Advertisement

ಮರೆಗೆ ಸರಿದ “ಟ್ರಬಲ್‌ ಶೂಟರ್‌’ಜೇಟ್ಲಿ

09:31 PM Aug 24, 2019 | Team Udayavani |

ಅರುಣ್‌ ಜೇಟ್ಲಿ. ಬಿಜೆಪಿಯ ಪ್ರಮುಖ ನಾಯಕ, ಕೇಂದ್ರದ ಮಾಜಿ ಸಚಿವ. ಇದಿಷ್ಟು ಬಹಳ ಸಂಕ್ಷೇಪವಾಗಿ ಹೇಳಬಹುದು. ಅಟಲ್‌ ಬಿಹಾರಿ ವಾಜಪೇಯಿ, ಎಲ್‌.ಕೆ.ಅಡ್ವಾಣಿ, ಮುರಳಿ ಮನೋಹರ ಜೋಶಿಯಂಥ ಅತಿರಥ ಮಹಾರಥರೇ ಬಿಜೆಪಿಯ ಮುಂಚೂಣಿಯಲ್ಲಿ ಇರಬೇಕಾದರೆ ಜೇಟ್ಲಿ ಸಕ್ರಿಯರಾಗಿದ್ದವರು. ರಾಜಕೀಯ ಕ್ಷೇತ್ರ ಪ್ರವೇಶ ಮಾಡುವುದಕ್ಕೆ ಮೊದಲು ಅವರು ವಕೀಲರಾಗಿದ್ದವರು.

Advertisement

ನವದೆಹಲಿಯ ಪ್ರತಿಷ್ಠಿತ ಶ್ರೀರಾಮ್‌ ಕಾಲೇಜ್‌ ಆಫ್ ಕಾಮರ್ಸ್‌ನಿಂದ ಬಿ.ಕಾಂ ಪದವಿ, ಎಲ್‌ಎಲ್‌ಬಿ ಪದವಿಯನ್ನು ದೆಹಲಿ ವಿವಿಯಿಂದ 1977ರಲ್ಲಿ ಪಡೆದರು. ದೆಹಲಿ ವಿವಿಯಲ್ಲಿ ಇರುವಾಗ ಜೇಟ್ಲಿ ಬಿಜೆಪಿಯ ವಿದ್ಯಾರ್ಥಿ ಘಟಕವಾಗಿರುವ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ)ನಲ್ಲಿ ಸಕ್ರಿಯರಾಗಿದ್ದರು. ಅವರು ದೆಹಲಿ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾಗಿದ್ದವರು.

ರಾಜ ನಾರಾಯಣ್‌ ಮತ್ತು ಜಯಪ್ರಕಾಶ ನಾರಾಯಣ್‌ 1973ರಲ್ಲಿ ಆರಂಭಿಸಿದ್ದ ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಯುವಕ ಜೇಟ್ಲಿ ಭಾಗವಹಿಸಿದ್ದರು. ಜಯ ಪ್ರಕಾಶ ನಾರಾಯಣ್‌ ನೇತೃತ್ವದ ವಿದ್ಯಾರ್ಥಿಗಳ ಮತ್ತು ಯುವಕ ಸಂಘಟನೆಯ ರಾಷ್ಟ್ರೀಯ ಒಕ್ಕೂಟದ ಸಂಚಾಲಕರಾಗಿದ್ದರು. ದೇಶಾದ್ಯಂತ ಜನಪ್ರಿಯವಾಗಿರುವ ನಾಗರಿಕ ಹಕ್ಕುಗಳಿಗಾಗಿನ ಜನರ ಒಕ್ಕೂಟ (ಪಿಯು ಸಿಎಲ್‌)ದ ಬುಲೆಟಿನ್‌ ಅನ್ನು ಹೊರ ತರುವಲ್ಲಿ ಅದರ ನಾಯಕರಾಗಿದ್ದ ಸತೀಶ್‌ ಝಾ ಮತ್ತು ಸ್ಮಿತು ಕೊಠಾರಿ ಅವರಿಗೆ ನೆರವಾಗುತ್ತಿದ್ದರು.

19 ತಿಂಗಳು ಕಾರಾಗೃಹ ವಾಸ: ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾಗ ಅದರ ವಿರುದ್ಧ ಪ್ರತಿಭಟನೆ ಮಾಡಿದ್ದರು. 1975ರಲ್ಲಿ ಪ್ರತಿಭಟಿಸಿದ್ದಾಗ 19 ತಿಂಗಳ ಕಾಲ ಸೆರೆಮನೆ ವಾಸ ಅನುಭವಿಸಿದ್ದರು.

ವಕೀಲಿಕೆ: ಸೆರೆಮನೆ ವಾಸದ ಬಳಿಕ ಅವರು 1977ರಲ್ಲಿ ನವದೆಹಲಿಯ ಸ್ಥಳೀಯ ಕೋರ್ಟ್‌ನಿಂದ ವಕೀಲಿಕೆ ಶುರು ಮಾಡಿ, ಹೈಕೋರ್ಟ್‌, ಸುಪ್ರೀಂಕೋರ್ಟ್‌ ವರೆಗೆ ನ್ಯಾಯವಾದಿಗಳಾಗಿದ್ದವರು. ವಿ.ಪಿ.ಸಿಂಗ್‌ ನೇತೃತ್ವದ ರಾಷ್ಟ್ರೀಯ ರಂಗ ಸರ್ಕಾರ ಅಸ್ವಿತ್ವಕ್ಕೆ ಬಂದ ಸಂದರ್ಭದಲ್ಲಿ ಜೇಟ್ಲಿ ಅವರನ್ನು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆಗಿ ನೇಮಿಸಲಾಗಿತ್ತು. 37ನೇ ವಯಸ್ಸಿನಲ್ಲಿ ಪ್ರಮುಖ ಹುದ್ದೆ ನಿರ್ವಹಿಸಿದ ಹೆಗ್ಗಳಿಕೆ ಪಡೆದುಕೊಂಡವರು. 1984ರಲ್ಲಿ ದೇಶವನ್ನು ತಲ್ಲಣಗೊಳಿಸಿದ್ದ ಬೋಫೋರ್ಸ್‌ ಫಿರಂಗಿ ಖರೀದಿಯಲ್ಲಿ ಲಂಚ ನೀಡಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆ ಸಿದ್ಧಪಡಿಸುವಿಕೆಯ ಕೆಲಸ ಮಾಡಿದ್ದರು.

Advertisement

ಘಟಾನುಘಟಿ ಕಕ್ಷಿದಾರರು: ಕಾಂಗ್ರೆಸ್‌ನಿಂದ ಹಿಂದಿನ ಜನತಾ ದಳದ ವರೆಗಿನ ನಾಯಕರಾಗಿರುವ ಎಲ್‌.ಕೆ.ಅಡ್ವಾಣಿ, ದಿ.ಮಾಧವ ರಾವ್‌ ಸಿಂಧಿಯಾ, ಶರದ್‌ ಯಾದವ್‌ ಸೇರಿದಂತೆ ಪ್ರಮುಖರೇ ಕಕ್ಷಿದಾರರಾಗಿದ್ದರು. ಬಹುರಾಷ್ಟ್ರೀಯ ಕಂಪನಿಗಳ ಪರವಾಗಿ ಕಾನೂನು ಹೋರಾಟ ಮಾಡಿದ್ದರು.

ಬಿಜೆಪಿಗೆ ಸೇರ್ಪಡೆ: ಜನಸಂಘದ ರೂಪ ದಲ್ಲಿದ್ದ ಬಿಜೆಪಿ 1980ರಲ್ಲಿ ರೂಪಾಂತರಗೊಂ ಡಾಗ ಜೇಟ್ಲಿ ಅದಕ್ಕೆ ಸೇರ್ಪಡೆಯಾದರು. 1991ರ ಬಳಿಕ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯರಾದರು. 1999ರ ಚುನಾವಣೆ ಬಳಿಕ ಪಕ್ಷದ ವಕ್ತಾರರಾದರು.

ವಾಜಪೇಯಿ ಸರ್ಕಾರದಲ್ಲಿ: ವಾಜಪೇಯಿ ನೇತೃತ್ವದ ಮೊದಲ ಅವಧಿಯ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ವಾರ್ತಾ ಮತ್ತು ಪ್ರಸಾರ ಖಾತೆ (ಸ್ವತಂತ್ರ ಹೊಣೆಗಾರಿಕೆ) ಸಹಾಯಕ ಸಚಿವರಾಗಿದ್ದರು. ಇದರ ಜತೆಗೆ ಬಂಡವಾಳ ಹಿಂತೆಗೆತ ಖಾತೆಯ ಹೊಣೆಗಾರಿಕೆಯನ್ನೂ ನೀಡಲಾಗಿತ್ತು. 2000 ಜು.23ರಂದು ಕಾನೂನು, ನ್ಯಾಯ ಮತ್ತು ಕಂಪನಿ ವ್ಯವಹಾರಗಳ ಖಾತೆ ನೀಡಲಾಗಿತ್ತು. ಅದೇ ವೇಳೆ ಆ ಹುದ್ದೆಯಲ್ಲಿದ್ದ ರಾಮ್‌ ಜೇಠ್ಮಲಾನಿ ರಾಜೀನಾಮೆ ನೀಡಿದ್ದರಿಂದ ಅವರಿಗೆ ಅದನ್ನು ನೀಡಲಾಗಿತ್ತು.

ನವೆಂಬರ್‌ 2 ಸಾವಿರನೇ ಇಸ್ವಿಯಲ್ಲಿ ಅವರನ್ನು ಸಂಪುಟ ದರ್ಜೆಗೆ ಪದೋನ್ನತಿ ನೀಡಲಾಗಿ, ಕಾನೂನು, ನ್ಯಾಯ ಮತ್ತು ಕಂಪನಿ ವ್ಯವಹಾರಗಳು ಮತ್ತು ನೌಕಾಯಾನ ಸಚಿವ ಸ್ಥಾನ ನೀಡಲಾಗಿತ್ತು. ಭೂಸಾರಿಗೆ ಸಚಿವಾಲಯದಿಂದ ನೌಕಾಯಾನವನ್ನು ಪ್ರತ್ಯೇಕಿಸಿದ ಬಳಿಕ ಆ ಖಾತೆಯನ್ನು ಮೊದಲು ನಿರ್ವಹಿಸಿದ ಹೆಗ್ಗಳಿಕೆ ಅವರಿಗೆ ಸೇರಿದೆ. 2002 ಜು.1ರಂದು ಅವರು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಮತ್ತು ವಕ್ತಾರರಾಗಿ ನೇಮಕಗೊಂಡಿದ್ದ ರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.

2003 ಜನವರಿವರೆಗೆ ಅದೇ ಹುದ್ದೆಯಲ್ಲಿದ್ದರು. 2003 ಜ.29 ರಂದು ವಾಣಿಜ್ಯ ಮತ್ತು ಕೈಗಾರಿಕೆ, ಕಾನೂನು ಮತ್ತು ನ್ಯಾಯ ಖಾತೆ ಸಚಿವರಾಗಿ ಮತ್ತೆ ಸಂಪುಟಕ್ಕೆ ಸೇರ್ಪಡೆ ಗೊಂಡರು. 2004ರ ಮೇನಲ್ಲಿ ನಡೆದಿದ್ದ ಚುನಾವಣೆ ಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಚುನಾ ವಣೆಯಲ್ಲಿ ಸೋಲನುಭವಿಸಿದ ಬಳಿಕ ಪ್ರಧಾನ ಕಾರ್ಯದರ್ಶಿ ಯಾಗಿ ಮತ್ತು ವಕೀಲಿಕೆ ಮುಂದುವರಿಸಿದ್ದರು.

ರಾಜ್ಯಸಭೆಯಲ್ಲಿ: ಬಿಜೆಪಿಯಲ್ಲಿ ಆಗ ವರಿಷ್ಠ ನೇತಾರರಾಗಿದ್ದ ಎಲ್‌.ಕೆ.ಅಡ್ವಾಣಿ 2009 ಜೂ.3ರಂದು ರಾಜ್ಯಸಭೆಯಲ್ಲಿ ಬಿಜೆಪಿಯ ನಾಯಕರನ್ನಾಗಿ ನೇಮಿಸಿದರು. 2009ರ ಜೂ.16ರಂದು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮದ ಅನ್ವಯ ಅವರು ಈ ನಿರ್ಧಾರ ಕೈಗೊಂಡಿದ್ದರು. ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿ ಮಹಿಳೆಯರಿಗೆ ಮೀಸಲು ನೀಡುವ ವಿಧೇಯಕ, ಜನಲೋಕಪಾಲ ವಿಧೇಯಕದ ಚರ್ಚೆ ಮತ್ತು ಅದಕ್ಕೆ ಸಂಬಂಧಿಸಿದ ಮಾತುಕತೆಯಲ್ಲಿ ಭಾಗವಹಿಸಿದ್ದರು.

ನೇರ ಚುನಾವಣೆ ಇಲ್ಲ – 2014ರ ವರೆಗೆ: ಜೇಟ್ಲಿ ನೇರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿಲ್ಲ. 2014ರ ಚುನಾವಣೆಯಲ್ಲಿ ಅಮೃತಸರ ದಿಂದ ಕಾಂಗ್ರೆಸ್‌ನ ಅಮರೀಂದರ್‌ ಸಿಂಗ್‌ವಿರುದ್ಧ ಸೋತಿದ್ದರು. 2018ರ ಮಾರ್ಚ್‌ನಿಂದ ಉತ್ತರ ಪ್ರದೇಶದಿಂದ ರಾಜ್ಯಸಭೆ ಸದಸ್ಯರಾಗಿದ್ದಾರೆ. 2009ರಲ್ಲಿ ರಾಜ್ಯಸಭೆ ಪ್ರತಿಪಕ್ಷ ನಾಯಕರಾದ ಬಳಿಕ ನ್ಯಾಯವಾದಿಯಾಗಿ ಪ್ರಾಕ್ಟೀಸ್‌ ಮಾಡುವುದನ್ನು ನಿಲ್ಲಿಸಿದರು.

ಚತುರ, ಚಾಣಾಕ್ಷ: ಬಿಜೆಪಿಯಲ್ಲಿ ಏನಾದರೂ ತೊಂದರೆ ಉಂಟಾಗುತ್ತಿದ್ದರೆ ಅದನ್ನು ಪರಿಹರಿಸುವ ಚಾಣಾಕ್ಷತೆ ಜೇಟ್ಲಿಯವರಲ್ಲಿ ಇತ್ತು. ಪಕ್ಷದ ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸುವುದು, ಅಭ್ಯರ್ಥಿಗಳ ಆಯ್ಕೆ, ಮೋದಿ-ಶಾ ಜೋಡಿ ಪ್ರವರ್ಧ ಮಾನಕ್ಕೆ ಬರುವುದಕ್ಕೆ ಮುಂಚಿನ ವರ್ಷಗಳಲ್ಲಿ ಅವರ ಮಾತೇ ಅಂತಿಮವಾಗಿತ್ತು. ಕ್ಲಿಷ್ಟಕರವಾದ ಪರಿಸ್ಥಿತಿ ನಿಭಾಯಿಸು ವುದರಲ್ಲಿ ಅವರು ನಿಷ್ಣಾತರಾಗಿದ್ದ ಕಾರಣ ಅವರಿಗೆ ಟ್ರಬಲ್‌ ಶೂಟರ್‌ ಎಂಬ ಹೆಸರು ಅನೂಚಾನವಾಗಿ ಬಂದಿತ್ತು.

ರಾಜಕಾರಣಿಯ ಕುಟುಂಬ ಅಲ್ಲ: ಅರುಣ್‌ ಜೇಟ್ಲಿಯವರ ಹಿನ್ನೆಲೆ ರಾಜಕೀಯ ಕುಟುಂಬಕ್ಕೆ ಸೇರಿದ್ದಲ್ಲ. ಅವರ ತಂದೆ ಮಹಾರಾಜ್‌ ಕಿಶನ್‌ ಜೇಟ್ಲಿ ಜನಪ್ರಿಯ ನ್ಯಾಯವಾದಿ. ತಾಯಿ ರತ್ನಪ್ರಭಾ ಗೃಹಿಣಿ ಮತ್ತು ಸಮಾಜ ಸೇವೆಯಲ್ಲಿ ನಿರತರಾಗಿದ್ದವರು. ಜೇಟ್ಲಿಯವರಿಗೆ ಇಬ್ಬರು ಅಕ್ಕಂದಿರು, ಅವರ ಹೆತ್ತವರು ಲಾಹೋರ್‌ನಿಂದ ನವದೆಹಲಿಗೆ ವಲಸೆ ಬಂದಿದ್ದವರು. ಜೇಟ್ಲಿಯವರು ಜಮ್ಮು ಮತ್ತು ಕಾಶ್ಮೀರ ಸರ್ಕಾರದಲ್ಲಿ ವಿತ್ತ ಸಚಿವರಾಗಿದ್ದ ಗಿರಿಧಾರಿ ಲಾಲ್‌ ದೋಗ್ರಾರ ಪುತ್ರಿ ಸಂಗೀತಾರನ್ನು 1982ರಲ್ಲಿ ವಿವಾಹವಾಗಿದ್ದರು. ಅವರಿಗೆ ರೋಶನ್‌ ಮತ್ತು ಸೋನಾಲಿ ಎಂಬ ಇಬ್ಬರು ಮಕ್ಕಳು. ಅವರೂ ವಕೀಲರಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ: ಟ್ವಿಟರ್‌, ಫೇಸ್‌ಬುಕ್‌ಗಳಲ್ಲಿ ಅವರು ಸಕ್ರಿಯವಾಗಿದ್ದರು. ಮೈಕ್ರೋಬ್ಲಾಗಿಂಗ್‌ ಜಾಲ ಟ್ವಿಟರ್‌ಗೆ 2013 ನವೆಂಬರ್‌ನಲ್ಲಿ ಸೇರ್ಪಡೆಗೊಂಡ ಅವರು ಸರ್ಕಾರದ ನಿರ್ಧಾರ ಮತ್ತು ಇತರ ವಿಚಾರಗಳ ಬಗ್ಗೆ ಟ್ವೀಟ್‌ ಮಾಡುತ್ತಿದ್ದರು. @arunjaitley ಎಂಬ ಹೆಸರಿನಲ್ಲಿ ಅವರು ಟ್ವೀಟ್‌ ಮಾಡುತ್ತಿದ್ದರು.

“ಬಾಂಡ್‌’ ಪದ್ಧತಿ ಹರಿಕಾರ: ಪಕ್ಷಗಳಿಗೆ ಬರುವ ದೇಣಿಗೆಗಳನ್ನು ಪಾರದರ್ಶಕವಾಗಿಸುವ ನಿಟ್ಟಿನಲ್ಲಿ, ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ, “ಚುನಾವಣಾ ಬಾಂಡ್‌’ಗಳನ್ನು ಜಾರಿಗೊಳಿಸಿದ ಹೆಗ್ಗಳಿಕೆ ಜೇಟ್ಲಿಯವರದ್ದು. ದಾನಿಗಳು ಬ್ಯಾಂಕುಗಳಿಂದ ನಿರ್ದಿಷ್ಟ ಬಾಂಡ್‌ಗಳನ್ನು ಖರೀದಿಸುವ ಮೂಲಕ ಪಕ್ಷಗಳಿಗೆ ದೇಣಿಗೆ ನೀಡುವ ಪದ್ಧತಿಯಿದು.

Advertisement

Udayavani is now on Telegram. Click here to join our channel and stay updated with the latest news.

Next