Advertisement

ಈಶಾನ್ಯ ರಾಜ್ಯಗಳಲ್ಲಿ ಗೊಂದಲ ಭೀತಿ ದೂರ ಮಾಡಿ

10:50 PM Dec 13, 2019 | mahesh |

ಈಶಾನ್ಯದ ಜನರ ತಕರಾರು ಇರುವುದು ಪೌರತ್ವದ ಅಂತಿಮ ಗಡುವನ್ನು ವಿಸ್ತರಿಸಿರುವುದಕ್ಕೆ ಹೊರತು ಒಟ್ಟಾರೆಯಾಗಿ ಪೌರತ್ವ ಮಸೂದೆಗಲ್ಲ ಎನ್ನುವುದು ಗಮನಾರ್ಹ ಅಂಶ. ಆದರೆ ಯಾವ ರಾಜಕೀಯ ಪಕ್ಷಗಳೂ ಈ ಅಂಶವನ್ನು ಬಹಿರಂಗಪಡಿಸುತ್ತಿಲ್ಲ. ಒಟ್ಟಾರೆಯಾಗಿ ಮಸೂದೆಯೇ ವಿನಾಶಕಾರಿ ಎಂಬಂತೆ ಬಿಂಬಿಸಲಾಗುತ್ತಿದೆ.

Advertisement

ಪೌರತ್ವ ತಿದ್ದುಪಡಿ ವಿಧೇಯಕ ವಿರೋಧಿಸಿ ಈಶಾನ್ಯದ ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದೆ. ಅಸ್ಸಾಂ ಪ್ರತಿಭಟನೆಯ ಕೇಂದ್ರ ಸ್ಥಾನವಾಗಿದ್ದು, ಕ್ರಮೇಣ ಪ್ರತಿಭಟನೆಯ ಕಾವು ದೇಶದ ಇತರೆಡೆಗಳಿಗೂ ವ್ಯಾಪಿಸುವ ಸಾಧ್ಯತೆ ಕಾಣಿಸುತ್ತಿದೆ. ವಿಧೇಯಕವೊಂದು ಈ ಮಟ್ಟದ ಪ್ರತಿಭಟನೆ ಮತ್ತು ಹಿಂಸಾ ಚಾರಕ್ಕೆ ಕಾರಣವಾದ ಉದಾಹರಣೆ ಇಲ್ಲ. ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಿರ್ಧಾರ ಘೋಷಣೆ ಯಾದಾಗ ಹಿಂಸಾಚಾರ ಭುಗಿಲೇಳುವ ಸಾಧ್ಯತೆಯಿತ್ತಾದರೂ ಈ ಅಪಾಯವನ್ನು ಮೊದಲೇ ಗ್ರಹಿಸಿದ್ದ ಸರಕಾರ ಸಾಕಷ್ಟು ತಯಾರಿಯನ್ನು ಮಾಡಿಕೊಂಡಿತ್ತು. ಆದರೆ ಪೌರತ್ವ ವಿಧೇಯಕ ವಿಚಾರವಾಗಿ ಸರಕಾರ ಈಶಾನ್ಯದ ರಾಜ್ಯಗಳಲ್ಲಿ ಈ ಮಟ್ಟದ ಪ್ರತಿರೋಧವನ್ನು ನಿರೀಕ್ಷಿಸಿರಲಿಕ್ಕಿಲ್ಲ. ಹೀಗಾಗಿ ಅಲ್ಲಿ ಸಾಕಷ್ಟು ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿ ರಲಿಲ್ಲ.

ಪೌರತ್ವ ವಿಧೇಯಕಕ್ಕೆ ರಾಜಕೀಯ ಪಕ್ಷಗಳು ವ್ಯಕ್ತಪಡಿಸುತ್ತಿರುವ ವಿರೋಧಕ್ಕೆ ಈಶಾನ್ಯ ರಾಜ್ಯಗಳಲ್ಲಿ ವ್ಯಕ್ತವಾಗಿರುವ ವಿರೋಧಕ್ಕೂ ಮೂಲಭೂತವಾಗಿ ವ್ಯತ್ಯಾಸಗಳಿವೆ. ಆದರೆ ಹೆಚ್ಚಿನವರಲ್ಲಿ ಇದು ರಾಜಕೀಯ ಕಾರಣಕ್ಕೆ ವ್ಯಕ್ತವಾಗುತ್ತಿರುವ ವಿರೋಧ ಎಂಬ ತಪ್ಪು ಕಲ್ಪನೆಯಿದೆ. ಈಶಾನ್ಯದ ಜನರು ವಿಧೇಯಕವನ್ನು ವಿರೋಧಿಸುತ್ತಿಲ್ಲ. ನಿಜವಾಗಿ ನೋಡುವುದಾದರೆ ಅವರಿಗೆ ವಿಧೇಯಕದಿಂದ ಲಾಭಗಳೇ ಹೆಚ್ಚಿವೆ. ಅವರ ವಿರೋಧವಿರುವುದು ಪೌರತ್ವ ಪಡೆಯಲು ಇರುವ ಅಂತಿಮ ದಿನಾಂಕದ ಬಗ್ಗೆ. ನೇರವಾಗಿ ಹೇಳುವುದಾದರೆ ಅಸ್ಸಾಂ ಒಪ್ಪಂದದ ಕೆಲವು ಅಂಶಗಳನ್ನು ಪೌರತ್ವ ವಿಧೇಯಕ ತೆಳುಗೊಳಿಸಿದೆ. ಈಶಾನ್ಯದ ಜನರು ಸಿಡಿದೇಳಲು ಕಾರಣವಾಗಿರುವುದು ಈ ಅಂಶ.

1985ರಲ್ಲಿ ಆಗಿನ ಪ್ರಧಾನಿ ರಾಜೀವ್‌ ಗಾಂಧಿಯವರ ನೇತೃತ್ವದಲ್ಲಿ ಮಾಡಿಕೊಂಡ ಅಸ್ಸಾಂ ಒಪ್ಪಂದದ ಪ್ರಕಾರ 1971, ಮಾ.25ಕ್ಕಿಂತ ಮುಂಚಿತವಾಗಿ ಅಕ್ರಮವಾಗಿ ಬಂದವರಿಗೆ ಮಾತ್ರ ಪೌರತ್ವ ನೀಡಬೇಕು. ಹೀಗೆ ಪೌರತ್ವ ನೀಡುವುದಕ್ಕೆ ಅಕ್ರಮ ವಲಸಿಗರು ತಮ್ಮ ದೇಶದಲ್ಲಿ ಎದುರಿಸಿರುವ ಧಾರ್ಮಿಕ ತಾರತಮ್ಯವಾಗಲಿ, ಪೀಡನೆ ಯಾಗಲಿ ಮಾನದಂಡವಾಗಿರಲಿಲ್ಲ. ಈ ಒಪ್ಪಂದದ ಪ್ರಕಾರವೇ ಪೌರತ್ವ ನೀಡಿದರೆ ಈಶಾನ್ಯ ರಾಜ್ಯಗಳಿಂದ ಭಾರೀ ಪ್ರಮಾಣದ ಅಕ್ರಮ ವಲಸಿಗರನ್ನು ಹೊರ ಹಾಕಬೇಕಾಗುತ್ತದೆ ಇಲ್ಲವೇ ಅತಂತ್ರ ಸ್ಥಿತಿಯಲ್ಲಿಡಬೇಕಾಗುತ್ತದೆ. ಪೌರತ್ವ ಮಸೂದೆಯಲ್ಲಿ 2014, ಡಿ. 31ರ ತನಕ ಅಕ್ರಮವಾಗಿ ವಲಸೆ ಬಂದವರನ್ನು ಪೌರತ್ವಕ್ಕೆ ಪರಿಗಣಿಸಬೇಕೆಂಬುದಾಗಿ ಹೇಳಲಾಗಿದೆ. ಆದರೆ ಈ ಪೌರತ್ವ ಅನ್ವಯಿಸುವುದು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಮುಸ್ಲಿಮೇತರ ಧರ್ಮೀಯರಿಗೆ ಮಾತ್ರ.

ಈಶಾನ್ಯದ ಜನರ ತಕರಾರು ಇರುವುದು ಪೌರತ್ವದ ಅಂತಿಮ ಗಡುವನ್ನು ವಿಸ್ತರಿಸಿರುವುದಕ್ಕೆ ಹೊರತು ಒಟ್ಟಾರೆಯಾಗಿ ಪೌರತ್ವ ಮಸೂದೆಗಲ್ಲ ಎನ್ನುವುದು ಗಮನಾರ್ಹ ಅಂಶ. ಆದರೆ ಯಾವ ರಾಜಕೀಯ ಪಕ್ಷಗಳೂ ಈ ಅಂಶವನ್ನು ಬಹಿರಂಗಪಡಿಸುತ್ತಿಲ್ಲ. ಒಟ್ಟಾರೆಯಾಗಿ ಮಸೂದೆಯೇ ವಿನಾಶಕಾರಿ ಎಂಬಂತೆ ಬಿಂಬಿಸಲಾಗುತ್ತಿದೆ ಹಾಗೂ ಇದಕ್ಕೆ ಈಶಾನ್ಯದ ರಾಜ್ಯಗಳಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತೋರಿಸಿ ಬೆದರಿಸಲಾಗುತ್ತಿದೆ.

Advertisement

ಈ ವಿಚಾರದಲ್ಲಿ ವಿಪಕ್ಷಗಳಷ್ಟೇ ತಪ್ಪು ಆಡಳಿತ ಪಕ್ಷದ್ದೂ ಇದೆ. ಅಂತಿಮ ಗಡುವನ್ನು ವಿಸ್ತರಿಸಿದ ಕಾರಣವನ್ನು ಇನ್ನೂ ಆಡಳಿತ ಪಕ್ಷ ಸ್ಪಷ್ಟಪಡಿಸಿಲ್ಲ ಹಾಗೂ ಇದರಿಂದ ಆಗಬಹುದಾದ ಪರಿಣಾಮವನ್ನೂ ಅಂದಾಜಿಸಿದಂತಿಲ್ಲ. ಮಸೂದೆಯನ್ನು ತರುವಾಗ ಅದರ ಸಾಧಕಬಾಧಕಗಳ ಸಮಗ್ರ ಅದ್ಯಯನ ನಡೆಸುವುದು ಅಗತ್ಯ. ಆದರೆ ಕೇಂದ್ರ ಸರಕಾರ ಅವಸರದಲ್ಲಿ ಮಸೂದೆಯನ್ನು ತಂದಿರುವಂತೆ ಕಾಣಿಸುತ್ತದೆ. ಕನಿಷ್ಠ ಈಶಾನ್ಯ ರಾಜ್ಯಗಳಲ್ಲಿ ಮಸೂದೆಗೆ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಬಹುದು ಎಂಬುದರ ಬಗ್ಗೆಯಾದರೂ ಒಂದು ಸ್ಥೂಲ ಅಧ್ಯಯನ ನಡೆಸುವ ಅಗತ್ಯ ಇತ್ತು.

ಮೊದಲೇ ಈಶಾನ್ಯ ರಾಜ್ಯಗಳಲ್ಲಿ ಒಂದು ರೀತಿಯ ಪ್ರತ್ಯೇಕತೆಯೇ ಭಾವನೆಯಿದೆ. ಹಿಂದಿನ ಸರಕಾರಗಳು ಅನುಸರಿಸಿದ ನೀತಿಯಿಂದಾಗಿ ಈ ರಾಜ್ಯಗಳ ಜನರು ತಮ್ಮನ್ನು ಪರಕೀಯರೆಂದು ಭಾವಿಸುತ್ತಿದ್ದರು. ಆದರೆ ನಿರಂತರವಾದ ಪ್ರಯತ್ನಗಳ ಫ‌ಲವಾಗಿ ಈಗ ಈಶಾನ್ಯದವರು ದೇಶದ ಮುಖ್ಯವಾಹಿನಿಯಲ್ಲಿ ಬೆರೆತಿದ್ದಾರೆ. ಲುಕ್‌ ಈಸ್ಟ್‌ ಪಾಲಿಸಿ ಈ ನಿಟ್ಟಿನಲ್ಲಿ ಸಾಕಷ್ಟು ಕೊಡುಗೆಯನ್ನು ನೀಡಿದೆ. ಇದೀಗ ಪೌರತ್ವ ಮಸೂದೆ ಈ ಪ್ರಯತ್ನಗಳನ್ನು ವಿಫ‌ಲಗೊಳ್ಳಲು ಬಿಡಬಾರದು. ಈಶಾನ್ಯದವರಲ್ಲಿರುವ ಭೀತಿಯನ್ನು ದೂರ ಮಾಡುವುದು ತಕ್ಷಣ ಮಾಡಬೇಕಾದ ಕೆಲಸ. ಸೇನೆ ರವಾನಿಸುವುದರಿಂದ ಹಿಂಸಾಚಾರವನ್ನೇನೋ ನಿಯಂತ್ರಿಸಬಹುದು. ಆದರೆ ಜನರ ಮನಸ್ಸಿನಲ್ಲಿರುವ ಭೀತಿಯನ್ನು ನಿವಾರಿಸಲು ನಿರಂತರವಾದ ಸಂವಹನ ಮತ್ತು ಸಂಪರ್ಕಗಳು ಅಗತ್ಯ. ಈ ನಿಟ್ಟಿನಲ್ಲಿ ಸರಕಾರ ಮುಂದಡಿಯಿಡಲಿ.

Advertisement

Udayavani is now on Telegram. Click here to join our channel and stay updated with the latest news.

Next