ಕಲಬುರಗಿ: ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಆರೋಪದಡಿ ಜಪ್ತಿ ಮಾಡಿದ್ದ ವಾಹನ ಬಿಡುಗಡೆ ಮಾಡಲು ಲಂಚ ಪಡೆಯುತ್ತಿದ್ದ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಸೇರಿದಂತೆ ಇಬ್ಬರು ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ.
ಜಂಟಿ ನಿರ್ದೇಶಕ ಕೆ.ಶ್ರೀಧರ್ ಮತ್ತು ದ್ವಿತೀಯ ದರ್ಜೆ ಸಹಾಯಕ ಸಂತೋಷ ಎಸಿಬಿ ಬಲೆಗೆ ಬಿದ್ದವರು. ಜಪ್ತಿ ಮಾಡಿರುವ ವಾಹನ ಬಿಡುಗಡೆ ಮಾಡಲು ಮೈನುದ್ದಿನ್ ಎನ್ನುವವರಿಂದ 50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಇಂದು ಮೈನುದ್ದಿನ್ ಅವರಿಂದ ಮುಂಗಡವಾಗಿ 15 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಇಬ್ಬರನ್ನು ಬಂಧಿಸಿದ್ದಾರೆ.
ಸಿನಿಮೀಯ ರೀತಿ ಕಾರ್ಯಾಚರಣೆ: ಕಳೆದ ಮಾರ್ಚ್ನಲ್ಲಿ ಆಳಂದ ಬಳಿ ಪಡಿತರ ಅಕ್ಕಿ ಸಾಗಿಸುವ ವಾಹನವನ್ನು ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದರು. ಅಂದಿನಿಂದ ವಾಹನ ಮಾಲೀಕ ಮೈನುದ್ದೀನ್ ವಾಹನ ಬಿಡುಗಡೆ ಮಾಡಿಸಿಕೊಳ್ಳಲು ಕಸರತ್ತು ಮಾಡುತ್ತಿದ್ದರು. ವಾಹನ ಪೊಲೀಸರ ವಶದಲ್ಲಿದ್ದರೂ ಅದರ ಬಿಡುಗಡೆಗೆ ಆಹಾರ ಇಲಾಖೆ ಅಧಿಕಾರಿಗಳ ಅನುಮತಿ ಬೇಕಿತ್ತು.
ಹೀಗಾಗಿ ವಾಹನ ಬಿಡುಗಡೆ ಮಾಡಲು ಆಹಾರ ಇಲಾಖೆಯ ಅಧಿಕಾರಿಗಳು ಲಂಚ ಪಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಕಚೇರಿ ಮೇಲೆ ಎಸಿಬಿ ಎಸ್ಪಿ ವಿ.ಎಂ. ಜ್ಯೋತಿ ಡಿವೈಎಸ್ಪಿ ಸುಧಾ ಆದಿ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಆದರೆ, ಅಷ್ಟರಲ್ಲೇ ಎಸ್ ಡಿಎ ಸಂತೋಷ ಲಂಚ ಪಡೆದು ಜಂಟಿ ನಿರ್ದೇಶಕ ಶ್ರೀಧರ್ ಗೆ ತಲುಪಿಸಲು ಅವರ ಮನೆಗೆ ವಾಹನದಲ್ಲಿ ಹೋಗುತ್ತಿದ್ದರು. ಹೀಗಾಗಿ ಸಂತೋಷನನ್ನು ಅಧಿಕಾರಿಗಳು ಬೆನ್ನಟ್ಟಿದ್ದಾರೆ. ಘಾಟಗೆ ಲೇಔಟ್ ನಲ್ಲಿರುವ ಮೇಲಾಧಿಕಾರಿ ಶ್ರೀಧರ್ ಮನೆಗೆ ತೆರಳಿ ಸಂತೋಷ ಲಂಚದ ಹಣ ನೀಡುತ್ತಿದ್ದಾಗ ಇಬ್ಬರನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.