ಉಡುಪಿ: ಶ್ರೀಕೃಷ್ಣಮಠದಲ್ಲಿ ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ತುಳು ಶಿವಳ್ಳಿ ಮಾಧ್ವ ಮಹಾಮಂಡಲ (ತುಶಿಮಾಮ) ಒಂದು ವಾರದಿಂದ ಆಯೋಜಿಸುತ್ತಿರುವ ತುಳಸೀ ಸಂಕೀರ್ತನೆ ಸ್ಪರ್ಧೆಯಲ್ಲಿ ಮಕ್ಕಳು ಮತ್ತು ಪುರುಷರ ವಿಭಾಗದಲ್ಲಿ ಕುಂಜಾರಿನ ಗಿರಿ ಬಳಗ, ಮಹಿಳೆಯರ ವಿಭಾಗದಲ್ಲಿ ಸುರತ್ಕಲ್ ತಂಡ ಮೊದಲ ಬಹುಮಾನ ಗಳಿಸಿದೆ.
ಮಕ್ಕಳ ತಂಡದಲ್ಲಿ ಕೊರಂಗ್ರಪಾಡಿ ಪಾವನ ಪರಿಷತ್ ತಂಡ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ಕರಂಬಳ್ಳಿ ವಲಯ ದ್ವಿತೀಯ, ಕೇರಳದ ವಯನಾಡು ತಂಡ ತೃತೀಯ, ಪುರುಷರ ವಿಭಾಗದಲ್ಲಿ ಪುತ್ತೂರು ವಲಯ ದ್ವಿತೀಯ, ಮಾರ್ಪಳ್ಳಿ ಚಂಡೆ ಬಳಗ ತೃತೀಯ ಬಹುಮಾನ ಪಡೆದಿವೆ.
ಸಾಲಿಗ್ರಾಮ ತಂಡ, ಪಡುಬಿದ್ರಿಯ ತರಂಗಿಣಿ ಮಿತ್ರ ಮಂಡಳಿ, ಬೈಲೂರು ವಿಪ್ರ ಮಹಿಳಾ ಮಂಡಳಿ ಸಮಾಧಾನಕರ ಬಹುಮಾನ ಗಳಿಸಿವೆ.
ಬಹುಮಾನ ವಿತರಿಸಿದ ಪರ್ಯಾಯ ಶ್ರೀಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಸಕಲ ಇಂದ್ರಿಯಗಳನ್ನೂ ಭಗವಂತನಿಗೆ ಸಮರ್ಪಿಸುವ ಸೇವೆ ಸಂಕೀರ್ತನೆಯಾಗಿದೆ. ಮೈಲಿಗೆಯಾದ ನಾಲಗೆ, ಕಾಲುಗಳಿಗೂ ಭಗವಂತನ ಸೇವೆ ಸಲ್ಲಿಸಲು ಅವಕಾಶ ಸಿಗುವುದು ಸಂಕೀರ್ತನೆಯಲ್ಲಿ ಮಾತ್ರ. ವಾದಿರಾಜಸ್ವಾಮಿಗಳು ಹಾಕಿಕೊಟ್ಟ ಪರಂಪರೆಯನ್ನು ಉಳಿಸಿಕೊಂಡು ಬಂದ ತಂಡಗಳು ಮುಂದೆ ತಮ್ಮ ಸಂಸ್ಕೃತಿಯನ್ನು ವಿಸ್ತರಿಸಬೇಕು ಎಂದು ಹಾರೈಸಿದರು.
ಉದ್ಯಮಿಗಳಾದ ಗೋಪಾಲಕೃಷ್ಣ ಕಲ್ಕೂರ, ಬಾಲಾಜಿ ರಾಘವೇಂದ್ರ ಆಚಾರ್ಯ ಅತಿಥಿಗಳಾಗಿದ್ದರು. ತುಶಿಮಾಮ ಅಧ್ಯಕ್ಷ ಅರವಿಂದ ಆಚಾರ್ಯ ಸ್ವಾಗತಿಸಿ ಖಜಾಂಚಿ ವಾದಿರಾಜ ಆಚಾರ್ಯ ವಂದಿಸಿದರು. ಪ್ರಧಾನ ಕಾರ್ಯದರ್ಶಿ ರವಿಪ್ರಕಾಶ ಭಟ್ ವಿಜೇತರ ಹೆಸರು ವಾಚಿಸಿದರು. ಬೈಲೂರು ಜಯರಾಮ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಗೌರವಾಧ್ಯಕ್ಷ ಕೆ.ಕೆ.ಸರಳಾಯ ಉಪಸ್ಥಿತರಿದ್ದರು. ಪ್ರಥಮ ಬಹುಮಾನಿತ ತಂಡದ ಸದಸ್ಯರು ಸಂಕೀರ್ತನೆಯನ್ನು ಹಾಡಿ ತೋರಿಸಿದರು.