Advertisement

ಎರಡು ದಿನ ವ್ಯಾಪಾರ-ವಹಿವಾಟು ಬಂದ್‌

11:57 AM Aug 15, 2017 | Team Udayavani |

ಹುಬ್ಬಳ್ಳಿ: ಇ-ಪಾವತಿ ರದ್ದತಿಗೆ ಒತ್ತಾಯಿಸಿ ಮುಷ್ಕರವನ್ನು ಇನ್ನಷ್ಟು ತೀವ್ರಗೊಳಿಸಲು ಹಾಗೂ ಎಪಿಎಂಸಿಗೆ ಒಳಪಡುವ ಎಲ್ಲ ವ್ಯಾಪಾರಸ್ಥರನ್ನು ಒಗ್ಗೂಡಿಸಿ ವಾರದೊಳಗೆ ರಾಜ್ಯಾದ್ಯಂತ ಎರಡು ದಿನಗಳ ಕಾಲ ವ್ಯಾಪಾರ-ವಹಿವಾಟು ಸಂಪೂರ್ಣ ಬಂದ್‌ ಮಾಡಲು ಎಪಿಎಂಸಿ ವರ್ತಕರು ನಿರ್ಧರಿಸಿದರು. ಸೋಮವಾರ ಇಲ್ಲಿನ ಜೆ.ಸಿ. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ (ಕೆಸಿಸಿಐ) ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಎಪಿಎಂಸಿಯ ವರ್ತಕರು ಒಕ್ಕೊರಲಿನ ನಿರ್ಣಯ ಕೈಗೊಂಡರು. 

Advertisement

ಎಪಿಎಂಸಿ ಕ್ರಿಯಾ ಸಮಿತಿಯ ಉಪಾಧ್ಯಕ್ಷ ವಿ.ಪಿ. ಲಿಂಗನಗೌಡರ, ಬ್ಯಾಡಗಿಯ ಜಗದೀಶಗೌಡ ಪಾಟೀಲ ಮಾತನಾಡಿ, ಸರಕಾರದೊಂದಿಗೆ ನಡೆದ ಮಾತುಕತೆ ವೇಳೆ ಮುಖ್ಯ ಕಾರ್ಯದರ್ಶಿಯವರು ಸ್ಪಂದಿಸಿದ್ದರಾದರೂ, ಮಾಜಿ ಶಾಸಕ ಡಿ.ಆರ್‌. ಪಾಟೀಲರು ವ್ಯತಿರಿಕ್ತ ಹೇಳಿಕೆ ನೀಡಿ, ಮಾತುಕತೆ ವಿಫ‌ಲಗೊಳಿಸಿದರು. ರೈತರ ಹೆಸರಿನಲ್ಲಿ  ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದಾಗಿ ಸಭೆ ವಿಫಲವಾಯಿತು ಎಂದರು.

ಸರ್ಕಾರಕ್ಕೆ ಬಿಸಿ ಮುಟ್ಟಿಸೋಣ: ರಾಣಿಬೆನ್ನೂರಿನ ನೀಲೇಶ, ಬ್ಯಾಡಗಿಯ ದುಂಡಪ್ಪ ಕಬ್ಬೂರ, ಹುಬ್ಬಳ್ಳಿಯ ಬಸವರಾಜ ಯಕಲಾಸಪುರ, ಗದುಗಿನ ಕಾಂತಿಲಾಲ, ರಾಜು ಕುರಡಗಿ, ರಾಜು ಗುಡಿಮನಿ, ಹಾವೇರಿಯ ಶೇಖಪ್ಪ ಗಚ್ಚಿನ, ರಾಣಿಬೆನ್ನೂರಿನ ಬಸವರಾಜ ಪಾಟೀಲ, ಮುಂಡರಗಿಯ ಕೊಟ್ರೇಶ ಅಂಗಡಿ, ಗಜೇಂದ್ರಗಡದ ವರ್ತಕರು ಮಾತನಾಡಿ, ಇ-ಪಾವತಿ ರದ್ದಾಗುವ ವರೆಗೂ ವರ್ತಕರ ನಡುವೆ ಒಡಕು ಆಗದಂತೆ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡೋಣ.

ಎಪಿಎಂಸಿ ಕಾರ್ಮಿಕರು, ಹಮಾಲರು, ಗುಮಾಸ್ತರು, ರೈತರನ್ನು ಸೇರಿಸಿ ಹೋರಾಟ ತೀವ್ರಗೊಳಿಸೋಣ. ನಮ್ಮ ಭಾಗದ ಜನಪ್ರತಿನಿಧಿಗಳಿಗೂ ಹೋರಾಟದ ಬಗ್ಗೆ ಮನವರಿಕೆ ಮಾಡೋಣ. ಯಶಸ್ವಿಯಾಗುವವರೆಗೂ ಹೋರಾಟ ಮಾಡೋಣ, ಕಾಯ್ದೆ ಜಾರಿಗೆ ತಂದವರ ಮನೆ ಎದುರು ಧರಣಿ ನಡೆಸೋಣ. ಬೇರೆ ಬೇರೆ ದಿನಗಳಂದು ನಗರಗಳ ಬಂದ್‌ಗೆ ಕರೆ ಕೊಡೋಣ. ಎಲ್ಲ ಸರಕುಗಳನ್ನು ಎರಡು ದಿನ ಬಂದ್‌ ಮಾಡಿ ಸರಕಾರಕ್ಕೆ ಬಿಸಿ ಮುಟ್ಟಿಸೋಣ ಎಂಬ ಸಲಹೆ ನೀಡಿದರು. 

ಗದುಗಿನ ಬಿ.ಎಸ್‌. ದೇಸಾಯಿಗೌಡ್ರ ಮಾತನಾಡಿ, ರೇಮ್ಸ್‌ ನಮಗೆ ಬೇಡವೇ ಬೇಡ. ದಲ್ಲಾಳರು, ಖರೀದಿದಾರರು ಮತ್ತು ರೈತರ ನಡುವಿನ ವಹಿವಾಟಿನ ಪಾಲನ್ನು ಹಂಚಿಕೆ ಮಾಡಿಕೊಡಲು ಅದೇಕೆ ನಮಗೆ ಬೇಕು? ಕಿರಾಣಿ, ಕಾಯಿಪಲ್ಲೆ, ಕಾಳು-ಕಡಿ ವ್ಯಾಪಾರಸ್ಥರ ಬೆಂಬಲದೊಂದಿಗೆ ಗದಗ ಬಂದ್‌ ಮಾಡಲು  ಚಿಂತನೆ ನಡೆಸಲಾಗಿದೆ ಎಂದರು.

Advertisement

ಮಲ್ಲಿಕಾರ್ಜುನ ಮನೆ ಮುಂದೆ ಧರಣಿ: ದುಂದೂರ ಮಾತನಾಡಿ, ಇ-ಪಾವತಿ ವ್ಯವಸ್ಥೆಯಲ್ಲಿ ಸರಕು ಖರೀದಿಸಿದರೆ ಒಂದೇ ದಿನ ಹಣ ಪಾವತಿ ಮಾಡಲು ಬರುವುದಿಲ್ಲವೆಂಬುದು ಇದನ್ನು ಜಾರಿಗೊಳಿಸಿದವರಿಗೂ ಗೊತ್ತಿದೆ, ಅಧಿಕಾರಿಗಳಿಗೂ ಗೊತ್ತಿದೆ. ಆದ್ದರಿಂದ ಇ-ಪಾವತಿ ರದ್ದಾಗುವವರೆಗೂ ಎಪಿಎಂಸಿ ಮಾರುಕಟ್ಟೆ ಸಚಿವ ಮಲ್ಲಿಕಾರ್ಜುನ ಅವರ ದಾವಣಗೆರೆಯ ಮನೆ ಎದುರು ಪ್ರತಿ ಜಿಲ್ಲೆಯಿಂದ ಒಂದೊಂದು ದಿನ ಧರಣಿ ನಡೆಸಬೇಕು ಎಂದು ಸಲಹೆ ಕೊಟ್ಟರು.

ಕೆಸಿಸಿಐ ಅಧ್ಯಕ್ಷ ರಮೇಶ ಪಾಟೀಲ ಸ್ವಾಗತಿಸಿದರು. ಚನ್ನು ಹೊಸಮನಿ, ಶಿವಶಂಕರಪ್ಪ ಮೂಗಬಸ್ತ, ಸುರೇಶಗೌಡ ಪಾಟೀಲ ಸೇರಿದಂತೆ ಗದಗ, ಬ್ಯಾಡಗಿ, ಹಾವೇರಿ, ಹೊ ಳೆಆಲೂರ, ಮಹಾಲಿಂಗಪುರ, ರಾಣಿ ಬೆ ನ್ನೂರ, ದಾವಣಗೆರೆ, ವಿಜಯಪುರ, ಗದಗ, ಬೈಲಹೊಂಗಲ, ಮುಂಡರಗಿ, ಗಜೇಂದ್ರಗಡ, ನರಗುಂದ, ಹುಬ್ಬಳ್ಳಿ ಹಾಗೂ ವಿವಿಧ ವರ್ತಕರ ಸಂಘ- ಸಂಸ್ಥೆಗಳ ಪ್ರತಿನಿಧಿಗಳು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next