Advertisement

ಹಳ್ಳಾಡಿ ಸುಬ್ರಾಯ ಮಲ್ಯ  ನೆನಪಿಗೊಂದು ಟ್ರಸ್ಟ್‌

03:16 PM Jul 21, 2017 | Team Udayavani |

ಎಳೆ ವಯಸ್ಸಿನಲ್ಲೇ ಯಕ್ಷಲೋಕದಿಂದ ಆಕರ್ಷಿತರಾಗಿ ಅದನ್ನೇ ಉಸಿರಾಗಿಸಿಕೊಂಡು, ಹವ್ಯಾಸಿ ಯಕ್ಷಗಾನ ರಂಗಭೂಮಿಯ ಅವಿಭಾಜ್ಯ ಅಂಗವಾಗಿ ಕುಂದಾಪುರ -ಉಡುಪಿ ಪರಿಸರದಲ್ಲಿ ಸಾವಿರಾರು ಯಕ್ಷಾಸಕ್ತರನ್ನು ಕಲಾವಿದರನ್ನಾಗಿ ಮಾಡುವಲ್ಲಿ ಶ್ರಮಿಸಿದ ಅನನ್ಯ ಸಾಧಕ ಹಳ್ಳಾಡಿ ಸುಬ್ರಾಯ ಮಲ್ಯರ ನಿಧನದ ನಾಲ್ಕು ವರ್ಷಗಳ ಅನಂತರ ಅವರ ಶಿಷ್ಯರು- ಅಭಿಮಾನಿಗಳು ಕೂಡಿ ದಿ| ಯಕ್ಷಗುರು ಹಳ್ಳಾಡಿ ಸುಬ್ರಾಯ ಮಲ್ಯ ಯಕ್ಷ ಶಿಕ್ಷಣ ಪ್ರತಿಷ್ಠಾನ (ರಿ.) ಸ್ಥಾಪಿಸಿದ್ದು, ನಾಳೆ – ಜುಲೈ 22ರಂದು ಸಾೖಬರಕಟ್ಟೆ ಜಿ.ಎಸ್‌.ಬಿ. ಸಭಾಭವನದಲ್ಲಿ ಅದು ವಿಧ್ಯುಕ್ತವಾಗಿ ಉದ್ಘಾಟನೆಗೊಳ್ಳಲಿದೆ.

Advertisement

ತನ್ನೊಳಗೆ ಸಣ್ಣತನವಿರದೆ, ಮೇಲು ಕೀಳುಗಳೆಂಬ ಭೇದವಿರದೆ, ಆ ಜಾತಿ-ಈ ಜಾತಿ ಅನ್ನುವ ಲೆಕ್ಕಾಚಾರವಿರದೆ ಉಡುಪಿ ಜಿಲ್ಲೆಯ ಸಹಸ್ರಾರು ಕಲಾರಾಧಕ ಶಿಷ್ಯ ವೃಂದದ ಹೃದಯದಲ್ಲಿ ಸ್ಥಾಪಿತರಾದವರು ಗುರು ಹಳ್ಳಾಡಿ ಸುಬ್ರಾಯ ಮಲ್ಯರು. ಪ್ರತಿ ಮೇಳದ ಇಂದಿನ ನೂರಾರು ಕಲಾವಿದರು ಮಲ್ಯರ ಶಿಷ್ಯ ಪರಂಪರೆಯವರು. 

ಕುಂದಾಪುರ ತಾಲೂಕಿನ ಶಿರಿಯಾರ ಸಮೀಪ ಹಳ್ಳಾಡಿ ಎಂಬಲ್ಲಿ 1937ರಲ್ಲಿ ಜನಿಸಿದ ಸುಬ್ರಾಯ ಮಲ್ಯರು 5ನೇ ತರಗತಿ ವಿದ್ಯಾಭ್ಯಾಸ ಮಾಡಿ ಪರಿಸರದಲ್ಲಿ ನಡೆಯುವ ಬಯಲಾಟ ಪ್ರದರ್ಶನಗಳಿಂದ ಯಕ್ಷಗಾನದತ್ತ ಆಕರ್ಷಿತರಾದರು. ಮಂದಾರ್ತಿ ಮೇಳದಲ್ಲಿ ಮದ್ದಳೆಗಾರರಾಗಿದ್ದ ಸುರಗಿಕಟ್ಟೆ ಬಸವ ಗಾಣಿಗರಲ್ಲಿ ಮದ್ದಳೆ ವಾದನದ ಪ್ರಾಥಮಿಕ ಅಭ್ಯಾಸ ನಡೆಸಿದರು. ಬಳಿಕ ಗುರು ನಾರ್ಣಪ್ಪ ಉಪ್ಪೂರರ ಶಿಷ್ಯನಾಗಿ ಭಾಗವತಿಕೆ, ಬೆಳಂಜೆ ತಿಮ್ಮಪ್ಪ ನಾಯಕರಿಂದ ಚೆಂಡೆವಾದನ, ಹೆಜ್ಜೆಗಾರಿಕೆ ಹೀಗೆ ಯಕ್ಷಗಾನದ ಎಲ್ಲ ಅಂಗಗಳನ್ನೂ ಅಭ್ಯಸಿಸಿ ಪರಿಪೂರ್ಣತೆ ಪಡೆದು ಹವ್ಯಾಸಿ ರಂಗಭೂಮಿಯ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡರು.

ಉಪ್ಪಿನಕುದ್ರು ಗಣೇಶ ಯಕ್ಷಗಾನ ಮಂಡಳಿಯ ಮದ್ದಳೆಗಾರರಾಗಿ 30 ವರ್ಷ ತಿರುಗಾಟ ಮಾಡಿದ ಅವರು ಅನೇಕ ವಿದೇಶಗಳಲ್ಲಿ ತನ್ನ ಮದ್ದಳೆಯ ನಿನಾದವನ್ನು ಮೊಳಗಿಸಿದರು. 

ಡಾ| ಶಿವರಾಮ ಕಾರಂತರ ಯಕ್ಷಗಾನ ಬ್ಯಾಲೆಗಳಲ್ಲಿ ಭಾಗವಹಿಸಿ ವಿದೇಶ ಸಂಚಾರವನ್ನು ಅರುವತ್ತರ ದಶಕದಲ್ಲೇ ನಡೆಸಿದವರು. ಸಾಲಿಗ್ರಾಮ ಮಕ್ಕಳ ಮೇಳದಲ್ಲಿ ಕಾರ್ಕಡ ಶ್ರೀನಿವಾಸ ಉಡುಪ ಮತ್ತು ಶ್ರೀಧರ ಹಂದೆಯವರ ಸಹವರ್ತಿಯಾಗಿ ಶಾಲಾ ಮಕ್ಕಳನ್ನು ಆ ಕಾಲದಲ್ಲಿ ಯಕ್ಷಗಾನಕ್ಕೆ ಸೆಳೆದ ಕೀರ್ತಿ ಅವರಿಗೆ ಸಲ್ಲುತ್ತದೆ. ಕುಂದಾಪುರ ತಾಲೂಕಿನಾದ್ಯಂತ ಶಾಲಾ ವಾರ್ಷಿಕೋತ್ಸವಗಳ ಯಕ್ಷಗಾನ ಕಾರ್ಯಕ್ರಮಕ್ಕೆ ಮಲ್ಯರ ಉಪಸ್ಥಿತಿ ಅನಿವಾರ್ಯವಾಗಿತ್ತು. ಮಂದಾರ್ತಿ, ಕಮಲಶಿಲೆ, ಸೌಕೂರು, ಅಮೃತೇಶ್ವರಿ, ಮಾರಣಕಟ್ಟೆ ಮೇಳಗಳಲ್ಲಿ ವೃತ್ತಿ ಕಲಾವಿದರಾಗಿ ಸೇವೆ ಸಲ್ಲಿಸಿದರೂ ಅವರ ಗಣನೀಯ ಕೊಡುಗೆ ಹವ್ಯಾಸಿ ರಂಗಭೂಮಿಗೆ. ಜೀವಿತದ ಕೊನೆಯವರೆಗೂ ಮಂದಾರ್ತಿ ಮತ್ತು ಸೌಕೂರು ಮೇಳಗಳ ಮೊದಲ ಮತ್ತು ಕೊನೆಯ ದೇವರ ಸೇವೆಗಳಲ್ಲಿ ನಿರಂತರ ಚೆಂಡೆ ಮದ್ದಳೆ ವಾದನ ನಡೆಸಿದ್ದು ಅವರ ಕಲಾಪ್ರೀತಿ ಮತ್ತು ಕ್ಷೇತ್ರದ ಬಗ್ಗೆ ಅಭಿಮಾನಗಳನ್ನು ಸೂಚಿಸುತ್ತದೆ. ಈ ಭಾಗದಲ್ಲಿ ಸಮಾಜದ ಮೇಲುವರ್ಗದವರು ಯಕ್ಷಗಾನದಲ್ಲಿ ತೊಡಗಿಸಿಕೊಳ್ಳಲು ಮಲ್ಯರ ಕೊಡುಗೆ ಅಪಾರ ಎನ್ನುವುದು ಅನೇಕ ಯಕ್ಷಗಾನ ಪ್ರಿಯರ ಅಭಿಪ್ರಾಯ.

Advertisement

ಸುಬ್ರಾಯ ಮಲ್ಯರನ್ನು ಗುರುತಿಸಬೇಕಾದದ್ದು ಅವರು ಹವ್ಯಾಸಿ ಯಕ್ಷಗಾನ ಕೇತ್ರಕ್ಕೆ ನೀಡಿದ ಅಸಾಧಾರಣ ಕೊಡುಗೆಯ ಮೂಲಕ. ಯಕ್ಷಗಾನದ ಬಗ್ಗೆ ಕೀಳರಿಮೆ ಇದ್ದ ಆ ಕಾಲದಲ್ಲಿ, ಪ್ರಾಥಮಿಕ ಶಾಲೆಯಿಂದ ಹಿಡಿದು ಕಾಲೇಜು ಮಟ್ಟದವರೆಗೂ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡಿ ನಿರಂತರ ಕಾರ್ಯಕ್ರಮ ನೀಡಿಸಿದ ಹಿರಿಮೆ ಸುಮಾರು ಐವತ್ತರ ದಶಕದಿಂದೀಚೆಗೆ ಮಲ್ಯರಿಗೆ ಸಲ್ಲಬೇಕು. ನೂರಕ್ಕೂ ಅಧಿಕ ಯಕ್ಷಗಾನ ಸಂಘಗಳನ್ನು ಹುಟ್ಟು ಹಾಕುವುದರ ಮೂಲಕ ಕಲಾ ಜಗತ್ತಿಗೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಯಕ್ಷಗಾನ ವೇಷಭೂಷಣವನ್ನು ತಯಾರಿಸಿ ಸಂಘ ಸಂಸ್ಥೆಗಳಿಗೆ ಪೂರೈಸುವ ಕಾಯಕವನ್ನೂ ಅವರು ನಡೆಸಿದ್ದರು. ಜೀವಿತದ ದಿನ ಕೂಡ ತರಬೇತಿ ಮುಗಿಸಿ ಬಂದು ಮಲಗಿದ್ದರು ಎನ್ನುವುದು ಯಕ್ಷಗಾನ ಅವರ ಉಸಿರಾಗಿತ್ತು ಎಂಬುದಕ್ಕೆ ಸಾಕ್ಷಿ. ಇಬ್ಬರು ಹೆಣ್ಣು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಒದಗಿಸಿ, ಏಕಮಾತ್ರ ಪುತ್ರ ರಾಕೇಶ ಮಲ್ಯರನ್ನು ಉತ್ತಮ ಚೆಂಡೆವಾದಕನನ್ನಾಗಿ ರೂಪಿಸಿದ್ದಾರೆ.

ಹವ್ಯಾಸಿ ರಂಗಭೂಮಿಯ “ಹಿರಿಯ’ ಸುಬ್ರಾಯ ಮಲ್ಯರ ನೆನಪಿನ ಶಿಕ್ಷಣ ಪ್ರತಿಷ್ಠಾನ ಯಕ್ಷಲೋಕಕ್ಕೆ ಅವರ ಅಭಿಮಾನಿಗಳು ಮತ್ತು ಶಿಷ್ಯರ ಬಹುದೊಡ್ಡ ಕೊಡುಗೆಯಾಗಿದೆ.

ಪ್ರೊ| ಎಸ್‌. ವಿ. ಉದಯ ಕುಮಾರ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next