Advertisement

ತುಂಬೆ ಡ್ಯಾಂ ಒಳಹರಿವು ಕ್ಷೀಣ ; ನಗರಕ್ಕೆ ಆತಂಕ!

03:47 PM Mar 08, 2022 | Team Udayavani |

ಬಂಟ್ವಾಳ : ಮಂಗಳೂರಿಗೆ ನೀರುಣಿಸುವ ತುಂಬೆ ಡ್ಯಾಂನಲ್ಲಿ ನೀರಿನ ಒಳಹರಿವು ಸದ್ಯ ಕಡಿಮೆಯಾಗಲು ಆರಂಭವಾಗಿದ್ದು, ಮುಂದೆ ಮಳೆಯಾಗದಿದ್ದರೆ ನಗರಕ್ಕೆ ನೀರಿನ ಕೊರತೆ ಎದುರಾಗುವ ಆತಂಕ ಸೃಷ್ಟಿಯಾಗಿದೆ.

Advertisement

ಈಗಿನ ಮಾಹಿತಿ ಪ್ರಕಾರ ಡ್ಯಾಂನಲ್ಲಿ ನೀರಿನ ಒಳಹರಿವು ಮುಂದಿನ 10 ದಿನದವರೆಗೆ ಮಾತ್ರ ಇರಬಹುದು. ಬಳಿಕ ಡ್ಯಾಂನ ಎಲ್ಲ ಗೇಟ್‌ಗಳನ್ನು ಹಾಕಿ 6 ಮೀ. ನೀರು ನಿಲುಗಡೆ ಮಾಡಲಾಗುತ್ತದೆ. 6 ಮೀ. ಎತ್ತರಕ್ಕೆ ನಿಲ್ಲಿಸಿದರೆ 10.83 ಮಿ.ಕ್ಯು.ಮೀ. ನೀರು ದಾಸ್ತಾನು ಆಗಿ ನಗರಕ್ಕೆ 55 ದಿನ ಪೂರೈಕೆ ಮಾಡಬಹುದು. ಬಿಸಿಲ ಬೇಗೆ ದಿನದಿಂದ ದಿನಕ್ಕೆ ಏರುತ್ತಿರುವ ಹಿನ್ನೆಲೆಯಲ್ಲಿ ಡ್ಯಾಂನಲ್ಲಿ ನೀರು ಆವಿಯಾಗುವ ಪ್ರಮಾಣವೂ ಏರಿಕೆಯಾಗಿದೆ.

ಎಪ್ರಿಲ್‌-ಮೇ ವೇಳೆ ಸುಬ್ರಹ್ಮಣ್ಯ-ಧರ್ಮಸ್ಥಳ ಸಹಿತ ಇತರ ಭಾಗಗಳಲ್ಲಿ ಮಳೆಯಾದರೆ ನೇತ್ರಾವತಿಯಲ್ಲಿ ನೀರು ಏರಿಕೆಯಾಗಿ ತುಂಬೆ ಡ್ಯಾಂನ ನೀರಿನ ಮಟ್ಟ ನಿರ್ವಹಿಸಲು ಸಾಧ್ಯವಾಗಬಹುದು. ಮಳೆಯಾಗದಿದ್ದರೆ ಇರುವ ನೀರನ್ನು ರೇಷನಿಂಗ್‌ ಮೂಲಕ ನೀಡಬೇಕಾದ ಅನಿವಾರ್ಯವಿದೆ.

ನೀರಿನ ಸಮರ್ಪಕ ಬಳಕೆ ಹಿನ್ನೆಲೆಯಲ್ಲಿ ಈಗಾಗಲೇ ಎಂಎಸ್‌ಇಝಡ್‌, ಎಂಸಿಎಫ್‌, ಎಎಂಆರ್‌ ಡ್ಯಾಂ, ಮೆಸ್ಕಾಂ, ಪಾಲಿಕೆ ಅಧಿಕಾರಿಗಳು ಹಾಗೂ ಸುಯೇಜ್‌ ಸಂಸ್ಥೆಯವರ ಜತೆಗೆ ಮೊದಲ ಹಂತದ ಸಭೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದೆ. ಒಳಹರಿವು ಸಂಪೂರ್ಣ ನಿಂತ ಅನಂತರ ಜಿಲ್ಲಾಡಳಿತದಿಂದ ಮತ್ತೂಂದು ಸುತ್ತಿನ ಸಭೆ ನಡೆಯಲಿದ್ದು, ನೀರು ರೇಷನಿಂಗ್‌ ಬಗ್ಗೆ ತೀರ್ಮಾನವಾಗಲಿದೆ.

ಈ ಬಾರಿ ನೀರು ಬಳಕೆ ಪ್ರಮಾಣ ಏರಿಕೆ
2020, 2021ರ ವರ್ಷ ಪ್ರಾರಂಭದ ವೇಳೆ ಕೊರೊನಾ ಕಾರಣದಿಂದ ಲಾಕ್‌ಡೌನ್‌ ನಗರದಲ್ಲಿ ಜಾರಿಯಲ್ಲಿತ್ತು. ಹೀಗಾಗಿ ನೀರಿನ ಬಳಕೆ ಬಹುತೇಕ ಕಡಿಮೆ ಇತ್ತು. ಕೈಗಾರಿಕೆ, ಹೊಟೇಲ್‌, ಅಂಗಡಿ, ಸಭಾಂಗಣ ಸಹಿತ ವಿವಿಧ ಕಡೆಗಳಲ್ಲಿ ನೀರಿನ ಬಳಕೆ ಬಹುತೇಕ ಕಡಿಮೆ ಇತ್ತು. ಆದರೆ ಈ ಬಾರಿ ನೀರಿನ ಬಳಕೆ ಹೆಚ್ಚಾಗಿದೆ. ನಗರದಲ್ಲಿ ಎಲ್ಲ ವ್ಯವಹಾರ ಚಟುವಟಿಕೆಗಳು ನಡೆಯುತ್ತಿರುವ ಕಾರಣದಿಂದ ನೀರಿನ ಬಳಕೆ ಅಧಿಕವಾಗಿದೆ. ಸಮರ್ಪಕ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಮುಂದಿನ ದಿನಗಳು ಪಾಲಿಕೆಗೆ ಬಹು ಸವಾಲಿದ್ದಾಗಿವೆ.

Advertisement

ಇದನ್ನೂ ಓದಿ : ಮನೆಯ ತ್ಯಾಜ್ಯದಿಂದ ಜೈವಿಕ ಗೊಬ್ಬರ ತಯಾರಿ! ಕರಂಬಾರು ಕೃಷಿಕನ ಮಾದರಿ ವಿಧಾನ

ಕಳೆದ ವರ್ಷ ಕೈ ಹಿಡಿದ ಮಳೆ!
ಕಳೆದ ವರ್ಷ ಮಾ. 19ರ ಅನಂತರ ತುಂಬೆ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆ ಆಗಲು ಶುರುವಾಗಿತ್ತು. ಆದರೆ ಅನಂತರ ಸುಬ್ರಹ್ಮಣ್ಯ ಸಹಿತ ಹಲವು ಭಾಗದಲ್ಲಿ ಉತ್ತಮ ಮಳೆಯಾಗಿ ಡ್ಯಾಂನಲ್ಲಿ ನೀರಿನ ಮಟ್ಟ ಏರಿಕೆ ಆಗಿತ್ತು. ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿರಲಿಲ್ಲ.

ನೀರು ನಿರ್ವಹಣೆಗೆ ವಿಶೇಷ ನಿಗಾ
ಪ್ರತೀವರ್ಷ ಪೂರ್ವ ಮುಂಗಾರು ಆಗುವ ಕಾರಣದಿಂದ ತುಂಬೆ ಡ್ಯಾಂನಲ್ಲಿ ನೀರಿನ ಸಮಸ್ಯೆ ಎದುರಾಗುವುದಿಲ್ಲ. ಈ ಬಾರಿ ಕೂಡ ಇದೇ ರೀತಿ ಮಳೆಯಾಗುವ ನಿರೀಕ್ಷೆಯಿದೆ. ಸದ್ಯ ತುಂಬೆ ಡ್ಯಾಂನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಲಭ್ಯವಿದೆ. ಒಳಹರಿವು ಕಡಿಮೆ ಆಗುತ್ತಿದೆ. ಯಾವುದೇ ಸಮಸ್ಯೆ ಆಗದಂತೆ ಜಿಲ್ಲಾಡಳಿತ ಹಾಗೂ ಪಾಲಿಕೆ ನಿಗಾ ವಹಿಸಿದೆ. ಕೈಗಾರಿಕೆಗಳ ನೀರು ರೇಷನಿಂಗ್‌ ಬಗ್ಗೆ ಮುಂದಿನ ದಿನದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು.
-ಪ್ರೇಮಾನಂದ ಶೆಟ್ಟಿ, ಮೇಯರ್‌, ಮಹಾನಗರ ಪಾಲಿಕೆ

ರೇಷನಿಂಗ್‌ ಅನಿವಾರ್ಯ!
2016ರ ಜನವರಿಯಲ್ಲಿಯೇ ಮಂಗಳೂರು ಹಿಂದೆಂದೂ ಕಂಡರಿಯದ ಭೀಕರ ನೀರಿನ ಕೊರತೆ ಎದುರಿಸಿತ್ತು. ಡ್ಯಾಂನಲ್ಲಿ ನೀರಿಲ್ಲದ ಕಾರಣದಿಂದ ನಗರದಲ್ಲಿ ಟ್ಯಾಂಕರ್‌ ನೀರು ಬಳಸಲಾಗಿತ್ತು. ಅದೂ ಖಾಲಿಯಾದಾಗ, ಖಾಸಗಿ ಬಾವಿಗಳಿಂದ ನೀರು ತರಿಸಲಾಗಿತ್ತು. ಬಳಿಕ ಲಕ್ಯಾ ಡ್ಯಾಂನ ನೀರನ್ನು ಕೊಂಚ ಬಳಸಲಾಯಿತು. ಇದರಿಂದ ಎಚ್ಚೆತ್ತ ಪಾಲಿಕೆಯು 2017ರಲ್ಲಿ ಪ್ರತೀ 48 ಗಂಟೆ ನಿರಂತರ ನೀರು ಪೂರೈಕೆ ಮಾಡಿದರೆ, ಬಳಿಕದ 36 ಗಂಟೆ ನೀರು ಪೂರೈಕೆ ಸ್ಥಗಿತಗೊಳಿಸುವ ಮೂಲಕ ರೇಷನಿಂಗ್‌ ಆರಂಭಿಸಿತ್ತು. ಕೈಗಾರಿಕೆಗಳಿಗೂ ನೀರು ಕಡಿತ ಮಾಡಲಾಗಿತ್ತು. 2019ರಲ್ಲಿಯೂ ಮುನ್ನೆಚ್ಚರಿಕೆಗಾಗಿ ಕೈಗಾರಿಕೆಗಳಿಗೆ ನೀಡುತ್ತಿರುವ ನೀರಿನ ಪ್ರಮಾಣವನ್ನು ಅರ್ಧದಷ್ಟು ಕಡಿತಗೊಳಿಸಲಾಗಿತ್ತು. 18 ಎಂಜಿಡಿ ನೀರಿನ ಪೈಕಿ 15 ಎಂಜಿಡಿಗೆ ಕಡಿತಗೊಳಿಸಲಾಗಿತ್ತು. ಬಳಿಕ 13, 10.5 ಎಂಜಿಡಿಗೆ ಇಳಿಸಲಾಗಿತ್ತು. ಕಳೆದೆರಡು ವರ್ಷಗಳಲ್ಲಿ ನೀರಿನ ಸಮಸ್ಯೆ ಎದುರಾಗದಿದ್ದರೂ ಕೈಗಾರಿಕೆಗಳಿಗೆ ನೀರು ರೇಷನಿಂಗ್‌ ನಿಯಮ ಕೊಂಚ ಮಟ್ಟದಲ್ಲಿ ಜಾರಿಯಲ್ಲಿತ್ತು.

Advertisement

Udayavani is now on Telegram. Click here to join our channel and stay updated with the latest news.

Next