Advertisement

2025ರ ವೇಳೆ ಕ್ಷಯ ರೋಗ ಮುಕ್ತ ಭಾರತ

07:17 AM Mar 25, 2019 | Vishnu Das |

ಬೆಂಗಳೂರು: ವಿಶ್ವಮಟ್ಟಕ್ಕೆ ಹೋಲಿಸಿದರೆ ಭಾರತವೊಂದರಲ್ಲಿಯೇ ಶೇ.27 ರಷ್ಟು ಕ್ಷಯ
ರೋಗಿಗಳಿದ್ದು, ಮುಂದಿನ ದಿನಗಳಲ್ಲಿ ಯಾರೊಬ್ಬರೂ ಕ್ಷಯದ ಬಗ್ಗೆ ನಿರ್ಲಕ್ಷ್ಯ ಧೋರಣೆ
ಅನುಸರಿಸಬಾರದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಪ್ರಾದೇಶಿಕ ನಿರ್ದೇಶಕ ಡಾ.ರವಿಕುಮಾರ್‌ ತಿಳಿಸಿದರು.

Advertisement

ನಗರದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಭಾನುವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಏರ್ಪಡಿಸಿದ್ದ ವಿಶ್ವ ಕ್ಷಯರೋಗ ದಿನಾಚರಣೆಯಲ್ಲಿ ಮಾತನಾಡಿದ ಅವರು, ವಿಶ್ವದಲ್ಲಿ ನಾಲ್ಕು ಮಂದಿಗೆ ಕ್ಷಯರೋಗ ಕಾಣಿಸಿಕೊಂಡರೆ ಅದರಲ್ಲಿ ಒಬ್ಬ
ಭಾರತೀಯನಿರುತ್ತಾನೆ. ಅಷ್ಟರ ಮಟ್ಟಿಗೆ ಭಾರತದಲ್ಲಿ ಕ್ಷಯ ರೋಗಿಗಳ ಪ್ರಮಾಣ ಹೆಚ್ಚಿದೆ.

ಈ ರೋಗವನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಒಗ್ಗಟ್ಟಿನ ಶ್ರಮ ಅಗತ್ಯವಿದೆ. ಇದರ ಜತೆಗೆ ಸಾರ್ವಜನಿಕರು ಕೂಡಾ ಕ್ಷಯದ ಲಕ್ಷಣ ಕುರಿತು ನಿರ್ಲಕ್ಷ್ಯ ಧೋರಣೆ ಅನುಸರಿಸಬಾರದು ಎಂದು ತಿಳಿಸಿದರು. ಕ್ಷಯ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯೂ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, 2025ರ ವೇಳೆ ಕ್ಷಯ ರೋಗ ಮುಕ್ತ ಭಾರತ ನಿರ್ಮಾಣ ಗುರಿಯನ್ನು ಹೊಂದಲಾಗಿದೆ. ಇದಕ್ಕಾಗಿ ನಮ್ಮ ಕಾರ್ಯಚಟುವಟಿಕೆಯಲ್ಲಿ ಇನ್ನಷ್ಟು ಹೊಸ
ಅಂಶಗಳನ್ನು ಅಳವಡಿಸುತ್ತಿದೆ. ಪ್ರಮುಖವಾಗಿ ಖಾಸಗಿ ವೈದ್ಯರು ಉಚಿತ ಚಿಕಿತ್ಸೆ ನೀಡುವ ಅಥವಾ ಸರ್ಕಾರಿ ಆಸ್ಪತ್ರೆಗೆ ಅವರನ್ನು ಶಿಫಾರಸು ಮಾಡುವ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ.ಜತೆಗೆ ರಾಜ್ಯದಲ್ಲಿ ಯಾವುದೇ ವೈದ್ಯರು ಕ್ಷಯ
ರೋಗಕ್ಕೆ ಚಿಕಿತ್ಸೆ ನೀಡಿದರೂ ಕೂಡಾ ರಾಜ್ಯ ಸರ್ಕಾರದ ಅಧಿಕೃತ ದಾಖಲೆಯಲ್ಲಿ ನೋಂದಣಿ ಮಾಡಿಸುವುದನ್ನು ಕಡ್ಡಾಯ ಮಾಡಲಾಗುತ್ತಿದೆ ಎಂದರು.

ಕ್ಷಯ ರೋಗಕ್ಕೆ ಕಡ್ಡಾಯ 6 ತಿಂಗಳ ಚಿಕಿತ್ಸೆ ಪಡೆಯಬೇಕು. ಆದರೆ, ರೋಗಿಗಳು ಒಂದೆರಡು ತಿಂಗಳು ಚಿಕಿತ್ಸೆ ಪಡೆದು, ಲಕ್ಷಣಗಳು ಕಡಿಮೆಯಾದಂತೆ ಚೇತರಿಕೆಯಾಗಿದೆ ಎಂದು ಸ್ವಯಂ ಭಾವಿಸಿ ಪೂರ್ಣ ಪ್ರಮಾಣದ ಚಿಕಿತ್ಸೆಗೆ ನಿರ್ಲಕ್ಷ್ಯì ತೋರುತ್ತಿದ್ದಾರೆ. ಇದರಿಂದಾಗಿ ರೋಗ ಉಲ½ಣವಾಗುತ್ತಿದೆ. ಇನ್ನು ಬಹುತೇಕ ರೋಗಿಗಳು ಬಡತನ,
ಅಪೌಷ್ಠಿಕತೆ ಸಮಸ್ಯೆಯಿಂದ ಬಳಲುತ್ತಿದ್ದು ಈ ಅಂಶಗಳು ಕೂಡಾ ಭಾರತದಲ್ಲಿ ಕ್ಷಯ ರೋಗ ಹೆಚ್ಚಳಕ್ಕೆ ಕಾರಣ ಎಂದು ಮಾಹಿತಿ ನೀಡಿದರು.

ರಾಷ್ಟ್ರೀಯ ಕ್ಷಯ ರೋಗ ಸಂಸ್ಥೆ ನಿರ್ದೇಶಕ ಡಾ. ಸೋಮಶೇಖರ್‌ ಮಾತನಾಡಿ, ಕರ್ನಾಟಕದಲ್ಲಿ 2018 ರಲ್ಲಿ 83,707 ಕ್ಷಯ ರೋಗಿಗಳನ್ನು ಪತ್ತೆ ಹಚ್ಚಲಾಗಿದ್ದು, ಇದರಲ್ಲಿ ಶೇ.37ರಷ್ಟು ಬೆಂಗಳೂರು, ಬಳ್ಳಾರಿ, ರಾಯಚೂರು,ಗದಗದವರಿದ್ದಾರೆ. ಶೇ.34ರಷ್ಟು ಮಹಿಳೆಯರು ಕ್ಷಯ ರೋಗಿಗಳಾಗಿದ್ದು, 15 ವರ್ಷದ ಮಕ್ಕಳಿಂದ
45 ವರ್ಷದವರಿನಲ್ಲಿ ಹೆಚ್ಚಾಗಿ ಕ್ಷಯ ರೋಗ ಪತ್ತೆಯಾಗುತ್ತಿದೆ. ಅದರಲ್ಲಿ ರೋಗಿಗಳು
ಅಪೌಷ್ಠಿಕತೆ ಯಿಂದ ಬಳಲುತ್ತಿದ್ದು, ರಾಜ್ಯ ಸರ್ಕಾರ ನಿಕ್ಷಯ್‌ ಪೋಷಣಾ ಯೋಜನೆಯಡಿ ಮಾಸಿಕ 500 ರೂ. ಗೌರವಧನ ನೀಡುತ್ತಿದೆ. ಇನ್ನು ಸಾರ್ವಜನಿಕರು ಕ್ಷಯ ರೋಗದ ಬಗ್ಗೆ ಎಚ್ಚೆತ್ತುಕೊಂಡರೆ 2025ರೊಳಗೆ ಕರ್ನಾಟಕವನ್ನು ಕ್ಷಯ ಮುಕ್ತ ರಾಜ್ಯವಾಗಿ ನಿರ್ಮಾಣ ಮಾಡಬಹುದು ಎಂದರು.

Advertisement

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕ ಡಾ.ಟಿ.ಎಸ್‌.ಪ್ರಭಾಕರ್‌
ಮಾತನಾಡಿ, ಇಲಾಖೆ ಹಲವಾರ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ಕ್ಷಯ ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರದ ಜೊತೆ ಎನ್‌ಜಿಒ ಸಹಕಾರ ಮತ್ತು ಸಾರ್ವಜನಿಕರ ಮುಂಜಾಗ್ರತಾ ಕ್ರಮ ಅಗತ್ಯವಿದೆ ಎಂದರು.

ಇದೇ ವೇಳೆ ಕ್ಷಯ ನಿಯಂತ್ರಣ ಮಾಹಿತಿ ಕುರಿತ ವ್ಯಾಟ್ಸಪ್‌ ನಂಬರ್‌ ‘6366000122″ಬಿಡ ುಗಡೆಗೊಳಿಸಲಾಯಿತು. ಇದಕ್ಕೂ ಮುನ್ನ 700
ವಿದ್ಯಾರ್ಥಿಗಳು ಕೆ.ಆರ್‌.ಮಾರುಕಟ್ಟೆ ಸುತ್ತಲ ಬಡಾವಣೆಯಲ್ಲಿ ಕ್ಷಯರೋಗ ಜಾಗೃತ ಜಾಥಾ ನಡೆಸಿದರು.

ಕ್ಷಯ ರೋಗ ನಿಯಂತ್ರಣ ಹಾದಿಯಲ್ಲಿರುವ ಸಾಧಕರಿಗೆ ಪ್ರಶಸ್ತಿ ಪ್ರದಾನ
ಕ್ಷಯ ರೋಗ ನಿಯಂತ್ರಣ ಹಾದಿಯಲ್ಲಿ ಶ್ರಮಿಸುತ್ತಿರುವ ಡಾ.ರವಿಕುಮಾರ್‌ (ಅತ್ಯುತ್ತಮ
ತಾಲೂಕು ವೈದ್ಯಾಧಿಕಾರಿ), ಡಾ. ಈರಣ್ಣ (ಅತ್ಯುತ್ತಮ ಡಿಆರ್‌ಟಿಬಿ ವೈದ್ಯಾಧಿಕಾರಿ), ಮಲ್ಲಾರೆಡ್ಡಿ ಕಾಸ್‌ಬಾಗ್‌ (ಅತ್ಯುತ್ತಮ ಜಿಲ್ಲಾ ಕಾರ್ಯಕ್ರಮ ಸಂಯೋಜಕ), ಕಿಶೋರ್‌ (ಬಹು ಔಷಧ ನಿರೋಧಕ ಕ್ಷಯ ಕಾರ್ಯಕ್ರಮ ಮೇಲ್ವಿಚಾರಕ), ಇಮಾಮ್‌ ಸಾಬ್‌ (ಸರ್ಕಾರಿ- ಖಾಸಗಿ ಸಹಭಾಗಿತ್ವಕಾರ್ಯಕ್ರಮ ಸಂಯೋಜಕ), ಅಶ್ವತ್ಥ್ ನಾರಾಯಣ (ಹಿರಿಯ ಚಿಕಿತ್ಸಾ ಮೇಲ್ವಿಚಾರಕ), ಜೈಪಾಲ್‌ (ಕ್ಷಯರೋಗ ಮೇಲ್ವಿಚಾರಕ), ಕೋಲಾರ (ಅತ್ಯುತ್ತಮ ಜಿಲ್ಲೆ ಪ್ರಥಮ), ಚಿಕ್ಕಬಳ್ಳಾಪುರ (ಅತ್ಯುತ್ತಮ ಜಿಲ್ಲೆ ದ್ವಿತೀಯ) ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next