Advertisement

ನಾರಾವಿ: ಬೈಕಿಗೆ ಲಾರಿ ಢಿಕ್ಕಿ; ಯುವಕ ಸಾವು

09:35 AM Jun 27, 2019 | keerthan |

ವೇಣೂರು: ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಾವ್ಯ ಗ್ರಾಮದ ಮಿಯ್ಯೊಟ್ಟು ಕರಿಯ ಪೂಜಾರಿ ಮತ್ತು ಜಯಾ ದಂಪತಿ ಪುತ್ರ ಪ್ರದೀಪ್‌ ಪೂಜಾರಿ (19) ಮೃತಪಟ್ಟಿದ್ದಾರೆ.

Advertisement

ಪ್ರದೀಪ್‌ ಪೂಜಾರಿಯವರ ಸಹೋದರ ಪ್ರಶಾಂತ್‌ ಪೂಜಾರಿ ಉಡುಪಿಯ ಕಲ್ಯಾಣ್‌ ಜುವೆಲರ್ ಮಳಿಗೆಯಲ್ಲಿ ಉದ್ಯೋಗಿ. ಅವರು ಇತ್ತೀಚೆಗಷ್ಟೆ ಮಂಗಳೂರಿನಿಂದ ಉಡುಪಿಗೆ ವರ್ಗಾವಣೆ ಆಗಿದ್ದರು. ಮಂಗಳವಾರ ಮಳಿಗೆಗೆ ರಜೆ ಇದ್ದ ಕಾರಣ ಪ್ರಶಾಂತ್‌ ಮನೆಗೆ ಬಂದಿದ್ದರು. ಬುಧವಾರ ಬೆಳಗ್ಗೆ ಅವರನ್ನು ನಾರಾವಿ ಬಸ್‌ ನಿಲ್ದಾಣಕ್ಕೆ ಬಿಟ್ಟು ಬರಲು ಪ್ರದೀಪ್‌ ಪೂಜಾರಿ ಬೈಕಿನಲ್ಲಿ ಬೆಳಗ್ಗೆ 6.15ರ ಸುಮಾರಿಗೆ ತೆರಳಿದ್ದರು.

ಸಹೋದರನನ್ನು ಬಸ್‌ ನಿಲ್ದಾಣದಲ್ಲಿ ಇಳಿಸಿ ಮನೆಗೆ ವಾಪಸಾಗುತ್ತಿದ್ದಾಗ ನಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾ ಗದ ತಿರುವಿನಲ್ಲಿ ಎದುರಿನಿಂದ ಬಂದ ಲಾರಿಗೆ ಬೈಕ್‌ ಢಿಕ್ಕಿ ಹೊಡೆಯಿತು ಎನ್ನಲಾಗಿದೆ. ರಸ್ತೆಗೆ ಎಸೆಯಲ್ಪಟ್ಟ ಪ್ರದೀಪ್‌ ತಲೆಗೆ ತೀವ್ರ ಗಾಯ ವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವೇಣೂರು ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರದೀಪ್‌ ಪೂಜಾರಿ ಸಹೋದರಿಗೆ ಈದುವಿನ ಯುವಕನೊಂದಿಗೆ ವಿವಾಹ ನಿಶ್ಚಿತಾರ್ಥವಾಗಿದ್ದು, ಕೆಲವೇ ತಿಂಗಳಲ್ಲಿ ಮದುವೆ ನಡೆಯಲಿದೆ. ಪ್ರದೀಪ್‌ ಕಳೆದ ವರ್ಷ ದ್ವಿತೀಯ ಪಿಯುಸಿ ಮುಗಿಸಿದ್ದರು.

ರಸ್ತೆ ಬದಿ ಮರ ಕಾರಣ?
ಘಟನೆ ನಡೆದ ರಸ್ತೆ ಬದಿಯಲ್ಲೇ ಅಪಾಯಕಾರಿ ಬೃಹದಾಕಾರದ ಮರ ವಿದ್ದು, ಇದರಿಂದಾಗಿ ತಿರುವಿನಲ್ಲಿ ಎದುರಿನಿಂದ ಬರುವ ವಾಹನಗಳು ಬೇಗನೆ ಗೋಚರವಾಗುವುದಿಲ್ಲ. ಇಲ್ಲಿ ಹಲವು ಅಪಘಾತಗಳು ಸಂಭವಿಸಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಮರವನ್ನು ತೆರವು ಗೊಳಿಸಬೇಕು ಎಂಬ ಆಗ್ರಹ ಸ್ಥಳೀಯರಿಂದ ಕೇಳಿ ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next