Advertisement

21-14 ಅಡಿ ಉದ್ದಗಲದ ತ್ರಿವರ್ಣ ಧ್ವಜ ಪ್ರದರ್ಶನ

11:59 AM Aug 13, 2017 | |

ಹುಬ್ಬಳ್ಳಿ: ನಗರದ ಕೇಶ್ವಾಪುರ ಮಯೂರಿ ಎಸ್ಟೇಟ್‌ ನ ಚಿನ್ಮಯ ಶಾಲೆಯ ವಿದ್ಯಾರ್ಥಿಗಳು 21 ಅಡಿ ಉದ್ದ ಮತ್ತು 14 ಅಡಿ ಅಗಲದ ರಾಷ್ಟ್ರಧ್ವಜದೊಂದಿಗೆ ನಗರದ ಪ್ರಮುಖ ಮಾರ್ಗಗಳಲ್ಲಿ ಪಥಸಂಚಲನ ಮಾಡುವ ಮೂಲಕ ಜನರಲ್ಲಿ ತ್ರಿವರ್ಣ ಧ್ವಜದ ಮಹತ್ವ ಹಾಗೂ ರಾಷ್ಟ್ರಾಭಿಮಾನದ ಸಂದೇಶ ಸಾರಿದರು. 

Advertisement

ಇಲ್ಲಿನ ಕೇಶ್ವಾಪುರದ ಮಯೂರಿ ಎಸ್ಟೇಟ್‌ನ ಚಿನ್ಮಯ ಕಾಲೇಜಿನ ಆವರಣದಲ್ಲಿ ಸ್ವಾತಂತ್ರ್ಯೋತ್ಸವ ನಿಮಿತ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಹಮ್‌ ಭಾರತಿ ಫೌಂಡೇಶನ್‌ ಹಾಗೂ ಚಿನ್ಮಯ ಪಿಯು ಮತ್ತು ಪದವಿ ಮಹಾವಿದ್ಯಾಲಯ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ತ್ರಿವರ್ಣ ಧ್ವಜದ ಪಥಸಂಚಲನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್‌.ಕೆ. ರಂಗಣ್ಣವರ ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸ್ವಾತಂತ್ರಕ್ಕಾಗಿ ಮಹಾತ್ಮಾ ಗಾಂಧೀಜಿ, ಸುಭಾಷಚಂದ್ರ ಬೋಸ್‌, ರಾಜಗುರು, ಭಗತಸಿಂಗ್‌ ಸೇರಿದಂತೆ ಅನೇಕ ಮಹನೀಯರು ನಿರಂತರವಾಗಿ ಹೋರಾಡಿದರು. ಅದರ ಫಲವಾಗಿ ದೇಶವು ಸ್ವಾತಂತ್ರಗೊಂಡಿತು.

ಅವರು ಕಷ್ಟಪಟ್ಟು ನಿರ್ಮಿಸಿದ ಭಾರತವೆಂಬ ಭವ್ಯ ಅರಮನೆಯಲ್ಲಿ ನಾವು ಬದುಕುತ್ತಿದ್ದೇವೆ ಎಂಬುದನ್ನು ಯಾರೂ ಮರೆಯಬಾರದು. ಯುವಶಕ್ತಿಯನ್ನು ಸಮರ್ಪಕ ವಾಗಿ ಬಳಸಿಕೊಳ್ಳುವ ಬದಲು ಅವರನ್ನು ಬೀದಿಗೆ ತರುತ್ತಿದ್ದೇವೆ. ಶಾಂತಿ ಕದಡುತ್ತಿದ್ದೇವೆ. ಆಡಳಿತ ವ್ಯವಸ್ಥೆ ಹಾಳು ಮಾಡುತ್ತಿದ್ದೇವೆ. ಯುವ ಜನಾಂಗವೇ ದೇಶದ ಭವಿಷ್ಯವಾಗಿದ್ದು, ಅವರಲ್ಲಿನ ಸುಪ್ತ ಪ್ರತಿಭೆಯನ್ನು ನಾವೆಲ್ಲ ಹೊಡೆದೆಬ್ಬಿಸಬೇಕಾಗಿದೆ ಎಂದರು.

ಭಾರತವು ಯುವ ಸಂಘಟನೆ ಕಟ್ಟಿ ತನ್ನ ಶಕ್ತಿಸಾಮರ್ಥ್ಯ ಬೆಳೆಸಬೇಕಾಗಿದೆ. ದೇಶದ ತ್ರಿವರ್ಣ ಧ್ವಜವು ನಮ್ಮ ಕೈಯಲ್ಲಿ ಮೆರೆಯದೆ ಹೃದಯದಲ್ಲಿ ಮೆರೆಯುವಂತಾಗಬೇಕು ಎಂದರು. ಹಮ್‌ ಭಾರತಿ ಫೌಂಡೇಶನ್‌ ಅಧ್ಯಕ್ಷ ಅನ್ವರ್‌ ಮುಲ್ಲಾ, ಕಾಲೇಜಿನ ಪ್ರಾಂಶುಪಾಲ ರಜನಿ ತುಂಗಲ ಇದ್ದರು. 

Advertisement

ಪಥ ಸಂಚಲನ: ಗೋಪನಕೊಪ್ಪದ ಶ್ರೀ ಮಲ್ಲಿಕಾರ್ಜುನ ಅಲೆಮಾರಿ ಕಲಾತಂಡದ ತೊದಲು ಗೊಂಬೆಗಳು, ಜಗ್ಗಲಿಗೆ ಮೇಳ, ಸಂಬಾಳ ವಾದನ, ಬ್ಯಾಂಡ್‌ಬಾಜಾಗಳು ಪಥ ಸಂಚಲನದಲ್ಲಿ ಗಮನ ಸೆಳೆದವು. ಬೃಹತ್‌ ರಾಷ್ಟ್ರಧ್ವಜದೊಂದಿಗೆ ಕಾಲೇಜಿನಿಂದ ಆರಂಭವಾದ ಪಥಸಂಚಲನ ಮಯೂರಿ ಎಸ್ಟೇಟ್‌, ಭವಾನಿ ನಗರ, ರಮೇಶ ಭವನ, ಕೇಶ್ವಾಪುರ, ಸರ್ವೋದಯ ವೃತ್ತ, ದೇಸಾಯಿ ವೃತ್ತ, ಕೋರ್ಟ್‌ ವೃತ್ತ ಮಾರ್ಗವಾಗಿ ಚೆನ್ನಮ್ಮ ವೃತ್ತ ತಲುಪಿ ಧ್ವಜ ಪ್ರದರ್ಶನದೊಂದಿಗೆ ಮುಕ್ತಾಯವಾಯಿತು. ಚಿನ್ಮಯ ಶಾಲಾ- ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕ ವೃಂದ ಮೊದಲಾದವರು ಪಾಲ್ಗೊಂಡಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next