ್ಥಳೀಯವಾಗಿ ಎಳನೀರು ಪೂರೈಕೆ ಮಾರುಕಟ್ಟೆಗೆ ಕಡಿಮೆಯಾಗುತ್ತಿದೆ.

ತುಮಕೂರು, ಮೈಸೂರು, ತರಿಕೆರೆ, ಚಿಕ್ಕಮಗಳೂರು, ಹಾಸನ ಭಾಗದಿಂದ ಜಿಲ್ಲೆಗೆ ಹೆಚ್ಚು ಎಳನೀರು ಪೂರೈಕೆಯಾಗುತ್ತಿದ್ದರೂ, ಪ್ರಸ್ತುತ ಅಲ್ಲಿಯೇ ಬೇಡಿಕೆ ಹೆಚ್ಚಿದ್ದು, ಇಳುವರಿ ಕಡಿಮೆ ಇರುವ ಕಾರಣ ಪೂರೈಕೆ ಪ್ರಮಾಣ ತಗ್ಗಿದೆ. ಇದೀಗ ಪ್ರಮುಖ ವ್ಯಾಪಾರಿಗಳು ತಮಿಳುನಾಡಿನಿಂದ ಎಳನೀರು ತರಿಸಿ ಮಾರಾಟ ಮಾಡುತ್ತಿದ್ದಾರೆ. ಎಳನೀರು ದರ ಏರಿಕೆಯಾಗುತ್ತಲೇ ಇದ್ದು, ಒಂದು ಎಳನೀರಿಗೆ 40-50 ರೂ.ನಂತೆ ಮಾರಾಟ ಮಾಡಲಾಗುತ್ತಿದೆ. ಗೆಂದಾಳೆ ಎಳನೀರು ಒಂದಕ್ಕೆ 60 ರೂ.ನಂತೆ ಮಾರಾಟವಾಗುತ್ತಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

  • ಮಳೆ ಬಿಡುವು ನೀಡಿದರೆ ವಿಪರೀತ ಸೆಕೆ; ಎಳನೀರಿಗೆ ಹೆಚ್ಚಿನ ಬೇಡಿಕೆ

ಬಾಳೆ ಹಣ್ಣು ದುಬಾರಿ
ಹಬ್ಬಗಳು ಮುಗಿದರೂ ಬಾಳೆ ಹಣ್ಣಿನ ದರ ಮಾತ್ರ ಕಡಿಮೆಯಾಗಿಲ್ಲ. ಮೈಸೂರು, ಪುಟ್ಬಾಳೆ, ಪಚ್‌cಬಾಳೆ, ನೇಂದ್ರ, ಬೂದು, ಚಂದ್ರಬಾಳೆ ಸಹಿತ ವಿವಿಧ ಹಣ್ಣಿಗೆ ದರ ಏರಿಕೆಯಾಗಿದ್ದು, ಮಲೆನಾಡು, ಕರಾವಳಿ ಭಾಗದಲ್ಲಿ ಇಳುವರಿ ಕುಸಿತವಾದ ಹಿನ್ನೆಲೆಯಲ್ಲಿ ದರ ಇಳಿಕೆಯಾಗುತ್ತಿಲ್ಲ. ಕೆಜಿ ಒಂದಕ್ಕೆ 70-80 ಮತ್ತು 100 ರೂ.ವರೆಗೆ ಬಾಳೆ ಹಣ್ಣು ಮಾರಾಟವಾಗುತ್ತಿದೆ. ಪುಟ್ಬಾಳೆ ಹಣ್ಣು 90-100ಕ್ಕೆ ಕೆಜಿಗೆ ಮಾರಾಟವಾಗುತ್ತಿದೆ ಎಂದು ನಗರದ ಹಣ್ಣಿನ ವ್ಯಾಪಾರಿಗಳು ತಿಳಿಸಿದ್ದಾರೆ. ಉಡುಪಿ ಮಾರುಕಟ್ಟೆಗೆ ತೀರ್ಥಹಳ್ಳಿ, ಶಿವಮೊಗ್ಗ ಭಾಗದಿಂದ ಹೆಚ್ಚಿನ ಪ್ರಮಾಣದಲ್ಲಿ ಬಾಳೆಹಣ್ಣು ಪೂರೈಕೆಯಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next