Advertisement

Udayavani Campaign: 14 ಹೊಸ ಬಸ್‌ ಓಡಾಟಕ್ಕೆ ಕೆಎಸ್‌ಆರ್‌ಟಿಸಿ ಸಿದ್ಧ

11:11 AM Jun 29, 2024 | Team Udayavani |

ಪುತ್ತೂರು: ಕಳೆದ ನಾಲ್ಕು ವರ್ಷಗಳಿಂದ ಬಸ್‌ ಅವಲಂಬಿತ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು ಬೇಡಿಕೆ ಇರುವ ಹೊಸ ರೂಟ್‌ಗಳಲ್ಲಿ ಸರ್ವೇ ಕಾರ್ಯ ನಡೆಸಿದ್ದೇವೆ. ಪದವಿ ಸಹಿತ ಇತರ ವಿಭಾಗದ ಹೊಸ ವರ್ಷದ ಶೈಕ್ಷಣಿಕ ತರಗತಿಗಳು ಜುಲೈ, ಆಗಸ್ಟ್‌ನಲ್ಲಿ ಆರಂಭಗೊಳ್ಳಲಿದ್ದು, ಇದಕ್ಕೆ ಪೂರಕವಾಗಿ ಪುತ್ತೂರು ವಿಭಾಗ ವ್ಯಾಪ್ತಿಯ ನಾಲ್ಕು ಡಿಪೋಗಳಲ್ಲಿ ಒಟ್ಟು 14 ಶೆಡ್ನೂಲ್‌ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗೀಯ ಸಂಚಲನಾಧಿಕಾರಿ ಮುರಳೀಧರ ಆಚಾರ್ಯ ತಿಳಿಸಿದ್ದಾರೆ.

Advertisement

ನಮಗೆ ಬಸ್‌ ಬೇಕೇ ಬೇಕು: ಅಭಿಯಾನದ ಭಾಗವಾಗಿ ಉದಯವಾಣಿ ನಡೆಸಿದ ಸಂದರ್ಶನದಲ್ಲಿ ಪುತ್ತೂರು, ಬಿ.ಸಿ.ರೋಡು, ಧರ್ಮಸ್ಥಳ, ಸುಳ್ಯ ಡಿಪೋಗಳಲ್ಲಿ ಒಟ್ಟು ಹದಿನಾಲ್ಕು ಶೆಡ್ನೂಲ್‌ನ ಅಗತ್ಯತೆಯನ್ನು ಪರಿಗಣಿಸಲಾಗಿದೆ. ಅವುಗಳನ್ನು ಅನುಷ್ಠಾನಕ್ಕೆ ತರಲು ಸಿದ್ಧತೆ ನಡೆದಿದೆ ಎಂದು ವಿವರಿಸಿದರು.

ಉದಯವಾಣಿ ಅಭಿಯಾನದಲ್ಲಿ ದಾಖಲಾದ ಮಾರ್ಗಗಳಲ್ಲಿ ಸಮಸ್ಯೆ ಇರುವುದು ನಿಜ. ಅದನ್ನು ನಾವು ಪರಿಗಣಿಸಿದ್ದೇವೆ. ಬೆಟ್ಟಂಪಾಡಿ, ಸುಳ್ಯಪದವು, ಅಳಿಕೆ, ವಿಟ್ಲ, ಉಜಿರೆ-ಚಾರ್ಮಾಡಿ, ಬಿ.ಸಿರೋಡ್‌-ಮಂಗಳೂರು ನಡುವೆ ಸಿಬಂದಿ ನಿಯೋಜನೆಯ ತತ್‌ಕ್ಷಣ ಹೆಚ್ಚುವರಿ ಬಸ್‌ ಓಡಾಟ ನಡೆಸಲಾಗುವುದು ಎಂದು ಅವರು ಪ್ರಕಟಿಸಿದರು. ಅದರ ಜತೆಗೆ ವಿದ್ಯಾರ್ಥಿಗಳ ಒತ್ತಡ ನಿವಾರಣೆಗೆ ಪುತ್ತೂರು ನಗರದಲ್ಲಿ ಸಿಟಿ ಬಸ್‌ ಆರಂಭಗೊಂಡಿದೆ ಎಂದರು.

ಪುತ್ತೂರು-ಕೌಡಿಚ್ಚಾರು ಸಿಟಿ ಬಸ್‌ ಆರಂಭ; ಹೊಸ ಮಾರ್ಗಗಳಿಗೆ ಶೀಘ್ರ ವಿಸ್ತರಣೆ

ಶಾಸಕರ ಸೂಚನೆಯಂತೆ ಪುತ್ತೂರು-ಕೌಡಿಚ್ಚಾರು ನಡುವೆ ಸಿಟಿ ಬಸ್‌ ಓಡಾಟ ಜೂ. 28ರಂದು ಪ್ರಾರಂಭಗೊಂಡಿದೆ. ಉದಯವಾಣಿ ಅಭಿಯಾನದಲ್ಲಿ ಇನ್ನಷ್ಟು ಹೊಸ ರೂಟ್‌ಗಳಲ್ಲಿ ಸಿಟಿ ಬಸ್‌ ಓಡಾಟದ ಬಗ್ಗೆ ಶಾಸಕರು ಪ್ರಸ್ತಾವಿಸಿರುವುದನ್ನು ಗಮನಿಸಿದ್ದೇವೆ. ಕೆಲವು ವರ್ಷಗಳ ಹಿಂದೆ ನಗರದಲ್ಲಿ ಸಿಟಿ ಬಸ್‌ ಜಾರಿ ಮಾಡಿದಾಗ ಅದು ಯಶಸ್ಸು ಕಂಡಿರಲಿಲ್ಲ. ಏಕೆಂದರೆ ಬೆಳಗ್ಗೆ ಮತ್ತು ಸಂಜೆ ಮಾತ್ರ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವ ಕಾರಣ ಉಳಿದ ಹೊತ್ತಿನಲ್ಲಿ ಪ್ರಯಾಣಿಕರ ಕೊರತೆ ಉಂಟಾಗಿತ್ತು.

Advertisement

ಪ್ರಸ್ತುತ ವಿದ್ಯಾರ್ಥಿಗಳ ಸಹಿತ ಜನರ ಓಡಾಟ ಹೆಚ್ಚಾಗಿದೆ. ನಗರದ ವ್ಯಾಪ್ತಿಯು ವಿಸ್ತಾರಗೊಂಡಿದೆ. ಹಾಗಾಗಿ ಸಿಟಿ ಬಸ್‌ ಓಡಾಟಕ್ಕೆ ಅವಕಾಶ ಇರುವ ಸಾಧ್ಯತೆ ಹೆಚ್ಚಿದೆ. ಶಾಸಕರ ಜತೆ ಚರ್ಚಿಸಿ ಅವರ ಸಲಹೆ ಪಡೆದು ಸಿಟಿ ಬಸ್‌ ಜಾರಿ ಮಾಡುತ್ತೇವೆ ಎಂದು ಮುರಳೀಧರ ಆಚಾರ್ಯ ತಿಳಿಸಿದರು.

ಆಗಸ್ಟ್‌ ನಲ್ಲಿ ಸಿಬಂದಿ ಆಗಮನ; ಬಳಿಕ ಬಸ್‌ ಓಡಾಟ ಸುಸೂತ್ರ

ಪುತ್ತೂರು ಡಿವಿಜನ್‌ನಲ್ಲಿ ಕೊರತೆ ಇರುವುದು ಬಸ್‌ ಅಲ್ಲ, ಚಾಲಕ, ನಿರ್ವಾ ಹಕರದ್ದು. ಒಟ್ಟು 485 ಶೆಡ್ನೂಲ್‌ ಇದ್ದು ಇದರಲ್ಲಿ 103 ಸಿಬಂದಿ ಕೊರತೆ ಇದೆ. ಈಗಾಗಲೇ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಸಂದರ್ಶನ ಮುಗಿದು ವೆರಿಫಿಕೇಶನ್‌ ಪೂರ್ಣಗೊಂಡಿದೆ. ಜುಲೈ ನಲ್ಲಿ ಟ್ರ್ಯಾಕ್‌ ಟೆಸ್ಟ್‌ ಆಗಿ ಆಗಸ್ಟ್‌ನಲ್ಲಿ ಕರ್ತವ್ಯಕ್ಕೆ ಬರುವ ನಿರೀಕ್ಷೆ ಇದೆ. ಸಿಬಂದಿ ಲಭ್ಯತೆಯಿಂದ ಬಹುತೇಕ ಸಮಸ್ಯೆ ನಿವಾರಣೆ ಆಗಲಿದ್ದು ಹೆಚ್ಚುವರಿ ಬಸ್‌ ಓಡಾಟ ಪ್ರಾರಂಭಕ್ಕೆ ತೊಂದರೆ ಉಂಟಾಗದು.

ತಾಲೂಕು ವ್ಯಾಪ್ತಿಗಳಲ್ಲಿ ಏನೇನು ಕ್ರಮ?

ಪುತ್ತೂರು: 3 ಹೆಚ್ಚು ವರಿ ಬಸ್‌

ಪುತ್ತೂರು ಡಿಪೋದಲ್ಲಿ ಶೇ.10 ರಷ್ಟು ಹೆಚ್ಚುವರಿ ಬಸ್‌ ಇದೆ. ಸಿಬಂದಿ ನೇಮಕದ ಬಳಿಕ ಕೆಲವು ರೂಟ್‌ಗಳಲ್ಲಿ ಹೆಚ್ಚುವರಿ ಬಸ್‌ ಓಡಿಸಲಾಗುತ್ತದೆ.

ಪದವಿ ತರಗತಿ ಪ್ರಾರಂಭಗೊಂಡ ಅನಂತರ ಪುತ್ತೂರು- ಉಪ್ಪಿನಂಗಡಿ ಮಾರ್ಗದಲ್ಲಿ ಬೆಳಗ್ಗೆ 8ರಿಂದ 9 ಗಂಟೆಯ ನಡುವೆ ಎರಡು ಹೆಚ್ಚುವರಿ ಬಸ್‌ ಓಡಾಟ ಪ್ರಾರಂಭಿಸಲಾಗುವುದು.

ಪದವಿ ತರಗತಿ ಆರಂಭವಾದ ಬಳಿಕ ಸುಳ್ಯಪದವಿನಿಂದ ಬೆಟ್ಟಂಪಾಡಿಗೆ ಹೆಚ್ಚುವರಿ ಬಸ್‌ ಆರಂಭ.

ಬೆಳ್ತಂಗಡಿ: 2 ಹೆಚ್ಚು ವರಿ ಬಸ್‌

ಮಂಗಳೂರು-ಧರ್ಮಸ್ಥಳ ನಡುವೆ ರಸ್ತೆ ಸಮಸ್ಯೆಯಿಂದಾಗಿ ನಿಗದಿತ ಸಮಯಕ್ಕೆ ಬಸ್‌ ಓಡಾಟ ಸಾಧ್ಯವಾಗದೆ ಜನರಿಗೆ ತೊಂದರೆ ಉಂಟಾಗಿದೆ. ಒಂದೊಂದು ಬಾರಿ ಅರ್ಧ, ಒಂದು ಗಂಟೆ ವ್ಯತ್ಯಾಸವಾಗುತ್ತದೆ.

ಬೆಳ್ತಂಗಡಿ-ಉಜಿರೆ-ಚಾರ್ಮಾಡಿ ಕಡೆಗೆ ಇನ್ನೂ ಎರಡು ಹೆಚ್ಚುವರಿ ಬಸ್‌ ಓಡಾಟದ ಅಗತ್ಯ ಇದ್ದು ಆ ಬಗ್ಗೆ ಕೆಲವೇ ದಿನಗಳಲ್ಲಿ ಕ್ರಮ.

ಬಂಟ್ವಾಳ: 4-6 ಹೆಚ್ಚು ವರಿ ಬಸ್‌

ಬೆಳಗ್ಗಿನ ಹೊತ್ತಿನಲ್ಲಿ ಬಿ.ಸಿ.ರೋಡ್‌ ಡಿಪೋದಿಂದ ಮಂಗಳೂರಿಗೆ ಹೆಚ್ಚುವರಿಯಾಗಿ ನಾಲ್ಕರಿಂದ ಆರು ಬಸ್‌ಗಳ ಅಗತ್ಯ ಇದ್ದು ತತ್‌ಕ್ಷಣ ಕ್ರಮ ಕೈಗೊಳ್ಳುತ್ತೇವೆ.

ಕಲ್ಲಡ್ಕ, ಪಡೀಲು ಬಳಿ ರಸ್ತೆ ರೋಡ್‌ ಬ್ಲಾಕ್‌ ಆಗಿ ಕೆಲವೊಮ್ಮೆ ಕೆಲವು ಬಸ್‌ಗಳು ಒಂದೇ ಹೊತ್ತಿನಲ್ಲಿ ಒಟ್ಟೊಟ್ಟಿಗೆ ಸಂಚರಿಸುವ ಸ್ಥಿತಿ ಉಂಟಾಗುತ್ತದೆ. ಅಳಿಕೆ, ವಿಟ್ಲ ಭಾಗಕ್ಕೂ ಹೊಸ ಬಸ್‌ ಹಾಕಲಾಗುತ್ತದೆ.

ಸುಳ್ಯ: ನಾಲ್ಕು ಹೆಚ್ಚುವರಿ ಬಸ್‌

ಸುಳ್ಯ ಡಿಪೋ ಅನ್ನು ವಿಸ್ತರಿಸಿದರೆ ಶೆಡ್ನೂಲ್‌ ಸಂಖ್ಯೆ ಹೆಚ್ಚಾಗುತ್ತದೆ. ಆಗ ಬೇರೆ ಬೇರೆ ರೂಟ್‌ಗಳಲ್ಲಿ ಬಸ್‌ ಓಡಾಟ ಪ್ರಾರಂಭಿಸಬಹುದು.

ಗುತ್ತಿಗಾರು-ಸುಬ್ರಹ್ಮಣ್ಯ ನಡುವೆ ಹೆಚ್ಚುವರಿ ಬಸ್‌ ಓಡಾಟ ನಡೆಸಲಿದೆ. ಕೊಲ್ಲಮೊಗ್ರು, ಮಡಪ್ಪಾಡಿಗೂ ಹೆಚ್ಚುವರಿ ಬಸ್‌ ಹಾಕಲಾಗುವುದು.

ತೊಡಿಕಾನ ಮಾರ್ಗದಲ್ಲಿ ಸರಕಾರಿ ಬಸ್‌ ಬೇಡಿಕೆ ಇದ್ದು ಅನುಮತಿ ಕೇಳಲಾಗಿದೆ.

ಕಡಬ: ಒಂದು ಹೆಚ್ಚು ವರಿ ಬಸ್‌

ನೆಲ್ಯಾಡಿ-ಕಡಬ ನಡುವೆ ಹೆಚ್ಚುವರಿ ಬಸ್‌ ಓಡಾಟಕ್ಕೆ ವ್ಯವಸ್ಥೆ ಮಾಡಲಾಗುವುದು.

ಸೋಮವಾರ ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ತೆರಳುವ ಭಕ್ತರ ಸಂಖ್ಯೆ ಹೆಚ್ಚಿರುವ ಕಾರಣ ಬಸ್‌ ರಶ್‌ ಆಗಿದ್ದು ಇಲ್ಲಿ ಬೆಳಗ್ಗೆ, ಸಂಜೆ ಹೆಚ್ಚುವರಿ ಬಸ್‌ ಓಡಾಟ ಸದ್ಯವೇ ಆರಂಭ. ಗುಂಡ್ಯದ ಭಾಗದ ವಿದ್ಯಾರ್ಥಿಗಳ ಸಮಸ್ಯೆಯೂ ಅರಿವಿದೆ.

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next