Advertisement

Tungabhadra dam; ಅರ್ಧ ದಶಕದಲ್ಲೇ ಅತ್ಯಂತ ಕಡಿಮೆ ಮಳೆ; ಖಾಲಿಯಾದ ತುಂಗಭದ್ರಾ ಜಲಾಶಯ

12:26 PM Jul 03, 2023 | Team Udayavani |

ಬಳ್ಳಾರಿ: ಜಿಲ್ಲೆಯಲ್ಲಿ ಈ ಬಾರಿ ಜುಲೈ ಮೊದಲ ವಾರ ಆರಂಭವಾದರೂ ಮಳೆಯ ಸುಳಿವಿಲ್ಲ. ಅಷ್ಟೇ ಅಲ್ಲ ಈ ಭಾಗದ ಜೀವನಾಡಿ ಆಗಿರುವ ತುಂಗಭದ್ರಾ ಜಲಾಶಯಕ್ಕೆ ಒಳಹರಿವಿನ ಸುಳಿವೂ ಸದ್ಯಕ್ಕೆ ಕಂಡುಬರುತ್ತಿಲ್ಲ. ಕಳೆದ ಐದು ವರ್ಷಗಳಲ್ಲಿ ಜುಲೈ ಅಂತ್ಯಕ್ಕೆ ಅತಿ ಕಡಿಮೆ ಮಳೆಯಾಗಿರುವ ವರ್ಷ ಇದಾಗಿದೆ.

Advertisement

ಜಿಲ್ಲೆಯ ಜೀವನಾಡಿ ತುಂಗಭದ್ರಾ ಜಲಾಶಯ ಪ್ರಸಕ್ತ ವರ್ಷ ಖಾಲಿ ಖಾಲಿಯಾಗಿದೆ.ಪ್ರಸಕ್ತ ವರ್ಷ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಸಮರ್ಪಕವಾಗಿ ಮಳೆಯಾಗಿಲ್ಲ. ಪರಿಣಾಮ ಜಲಾಶಯಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿದು ಬಂದಿಲ್ಲ.

ಕಳೆದ 2022 ರಲ್ಲಿ ಮೇ ತಿಂಗಳಲ್ಲೇ ಮಳೆಯಾದ್ದರಿಂದ ಸುಮಾರು 40 ಟಿಎಂಸಿ ನೀರು ಜಲಾಶಯಕ್ಕೆ ಹರಿದು ಬಂದಿತ್ತು. ಕಳೆದ ಹತ್ತು ವರ್ಷಗಳಲ್ಲೇ 2017 ರಲ್ಲಿ ಜಲಾಶಯಕ್ಕೆ ಅತ್ಯಂತ ಕಡಿಮೆ ಕೇವಲ 88 ಟಿಎಂಸಿ ನೀರು ಹರಿದು ಬಂದಿತ್ತು. ಇದು ಜಲಾಶಯದ ಇತಿಹಾಸದಲ್ಲೇ ಅತ್ಯಂತ ಕಡಿಮೆ ಪ್ರಮಾಣದ ನೀರು ಸಂಗ್ರಹವಾಗಿತ್ತು. ಬಳಿಕ 2018 ರಿಂದ 2022ರವರೆಗೆ ಉತ್ತಮ ಮಳೆಯಾಗಿದ್ದು, ಜಲಾಶಯ ತುಂಬಿ ಹರಿದಿತ್ತು. ಆದರೆ, ಪ್ರಸಕ್ತ 2023 ರಲ್ಲಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದು, ಜೂನ್‌ ಮುಗಿದು ಜುಲೈ ತಿಂಗಳು ಬಂದರೂ, ಮಳೆಯ ಕೊರತೆಯಿಂದ ಜಲಾಶಯಕ್ಕೆ ಸಮರ್ಪಕವಾಗಿ ನೀರು ಹರಿದು ಬರದಿರುವುದು ಅಂತರಾಜ್ಯ ಜಿಲ್ಲೆಗಳ ರೈತರಲ್ಲಿ ಆತಂಕ ಮೂಡಿಸಿದೆ.

ಅವಿಭಜಿತ ಬಳ್ಳಾರಿ ಜಿಲ್ಲೆಯ ಜೂನ್‌ ತಿಂಗಳಲ್ಲಿ ವಾಡಿಕೆಯಂತೆ 535 ಮಿ.ಮೀ ಮಳೆ ಆಗುತ್ತದೆ. 2018ರಲ್ಲಿ 504 ಮಿ.ಮೀ. ಮಳೆ ಆಗಿತ್ತು. 2019ರಲ್ಲಿ 346.8 ಮಿ.ಮೀ., 2020ರಲ್ಲಿ 927.5 ಮಿ.ಮೀ., 2021ರಲ್ಲಿ ಭರಪೂರ ಮಳೆ ಆಗಿತ್ತು. ಮಾನ್‌ಸೂನ್‌ ಪೂರ್ವ ಮಳೆ ಸೇರಿದಂತೆ ಜಿಲ್ಲೆಯಲ್ಲಿ ಬರೋಬ್ಬರಿ 1307 ಮಿ.ಮೀ. ಮಳೆ ಆಗಿತ್ತು. ಕಳೆದ ವರ್ಷ ಮಳೆ ಕೈ ಕೊಟ್ಟಿತ್ತು. 2022ರಲ್ಲಿ ವಿಭಜಿತ ಜಿಲ್ಲೆ ಬಳ್ಳಾರಿಯಲ್ಲಿ 102.58 ಮಿ.ಮೀ. ಮಳೆ ಆಗಿತ್ತು.

ಈ ಬಾರಿ ಜೂನ್‌ ಅಂತ್ಯ ಕಂಡರೂ ಈ ತನಕ ಜಿಲ್ಲೆಯಲ್ಲಿ ಮಳೆ ಆಗಿರುವುದು ಬರೀ 140.93 ಮಿ.ಮೀ. ಮಾತ್ರ. ಅದೂ ಅಲ್ಲಲ್ಲಿ ಚದುರಿದ ಮಳೆ. ಜನವರಿಯಿಂದ ಜೂನ್‌ ವರೆಗೆ ಬಳ್ಳಾರಿ ಜಿಲ್ಲೆಯಲ್ಲಿ 153.06 ಮಿ.ಮೀ. ಮಳೆ ಆಗುತ್ತಿತ್ತು. ಈ ಬಾರಿ ಮಾತ್ರ ಬರೀ 140.92 ಮಿ.ಮೀ. ಮಳೆ ಆಗಿದೆ. ಇನ್ನೂ ಬಿತ್ತನೆ ಕಾರ್ಯಆರಂಭವೇ ಆಗಿಲ್ಲ. ಅಲ್ಲಿಗೆ ಮಳೆಯಾಶ್ರಿತ ಪ್ರದೇಶದಲ್ಲಿನ ಮೊದಲ ಬೆಳೆ ಬಹುತೇಕ ಕೈ ಕೊಟ್ಟಂತೆ.

Advertisement

ಜುಲೈ ತಿಂಗಳಲ್ಲಿ ವಾಡಿಕೆಯಂತೆ ಅತ್ಯಂತ ಉತ್ತಮ ಮಳೆ ಆಗುತ್ತಾ ಬಂದಿದೆ. ಜೂನ್‌ ಅಂತ್ಯಕ್ಕೆ ಜುಲೈನ ಮೊದಲ ವಾರದಲ್ಲಿ ಹಳ್ಳ ಕೊಳ್ಳ ತುಂಬಿ ಹರಿಯುವ ರೀತಿ ಮಳೆ ಆಗುತ್ತಿತ್ತು. ಈ ವರ್ಷ ಈ ಲಕ್ಷಣ ಗೋಚರಿಸುತ್ತಿಲ್ಲ.ಮಳೆಗಾಗಿ ಕಾಯುತ್ತಿರುವ ರೈತರ ಆತಂಕ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಜಲಾಶಯದಲ್ಲಿ 3.1 ಟಿಎಂಸಿ: ತುಂಗಭದ್ರಾ ಜಲಾಶಯದಲ್ಲಿ ನೀರಿನ ಪ್ರಮಾಣ ತೀರಾ ಕುಸಿದಿದೆ. 133 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವುಳ್ಳ ಜಲಾಶಯದಲ್ಲಿ ಸುಮಾರು 33 ಟಿಎಂಸಿ ಯಷ್ಟು ಹೂಳು ಸಂಗ್ರಹವಾಗಿದ್ದು, ಸಂಗ್ರಹ ಸಾಮರ್ಥ್ಯ 100 ಟಿಎಂಸಿಗೆ ಕುಸಿದಿದೆ. ಸದ್ಯ ಜಲಾಶಯದಲ್ಲಿ ನೀರಿನ ಮಟ್ಟ 1573.53 ಅಡಿ ಇದ್ದು, ಕೇವಲ 273 ಕ್ಯೂಸೆಕ್‌ ಒಳಹರಿವು ದಾಖಲಾಗಿದೆ. 1149 ಕ್ಯೂಸೆಕ್‌ ನೀರನ್ನು ಕಾಲುವೆಗಳ ಮೂಲಕ ಹೊರಬಿಡಲಾಗುತ್ತಿದ್ದು, 3.01 ಟಿಎಂಸಿ ನೀರು ಸಂಗ್ರಹವಿದೆ ಎಂದು ಟಿಬಿ ಮಂಡಳಿಯ ಅಂಕಿ ಅಂಶಗಳು ಸ್ಪಷ್ಟಪಡಿಸುತ್ತವೆ.

ಒಟ್ಟಿನಲ್ಲಿ ಈ ಬಾರಿ ಮುಂಗಾರು ಬಹುತೇಕ ಕೈಕೊಟ್ಟಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಬರುವುದು ಕಷ್ಟಸಾಧ್ಯ ಎನ್ನುವುದು ರೈತರ ಮಾತು.

3 ವರ್ಷಕೊಮ್ಮೆ ಕೊರತೆ: ತುಂಗಭದ್ರಾ ಜಲಾಶಯದ ಇತಿಹಾಸದಲ್ಲಿ ಸರಾಸರಿ ಪ್ರತಿ ಮೂರು ವರ್ಷಕ್ಕೊಮ್ಮೆ ಮಳೆ ಕೊರತೆಯಾಗಿದೆ. ಜಲಾಶಯದ ಇತಿಹಾಸದಲ್ಲೇ 2017 ರಲ್ಲಿ ಅತ್ಯಂತ ಕಡಿಮೆ ಪ್ರಮಾಣದ ನೀರು ಕೇವಲ 88 ಟಿಎಂಸಿ ನೀರು ಹರಿದು ಬಂದಿತ್ತು. ಆ ವರ್ಷ ಕೃಷಿಗೆ ಸಮರ್ಪಕವಾಗಿ ನೀರು ಕೊಡಲು ಸಾಧ್ಯವಾಗಲಿಲ್ಲ. ಕೊನೆಗೆ ಆನ್‌ ಆಂಡ್‌ ಆಫ್‌ ಪದ್ಧತಿಯಂತೆ ಕಾಲುವೆಗಳಿಗೆ ಕೆಲ ದಿನಗಳು ಕೃಷಿಗೆ ನೀರು ಹರಿಸಿ ಕೆಲದಿನಗಳು ಬಂದ್‌ ಮಾಡಲಾಗಿತ್ತು. ಅದರಂತೆ ಪ್ರಸಕ್ತ ವರ್ಷವೂ ಸಮರ್ಪಕ ಮಳೆಯಾಗದಿದ್ದಲ್ಲಿ ಅದೇ ಪದ್ಧತಿಯಂತೆ ರೈತರ ಜಮೀನುಗಳಿಗೆ ನೀರು ಹರಿಸಲಾಗುವುದು ಎಂದು ತುಂಗಭದ್ರಾ ನೀರಾವರಿ ಇಲಾಖೆಯ ಅಧಿ ಕಾರಿಗಳು ತಿಳಿಸಿದ್ದಾರೆ.

-ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next