Advertisement

ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.

01:33 AM Apr 25, 2024 | Team Udayavani |

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕುರಿತು ಕಾಂಗ್ರೆಸ್‌ ಅಭ್ಯರ್ಥಿ ಹೊಂದಿರುವ ದೂರದೃಷ್ಟಿ, ಸಮಸ್ಯೆಗಳ ಪರಿಹಾರಕ್ಕೆ ಅವರಲ್ಲಿರುವ ಯೋಚನೆ, ಯೋಜನೆಗಳನ್ನು “ಉದಯವಾಣಿ’ಯೊಂದಿಗೆ ತೆರೆದಿಟ್ಟಿದ್ದಾರೆ.

Advertisement

ಕ್ಷೇತ್ರದ ಅಭಿವೃದ್ಧಿಗೆ ಬಗ್ಗೆ ನಿಮ್ಮ ಕನಸು ಹೇಗಿದೆ?
ಈ ಕ್ಷೇತ್ರ ವ್ಯಾಪ್ತಿಯಲ್ಲಿ ಕರಾವಳಿ, ಮಲೆನಾಡು, ಬಯಲುಸೀಮೆ ಹೀಗೆ ಮೂರು ವಿಭಾಗ ಬರುತ್ತದೆ. ಕರಾವಳಿಯಲ್ಲಿ ಮೀನುಗಾರರ, ರೈತರ ಸಮಸ್ಯೆ ಆದ್ಯತೆ ನೀಡುವ ಜತೆಗೆ ಬಯಲುಸೀಮೆ ಮತ್ತು ಮಲೆನಾಡಿನಲ್ಲಿ ಕಾಪಿ, ಅಡಿಕೆ ಬೆಳೆಗಾರರ ಸಮಸ್ಯೆಗೆ ಸ್ಪಂದಿಸುವುದು ಆಗಬೇಕು. ಕೃಷಿ ಭೂಮಿಗೆ ಉಪ್ಪುನೀರು ಹರಿಯುವುದನ್ನು ತಡೆ ಯಲು ಚೆಕ್‌ಡ್ಯಾಮ್‌ಗಳು ಆಗಬೇಕು. ಅಡಿಕೆ ಕಳ್ಳ ಸಾಗಾಟ ಮತ್ತು ಕಾಳಸಂತೆಯಲ್ಲಿ ಮಾರಾಟ ಆಗುವುದು ಸಂಪೂರ್ಣವಾಗಿ ನಿಲ್ಲಬೇಕು. ಮೀನುಗಾರಿಕೆ, ಕೃಷಿ, ತೋಟಗಾರಿಕೆ, ಹೈನುಗಾರಿಕೆ ಅಭಿವೃದ್ಧಿಗೆ ಒತ್ತು ನೀಡಲಾಗುವುದು.

ಕ್ಷೇತ್ರದಲ್ಲಿ ಆದ್ಯತೆ ಮೇರೆಗೆ ಆಗಬೇಕಿರುವುದು ಏನೇನು?
ಕರಾವಳಿಯಲ್ಲಿ ಮೀನು ಸಹಿತ ಸಮುದ್ರದ ಉತ್ಪನ್ನಗಳನ್ನು ರಕ್ಷಿಸಿಡಲು ಹಾಗೂ ಮಲೆನಾಡು ಭಾಗದಲ್ಲಿ ತರಕಾರಿ ಗಳನ್ನು ಸಂಕ್ಷಿಸಿಡಲು ಪ್ರತ್ಯೇಕವಾಗಿ ಕೋಲ್ಡ್‌ ಚೈನ್‌ ಘಟಕ ರೂಪಿಸಬೇಕು. ನಾನು ಸಂಸದನಾಗಿದ್ದಾಗ ಕೆಲವು ರಾಷ್ಟ್ರೀಯ ಹೆದ್ದಾರಿ ಮಂಜೂರು ಮಾಡಿಸಿದ್ದೆ. ಪ್ರಮುಖವಾಗಿ ಮಲ್ಪೆ-ತೀರ್ಥಹಳ್ಳಿ, ಕಡೂರು-ಚಿಕ್ಕಮಗಳೂರು-ಮೂಡಿಗೆರೆ-ಬಿಸಿರೋಡು, ತುಮಕೂರು- ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ವೇಗ ಸಿಗುವುದು ಮಾತ್ರವಲ್ಲ ಕಾಲಮಿತಿಯಲ್ಲಿ ಪೂರ್ಣಗೊಳ್ಳಬೇಕು. ಚಿಕ್ಕಮಗಳೂರಿನಲ್ಲಿ ರೈಲ್ವೇ ಸಂಪರ್ಕ ಅಗತ್ಯವಾಗಿ ವಿಸ್ತರಣೆಯಾಗಬೇಕು ಮತ್ತು ಹೆಚ್ಚು ರೈಲು ಬೆಂಗಳೂರು ಭಾಗದಿಂದ ಬರಬೇಕು. ಚಿಕ್ಕಮಗಳೂರಿಗೆ ಬಂದ ರೈಲು ಹಾಸನ, ಸಕಲೇಶಪುರದವರೆಗೂ ವಿಸ್ತರಣೆಯಾಗಬೇಕು. ಇದರಿಂದ ಕಾಪಿ ಸಹಿತ ವಿವಿಧ ಉತ್ಪನ್ನವನ್ನು ಮಂಗಳೂರು, ಚೆನ್ನೈ ಮೂಲಕ ವಿದೇಶಕ್ಕೆ ರಫ್ತು ಮಾಡಲು ಸಹಕಾರಿ ಯಾಗಲಿದೆ.

ಭೌಗೋಳಿಕವಾಗಿ ಭಿನ್ನವಾಗಿರುವ ಕ್ಷೇತ್ರವಿದು ಹೇಗೆ ನಿಭಾಯಿಸುವಿರಿ?
ಸಂಸದನಾಗಿ ಕೆಲಸ ಮಾಡಿದ್ದರಿಂದ ಈ ಕ್ಷೇತ್ರದ ವ್ಯಾಪ್ತಿಯ ಸಂಪೂರ್ಣ ಅರಿವಿದೆ. ವಿವಿಧ ಸಮಸ್ಯೆ ನಿವಾರಣೆ ಒಂದು ಭಾಗವಾದರೆ, ಅಭಿವೃದ್ಧಿ ಇನ್ನೊಂದು ಭಾಗ. ಆರೋಗ್ಯ, ಶಿಕ್ಷಣ ಹಾಗೂ ಪ್ರವಾಸೋದ್ಯಮ ವಲಯದಲ್ಲಿ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುವುದು. ಜನರೊಂದಿಗೆ ಇದ್ದು ಜನರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಸೂಚಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇನೆ.

ಸಂಸದರಾದರೆ ಕ್ಷೇತ್ರವನ್ನು ಹೇಗೆ ಅಭಿವೃದ್ಧಿಪಡಿಸುವಿರಿ?
2012ರಲ್ಲಿ ಸಂಸದನಾಗಿ ಆಯ್ಕೆ ಯಾದಾಗ 20 ತಿಂಗಳು ಮಾತ್ರ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು. ಆಗ ಪ್ರತಿ ಪಂಚಾಯತಿ ಭೇಟಿ ನೀಡಿದ್ದೇನೆ. ಅಂದು ಸಮಸ್ಯೆಗಳನ್ನು ಅರಿತು ಪರಿಹಾರ ನೀಡಿದ್ದರಿಂದಲೇ ಇಂದಿಗೂ ಜನರು ಅದನ್ನು ಸ್ಮರಿಸುತ್ತಾರೆ. ನಿವೇಶನ ರಹಿತರಿಗೆ ನಿವೇಶನ ಒದಗಿಸುವುದು, ಭೂ ಮಂಜೂರಾತಿಗೆ ಕ್ರಮ ತೆಗೆದುಕೊಳ್ಳುವುದು, ಅಳಿವೆ ಮತ್ತು ಬಂದರಿನ ಡ್ರಜ್ಜಿಂಗ್‌ ಹಾಗೂ ಬ್ರೇಕ್‌ ವಾಟರ್‌ ಯೋಜನೆಗಳಿಗೆ ಒತ್ತು ನೀಡಲಾಗುವುದು, ಕ್ಷೇತ್ರದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿ, ಮಲೆನಾಡು ಭಾಗದಲ್ಲಿ ಕೃಷಿಗೆ ಪೂಕರವಾಗಿ ವಿಶೇಷ ಕಾರೀಡಾರ್‌ ಸ್ಥಾಪನೆ ಮಾಡುವುದು ಹೀಗೆ ಎಲ್ಲ ಕ್ಷೇತ್ರದ ಅಭಿವೃದ್ಧಿಯ ಕಲ್ಪನೆ ಸ್ಪಷ್ಟವಾಗಿದೆ.

Advertisement

ಚುನಾವಣೆಯಲ್ಲಿ ಯಾವ ವಿಷಯ ಮುಂದಿಟ್ಟುಕೊಂಡು ಮತ ಕೇಳಿದಿರಿ?
ಈ ಹಿಂದೆ ಮಾಡಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಮುಂದೆ ಮಾಡಲಿರುವ ಅಭಿವೃದ್ಧಿ ಕಾರ್ಯದ ಸ್ಪಷ್ಟತೆಯನ್ನು ಜನತೆಗೆ ನೀಡಿ ಆ ಮೂಲಕ ಓಟು ಕೇಳಿದ್ದೇನೆ.

Advertisement

Udayavani is now on Telegram. Click here to join our channel and stay updated with the latest news.

Next