Advertisement

ಉದಯವಾಣಿಯ ಚೆ‌ಲುವ ಕನ್ನಡ

08:55 AM Nov 01, 2018 | |

ಹಲವು ಮಗ್ಗಲುಗಳಲ್ಲಿ ಕನ್ನಡ ಒಂದಲ್ಲ ಒಂದು ಅಡೆ-ತಡೆ ಅನುಭವಿಸು ತ್ತಲೇ ಇದೆ. ಆದರೆ, ಆ ದಾಳಿ ಶಾಶ್ವತವೇ? ಖಂಡಿತಾ ಇಲ್ಲ. ಕನ್ನಡ ಮತ್ತೆ ಮೊದಲಿನ ವಿರಾಜಮಾನತೆ ಪಡೆಯಲು ಕೆಲವು ಪ್ರಾಥಮಿಕ ಸಿದ್ಧತೆಗಳು ನಡೆಯಬೇಕಿದೆ. ಆ ಆಶಯಗಳ ಕಿರಣ ಇಲ್ಲಿದೆ…

Advertisement

ಬೇಕಿದೆ ಆನ್‌ಲೈನ್‌ ಶಬ್ದಕೋಶ
ಕನ್ನಡದ ಸಮಗ್ರ ಶಬ್ದಗಳನ್ನು ಹೊಂದಿರುವ, ಬಳಸಲು ಅನುಕೂಲವಾಗಿರುವ ಆನ್‌ಲೈನ್‌ ಶಬ್ದಕೋಶ ವೊಂದರ ಅಗತ್ಯ ತುಂಬಾ ಇದೆ. ಮೊಬೈಲ್‌ನಲ್ಲೂ, ಕಂಪ್ಯೂಟರಿನಲ್ಲೂ ಬಳಸಬಹುದಾದ, ಹುಡುಕಲು ಸುಲಭವಾದ ಶಬ್ದಕೋಶ ಸದ್ಯಕ್ಕಿಲ್ಲ. ಪ್ರಸ್ತುತ ಮೈಸೂರು ವಿ.ವಿ. ರೂಪಿಸಿರುವ ಶಬ್ದಕೋಶ ಉತ್ತಮ ವಾಗಿದೆ. ಆದರೂ ತಾಂತ್ರಿಕ ಸುಧಾ ರಣೆ ಬೇಕಿದೆ.

ಫಾಂಟ್‌ ಬರಲಿ!
ಯೂನಿಕೋಡ್‌ ಅನ್ನು ಸಮಗ್ರವಾಗಿ ಅಳವಡಿಸಿಕೊ ಳ್ಳಲು ಅಗತ್ಯವಾದ, ವೈವಿಧ್ಯಮಯವಾದ ಫಾಂಟ್‌ಗಳು ಕನ್ನಡದಲ್ಲಿ ಕಡಿಮೆ ಇದೆ. ಇವುಗಳನ್ನು ಅಭಿವೃದ್ಧಿಪಡಿಸುವಲ್ಲಿ ಸರಕಾರದ ಮಟ್ಟದಲ್ಲಿ ಈ ನಿಟ್ಟಿನಲ್ಲಿ ಕೆಲಸವಾಗಿಲ್ಲ. ಈಗಲೂ ಯುನಿಕೋಡ್‌ ಹೊರತಾದ ಫಾಂಟ್‌ಗಳನ್ನೇ ಡಿಟಿಪಿ, ಪುಸ್ತಕ ಪ್ರಕಟನೆ ಹಾಗೂ ಇತರ ಕೆಲಸಗಳಿಗೆ ಬಳಸಲಾಗುತ್ತಿದೆ.

ಧ್ವನಿಯಿಂದ ಪಠ್ಯ ಸಿಗಲಿ!
ಧ್ವನಿಯಿಂದ ಪಠ್ಯಕ್ಕೆ ಪರಿವರ್ತಿತವಾಗುವ ಉತ್ತಮ ಗುಣಮಟ್ಟದ ಅಪ್ಲಿಕೇಶನ್‌ಗಳ ಕೊರತೆಯಿದೆ. ಇರುವ ಕೆಲವು ಅಪ್ಲಿಕೇಶನ್‌ಗಳು ಉತ್ತಮ ಗುಣಮಟ್ಟದ್ದಾಗಿಲ್ಲ.

ಆನ್‌ಲೈನ್‌ ಪುಸ್ತಕ ಬೇಕು
ಓದುಗರಿಗೆ ಸುಲಭವಾಗಿ ಓದಲು ಪುಸ್ತಕಗಳನ್ನು ಇ-ಪುಸ್ತಕವನ್ನಾಗಿ ಪರಿವರ್ತಿಸುವ ವಿಧಾನ 
ಇನ್ನೂ ಸಕ್ರಿಯವಾಗಿ ಜಾರಿಗೆ ಬಂದಿಲ್ಲ. ಚಾಲ್ತಿಯಲ್ಲಿರುವ ಖಾಸಗಿ ಕಂಪೆ‌ನಿಗಳೂ ಹೆಚ್ಚಿನ ಪುಸ್ತಕಗಳ ಸಂಗ್ರಹಗಳನ್ನು ಹೊಂದಿಲ್ಲ.

Advertisement

ಬಾವುಟ ಹಾರಲಿ
ಕನ್ನಡ ಧ್ವಜ ಪ್ರಸ್ತಾವನೆ ನನೆಗುದಿಗೆ ಬಿದ್ದಿದೆ. ಚುನಾವಣೆ ವೇಳೆ ಇದ್ದ ಹುಮ್ಮಸ್ಸು ರಾಜಕೀಯ ಪಕ್ಷಗಳಲ್ಲಿ ಕರಗಿಹೋಗಿದೆ. ಈಗ ಯಾವ ಪಕ್ಷಗಳಿಗೂ ಕನ್ನಡ ಧ್ವಜ ಬೇಕಿಲ್ಲ.

ಬಜೆಟ್‌ನಲ್ಲಿ ಆದ್ಯತೆ
ಪ್ರತಿವರ್ಷ ಬಜೆಟ್‌ ಆಗುತ್ತದೆ, ಹೋಗುತ್ತದೆ. ಆದರೆ, ಮಾತೃಭಾಷೆಗೇನು ಪ್ರಯೋಜನವಾಯಿತು? ಕನ್ನಡ ಭಾಷೆಯ ಅಭಿವೃದ್ಧಿಗೆ ಬೃಹತ್‌ ಯೋಜನೆಯೊಂದನ್ನು ಇದುವರೆಗೂ ಯಾವ ಸರಕಾರವೂ ಕೈಗೊಂಡಿಲ್ಲ. ಆ ಕೆಲಸ ಆದಷ್ಟು ಬೇಗ ಆಗಲಿ.

“ನುಡಿ’ ಅಭಿವೃದ್ಧಿಯಾಗಲಿ
ಗಣಕ ಪರಿಷತ್ತು ನುಡಿ ತಂತ್ರಾಂಶವನ್ನು ಕಾಲದ ಅಗತ್ಯಕ್ಕೆ ತಕ್ಕಂತೆ ಅಭಿವೃದ್ಧಿಪಡಿಸಿಲ್ಲ. ನುಡಿ 5.0 ಆವೃತ್ತಿಯ ನಂತರ ನುಡಿ 6.0 ಅಭಿವೃದ್ಧಿ ಹಂತದಲ್ಲೇ ಇದೆ. ಮ್ಯಾಕ್‌ ಒಎಸ್‌ಗೆ ಇನ್ನೂ ನುಡಿ ಅಳವಡಿಸಲು ಸಾಧ್ಯವಾಗಿಲ್ಲ.

ಕ್ರಿಯಾ ಯೋಜನೆ
ಕನ್ನಡ ಅಭಿವೃದ್ಧಿಗಾಗಿ ದೂರದೃಷ್ಟಿತ್ವ ಹೊಂದಿರುವ ನಿರ್ದಿಷ್ಟ ಕ್ರಿಯಾ ಯೋಜನೆ ತಯಾರಾಗಬೇಕು. ಅದು 10 ವರ್ಷಗಳಲ್ಲಿ ಕನ್ನಡವನ್ನು ಸಮೃದ್ಧವಾಗಿಸುವ ಧ್ಯೇಯ ಹೊಂದಿರಬೇಕು.

ಖಾಸಗಿಯವರೂ ಬರಲಿ
ಕನ್ನಡವನ್ನು ಸಂಪದ್ಭರಿತವಾಗಿಸಲು, ಜನರಿಗೆ ಇನ್ನಷ್ಟು ಹತ್ತಿರವಾಗಿಸುವ ಉದ್ದೇಶದಿಂದ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆಗಳನ್ನು ಸರಕಾರ ಹಮ್ಮಿಕೊಳ್ಳಬೇಕು. ಕಂಪೆನಿಗಳ ಸಿಎಸ್‌ಆರ್‌ ನಿಧಿಯನ್ನು ಇದಕ್ಕೆ ಸದ್ಬಳಕೆ ಮಾಡಬಹುದು.

ನಾಡಗೀತೆ ಗೊಂದಲ ಬೇಡ
ನಾಡಗೀತೆಯನ್ನು ಮೊಟಕುಗೊಳಿಸುವ ಪ್ರಸ್ತಾವ‌ ಆಗಾಗ ಮುನ್ನೆಲೆಗೆ ಬರುತ್ತಿದೆ. ಇದನ್ನು ಸಂಪೂರ್ಣವಾಗಿ ಕೈಬಿಡುವುದೋ ಅಥವಾ ಜಾರಿಗೊಳಿಸುವುದೋ, ಯಾವುದೇ ನಿರ್ಧಾರವನ್ನು ಕೈಗೊಂಡು ಗೊಂದಲ ಬಗೆಹರಿಸಬೇಕಿದೆ.

ಡಿಜಿಟಲ್‌ ಪಠ್ಯಪುಸ್ತಕ
ಕನ್ನಡ ಪಠ್ಯಪುಸ್ತಕಗಳು ಹಾಗೂ ಆಕರ ಗ್ರಂಥಗಳ ಸಂಗ್ರಹ ಒಂದೇ ಕಡೆ ಸಿಗುವಂತೆ ಮಾಡುವ ಕೆಲಸವಾಗಬೇಕಿದೆ. ಸದ್ಯ, ವಿವಿಧ ಮಾದರಿಯಲ್ಲಿ ಅಲ್ಲಲ್ಲಿ ಸಿಗುತ್ತಿರುವ ಪಠ್ಯಪುಸ್ತಕಗಳನ್ನು ಒಂದೇ ಸೂರಿನಡಿ ತಂದು, ಪ್ರತಿ ಅಧ್ಯಾಯಕ್ಕೂ ಪೂರಕ 2 ಆಕರ ಗ್ರಂಥಗಳು ಕನ್ನಡದಲ್ಲಿ ಸಿಗುವಂತಾಗಬೇಕು.

  “ಕೇಳುಲಿ’ ಬೇಗ ಬರಲಿ
ಕನ್ನಡದಲ್ಲಿ ಕಥೆಗಳು, ಕವನ ಹಾಗೂ ಸಾಹಿತ್ಯಗಳನ್ನು ಓದಿ ಹೇಳುವ ಮತ್ತು ಅದನ್ನು ಜನರಿಗೆ ತಲುಪಿಸುವ “ಕೇಳುಲಿ’ (ಪಾಡ್‌ಕಾಸ್ಟ್‌) ಪ್ರಯತ್ನ ನಡೆಯಲಿಲ್ಲ. ಕನ್ನಡವನ್ನು ಈ ಮೂಲಕ ಹೆಚ್ಚಿನ ಜನರಿಗೆ ತಲುಪಿಸುವ ಅವಕಾಶದಿಂದ ನಾವು ವಂಚಿತರಾಗಿದ್ದೇವೆ. ಆ ಪ್ರಯತ್ನ ಬೇಗ ಆಗಲಿ.

Advertisement

Udayavani is now on Telegram. Click here to join our channel and stay updated with the latest news.

Next