Advertisement

ಶರದ್‌ ಪವಾರ್‌ ಬಾರಾಮತಿಯಂತೆ ಉಡುಪಿ ಚಿಕ್ಕಮಗಳೂರು ಕ್ಷೇತ್ರಾಭಿವೃದ್ಧಿ; ಅಭ್ಯುದಯ ಸಂವಾದ

10:11 AM Apr 12, 2019 | Sriram |

ಐವತ್ತರ ಸಂಭ್ರಮದಲ್ಲಿರುವ ಉದಯವಾಣಿ ತನ್ನ ಕೇಂದ್ರ ಕಚೇರಿ ಮಣಿಪಾಲದಲ್ಲಿ ಬುಧವಾರ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿಗಳೊಂದಿಗೆ ಸಂವಾದ ಆಯೋಜಿಸಿತ್ತು. ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಸಂಪಾದಕೀಯ ಮಂಡಳಿ ಸದಸ್ಯರ ಪ್ರಶ್ನೆಗೆ ಉತ್ತರಿಸಿದರು. ಅದರ ಆಯ್ದ ಭಾಗ ಇಲ್ಲಿದೆ.

Advertisement

ಮರಳು ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ?
ನಾನು ಸಚಿವನಾಗಿದ್ದಾಗ 9 ಲಕ್ಷ ಟನ್‌ ಮರಳು ತೆಗೆಯಲು ಅವಕಾಶ ಮಾಡಿಕೊಟ್ಟಿದ್ದೆ. ಜಿಲ್ಲೆಯಲ್ಲಿ 6 ಲಕ್ಷ ಟನ್‌ ತೆರವು ಮಾಡಲಾಗಿತ್ತು. 165 ಜನರಿಗೆ ಪರ್ಮಿಟ್‌ ಕೊಡಲಾಗಿತ್ತು. 28 ಬ್ಲಾಕ್‌ ತೆರವು ಮಾಡಲಾಗಿತ್ತು. ಜಿಲ್ಲೆಯ ಮರಳು ಹೊರಗೆ ಹೋಗದಂತೆ ಮಾಡಿದ್ದರಿಂದ ಧಾರಣೆ ಕಡಿಮೆಯಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಈಗಿನ ಶಾಸಕರು ತಾವು ಗೆದ್ದ ಒಂದು ತಿಂಗಳೊಳಗೆ ಸಮಸ್ಯೆ ಪರಿಹರಿಸುವುದಾಗಿ ಹೇಳಿದ್ದರು. ಆದರೆ ಬಗೆಹರಿದಿಲ್ಲ. ಸಂಸದೆ ಶೋಭಾ ಅವರೂ ಆಸಕ್ತಿ ತೋರಿಸಿಲ್ಲ. ಮರಳನ್ನು ದರೋಡೆ ರೀತಿ ಮಾಡುತ್ತಿದ್ದರಿಂದ ಕೆಲವು ಜನರು ನ್ಯಾಯಾಲಯದ ಮೊರೆ ಹೊಕ್ಕಿದ್ದರು. ಈ ಸಮಸ್ಯೆ ಶಾಶ್ವತವಾಗಿ ಬಗೆಹರಿಯಲು ಕೇಂದ್ರ ಸರಕಾರ ಸಿಆರ್‌ಝಡ್‌ ಕಾನೂನಿನಲ್ಲಿ ಸೂಕ್ತ ತಿದ್ದುಪಡಿ ತಂದರೆ ಮಾತ್ರ ಸಾಧ್ಯ.

ಅಸಮರ್ಪಕ, ಅಪೂರ್ಣ ರಾಷ್ಟ್ರೀಯ ಹೆದ್ದಾರಿ ಎಂಬ ಮಾತಿದೆ. ನಿಜವೇ? ನೀವೇನು ಮಾಡುವಿರಿ?
ರಾಷ್ಟ್ರೀಯ ಹೆದ್ದಾರಿ 66 ಸಂಪೂರ್ಣ ಅಸುರಕ್ಷಿತ. ನೂರಾರುಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಒಂದುವೇಳೆ ನಾನು ಸಂಸದನಾಗಿ ಆಯ್ಕೆಯಾದರೆ, ವೈಜ್ಞಾನಿಕವಾಗಿ ಸೂಕ್ತ ಮಾರ್ಪಾಡು ಮಾಡುವ ಬಗ್ಗೆ ತಜ್ಞರ ಜತೆ ಚರ್ಚಿಸಿ ಜಾರಿಗೊಳಿಸುವೆ. ಈಗ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರ ಆಯ್ಕೆ ಸರಿಯಾದ ಮಾನದಂಡದಲ್ಲಿಯೇ ನಡೆದಿದೆ. ಇಲ್ಲವಾದರೆ ಇಷ್ಟರಲ್ಲಾಗಲೇ ಇತರ ಗುತ್ತಿಗೆದಾರರು ನ್ಯಾಯಾಲಯಕ್ಕೆ ಹೋಗುತ್ತಿದ್ದರು.

ಟೋಲ್‌ ಸಮಸ್ಯೆ ಗೊತ್ತೇ ಇದೆ. ಸ್ಥಳೀಯರಿಗೆ ಇದರಿಂದ ವಿನಾಯಿತಿ ಮಾಡಿಸಿಕೊಡುವಿರಾ?
ಸ್ಥಳೀಯರಿಗೆ ಟೋಲ್‌ ವಿನಾಯಿತಿ ದೊರೆಯ ಬೇಕಾದರೆ ರಾಷ್ಟ್ರ ಮಟ್ಟದಲ್ಲಿಯೇ ಕಾನೂನು ರೂಪಿಸಬೇಕು. ಈ ಹಿಂದೆ ಕೇಂದ್ರ ಸಚಿವ ನಿತಿನ್‌ ಗಡ್ಕರಿಯವರು ಟೋಲ್‌ ನಿಂದ ಮುಕ್ತಿ ಕೊಡಿಸುವ ಮಾತು ಆಡಿದ್ದರು. ಅದಿನ್ನೂ ಜಾರಿಯಾಗಿಲ್ಲ. ಟೋಲ್‌ನಿಂದ ವಿನಾಯಿತಿ ದೊರಕುವಲ್ಲಿ ಶ್ರಮಿಸುವೆ.

ಬೋಟ್‌ ಪತ್ತೆ ಕಥೆ ಹಾಗೇ ಉಳಿಯಿತಲ್ಲ?
ಮೀನುಗಾರಿಕೆ ಬೋಟ್‌ಗೆ ನೌಕಾಪಡೆಯ ಹಡಗು ಢಿಕ್ಕಿಯಾಗಿರುವ ಸಂದೇಹಗಳಿವೆ. ನೌಕಾದಳ ಮತ್ತು ಉಡುಪಿ ಪೊಲೀಸ್‌ ನಡುವೆ ನಡೆದಿರುವ ಸಂವಹನ ಗಮನಿಸಿದರೆ ಈ ಸಂಶಯ ಬರುತ್ತದೆ. ಆದರೆ ಇದರ ಬಗ್ಗೆ ನೌಕಾದಳದವರು ಸರಿಯಾದ ಮಾಹಿತಿ ನೀಡುತ್ತಿಲ್ಲ. ಆದಾಗ್ಯೂ ಮೀನುಗಾರರು ಜೀವಂತವಾಗಿಯೇ ಬರಬೇಕು ಎಂಬುದು ನಮ್ಮ ಆಸೆ. ಈ ಬಗ್ಗೆ ನಿಜಾಂಶವನ್ನು ತಿಳಿಸಬೇಕು. ಮೀನುಗಾರರು ಬೀದಿಗಿಳಿದರೂ ನ್ಯಾಯ ನೀಡಿಲ್ಲ. ಈ ಕ್ಷೇತ್ರದ ಸಂಸದರು ಜವಾಬ್ದಾರಿ ನಿರ್ವಹಿಸುವಲ್ಲಿ ವಿಫ‌ಲರಾಗಿದ್ದಾರೆ.

Advertisement

ಅರಣ್ಯ ಪ್ರದೇಶಗಳಿಂದ ಒಕ್ಕಲೆಬ್ಬಿಸುವುದನ್ನು ತಡೆಯುವಿರಾ?
ಯುಪಿಎ ಸರಕಾರ ಇರುವಾಗ ಆದಿವಾಸಿಗಳು ಸೇರಿದಂತೆ ತಲೆತಲಾಂತರದಿಂದ ಒತ್ತುವರಿ ಮಾಡಿಕೊಂಡು ವಾಸ ಇರುವವರಿಗೆ ಹಕ್ಕು ಕೊಡಬೇಕು, ಒಕ್ಕಲೆಬ್ಬಿಸಬಾರದು ಎಂದು ಕಾನೂನು ತರಲಾಗಿತ್ತು. ಆದರೆ ಈಗ ಸುಪ್ರೀಂ ಕೋರ್ಟ್‌ ಒಕ್ಕಲೆಬ್ಬಿಸಲು ನಿರ್ಧರಿಸಿದೆ. ಅವರಿಗೆ ಪರ್ಯಾಯ ಮನೆ, ಭೂಮಿ ಬಗ್ಗೆ ಯೋಚನೆ ಮಾಡಿಲ್ಲ. ಇತ್ತೀಚೆಗೆ ಈ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆದಾಗ ಕೇಂದ್ರ ಸರಕಾರದ ವಕೀಲರೇ ಹಾಜರಾಗಲಿಲ್ಲ. ನಾನು ಆಯ್ಕೆಯಾದರೆ ನನ್ನ ಸ್ವಂತ ಖರ್ಚಿನಲ್ಲಿ ವಕೀಲರ ನೇಮಿಸಿ ಕಾನೂನು ಹೋರಾಟ ಮೂಲಕ ಯಾವುದೇ ವರದಿಗಳಿಂದ ಆದಿವಾಸಿಗಳ ಹಕ್ಕುಗಳಿಗೆ ಚ್ಯುತಿಯಾಗದಂತೆ ಶ್ರಮಿಸುವೆ. ರಾಜ್ಯ ಸರಕಾರದಿಂದ ಆಗಬೇಕಾದದ್ದನ್ನು ಮಾಡಿಸುವೆ.

ಪ್ರವಾಸೋದ್ಯಮ ಬೆಳವಣಿಗೆ ನಿಮ್ಮ ಆದ್ಯತೆಯಲ್ಲವೇ?
ಪ್ರವಾಸೋದ್ಯಮ ಅಭಿವೃದ್ಧಿ ನನ್ನ ಆದ್ಯತೆ ಹೌದು. ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಅಪಾರ ಅವಕಾಶವಿದೆ. ಇದರಿಂದ ಸ್ವ ಉದ್ಯೋಗ ಬೆಳೆಯಲು ಸಾಧ್ಯವಿದೆ. ಇಡೀ ದೇಶದಲ್ಲಿ ಎಲ್ಲ ಸರಕಾರಗಳ ಕಾಲದಲ್ಲೂ ಪ್ರವಾಸೋದ್ಯಮವನ್ನು ತೀರಾ ನಿರ್ಲಕ್ಷಿಸಲಾಗಿದೆ ಎಂಬುದು ನನ್ನ ಖಚಿತ ಅಭಿಪ್ರಾಯ. ದೇಶದಲ್ಲಿ ಸಿಂಗಾಪುರದಂತೆ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬಹುದಾದ ಕನಿಷ್ಟ 1,000 ಪ್ರದೇಶಗಳಿವೆ. ಇದಕ್ಕೆ ಸೂಕ್ತ ನೀತಿ ಅವಶ್ಯ. ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವೆ.

ಉದ್ಯೋಗ ಸೃಷ್ಟಿಗೆ ಯೋಜನೆ ಇದೆಯೇ? ನಕ್ಸಲ್‌ ಸಮಸ್ಯೆಗೆ ಪರಿಹಾರವಿದೆಯೇ?
ನಾನು ಸಚಿವನಾಗಿದ್ದಾಗ ಹೇರೂರಿನಲ್ಲಿ ಐಟಿ ಬಿಟಿ ಕಂಪೆನಿ ಮಾಡಲು ಪ್ರಯತ್ನಿಸಿದ್ದೆ. ಆದರೆ ಬೆಂಗಳೂರಿನಲ್ಲಿ ಐಟಿ ಬಿಟಿ ಕಂಪೆನಿಗಳಲ್ಲಿರುವ ನಮ್ಮೂರಿನ ಹುಡುಗರು ಬೆಂಗಳೂರಿನಲ್ಲೇ ಇರುತ್ತೇವೆ ಎಂದರು. ಹಾಗಾಗಿ ಯೋಜನೆ ಕೈಬಿಡಲಾಯಿತು. ಜಿಲ್ಲೆಯಲ್ಲಿ ಕೈಗಾರಿಕೆಗಳು, ಮುಖ್ಯವಾಗಿ ಕೃಷಿ ಆಧಾರಿತ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಪ್ರಯತ್ನಿಸುವೆ. ಇನ್ನು ನಕ್ಸಲ್‌ ಸಮಸ್ಯೆ ನಿವಾರಣೆಗೆ ಅವರನ್ನು ಮುಖ್ಯವಾಹಿನಿಗೆ ತರಬೇಕು. ಇದಕ್ಕೆ ಉತ್ತಮ ಕಾರ್ಯಕ್ರಮ ಬೇಕು. ನಕ್ಸಲರೂ ತಮ್ಮ ಹಳೇ ಚಾಳಿ ಬಿಟ್ಟು ಮುಖ್ಯವಾಹಿನಿಗೆ ಬರಬೇಕು.

ಕಾಡು ಪ್ರಾಣಿ ಸಮಸ್ಯೆಯಿಂದ ರೈತರಿಗೆ ತೊಂದರೆ ಯಾಗುತ್ತಿದೆಯಲ್ಲಾ?
ಕಾಡು ಪ್ರಾಣಿ ಮತ್ತು ಮನುಷ್ಯರ ನಡುವೆ ಸಮತೋಲನವಿರಬೇಕು. ಮನಷ್ಯನಿಗಿಂತ ಕಾಡುಪ್ರಾಣಿಗಳಿಗೆ ಆದ್ಯತೆ ನೀಡಿದರೆ ಅವುಗಳಿಂದ ಸಮಸ್ಯೆಯಾಗುತ್ತದೆ. ಮನುಷ್ಯರನ್ನು ನಿರ್ಲಕ್ಷ್ಯ ಮಾಡಬಾರದು. ಕಾಡುಪ್ರಾಣಿಗಳ ನಿರ್ಮೂಲನೆಯೂ ಸಲ್ಲದು. ಅರಣ್ಯ ಇಲಾಖೆಯ ಕಾನೂನುಗಳು ಜನರಿಗೆ ವಿರುದ್ಧವಾಗಿವೆ. ಅದನ್ನು ಸಮತೋಲನ ಮಾಡಬೇಕಾದ ಅವಶ್ಯಕತೆ ಇದೆ. ಇಲ್ಲವಾದರೆ ಅರಣ್ಯ, ಪರಿಸರದ ಹೆಸರಿನಲ್ಲಿ, ಕಾಡು ಪ್ರಾಣಿಗಳ ಹೆಸರಿನಲ್ಲಿ ಮನುಷ್ಯರಿಗೆ ದ್ವಿತೀಯ ಸ್ಥಾನಮಾನ ದೊರೆಯುವಂತಾಗುತ್ತದೆ. ಸಮಾನವಾಗಿಯಾದರೂ ನೋಡುವಂತಾಗಬೇಕು.

ಚಿಕ್ಕಮಗಳೂರಿಗೆ ನೀವು ಹೊಸ ಮುಖವಲ್ಲವೆ ?
ಹೊಸ ಮುಖದ ಬಗ್ಗೆ ಜನರಿಗೆ ಕುತೂಹಲ ವಿರುತ್ತದೆ. ನಾನು ಹೋದಾಗ ಜನ ಮುಗಿ ಬೀಳುತ್ತಿದ್ದಾರೆ. ಹೊಸ ಮುಖಕ್ಕೆ ಆದ್ಯತೆ ನೀಡುವುದು ಜನರ ಸ್ವಭಾವ. ಹಾಗಾಗಿ ನನ್ನನ್ನು ಜನ ಬೆಂಬಲಿಸಿಯಾರೆಂಬ ವಿಶ್ವಾಸವಿದೆ.

ನಿಮ್ಮ ಮೈತ್ರಿ ವಿಶೇಷತೆ? ಮುಂದೆಯೂ ನಿಮ್ಮ ನಡೆ ಹೀಗೆಯೇ ಇರುತ್ತದೆಯೇ?
ಒಂದು ಪಕ್ಷದ ವ್ಯಕ್ತಿ ಇನ್ನೊಂದು ಪಕ್ಷದ ಚಿಹ್ನೆಯಲ್ಲಿ ಎರಡೂ ಪಕ್ಷಗಳ ಒಪ್ಪಿಗೆ ಪಡೆದು ಸಸ್ಪೆಂಡ್‌ ಆಗದೆ ಆಗಿರುವ ಹಾಲು ಜೇನಿನಂಥ ಮೈತ್ರಿ ರಾಜಕೀಯ ಇತಿಹಾಸದಲ್ಲಿಲ್ಲ. ಚುನಾವಣ ಆಯೋಗ ನಾಮಪತ್ರ ಅಂಗೀಕಾರ ಮಾಡಿದ ಅನಂತರ ಪಕ್ಷದ ಸದಸ್ಯತ್ವ ಕುರಿತಾದ ಚರ್ಚೆ ಮುಗಿದಿದೆ. ಚುನಾವಣೆಯಿಂದ ಚುನಾವಣೆಗೆ ರಾಜಕಾರಣ ಬದಲಾಗುತ್ತದೆ. ಗ್ರಾ.ಪಂ., ಸೊಸೈಟಿಗಳಲ್ಲಿ ಟೇಬಲ್‌, ಫ್ಯಾನ್‌ ಮೊದಲಾದ ಚಿಹ್ನೆಗಳಿರುತ್ತವೆ. ಮುಂದಿನ ಚುನಾವಣೆಗೆ ಅದೇ ಚಿಹ್ನೆಗಳನ್ನು ಹಿಡಿದುಕೊಂಡು ಹೋದರೆ ಓಟು ಸಿಗುತ್ತದಾ? ನದಿಯ ಬಳಿ ಬಂದಾಗ ಅದನ್ನು ದಾಟುವ ಕುರಿತು ಆಲೋಚಿಸಬೇಕು. ನಿಮಗೆ ಉತ್ತರ ಸಿಕ್ಕಿರಬಹುದು. ಸದ್ಯ ಪ್ರಚಾರ ಸಂದರ್ಭ ಎಲ್ಲೂ ನಮ್ಮ ಪಕ್ಷಗಳಲ್ಲಿ ಗೊಂದಲ ಮೂಡುತ್ತಿಲ್ಲ. ಇದು ಮಾದರಿ ಸಮ್ಮಿಶ್ರ.

ಸಂಸದರಾದರೆ ನಿಮ್ಮ ಆದ್ಯತೆಗಳೇನು?
ಮೊದಲನೆಯದಾಗಿ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ನನ್ನ ಕಚೇರಿ ತೆರೆದು ಜನರ ಸಮಸ್ಯೆ ಆಲಿಸುವೆ. ನನ್ನ ದೃಷ್ಟಿಯಲ್ಲಿ ಜನರೊಂದಿಗೆ ಚೆನ್ನಾಗಿ ಬೆರೆತು ಅವರ ಸಮಸ್ಯೆ ಆಲಿಸದಿದ್ದರೆ ಪರಿಹಾರ ಹುಡುಕಲಾಗದು. ಜನರೊಂದಿಗೆ ಇರುವವನು ನಿಜವಾದ ಜನಪ್ರತಿನಿಧಿ. ಎರಡನೆಯದಾಗಿ, ಕೇಂದ್ರ ಮತ್ತು ರಾಜ್ಯ ಸರಕಾರದ ಎಲ್ಲ ಇಲಾಖೆಗಳ ಅನುದಾನ ತಂದು ಕ್ಷೇತ್ರ ಅಭಿವೃದ್ಧಿಗೊಳಿಸುವೆ.

ಮೂರನೆಯದಾಗಿ, ಕುಡಿಯುವ ನೀರು ಸಮಸ್ಯೆ ನಿವಾರಣೆಗೆ ನದಿಗಳನ್ನು ಬಳಸಿ ಕ್ರಮ. ಇದಲ್ಲದೇ ರಾಜ್ಯ ಸರಕಾರ ಮೀನುಗಾರರಿಗೆ ಡೀಸೆಲ್‌ ಸಬ್ಸಿಡಿ, ನಾಡದೋಣಿ ಮೀನುಗಾರರಿಗೆ ಸೀಮೆಎಣ್ಣೆ ನೀಡುತ್ತಿದೆ. ಮೀನುಗಾರಿಕೆ ಸಂದರ್ಭ ಮೃತರಾದರೆ ನೀಡಲಾಗುತ್ತಿದ್ದ 2 ಲ.ರೂ. ಪರಿಹಾರ ಧನವನ್ನು ಸಚಿವನಾಗಿದ್ದಾಗ 6 ಲ.ರೂ.ಗಳಿಗೆ ಹೆಚ್ಚಿಸಿದ್ದೆ. ಆದರೆ ಕೇಂದ್ರ ಸರಕಾರ ಇದುವರೆಗೂ ಏನನ್ನೂ ನೀಡಿಲ್ಲ. ಮೀನುಗಾರಿಕೆ ಬಂದರುಗಳ ಅನುದಾನವನ್ನು 50:50ರ ಬದಲು 75:25ಕ್ಕೆ ಇಳಿಸಿದೆ. ಅನುದಾನವೂ ಬಾಕಿ ಇದೆ. ಇವೆಲ್ಲ ಸರಿಪಡಿಸಲು ಕೇಂದ್ರ ಸರಕಾರದೊಂದಿಗೆ ಒತ್ತಡ ಹೇರಿ, ಮೀನುಗಾರರ ಹಿತ ಕಾಯಲು ಪ್ರಯತ್ನಿಸುವೆ. ಬಜಪೆ ಮತ್ತು ಗೋವಾ (ವಾಸ್ಕೋ) ದ ನಡುವೆ ಒಂದು ವಿಮಾನ ನಿಲ್ದಾಣ ಬೇಕು. ನಾನು ಪ್ರಯತ್ನಿಸುವೆ. ಶರದ್‌ ಪವಾರ್‌ ಬಾರಾಮತಿ ಅಭಿವೃದ್ಧಿ ಮಾಡಿದಂತೆ ಉಡುಪಿ ಚಿಕ್ಕಮಗಳೂರು ಕ್ಷೇತ್ರವನ್ನು ಅಭಿವೃದ್ಧಿ ಮಾಡಬೇಕೆಂದು ನಿರ್ಧರಿಸಿದ್ದೇನೆ. ನಾನು ಬೆಂಚು ಬಿಸಿ ಮಾಡಲು ಎಂಪಿಯಾಗುವುದಿಲ್ಲ

ಪ್ರವಾಸೋದ್ಯಮ ಅಭಿವೃದ್ಧಿ ನನ್ನ ಆದ್ಯತೆ ಹೌದು. ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಅಪಾರ ಅವಕಾಶವಿದೆ. ದೇಶದಲ್ಲಿ ಸಿಂಗಾಪುರದಂತೆ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬಹುದಾದ ಕನಿಷ್ಠ 1,000 ಪ್ರದೇಶಗಳಿವೆ.
– ಪ್ರಮೋದ್‌ ಮಧ್ವರಾಜ್‌, ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next