Advertisement

ಕಾಂಗ್ರೆಸ್‌ನಿಂದ ತುಘಲಕ್‌ ರೋಡ್‌ ಹಗರಣ

12:50 AM Apr 12, 2019 | Team Udayavani |

ಅಸ್ಸಾಂ ಹಾಗೂ ಬಿಹಾರದಲ್ಲಿ ಗುರುವಾರ ಚುನಾವಣಾ ಪ್ರಚಾರ ರ್ಯಾಲಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ವಿರುದ್ಧ “ತುಘಲಕ್‌ ರೋಡ್‌ ಚುನಾವ್‌ ಘೊಟಾಲಾ’ ಹಗರಣದ ಆರೋಪ ಮಾಡಿದ್ದಾರೆ. ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ನಡೆದ ಐಟಿ ದಾಳಿಯಲ್ಲಿ ಭಾರೀ ಪ್ರಮಾಣದ ಮೊತ್ತವು ತುಘಲಕ್‌ ರಸ್ತೆಯಲ್ಲಿ ರುವ ಪ್ರಮುಖ ರಾಜಕೀಯ ಪಕ್ಷವೊಂದರ ಕಚೇರಿಗೆ ಹೋಗಿರುವ ಕುರಿತು ಬಹಿರಂಗ ವಾದ ಹಿನ್ನೆಲೆಯಲ್ಲಿ ಅದನ್ನೇ ಪ್ರಸ್ತಾವಿಸಿ ಕಾಂಗ್ರೆಸ್‌ ವಿರುದ್ಧ ಮೋದಿ ಮುಗಿಬಿದ್ದಿದ್ದಾರೆ. ಅಸ್ಸಾಂನಲ್ಲಿ ಮಾತನಾಡಿದ ಅವರು, ನಾಮ್‌ಧಾರಿ ಪರಿವಾರವು ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಅದನ್ನೇ ಜೀವನದ ದಾರಿಯನ್ನಾಗಿಸಿಕೊಂಡಿದೆ. ಆದರೆ, ಅವರು ಚೌಕಿ ದಾರನನ್ನು ಚೋರ್‌ ಎಂದು ಕರೆಯುತ್ತದೆ ಎಂದಿದ್ದಾರೆ. ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಕಾಂಗ್ರೆಸ್‌ ಭ್ರಷ್ಟಾಚಾರ ಮಾಡುತ್ತಿದೆ. ಲೂಟಿ ಮಾಡದಿದ್ದರೆ, ಚುನಾವಣೆಯಲ್ಲಿ ಹೋರಾಡುವುದು ಹೇಗೆ ಎಂದೂ ಮೋದಿ ಪ್ರಶ್ನಿಸಿದ್ದಾರೆ. ಬಳಿಕ ಬಿಹಾರದ ಭಾಗಲ್ಪುರದಲ್ಲಿ ಮಾತನಾಡಿದ ಪ್ರಧಾನಿ, “ಮಹಾಕಲಬೆರಕೆಯ ಗ್ಯಾಂಗ್‌ಗೆ ಈಗ ಭಯ ಆವರಿಸಿದೆ. ನಾನು ಮತ್ತೂಮ್ಮೆ ಅಧಿಕಾರಕ್ಕೆ ಬಂದರೆ, ಅವರ ಭ್ರಷ್ಟಾಚಾರದ ಅಂಗಡಿ ಮುಚ್ಚುತ್ತದೆ ಮತ್ತು ವಂಶಾಡಳಿತದ ರಾಜಕೀಯ ಕೊನೆಗೊಳ್ಳುತ್ತದೆ ಎಂಬ ಆತಂಕ ಅವರನ್ನು ಕಾಡಿದೆ’ ಎಂದಿದ್ದಾರೆ.

Advertisement

ನಮೋ ಟಿವಿ ಲೋಗೋಗೆ ಅನುಮತಿ
ಕಳೆದ ಕೆಲವು ದಿನಗಳಿಂದ ತೀವ್ರ ವಿವಾದಕ್ಕೀಡಾಗಿರುವ ನಮೋ ಟಿವಿ ಕುರಿತಂತೆ ಮುಖ್ಯ ಚುನಾವಣಾ ಆಯೋಗದ ಸ್ಪಷ್ಟನೆಗೆ ದಿಲ್ಲಿ ಚುನಾವಣಾ ಅಧಿಕಾರಿ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಅಪ್ಲಿಕೇಶನ್‌ನ ಭಾಗವಾಗಿರುವ ನಮೋ ಟಿವಿ ಲೋಗೋಗೆ ನಾವು ಅನುಮತಿ ನೀಡಿದ್ದೇವೆ. ಆದರೆ ಇದರಲ್ಲಿ ಪ್ರಧಾನಿ ನರೇಂದ್ರ ಮೋದಿಯ ಹಳೆಯ ಭಾಷಣಗಳಿದ್ದುದರಿಂದ ಅವುಗಳಿಗೆ ಯಾವುದೇ ಪ್ರಮಾಣೀಕರಣ ನೀಡಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಈ ಭಾಷಣಗಳು ಈಗಾಗಲೇ ಪ್ರಸಾರವಾಗಿರುವುದರಿಂದ ಅವುಗಳಿಗೆ ಯಾವುದೇ ಹೊಸ ಪ್ರಮಾಣೀಕರಣ ಅಗತ್ಯವಿಲ್ಲ ಎಂದು ಭಾವಿಸಿ ಅನುಮತಿ ನೀಡಿದ್ದೇವೆ ಎಂದು ದಿಲ್ಲಿ ಮುಖ್ಯ ಚುನಾವಣಾ ಕಚೇರಿ ಪ್ರತಿಕ್ರಿಯೆ ನೀಡಿದೆ. ಈ ಮಧ್ಯೆಯೇ ನಮೋ ಟಿವಿಯನ್ನು ಬಿಜೆಪಿ ಐಟಿ ವಿಭಾಗ ನಡೆಸುತ್ತಿದೆ ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವೀಯ ಹೇಳಿದ್ದಾರೆ.

ಎನ್‌ಡಿಎಗೆ “ಸ್ನೇಹಿತರ ಸವಾಲ್‌’
ಎನ್‌ಡಿಎ ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿದ್ದ ಬೇರೆ ಬೇರೆ ರಾಜ್ಯಗಳ ಎರಡು ಪಕ್ಷಗಳು, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಬದಲಿಗೆ ವಿಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಲು ನಿರ್ಧರಿಸಿವೆ. ಮಹಾರಾಷ್ಟ್ರದ ಬೀಡ್‌ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಹಾಲಿ ಸಂಸದ ಪ್ರೀತಮ್‌ ಮುಂಡೆ ವಿರುದ್ಧ ಕಣಕ್ಕಿಳಿದಿರುವ ಎನ್‌ಸಿಪಿಯ ಭಜರಂಗ್‌ ಸೋನವಾನೆ ಅವರನ್ನು ಬೆಂಬಲಿಸಲು ಶಿವಸಂಗ್ರಾಮ ಪಾರ್ಟಿ ನಿರ್ಧರಿಸಿದೆ ಎನ್ನಲಾಗಿದೆ. ಅತ್ತ, ಗೋವಾದಲ್ಲಿ ಮಹಾರಾಷ್ಟ್ರವಾದಿ ಗೋಮಂತಕ್‌ ಪಾರ್ಟಿ (ಎಂಜಿಪಿ) ಗೋವಾದ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳಾದ ಗಿರೀಶ್‌ ಚೊದಾಂಕರ್‌, ಫ್ರಾನ್ಸಿಸ್ಕೋ ಸಾರ್ಡಿನ್ಹಾ ಅವರನ್ನು ಬೆಂಬಲಿಸಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

ಬಾಂಡ್‌ ಬಿಡುಗಡೆಗೆ ನಾವು ಹೊಣೆಯಲ್ಲ: ಸರಕಾರ ವಾದ
ಚುನಾವಣೆ ಬಾಂಡ್‌ಗಳನ್ನು ಬಿಡುಗಡೆ ಮಾಡಿದ್ದು ನೀತಿ ನಿರ್ಧಾರವಾಗಿದ್ದು, ಇದರ ತಪ್ಪಿಗೆ ಸರಕಾರ ಹೊಣೆಯಾಗದು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರಕಾರ ವಾದಿಸಿದೆ. ಚುನಾವಣೆ ಬಾಂಡ್‌ ಮೂಲಕ ಪಕ್ಷಗಳಿಗೆ ಗೌಪ್ಯವಾಗಿ ದೇಣಿಗೆ ನೀಡುವ ನೀತಿಯನ್ನು ವಿರೋಧಿಸಿದ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಅಟಾರ್ನಿ ಜನರಲ್‌ ಕೆ.ಕೆ. ವೇಣು ಗೋಪಾಲ್‌ ಈ ವಾದವನ್ನು ಮಾಡಿದ್ದಾರೆ. ಇನ್ನೊಂದೆಡೆ ಗುರುವಾರ ಈ ಪ್ರಕರಣದ ವಿಚಾರಣೆ ಮುಕ್ತಾಯವಾಗಿದ್ದು, ಶುಕ್ರವಾರ ಕೋರ್ಟ್‌ ತೀರ್ಪು ಪ್ರಕಟಿಸಲಿದೆ. ಚುನಾವಣೆ ಬಾಂಡ್‌ ಬಿಡು ಗಡೆ ಮಾಡಿರುವುದು ಸರಕಾರದ ನೀತಿ ನಿರ್ಧಾರಗಳಲ್ಲಿ ಒಂದಾಗಿದೆ. ನೀತಿ ನಿರ್ಧಾರ ವನ್ನು ತೆಗೆದುಕೊಂಡಿದ್ದಕ್ಕೆ ಸರಕಾರ ವನ್ನು ಹೊಣೆಯಾಗಿಸಲಾಗದು ಎಂದು ವೇಣುಗೋಪಾಲ್‌ ವಾದಿಸಿದರು.

ಮೋದಿ ಅವಹೇಳನ: ಬಿಜೆಪಿಯಿಂದ ದೂರು
ಪ್ರಧಾನಿ ಮೋದಿ ವಿರುದ್ಧ ಅಸಂಸದೀಯ ಪದ ಪ್ರಯೋಗ ಮಾಡಿದ ಗುಜರಾತ್‌ ಕಾಂಗ್ರೆಸ್‌ ನಾಯಕ ಅರ್ಜುನ್‌ ಮೊಧ್ವಾಡಿಯಾ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ. ಮೊಧ್ವಾಡಿಯಾ ಅವರು ಮೋದಿಯವರನ್ನು ಕತ್ತೆಗೆ ಹೋಲಿಸಿ ಮಾತನಾಡಿದ್ದರು. ಈ ಮೂಲಕ ಅವರು ಸಾಂವಿಧಾನಿಕ ಹುದ್ದೆಗೆ ಅವಮಾನ ಮಾಡಿದ್ದಲ್ಲದೆ, ನೀತಿ ಸಂಹಿತೆಯನ್ನು ಉಲ್ಲಂ ಸಿದ್ದಾರೆ ಎಂದು ಬಿಜೆಪಿ ದೂರಿನಲ್ಲಿ ತಿಳಿಸಿದೆ.

Advertisement

ಒಟ್ಟು 2,626 ಕೋಟಿ ರೂ. ವಶ
ಪ್ರಸಕ್ತ ಲೋಕಸಭೆ ಚುನಾವಣೆಯ ದಿನಾಂಕ ಘೋಷಣೆಯಾದ ಬಳಿಕ ಈವರೆಗೆ ಒಟ್ಟು 2,626 ಕೋಟಿ ರೂ. ಮೌಲ್ಯದ ನಗದು, ಮದ್ಯ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ. ದೇಶಾದ್ಯಂತ ಒಟ್ಟಾರೆ 607 ಕೋಟಿ ರೂ. ನಗದು, 198 ಕೋಟಿ ರೂ.ಗಳ ಮದ್ಯ, 1091 ಕೋಟಿ ರೂ. ಮೊತ್ತದ ಮಾದಕದ್ರವ್ಯಗಳು, 486 ಕೋಟಿ ರೂ.ಗಳ ಅಮೂಲ್ಯ ವಸ್ತುಗಳು ಹಾಗೂ 48 ಕೋಟಿ ರೂ. ಮೌಲ್ಯದ ಉಡುಗೊರೆಗಳು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಯೋಗ ತಿಳಿಸಿದೆ.

ಆರೋಪಗಳ ಸುರಿಮಳೆ
ಲೋಕಸಭೆಯ ಮೊದಲ ಹಂತದ ಮತದಾನದ ವೇಳೆ ಜಮ್ಮುವಿನ ಪೂಂಛ… ಜಿಲ್ಲೆಯ ಮತಗಟ್ಟೆಗಳಲ್ಲಿ ಬಿಜೆಪಿಗೇ ಮತ ಹಾಕುವಂತೆ ಬಿಎಸ್‌ಎಫ್ ಸಿಬಂದಿ ಮತದಾರರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪ ಕೇಳಿಬಂತು. ಬಿಜೆಪಿಗೆ ಮತ ಹಾಕಿಲ್ಲವೆಂದು ಬಿಎಸ್‌ಎಫ್ ಸಿಬಂದಿಯು ಮತದಾರರನ್ನು ಓಡಿಸುತ್ತಿರುವ ಮತ್ತು ಮತದಾರರು ಬಿಜೆಪಿ ವಿರುದ್ಧ ಘೋಷಣೆ ಕೂಗುತ್ತಿರುವ ವಿಡಿಯೋವೊಂದನ್ನು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಟ್ವಿಟರ್‌ಗೆ ಅಪ್‌ಲೋಡ್‌ ಮಾಡಿದ್ದಾರೆ. ಜತೆಗೆ, ಇದು ಬಿಜೆಪಿಯ ಅಧಿಕಾರದ ಆಸೆ ಮತ್ತು ಹತಾಶೆಯನ್ನು ತೋರಿಸಿದೆ ಎಂದು ಕಿಡಿಕಾರಿದ್ದಾರೆ. ದೂರುಗಳು ಕೇಳಿಬಂದ ಬಳಿಕ ಸಮವಸ್ತ್ರಧಾರಿ ವ್ಯಕ್ತಿಯನ್ನು ಕರ್ತವ್ಯದಿಂದ ಮುಕ್ತಗೊಳಿಸಲಾಯಿತು. ಮತ್ತೂಂದೆಡೆ, ಪೂಂಛ…ನ ಇವಿಎಂಗಳಲ್ಲಿ ಕಾಂಗ್ರೆಸ್‌ನ ಹಸ್ತದ ಚಿಹ್ನೆಯುಳ್ಳ ಬಟನ್‌ ಕೆಲಸವೇ ಮಾಡುತ್ತಿಲ್ಲ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸ್ವಲ್ಪ ಕಾಲ ಮತದಾನ ಸ್ಥಗಿತಗೊಳಿಸಲಾಯಿತು.

ನಮೋ ಫ‌ುಡ್‌ ವಿತರಣೆ!
ಉತ್ತರಪ್ರದೇಶದ ನೋಯ್ಡಾದಲ್ಲಿ ಮತಗಟ್ಟೆಗಳಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರಿಗೆ “ನಮೋ ಫ‌ುಡ್‌’ ವಿತರಿಸಿದ ಘಟನೆ ವಿವಾದಕ್ಕೆ ಕಾರಣ ವಾಗಿದೆ. ನಮೋ ಫ‌ುಡ್ಸ್‌ ಎಂಬ ಬರೆದಿದ್ದ ಕೇಸರಿ ಬಣ್ಣದ ಪೊಟ್ಟಣಗಳಲ್ಲಿ ಆಹಾರ ವಿತರಣೆ ಮಾಡಲಾಗಿತ್ತು. ಇದಕ್ಕೆ ಕೆಲವು ರಾಜಕೀಯ ಪಕ್ಷಗಳ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ಆದರೆ, ಅದು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ್ದಲ್ಲ. ನಮೋ ಫ‌ುಡ್ಸ್‌ ಎನ್ನುವುದು ಆಹಾರ ಮಳಿಗೆಯೊಂದರ ಹೆಸರು ಎಂದು ಪೊಲೀಸ್‌ ಅಧಿಕಾರಿಗಳು ಸ್ಪಷ್ಟಪಡಿಸಿ, ವಿವಾದದ ಬಿಸಿಗೆ ತಣ್ಣೀರು ಸುರಿದರು.

ವಯನಾಡಿನ ಮೆರವಣಿಗೆಯನ್ನು ಪಾಕಿಸ್ಥಾನಕ್ಕೆ ಹೋಲಿಸಿರುವ ಅಮಿತ್‌ ಶಾಗೆ, ಸ್ವಾತಂತ್ರ್ಯ ಸಂಗ್ರಾಮದ ವೇಳೆ ವಯನಾಡು ನಡೆಸಿದ ಹೋರಾಟದ ಕುರಿತು ಸ್ವಲ್ಪವಾದರೂ ಜ್ಞಾನವಿದೆಯೇ? ಅದರಲ್ಲಿ ಭಾಗವಹಿಸಿದ್ದರೆ ತಾನೇ ಆ ಕುರಿತು ತಿಳಿವಳಿಕೆ ಇರಲು ಸಾಧ್ಯ.
ಪಿಣರಾಯಿ ವಿಜಯನ್‌, ಕೇರಳ ಸಿಎಂ

ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಭಾರತದಲ್ಲಿ ಗಲಭೆ ಸೃಷ್ಟಿಸಲೆಂದೇ ಮೋದಿ ಯನ್ನು ಬೆಂಬಲಿಸುತ್ತಿದ್ದಾರೆ. 70 ವರ್ಷಗಳಲ್ಲಿ ಪಾಕಿಸ್ಥಾನಕ್ಕೆ ಭಾರತದಲ್ಲಿ ಏನು ಮಾಡಲು ಸಾಧ್ಯವಾಗಲಿಲ್ಲವೋ, ಅದನ್ನು ಪಾಕ್‌ನ ಗೆಳೆಯ ಮೋದಿ ಐದೇ ವರ್ಷಗಳಲ್ಲಿ ಮಾಡಿದರು.
ಅರವಿಂದ್‌ ಕೇಜ್ರಿವಾಲ್‌, ದಿಲ್ಲಿ ಸಿಎಂ

ಬಹುತೇಕ ರಾಜಕೀಯ ನಾಯಕರ ವರ್ತನೆಗಳು, ನಾಯಕತ್ವ ಮತ್ತು ದೇಶಕ್ಕೆ ನೀಡಿದ ಕೊಡುಗೆಗಳೇನಿದ್ದರೂ ಇತರರು ನೋಡಲಿ ಎಂಬಂತೆ ಇರುತ್ತದೆ. ಆದರೆ, ಪ್ರಧಾನಿ ಮೋದಿ ಅವರ ವ್ಯಕ್ತಿತ್ವವು ಹಿಮಾಲಯದಷ್ಟು ಎತ್ತರವಾದದ್ದು.
ಬಾಬಾ ರಾಮ್‌ದೇವ್‌, ಯೋಗಗುರು

ಪೆರೋಲ್‌ ಕೈದಿಗಳ ಮೇಲೆ ನಿಗಾ ವಹಿಸಿ: ಇಸಿ
ಪೆರೋಲ್‌ ಮೇಲೆ ಹೊರಬಂದಿರುವ ಕೈದಿಗಳು ಚುನಾವಣಾ ಸಂಬಂಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಂತೆ ಗಮನ ಹರಿಸಬೇಕೆಂದು ಎಲ್ಲ ರಾಜ್ಯ ಸರಕಾರಗಳಿಗೆ ಕೇಂದ್ರ ಚುನಾವಣಾ ಆಯೋಗ ಸೂಚಿಸಿದೆ. ರಾಜ್ಯ ಸರಕಾರಗಳ ಪ್ರಧಾನ ಕಾರ್ಯದರ್ಶಿಗಳಿಗೆ ಈ ಕುರಿತಂತೆ ಪತ್ರ ಬರೆದಿರುವ ಆಯೋಗ, ಮಾದಕ ವಸ್ತು ಮಾರಾಟ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಕೈದಿಗಳಿಗೆ ಪೆರೋಲ್‌ ನೀಡಲೇಬಾರದು. ಇಂಥ ಕೈದಿಗಳು ಪೆರೋಲ್‌ನಲ್ಲಿ ಹೊರಹೋಗಿದ್ದಲ್ಲಿ ಅವರ ಮೇಲೆ ನಿಗಾ ಇಡುವಂತೆ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next