Advertisement

ಉಡುಪಿ ಜಿಲ್ಲೆ: 1,111 ಬೂತ್‌ಗಳು, 9.9 ಲಕ್ಷ ಮತದಾರರು

12:30 AM Mar 09, 2019 | Team Udayavani |

ಉಡುಪಿ: ಉಡುಪಿ ಜಿಲ್ಲೆಯಲ್ಲಿ 1,111 ಮತಗಟ್ಟೆಗಳಿದ್ದು 9,90,773 ಮತದಾರರಿದ್ದಾರೆ. ಇವರಲ್ಲಿ 4,77,243 ಪುರುಷರು, 5,13,514 ಮಹಿಳೆಯರು, 16 ತೃತೀಯ ಲಿಂಗಿಗಳು ಇದ್ದಾರೆಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮತ್ತು ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ತಿಳಿಸಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಬೈಂದೂರಿನಲ್ಲಿ 2,22,542 ಮತದಾರರು (1,08,252 ಪುರುಷರು, 1,14,289 ಮಹಿಳೆಯರು), ಕುಂದಾಪುರದಲ್ಲಿ 2,00,101 (96,164 ಪು, 1,03,937 ಮ), ಉಡುಪಿಯಲ್ಲಿ 2,05,566 (99,598 ಪು, 1,05,966 ಮ), ಕಾಪುವಿನಲ್ಲಿ 1,81,178 (86,308 ಪು, 94,858 ಮ), ಕಾರ್ಕಳದಲ್ಲಿ 1,81,386 (86,921 ಪು, 94,464 ಮ) ಮತದಾರರಿದ್ದಾರೆ ಎಂದರು.

– ಈ ಬಾರಿ 16,525 ಯುವ ಮತದಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 6,584 ದೈಹಿಕ ದುರ್ಬಲ ಮತದಾರರನ್ನು ಗುರುತಿಸಲಾಗಿದೆ. ಗುರುತಿಸದೆ ಇರುವವರನ್ನು ಗುರುತಿಸುವ ಕೆಲಸ ನಡೆಯುತ್ತಿದೆ. 
– 255 ಮತಗಟ್ಟೆಗಳನ್ನು ಕ್ರಿಟಿಕಲ್‌, 37ನ್ನು ದುರ್ಬಲ ವರ್ಗಗಳ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಇಲ್ಲಿಗೆ ವಿಶೇಷ ಭದ್ರತೆ ಮಾಡಲಾಗುವುದು. 
– ಜಿಲ್ಲೆಯಲ್ಲಿ ಶೇ. 100 ಎಪಿಕ್‌ ಕಾರ್ಡ್‌ (ಗುರುತಿನ ಚೀಟಿ) ಕೊಡಲಾಗಿದೆ. ಹೊಸ ಮತದಾರರಿಗೆ ಎಪಿಕ್‌ ಕಾರ್ಡ್‌ ಕೊಡಲಾಗುವುದು.
– ವಿದ್ಯುನ್ಮಾನ ಮತ ಯಂತ್ರ, ವಿವಿ ಪ್ಯಾಟ್‌ ಪ್ರಾತ್ಯಕ್ಷಿಕೆಗಳನ್ನು ವಿವಿಧೆಡೆ ಮಾಡಲಾಗುತ್ತಿದೆ. ಅಗತ್ಯಕ್ಕಿಂತ ಶೇ.5 ಹೆಚ್ಚು ಮತಯಂತ್ರ, ವಿವಿ ಪ್ಯಾಟ್‌ಗಳನ್ನು ಇರಿಸಿಕೊಳ್ಳಲಾಗುವುದು. 
– 1,400 ಮತದಾರರಿಗಿಂತ ಹೆಚ್ಚಿನ ಮತಗಟ್ಟೆಗಳಿದ್ದರೆ ಹೆಚ್ಚುವರಿ ಮತಗಟ್ಟೆ ತೆರೆಯಲಾಗುವುದು. ಕಳೆದ ಚುನಾವಣೆಯಲ್ಲಿದ್ದ 33 ಹೆಚ್ಚುವರಿ ಮತಗಟ್ಟೆಗಳನ್ನು ಈ ಬಾರಿ ಸಾಮಾನ್ಯ ಮತಗಟ್ಟೆಗಳಾಗಿ ಪರಿವರ್ತಿಸಲಾಗಿದೆ. ಈ ಬಾರಿಯೂ ಕೊನೆಯ ಹಂತದಲ್ಲಿ ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಬಹುದು.

ಸಹಾಯಕ ಚುನಾವಣಾಧಿಕಾರಿಗಳು
ಬೈಂದೂರು ಕ್ಷೇತ್ರಕ್ಕೆ ಭೂದಾಖಲೆಗಳ ಉಪನಿರ್ದೇಶಕ ಕುಸುಮಾಧರ ಗೌಡ, ಕುಂದಾಪುರಕ್ಕೆ ಸಹಾಯಕ ಕಮಿಷನರ್‌ ಡಾ| ಎಸ್‌.ಎಸ್‌. ಮಧುಕೇಶ್ವರ, ಉಡುಪಿಗೆ ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ, ಕಾಪುವಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ನಾಗರಾಜ್‌, ಕಾರ್ಕಳಕ್ಕೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಂತೋಷಕುಮಾರ್‌ ಸಹಾಯಕ ಚುನಾವಣಾಧಿಕಾರಿಗಳು. 

ಅಕ್ರಮ ಹಣ ಪ್ರಕರಣದ ಪ್ರಗತಿ
ಕಳೆದ ಚುನಾವಣೆಗಳಲ್ಲಿ ಸಿಕ್ಕಿದ ಲೆಕ್ಕವಿಲ್ಲದ ಹಣದ ಬಗ್ಗೆ ಕೇಳಿದಾಗ, ನ್ಯಾಯಾಲಯದ ಪ್ರಕ್ರಿಯೆಯಲ್ಲಿದೆ. ಪ್ರತಿ ವಾರ ಚುನಾವಣಾ ಆಯೋಗದ ಜತೆ ನಡೆಯುವ ವೀಡಿಯೋ ಕಾನ್ಫರೆನ್ಸ್‌ನಲ್ಲಿಯೂ ಎಸ್‌ಪಿಯವರು ಪಾಲ್ಗೊಳ್ಳುತ್ತಿದ್ದು ಅವರು ಇದರ ಬಗ್ಗೆ ನಿಗಾ ವಹಿಸುತ್ತಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Advertisement

ಮಿಂಚಿನ ನೋಂದಣಿಗೆ 12,500 ಮತದಾರರು
ಎಲ್ಲ ಮತಗಟ್ಟೆಗಳಲ್ಲಿ ಮಾ. 2-3ರಂದು ನಡೆದ ಮಿಂಚಿನ ನೋಂದಣಿ ಕಾರ್ಯಕ್ರಮದಲ್ಲಿ ಸುಮಾರು 12,500 ಮತದಾರರು ಹೆಸರು ನೋಂದಾಯಿಸಿದ್ದಾರೆ. ಈ ಅರ್ಜಿಗಳ ಪರಿಶೀಲನೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಚುನಾವಣೆಯಲ್ಲಿ ನಾಮಪತ್ರ ಸ್ವೀಕರಿಸಲು ಆರಂಭವಾಗುವವರೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸುವ ಕೆಲಸ ನಡೆಯಲಿದೆ. 

ಪಿಂಕ್‌ ಮತಗಟ್ಟೆ ಹೆಸರಿಲ್ಲ
ಹಿಂದಿನ ಚುನಾವಣೆಯಲ್ಲಿ ಮಹಿಳಾ ಮತದಾರರನ್ನು ಆಕರ್ಷಿಸಲು ಪಿಂಕ್‌ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಈ ಬಾರಿ ಮಹಿಳೆಯರು ಮತ್ತು ಅಂಗವಿಕಲ ಮತದಾರರನ್ನು ಆಕರ್ಷಿಸಲು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಯಾದರೂ ಮತಗಟ್ಟೆಗಳಿಗೆ ಪಿಂಕ್‌ ಮತಗಟ್ಟೆ ಎಂದು ಹೆಸರು ಇರುವುದಿಲ್ಲ. 

ಅಂಗವಿಕಲರಿಗೆ ಸೌಲಭ್ಯ
ಅಂಗವಿಕಲ ಮತದಾರರು ಅರ್ಜಿ ಸಲ್ಲಿಸಿದರೆ ಅವರನ್ನು ಮತಗಟ್ಟೆಗೆ ಕರೆದೊಯ್ಯಲು ವ್ಯವಸ್ಥೆ ಮಾಡಲಾಗುವುದು. ದೃಷ್ಟಿದೋಷವುಳ್ಳವರಿಗೆ ಭೂತಗನ್ನಡಿ ವ್ಯವಸ್ಥೆ ಕಲ್ಪಿಸಲಾಗುವುದು. ಪುರುಷರು, ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ರ್‍ಯಾಂಪ್‌, ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಅಗತ್ಯವಿದ್ದರೆ ಫ್ಯಾನ್‌, ಆರೋಗ್ಯ ನಿಗಾ ವ್ಯವಸ್ಥೆಗಳಿಗೂ ಆದ್ಯತೆ ಕೊಡಲಾಗುವುದು.

ಸಹಾಯವಾಣಿ, ಆ್ಯಪ್‌
– ಎಲ್ಲ ಜಿಲ್ಲೆಗಳಲ್ಲಿ 1950 ಸಹಾಯವಾಣಿಯನ್ನು ತೆರೆಯಲಾಗಿದೆ.
– cVigi ಆ್ಯಪ್‌ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಕುರಿತು ದೂರು ಸಲ್ಲಿಸಬಹುದು. 
– voterhelpline  ಮತ್ತು  chunavana ಆ್ಯಪ್‌ ಮೂಲಕ ಮತದಾರರ ಮಾಹಿತಿಗಳನ್ನು ಪಡೆಯಬಹುದು. 

Advertisement

Udayavani is now on Telegram. Click here to join our channel and stay updated with the latest news.

Next