Advertisement

ಉಡುಪಿ, ದ.ಕ. ಕೈಗಾರಿಕ ಅಭಿವೃದ್ಧಿಗೆ ಯೋಜನೆ; ಉದಯವಾಣಿ ಸಂವಾದದಲ್ಲಿ ಸಚಿವ ನಿರಾಣಿ

02:24 AM Mar 26, 2022 | Team Udayavani |

ಬೆಂಗಳೂರು: ಕರ್ನಾಟಕ ಕೈಗಾರಿಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ವತಿಯಿಂದ ಉಡುಪಿ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕೈಗಾರಿಕ ಅಭಿವೃದ್ಧಿಗೆ ಹಲವು ಯೋಜನೆ ರೂಪಿಸಲಾಗಿದೆ ಎಂದು ಸಚಿವ ಮುರುಗೇಶ್‌ ನಿರಾಣಿ ಹೇಳಿದ್ದಾರೆ.

Advertisement

ಶುಕ್ರವಾರ “ಉದಯವಾಣಿ’ ಕಚೇರಿಯಲ್ಲಿ ಜರಗಿದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಿಟ್ಟೆ ಕೈಗಾರಿಕ ಪ್ರದೇಶ, ಶಿವಪುರ ಕೈಗಾರಿಕ ಪ್ರದೇಶ, ಕರ್ನಿರೆ ಕೈಗಾರಿಕ ಪ್ರದೇಶ ಮತ್ತು ಚಿಕ್ಕಮಗ ಳೂರಿನ ಸ್ಪೈಸ್‌ ಪಾರ್ಕ್‌ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿ ಒಟ್ಟು 50.42 ಎಕರೆ ಜಮೀನನ್ನು ಕೈಗಾರಿಕ ಪ್ರದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಈಗಾಗಲೇ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಸದರಿ ಜಮೀನಿಗೆ ಜುಲೈ ತಿಂಗಳ ಅಂತ್ಯದೊಳಗೆ ಅಂತಿಮ ಅಧಿಸೂಚನೆ ಹೊರಡಿಸಿ ಭೂ ಪರಿಹಾರ ಪಾವತಿಸಿ ಕೈಗಾರಿಕ ಪ್ರದೇಶವನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಸದರಿ ಜಮೀನಿನ ಜಂಟಿ ಸುತ್ತಳತೆ ಕಾರ್ಯ ಮತ್ತು ಕಲಂ 28(3)ರ ವಿಚಾರಣೆ ಪ್ರಗತಿಯಲ್ಲಿದೆ ಎಂದು ಹೇಳಿದರು.

ಹೆಬ್ರಿ ತಾಲೂಕು ಶಿವಪುರ ಗ್ರಾಮದ ಒಟ್ಟು 128.06 ಎಕರೆ ಜಮೀನನ್ನು ಕೈಗಾರಿಕ ಪ್ರದೇಶಕ್ಕಾಗಿ ಸ್ವಾಧೀನ ಪಡಿಸಿಕೊಳ್ಳಲು ಮಂಡಳಿ ಸಭೆಯಲ್ಲಿ ಅನುಮೋದನೆ ಯಾಗಿದ್ದು ವಿಶೇಷ ಭೂಸ್ವಾಧೀನಾಧಿಕಾರಿಗಳಿಂದ ಕಲಂ 28(1)ರ ಪ್ರಾಥಮಿಕ ಅಧಿಸೂಚನೆ ಪ್ರಸ್ತಾವನೆ ನಿರೀಕ್ಷಿಸ ಲಾಗಿದೆ ಎಂದು ತಿಳಿಸಿದರು.

ಶಿವಪುರ ಗ್ರಾಮದಲ್ಲಿ ಒಟ್ಟು 210.42 ಎಕರೆ ಜಮೀನನ್ನು ಕೈಗಾರಿಕ ಪ್ರದೇಶಕ್ಕಾಗಿ ಸ್ವಾಧೀನ ಪಡಿಸಿ ಕೊಳ್ಳಲು ಮಂಡಳಿ ಸಭೆಯಲ್ಲಿ ಅನು ಮೋದನೆ ಆಗಿದ್ದು ವಿಶೇಷ ಭೂ ಸ್ವಾಧೀನಾಧಿ ಕಾರಿಗಳಿಂದ ಕಲಂ 28(1)ರ ಪ್ರಾಥಮಿಕ ಅಧಿಸೂಚನೆ ಪ್ರಸ್ತಾವನೆಯನ್ನು ನಿರೀಕ್ಷಿಸಲಾಗಿದೆ ಎಂದು ಹೇಳಿದರು.

Advertisement

ಕರ್ನಿರೆ ಕೈಗಾರಿಕ ಪ್ರದೇಶ
ಮಂಗಳೂರು ತಾಲೂಕಿನ ಕೊಲ್ಲೂರು, ಬಳ್ಕುಂಜೆ ಮತ್ತು ಉಳೆಪಾಡಿ ಗ್ರಾಮಗಳ ಒಟ್ಟು 1091.57 ಎಕರೆ ಜಮೀನನ್ನು ಕರ್ನಿರೆ ಕೈಗಾರಿಕ ಪ್ರದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಈಗಾಗಲೇ ಅಧಿ ಸೂಚನೆ ಹೊರಡಿಸಲಾಗಿದೆ. ಸದರಿ ಜಮೀನಿನ ಜಂಟಿ ಅಳತೆ ಕಾರ್ಯ ಮತ್ತು ಕಲಂ 28(3)ರ ವಿಚಾರಣೆ ಪ್ರಗತಿಯಲ್ಲಿದೆ ಎಂದು ಹೇಳಿದರು.

ಮಂಗಳೂರು ತಾಲೂಕು ಮೂಳೂರು ಮತ್ತು ಕಂದಾವರ ಗ್ರಾಮಗಳಲ್ಲಿ ಒಟ್ಟು 27.72 ಎಕರೆ ಜಮೀನನ್ನು ಎಂ.ಆರ್‌.ಪಿ.ಎಲ್‌. ಯೋಜನೆ ಗಾಗಿ ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರ ಡಿಸಲಾಗಿದ್ದು, ಸದರಿ ಜಮೀನಿನ ಪರಿಹಾರ ಪಾವತಿ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಚಿಕ್ಕಮಗಳೂರಿನಲ್ಲಿ ಸ್ಪೈಸ್‌ ಪಾರ್ಕ್‌ ಯೋಜನೆ
ಚಿಕ್ಕಮಗಳೂರು ತಾಲೂಕು ಹೊಸಕೋಟೆ ಗ್ರಾಮ ದಲ್ಲಿ ಒಟ್ಟು 10 ಎಕರೆ ಸರಕಾರಿ ಜಮೀನನ್ನು ಸ್ಪೈಸ್‌ ಪಾರ್ಕ್‌ ಯೋಜನೆಗೆ ಮಂಜೂರು ಮಾಡಲಾಗಿದೆ. ಸದರಿ ಜಮೀನಿನಲ್ಲಿ ಸ್ಪೈಸ್‌ ಪಾರ್ಕ್‌ ಅಭಿವೃದ್ಧಿಪಡಿಸಲು ಕ್ರಮ ವಹಿಸ ಲಾಗಿದೆ ಎಂದು ವಿವರಿಸಿದರು.

ಉದ್ಯಮಿಗಳಿಗೆ ಕಡಿಮೆ ದರದಲ್ಲಿ ವಿದ್ಯುತ್‌
ಎಲ್ಲವೂ ಅಂದುಕೊಂಡಂತೆ ನಡೆದರೆ, ಈಗಿರುವುದಕ್ಕಿಂತ ಅರ್ಧದಷ್ಟು ದರದಲ್ಲಿ ಉದ್ಯಮಿಗಳಿಗೆ ಮುಂಬರುವ ದಿನಗಳಲ್ಲಿ ವಿದ್ಯುತ್‌ ಪೂರೈಕೆ ಆಗಲಿದೆ! ಪ್ರಸ್ತುತ ಕೈಗಾರಿಕೋದ್ಯಮಿಗಳು ಪ್ರತಿ ಯೂನಿಟ್‌ಗೆ ಕನಿಷ್ಠ 7ರಿಂದ 10 ರೂ. ಪಾವತಿಸಬೇಕಾಗಿದೆ. ಇದು ನೆರೆಯ ರಾಜ್ಯಗಳಿಗೆ ಹೋಲಿಸಿದರೆ ದುಬಾರಿ ಆಗಿದೆ. ಈ ಹಿನ್ನೆಲೆಯಲ್ಲಿ ವಿದ್ಯುತ್‌ ಉತ್ಪಾದಕರು ಮತ್ತು ಉದ್ಯಮಿಗಳನ್ನು ಒಂದೇ ವೇದಿಕೆಗೆ ತಂದು, ಅತ್ಯಂತ ಕಡಿಮೆ ದರದಲ್ಲಿ ನೇರವಾಗಿ ಉದ್ಯಮಗಳಿಗೆ ವಿದ್ಯುತ್‌ ಪೂರೈಸಲು ಸರಕಾರ ಮುಂದಾಗಿದೆ ಎಂದು ಸ್ವತಃ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಮುರುಗೇಶ ನಿರಾಣಿ ತಿಳಿಸಿದ್ದಾರೆ.

ಶುಕ್ರವಾರ “ಉದಯವಾಣಿ’ ಬೆಂಗಳೂರು ಕಚೇರಿಗೆ ಭೇಟಿ ನೀಡಿದ ಅವರು, ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆ ಕುರಿತು ಸಂವಾದ ನಡೆಸಿದರು.

ರಾಜ್ಯದಲ್ಲಿ ಸೌರ ಮತ್ತು ಪವನ ವಿದ್ಯುತ್‌ ಸಾಕಷ್ಟು ಉತ್ಪಾದನೆಯಾಗುತ್ತಿದೆ. ಸ್ವತಃ ಕೆಲವು ಉದ್ಯಮಿಗಳೇ ಉತ್ಪಾದಿಸಿದರೂ ಅದೇ ವಿದ್ಯುತ್‌ ಅನ್ನು ಉದ್ಯಮಿಗಳು ದುಬಾರಿ ಬೆಲೆಗೆ ಖರೀದಿಸುವ ಅನಿವಾರ್ಯತೆ ಇದೆ. ಇದಕ್ಕೆ ನನ್ನ ಸಹಮತ ಇಲ್ಲ. ಆದ್ದರಿಂದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಮಹಾಸಂಘ (ಎಫ್ಕೆಸಿಸಿಐ), ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ), ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಸಹಿತ ಹಲವು ಕೈಗಾರಿಕ ಸಂಘಗಳ ಮೂಲಕ ನೇರವಾಗಿ ಉದ್ಯಮಿಗಳಿಗೆ ವಿದ್ಯುತ್‌ ಪೂರೈಸುವ ಚಿಂತನೆ ಇದೆ. ಈ ನಿಟ್ಟಿನಲ್ಲಿ ಎಲ್ಲ ಸಂಘಟನೆಗಳಿಗೆ ಪತ್ರ ವ್ಯವಹಾರವನ್ನೂ ಮಾಡಲಾಗಿದ್ದು, ಪೂರಕ ಸ್ಪಂದನೆಯೂ ದೊರೆಯುತ್ತಿದೆ ಎಂದು ಹೇಳಿದರು.

ಶೇ.50ರಷ್ಟು ಕಡಿಮೆ ದರ
ಸಂಘಟನೆಗಳ ಮೂಲಕ ವಿದ್ಯುತ್‌ ಪಡೆಯಲು ಮುಂದೆ ಬಂದವರನ್ನು ಉತ್ಪಾದಕರೊಂದಿಗೆ ಲಿಂಕ್‌ ಮಾಡಲಾಗುವುದು. ಒಡಂಬಡಿಕೆಯಾಗಿರುವವರಿಗೆ ಗ್ರಿಡ್‌ ಮೂಲಕ ವಿದ್ಯುತ್‌ ಒದಗಿಸಲಾಗುವುದು. ಇದಕ್ಕೆ ಪೂರಕವಾಗಿ ಸಹಾಯವಾಣಿಯನ್ನೂ ತೆರೆಯಲಾಗುವುದು. ಉತ್ಪಾದಕರು ಕೂಡ ಇಲ್ಲಿ ಸಂಪರ್ಕಿಸಿ, ವಿದ್ಯುತ್‌ ನೀಡಲು ಮುಂದೆ ಬರಬಹುದು. ಈ ಎರಡೂ ವರ್ಗಗಳಿಗೂ ಹೊಸ ವ್ಯವಸ್ಥೆಯಿಂದ ಅನುಕೂಲ ಆಗಲಿದ್ದು, ಹೆಚ್ಚು ಕಡಿಮೆ ಈಗಿರುವುದಕ್ಕಿಂತ ಶೇ.50ರಷ್ಟು ಕಡಿಮೆ ದರದಲ್ಲಿ ಉದ್ಯಮಿಗಳಿಗೆ ವಿದ್ಯುತ್‌ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆದರೆ, ಈ ಮುಕ್ತ ಮಾರುಕಟ್ಟೆ ಅಷ್ಟು ಸುಲಭವೂ ಇಲ್ಲ. ವ್ಹೀಲಿಂಗ್‌ ಮತ್ತು ಬ್ಯಾಂಕಿಂಗ್‌ (ಸಾಗಣೆ ಮತ್ತು ಸಂಗ್ರಹ) ಶುಲ್ಕ, ಆನುಷಂಗಿಕ ಸಹಾಯಧನ, ಹೆಚ್ಚುವರಿ ಆನುಷಂಗಿಕ ಸಹಾಯಧನ ಯಾರು ಭರಿಸುತ್ತಾರೆ ಎಂಬುದರ ಮೇಲೆ ಈ ವ್ಯವಸ್ಥೆ ಜಾರಿ ಅವಲಂಬಿಸಿದೆ.

ನಿಯಮಕ್ಕೆ ತಿದ್ದುಪಡಿ
ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರಿಗೆ ಉದ್ಯಮ ಸ್ಥಾಪನೆಗಾಗಿ ಶೇ.75ರಷ್ಟು ರಿಯಾಯಿತಿ ದರದಲ್ಲಿ ಭೂಮಿಯನ್ನು ನೀಡಲಾಗುತ್ತಿದೆ. ಆದರೆ, ಇದು ಪ್ರಭಾವಿಗಳು, ಅಧಿಕಾರವುಳ್ಳವರ ಸಂಬಂಧಿಕರ ಪಾಲಾಗುತ್ತಿರುವುದು ಕಂಡುಬಂದಿದೆ. ಪರಿಣಾಮ ಯೋಜನೆ ಉದ್ದೇಶ ಸಾಕಾರಗೊಳ್ಳುತ್ತಿಲ್ಲ. ಆದ್ದರಿಂದ ಈ ಸಂಬಂಧದ ನಿಯಮದಲ್ಲಿ ತಿದ್ದುಪಡಿ ತರಲು ನಿರ್ಧರಿಸಲಾಗಿದೆ ಎಂದು ಸಚಿವ ಮುರುಗೇಶ ನಿರಾಣಿ ಮಾಹಿತಿ ನೀಡಿದರು.

ಒಬ್ಬರಿಗೆ ಒಂದೇ ಸಲ ಖರೀದಿಗೆ ಅವಕಾಶ, ಉಳ್ಳವರು ಅಥವಾ ಆದಾಯ ಮಿತಿ ನಿಗದಿಪಡಿಸುವ ಮೂಲಕ ಇಂತಹವರಿಗೆ ಮಾತ್ರ ಅವಕಾಶ ಎಂಬ ಷರತ್ತುಗಳನ್ನು ವಿಧಿಸುವ ಚಿಂತನೆ ಇದೆ. ಶೀಘ್ರ ನಿಯಮವು ತಿದ್ದುಪಡಿಯೊಂದಿಗೆ ಜಾರಿಗೆ ಬರಲಿದೆ ಎಂದೂ ಹೇಳಿದರು.

ಎಸ್‌ಸಿ ಎಸ್‌ಟಿ ಸಮುದಾಯದ ಜತೆಗೆ ಆರ್ಥಿಕವಾಗಿ ಹಿಂದುಳಿದವರೂ ಕೈಗಾರಿಕೆ ಸ್ಥಾಪಿಸಲು ಬಯಸಿದರೆ ಅವರಿಗೆ ರಿಯಾಯಿತಿ ದರದಲ್ಲಿ ಜಮೀನು ಒದಗಿಸಲು ತೀರ್ಮಾನಿಸ ಲಾಗಿದೆ ಎಂದು ಹೇಳಿದರು.

ಕಾಲೇಜು ಮಟ್ಟಕ್ಕೆ “ಉದ್ಯಮಿಯಾಗು’ ಯೋಜನೆ
ಸರಕಾರದ ಮಹತ್ವಾಕಾಂಕ್ಷಿ ಯೋಜನೆ “ಉದ್ಯಮಿಯಾಗು ಉದ್ಯೋಗ ನೀಡು’ ಕಾರ್ಯಕ್ರಮವನ್ನು ಮುಂಬರುವ ದಿನಗಳಲ್ಲಿ ಕಾಲೇಜು ಮಟ್ಟಕ್ಕೆ ತೆಗೆದುಕೊಂಡು ಹೋಗುವ ಚಿಂತನೆ ಇದೆ ಎಂದು ಸಚಿವ ನಿರಾಣಿ ತಿಳಿಸಿ ದರು. ಪ್ರಸ್ತುತ ರಾಜ್ಯದ ನಾಲ್ಕೂ ಕಂದಾಯ ವಲಯಗಳಲ್ಲಿ ಇದನ್ನು ಆಯೋಜಿಸಲಾಗುತ್ತಿದೆ. ಯುವಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಜಿಲ್ಲಾಮಟ್ಟದಲ್ಲಿ ಏರ್ಪಡಿಸಲು ಉದ್ದೇಶಿಸಲಾಗಿದೆ. ಅಲ್ಲದೆ, ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಮುಂಬರುವ ದಿನಗಳಲ್ಲಿ ಕಾಲೇಜು ಹಂತದಲ್ಲಿ ಇದನ್ನು ಏರ್ಪಡಿಸಲಾಗುವುದು. ಉದ್ಯಮಿಯಾಗಲು ಬಯಸುವವರಿಗೆ ಕೈಗಾರಿಕೆ ಇಲಾಖೆ ವತಿಯಿಂದಲೇ ಎಲ್ಲ ರೀತಿಯ ಕೌಶಲ್ಯ ತರಬೇತಿ, ಬ್ಯಾಂಕ್‌ಗಳಿಂದ ಸಾಲಕ್ಕೆ ಖಾತರಿ ಸೇರಿ ಹಲವು ಸೌಕರ್ಯ ಕಲ್ಪಿಸಲಾಗುವುದು ಎಂದರು.

ನಿರಾಣಿ ಹೇಳಿದ್ದೇನು?
– ಕೈಗಾರಿಕಾ ಸಂಘಗಳ ಮೂಲಕ ನೇರವಾಗಿ ಉದ್ಯಮಿಗಳಿಗೆ ವಿದ್ಯುತ್‌ ಪೂರೈಸುವ ಚಿಂತನೆ
– ಆರ್ಥಿಕವಾಗಿ ಹಿಂದುಳಿದವರಿಗೂ ಕೈಗಾರಿಕೆ ಸ್ಥಾಪಿಸಲು ರಿಯಾಯಿತಿ ದರದಲ್ಲಿ ಜಮೀನು
– ಉದ್ಯಮಿಯಾಗಲು ಬಯಸುವವರಿಗೆ ಕೌಶಲ್ಯ ತರಬೇತಿ, ಬ್ಯಾಂಕ್‌ ಸಾಲಕ್ಕೆ ಖಾತರಿ ಸೇರಿ ಹಲವು ಸೌಲಭ್ಯ

Advertisement

Udayavani is now on Telegram. Click here to join our channel and stay updated with the latest news.

Next