Advertisement

ವಿದ್ಯಾಗಮ ಪುನರಾರಂಭಕ್ಕೆ ಸಲಹೆ ವಿಘ್ನಗಳ ನಿವಾರಣೆ ಮುಖ್ಯ

12:25 AM Dec 09, 2020 | mahesh |

ರಾಜ್ಯದಲ್ಲಿ ವಿದ್ಯಾರ್ಥಿಗಳ ಕಲಿಕೆಯ ನಿರಂತರತೆ ಕಾಪಾಡಿಕೊಳ್ಳುವುದಕ್ಕಾಗಿ ರೂಪ ಪಡೆದ “ವಿದ್ಯಾಗಮ’ವನ್ನು ಪುನಾರಂಭಿಸಬಹುದೇ ಎಂಬ ಬಗ್ಗೆ ನಿರ್ಧರಿಸಲು ಸರಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ. ವಿದ್ಯಾಗಮವು ನಿಜಕ್ಕೂ ವಿನೂತನ ಶೈಕ್ಷಣಿಕ ಯೋಜನೆ ಎನ್ನುವುದರಲ್ಲಿ ಸಂದೇಹವಿಲ್ಲ. ತಜ್ಞರ ಸಮಿತಿಯ ಸಲಹೆ ಮತ್ತು ಶಿಫಾರಸಿನಂತೆ ಸಾಮಾಜಿಕ, ಆರ್ಥಿಕವಾಗಿ ದುರ್ಬಲರಾದ ಮಕ್ಕಳ ಶೈಕ್ಷಣಿಕ ಅಗತ್ಯತೆಗಳನ್ನು ಪೂರೈಸುವುದಕ್ಕಾಗಿ ವಿದ್ಯಾಗಮ ಹುಟ್ಟಿಕೊಂಡಿತು. ಈ ಯೋಜನೆಯಡಿಯಲ್ಲಿ ಸರಕಾರಿ ಶಾಲೆಗಳಿಗೆ ಸೇರಿದ 47 ಲಕ್ಷ ಮಕ್ಕಳು ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಶಿಕ್ಷಣ ಇಲಾಖೆ ಹೇಳಿತ್ತು.

Advertisement

ಮಕ್ಕಳು ಇರುವಲ್ಲಿಗೇ ಶಿಕ್ಷಕರು ಹೋಗಿ ಹತ್ತಿರವಿರುವ ಸಮುದಾಯ ಭವನ, ದೇವಸ್ಥಾನ, ಮರದ ನೆರಳಿನಲ್ಲಿ ತರಗತಿ ಮಾಡಲಾಗುತ್ತಿತ್ತು. ಗಮನಾರ್ಹ ಸಂಗತಿಯೆಂದರೆ, ರಾಜ್ಯ ಸರಕಾರದ ಈ ವಿನೂತನ ಯೋಜನೆ ಕೇಂದ್ರದ ಗಮನವನ್ನೂ ಸೆಳೆದದ್ದು. ವಿದ್ಯಾಗಮದಿಂದ ಆಗುತ್ತಿರುವ ಅನುಕೂಲ ಮತ್ತು ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಹೇಗೆ ಯೋಜನೆಯನ್ನು ವ್ಯವಸ್ಥಿತ ರೀತಿಯಲ್ಲಿ ಅನುಷ್ಠಾನ ಮಾಡ ಲಾಗುತ್ತಿದೆ ಎನ್ನುವ ವಿಸ್ತೃತ ವರದಿಯನ್ನು ಶಿಕ್ಷಣ ಇಲಾಖೆ ಕೇಂದ್ರ ಸರಕಾರಕ್ಕೆ ಸಲ್ಲಿಸಿತ್ತು. ದಿನಗಳೆದಂತೆ ವಿದ್ಯಾಗಮ ಯೋಜನೆಯಡಿ ರಾಜ್ಯಾದ್ಯಂತ ಕೆಲಸ ಮಾಡುತ್ತಿದ್ದ ಕೆಲವು ಶಿಕ್ಷಕರಿಗೆ ಕೋವಿಡ್‌ ಸೋಂಕು ಬಂದದ್ದು, ಅನೇಕರು ಸಾವನ್ನಪ್ಪಿದ್ದು ಹಾಗೂ ಮಕ್ಕಳಲ್ಲೂ ಸೋಂಕು ಕಾಣಿಸಿಕೊಂಡ ಕಾರಣ ಈ ಯೋಜನೆಯನ್ನು ಸ್ಥಗಿತಗೊಳಿಸಬೇಕು ಎನ್ನುವ ಕೂಗು ಜೋರಾಯಿತು. ಆದರೆ ಆರಂಭದಲ್ಲಿ ಸಚಿವ ಸುರೇಶ್‌ ಕುಮಾರ್‌, ಈ ಕಾರ್ಯಕ್ರಮದ ಕಾರಣದಿಂದಲೇ ಸೋಂಕು ಹರಡಿದೆಯೆನ್ನುವುದು ಅಧಿಕೃತವಾಗಿ ದೃಢಪಟ್ಟಿಲ್ಲ ಎಂದೇ ಹೇಳಿದರಾದರೂ, ಪೋಷಕರಲ್ಲಿ, ಶಿಕ್ಷಕ ವೃಂದದಲ್ಲಿ ಹುಟ್ಟಿಕೊಂಡ ಆತಂಕದಿಂದಾಗಿ ತಾತ್ಕಾಲಿಕವಾಗಿ ವಿದ್ಯಾಗಮವನ್ನು ನಿಲ್ಲಿಸಲಾಯಿತು.

ಅದಕ್ಕೆ ಪರ್ಯಾಯವಾಗಿ ಅನ್‌ಲೈನ್‌ ಶಿಕ್ಷಣ ನಡೆಸಬಹುದು ಎನ್ನುವುದು ಕನಸಿನ ಮಾತೇ ಸರಿ. ಏಕೆಂದರೆ, ಈಗಲೂ ಅನೇಕ ಕುಟುಂಬಗಳ ಬಳಿ ಲ್ಯಾಪ್‌ಟಾಪ್‌ ಇರಲಿ, ಉತ್ತಮ 4ಜಿ ವೇಗದ ಸ್ಮಾರ್ಟ್‌ಫೋನ್‌ಗಳೂ ಇಲ್ಲದಂಥ ಪರಿಸ್ಥಿತಿ ಇದೆ. ಈ ಕಾರಣಕ್ಕಾಗಿಯೇ, ಸರಕಾರ ಬಡಮಕ್ಕಳಿಗೆ ಆನ್‌ಲೈನ್‌ ಮೂಲಕ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ಲ್ಯಾಪ್‌ಟಾಪ್‌, ಇಂಟರ್ನೆಟ್‌ ಮತ್ತು ಮೊಬೈಲ್‌ ಸೇರಿ ಅಗತ್ಯ ತಾಂತ್ರಿಕ ಸೌಲಭ್ಯ ಒದಗಿಸಬೇಕೆಂದು ಕೆಲವು ಸಮಯದ ಹಿಂದೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು.

ಆದರೆ ಕೋವಿಡ್‌ ನಿರ್ವಹಣೆಗೆ ಭಾರೀ ಹಣ ಖರ್ಚಾಗಿದ್ದು, ಇಂಥ ಸಂಕಷ್ಟದ ಸಮಯದಲ್ಲಿ ಬಡ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಕಲ್ಪಿಸಲು ಸಾಧ್ಯವಿಲ್ಲ ಎಂದು ಸರಕಾರ ವಾಸ್ತವ ಎದುರಿಟ್ಟಿದೆ. ಈ ಹಿನ್ನೆಲೆಯಲ್ಲಿಯೇ ಹೈಕೋರ್ಟ್‌ ವಿದ್ಯಾಗಮದ ಪುನಾರಂಭದ ಕುರಿತು ಯೋಚಿಸುವಂತೆ ಸಲಹೆ ನೀಡಿದೆ.

ಇದರನ್ವಯ ಮುಂದಿನ ದಿನಗಳಲ್ಲಿ ವಿದ್ಯಾಗಮ ಯೋಜನೆ ಆರಂಭವಾದರೂ ಸಹ ಅದಕ್ಕೂ ಮುನ್ನ ಹಲವು ಅಡ್ಡಿಗಳು ನಿವಾರಣೆಯಾಗಲೇಬೇಕಿದೆ. ಕುಗ್ರಾಮ ಗಳಿಗೆ ಹೋಗಲು ವಾಹನದ ವ್ಯವಸ್ಥೆ ಇಲ್ಲದೆ ಶಿಕ್ಷಕರು ಪರದಾಡುವಂತಾಗಬಾರದು. ಇನ್ನು ಬಹುತೇಕ ಕಡೆ ಮೂಲ ಸೌಕರ್ಯಗಳಿಲ್ಲದೆ ಮೂತ್ರ ವಿಸರ್ಜಿಸಲು ಸಹ ಶಿಕ್ಷಕರು ಪರದಾಡುವಂಥ ಸ್ಥಿತಿ ಇದೆ. ಗ್ರಾಮಾಂತರ ಪ್ರದೇಶಗಳಲ್ಲಿ ಆರೋಗ್ಯ ಭದ್ರತೆಯೂ ಇರದ ಕಾರಣ ಶಿಕ್ಷಕರು ಆತಂಕಗೊಳ್ಳುವುದು ಸಹಜವೇ.

Advertisement

ಹಲವು ಸಂದರ್ಭಗಳಲ್ಲಿ ಮಕ್ಕಳಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಅಸಾಧ್ಯವಾಗುವಂತಾಗುತ್ತದೆ. ಈ ಎಲ್ಲ ವಿಘ್ನಗಳು ಮತ್ತೆ ಎದುರಾಗದಂತೆ ಖಾತ್ರಿಯಾಗುವುದು ಅತೀ ಮುಖ್ಯ.

Advertisement

Udayavani is now on Telegram. Click here to join our channel and stay updated with the latest news.

Next