Advertisement

ಮಳೆಯಿಂದ ಇಳೆಗೆ ಒರಗಿದವು ಮರಗಳು

11:30 AM Aug 16, 2017 | |

ಬೆಂಗಳೂರು: ವರುಣನ ಆರ್ಭಟಕ್ಕೆ ನಗರದಲ್ಲಿ 18 ಮರಗಳು ಧರೆಗುರುಳಿವೆ. ಹಲಸೂರು ಭಾಗದಲ್ಲಿ 6 ಮರಗಳು ನೆಲಕಚ್ಚಿದ್ದರೆ, ಮಂಜುನಾಥ್‌ ನಗರದ ಮಾಧವನ್‌ ಪಾರ್ಕ್‌, ಅಪೋಲೋ ಆಸ್ಪತ್ರೆ ಮುಂಭಾಗ, ಕೋರಮಂಗಲ, ಶಿವಾಜಿನಗರ, ಶಾಂತಿ ನಗರ, ಹೆಚ್‌.ವಿ ಆರ್‌ ಲೇಔಟ್‌, ಜಯನಗರದ ಸೌತ್‌ ಎಂಡ್‌ ಸರ್ಕಲ್‌, ಜೆ.ಸಿ ರಸ್ತೆ, ಹೊಸೂರು ಶಾಲೆಯ ಮುಂಭಾಗ, ಇಸ್ರೋಲೇಔಟ್‌  ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ 18ಕ್ಕೂ ಹೆಚ್ಚು ಮರಗಳು ಉರುಳಿವೆ. ಕೆಲ ಭಾಗಗಳಲ್ಲಿ ಮರಗಳು ಕೊಂಬೆಗಳು ಮುರಿದಿವೆ. ಮರಗಳ ಕೆಳಗಡೆ ನಿಲ್ಲಿಸಿದ್ದ ಬೈಕ್‌ ಹಾಗೂ ಕೆಲವೆಡೆ ಕಾರುಗಳು ಜಖಂಗೊಂಡಿವೆ. 

Advertisement

ರಾಜಧಾನಿಯ ತಗ್ಗುಪ್ರದೇಶಗಳು ಅಕ್ಷರಶ: ನಡುಗಡ್ಡೆಗಳಾಗಿ ಮಾರ್ಪಟ್ಟಿದ್ದವು. ಕೋರಮಂಗಲ,ಆಡುಗೋಡಿ, ಹೆಚ್‌ಎಸ್‌ಆರ್‌ ಲೇಔಟ್‌, ಶಾಂತಿನಗರ, ಆನೆಪಾಳ್ಯ, ಕೆ.ಆರ್‌ ಪುರಂ, ದೇವಸಂದ್ರ, ದೊಮ್ಮಲೂರು,ಬೆಳ್ಳಂದೂರು, ಯಮಲೂರು ಮುಂತಾದ  ಪ್ರದೇಶಗಳು ಸೇರಿದಂತೆ ನಗರದ ಒಟ್ಟು 42 ಪ್ರದೇಶಗಳು ಸೋಮವಾರದ ಮಳೆಗೆ ಜಲಾವೃತಗೊಂಡಿದ್ದವು. ತಗ್ಗು ಪ್ರದೇಶಗಳಲ್ಲಿ ಭಾರೀ ಪ್ರಮಾಣದ ನೀರಿನ ಹರಿವು ಮನೆಗಳಿಗೆ ಹಾಗೂ ಅಪಾರ್ಟ್‌ಮೆಂಟ್‌ಗಳಿಗೆ ನುಗ್ಗಿದ್ದರಿಂದ ಜನರು ತೀವ್ರ ಸಂಕಷ್ಟ ಅನುಭವಿಸುವಂತಾಯಿತು.ಮನೆಗೆ ನುಗ್ಗಿದ್ದ ನೀರು ಹೊರ ಹಾಕುವ ವೇಳೆ, ಜನರು ಬಿಬಿಎಂಪಿ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದರು. 

ಬಿಎಂಟಿಸಿ ಬಸ್‌ ಸಂಚಾರ ಬಂದ್‌!: ಕುಂಭಧೊಣ ಮಳೆಗೆ ಶಾಂತಿನಗರ ಬಿಎಂಟಿಸಿ ಬಸ್‌ನಿಲ್ದಾಣದ ಡಿಪೋ 2 ಹಾಗೂ 3ನೇ ಡಿಪೋಗಳು ಸಂಪೂರ್ಣ ಜಲಾವೃತಗೊಂಡಿದ್ದವು. ಎರಡೂ ಡಿಪೋಗಳಲ್ಲಿ  ಮೂರು ಅಡಿಗಿಂತ ಹೆಚ್ಚು ನೀರು ಶೇಖರಣೆಯಾಗಿದ್ದರಿಂದ ಸುಮಾರು 156 ಬಸ್‌ಗಳನ್ನು ತೆಗೆಯಲು ಸಾಧ್ಯವೇ ಆಗಿಲ್ಲ. ನೀರು ಹೊರ ಹಾಕುವ ಕಾರ್ಯಾಚರಣೆ 6 ಗಂಟೆ ಸುಮಾರಿಗೆ ಪೂರ್ಣಗೊಂಡಿತು. ಇನ್ನು ಶಾಂತಿನಗರದ ಡಿಪೋದಲ್ಲಿ ಬಿಎಂಟಿಸಿ ಬಸ್‌ ಸಂಚಾರವಿಲ್ಲದ್ದರಿಂದ,  ಬೇರೆ ಬೇರೆ  ಸ್ಥಳಗಳಿಗೆ ತೆರಳಬೇಕಿದ್ದ  ಸಾರ್ವಜನಿಕರು ತಮ್ಮ ಪ್ರಯಾಣಕ್ಕೆ, ಆಟೋ ಹಾಗೂ ಟ್ಯಾಕ್ಸಿ ಅವಲಂಬಿಸುವಂತಾಯಿತು. 

ಅಗ್ನಿ ಶಾಮಕ ದಳ ರಾಜ್ಯ ವಿಪತ್ತು ನಿರ್ವಹಣಾ ತಂಡ  ಹೈ ಅಲರ್ಟ್‌!: ಭಾರೀ ಮಳೆಹಿನ್ನೆಲೆಯಲ್ಲಿ ಸೋಮವಾರ ರಾತ್ರಿಯಿಂದಲೇ ಕಾರ್ಯಾಚರಣೆ  ಶುರು ಮಾಡಿರುವ ರಾಜ್ಯ ಅಗ್ನಿ ಶಾಮಕ ಮತ್ತು  ತುರ್ತು ಸೇವೆಗಳ ದಳ ಹಾಗೂ ವಿಪತ್ತು ನಿರ್ವಹಣಾ ಪಡೆ ಜಂಟಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ. ಕೋರಮಮಂಗಲದ ಅಪಾರ್ಟ್‌ಮೆಂಟ್‌ನ ಬೇಸ್‌ಮೆಂಟ್‌ನಲ್ಲಿ  ಭಾರೀ ಪ್ರಮಾಣದ ನೀರು  ಕೊಂಡಿದ್ದರಿಂದ ಬಂದ ಕರೆಯಾಧರಿಸಿ ರಕ್ಷಣಾ ಬೋಟ್‌ಗಳೊಂದಿಗೆ ತೆರಳಿದ ಸಿಬ್ಬಂದಿ, ಅಪಾರ್ಟ್‌ಮೆಂಟ್‌ನಲ್ಲಿದ್ದ ಕೆಲವರನ್ನು ಹೊರಗಡೆ ಕರೆತಂದಿದ್ದಾರೆ.

ಇನ್ನು ಮುಂದಿನ ಎರಡು ಮೂರು ದಿನಗಳಲ್ಲಿಯೂ ನಗರದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳು ದಟ್ಟವಾಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಅಗ್ನಿ ಶಾಮಕ ದಳ ಹಾಗೂ ವಿಪತ್ತು ನಿರ್ವಹಣಾ ಪಡೆ ಹೈ ಅಲರ್ಟ್‌ ಆಗಿದೆ.  ಜಲಾವೃತಗೊಳ್ಳಲಿರುವ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು 250 ಸಿಬ್ಬಂದಿ, ಜೀವ ರಕ್ಷಕ ಬೋಟ್‌ಗಳೊಂದಿಗೆ ತಂಡಗಳಾಗಿ ಬೇರ್ಪಡಿಸಲಾಗಿದೆ.

Advertisement

ಇದಲ್ಲದೆ ಮುಂಜಾಗ್ರತೆಯಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಕ್ಕೂ ಮಾಹಿತಿಯನ್ನು ನೀಡಿದ್ದು, ಅಗತ್ಯವೆನಿಸಿದರೇ ಸಹಾಯಕ್ಕೆ ಆಗಮಿಸಲು ತಯಾರಾಗುವಂತೆ ಹೇಳಲಾಗಿದೆ ಎಂದು ಎಸ್‌ಡಿಆರ್‌ಎಫ್ನ ಅಧಿಕಾರಿಯೊಬ್ಬರು ತಿಳಿಸಿದರು. ಸೋಮವಾರ  ತಡರಾತ್ರಿಯಿಂದಲೇ ರಕ್ಷಣಾ ಕಾರ್ಯಾಚರಣೆ ಹಾಗೂ ಮನೆಗಳಿಗೆ ನುಗ್ಗರುವ ನೀರು ಹೊರ ಹಾಕುವ ಸಂಬಂಧ ನೂರಾರು ಕರೆಗಳು ಬಂದಿವೆ. ತುರ್ತು ಅಗತ್ಯವಿರುವ  ಕಡೆಗಳೆಲ್ಲಾ ಎಲ್ಲ ವಾಹನ ಹಾಗೂ ಸಿಬ್ಬಂದಿಯನ್ನು  ನಿಯೋಜಿಸಲಾಗಿದ್ದರೂ, ಕರೆಗಳ ಸಂಖ್ಯೆ ಹೆಚ್ಚಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಹೊರ ರಾಜ್ಯಗಳಿಂದ ಸಂಬಂಧಿಗಳಿಗೆ ಕರೆ: ಪ್ರವಾಹ ರೀತಿಯ ಮಳೆಯ ಸುದ್ದಿತಿಳಿದು ಬಿಹಾರ ಸೇರಿದಂತೆ ಇತರೆ ಕೆಲ ರಾಜ್ಯಗಳಿಂದ ಬೆಂಗಳೂರಿನಲ್ಲಿರುವ ತಮ್ಮ ಸಂಬಂಧಿಕರ ಬಗ್ಗೆ ಯೋಗಕ್ಷೇಮ ವಿಚಾರಿಸುವ ಸಂಬಂಧ ಕರೆಗಳು ಬರುತ್ತಿವೆ. ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ಕೆಲವರು ಕರೆ ಮಾಡಿ ಇಲ್ಲಿನ ಪರಿಸ್ಥಿತಿ  ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. 

ದಶಕದ ದಾಖಲೆ ಮಳೆ!: ಸೋಮವಾರ ರಾತ್ರಿ ತನ್ನ ಪ್ರತಾಪವನ್ನು ತೋರಿರುವ ಮಳೆರಾಯನಿಂದ  ರಾಜಧಾನಿಯಲ್ಲಿ ದಾಖಲೆಯ ಮಳೆಯಾಗಿದೆ. ನಗರಾದ್ಯಂತ  ಒಟ್ಟಾರೆಯಾಗಿ 13. ಸೆ.ಮೀಟರ್‌ ಮಳೆಯಾಗಿದ್ದಾರೆ ಹೆಚ್‌ಎಎಲ್‌ನಲ್ಲ 14.ಸೆ.ಮೀಟರ್‌ನಷ್ಟಾಗಿದೆ. 2009ರಲ್ಲಿ  ಅತ್ಯಧಿಕ 7. ಸೆ.ಮೀಟರ್‌ ಮಳೆಯಾಗಿದ್ದು, ಬಿಟ್ಟರೆ ಭಾರೀ ಪ್ರಮಾಣದಲ್ಲಿ ಮಳೆಯಾಗಿರಲಿಲ್ಲ. ಇದೀಗ ದಶಕದ ಬಳಿಕ ದಾಖಲೆಯ ಮಳೆಗೆ ಬೆಂಗಳೂರು ಸಾಕ್ಷಿಯಾಗಿದೆ.

ವಿಶೇಷವೆಂದರೆ 1890ರಲ್ಲಿ ಬೆಂಗಳೂರಿನಲ್ಲಿ ಮೊಟ್ಟಮೊದಲ ಬಾರಿಗೆ 16 ಸೆ.ಮೀಟರ್‌ ಮಳೆಯಾಗಿತ್ತು, ಇದಾದ ನೂರು ವರ್ಷ ಕಳೆದರೂ ಈ ಪ್ರಮಾಣದಲ್ಲಿ ಮಳೆಯಾಗಿಲ್ಲ. ಬೆಂಗಳೂರು ಹಾಗೂ  ದಕ್ಷಿಣ ಒಳನಾಡು ಪ್ರದೇಶದಲ್ಲಿ ಮುಂದಿನ ಎರಡು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸುಂದರ್‌ ಎಂ ಮೇತ್ರಿ ತಿಳಿಸಿದರು.

– 18 ಧರೆಗೆ ಉರುಳಿದ ಮರಗಳು 
– 42  ಜಲಾವೃತಗೊಂಡ ಪ್ರದೇಶಗಳು
– 156 ಶಾಂತಿನಗರ ಬಸ್‌ ಡಿಪೋದಲ್ಲಿ ನೀರಿಗೆ ಸಿಲುಕಿದ್ದ ಬಸ್‌ಗಳು
– 250 ನಗರದಲ್ಲಿ ಮಳೆ ವಿಪತ್ತು ನಿರ್ವಹಣೆಗೆ ನಿಯೋಜನೆಗೊಂಡಿರುವ ಅಗ್ನಿಶಾಮಕ ಮತ್ತು ವಿಪತ್ತು ನಿರ್ವಹಣಾ ತಂಡದ ಸಿಬ್ಬಂದಿ
– 13. ಸೆ.ಮೀ ಒಟ್ಟಾರೆ ನಗರದಲ್ಲಿ ಸೋಮವಾರ ಸುರಿದಿರುವ ಮಳೆ. ಇದು ದಶಕದಲ್ಲೇ ಭಾರಿ ಮಳೆ
– 1890ನೇ ಇಸವಿಯಲ್ಲಿ ಬಿದ್ದ 16ಸೆ.ಮೀ ಮಳೆ ಈ ವರೆಗಿನ ದಾಖಲೆಯಾಗಿದೆ. ಈ ದಾಖಲೆ ಈ ವರೆಗೆ ಅಳಿಸಿಲ್ಲ.

ಜೋರು ಮಳೆಗೆ ಉಕ್ಕಿದ ಕೆರೆಯಲ್ಲಿ ಭಾರಿ ನೊರೆ 
ಮಹದೇವಪುರ:
ತಡರಾತ್ರಿ ಸುರಿದ ಬಾರಿ ಮಳೆಯಿಂದ ಬೆಳ್ಳಂದೂರು ಹಾಗೂ ವರ್ತೂರು ಕೋಡಿಯಲ್ಲಿ ನೊರೆ ಪ್ರಮಾಣ ಹೆಚ್ಚಿದೆ. ತಗ್ಗು ಪ್ರದೇಶಗಳಿಗೆ ಮತ್ತು ದುಗ್ಗಲಮ್ಮ ದೇವಾಲಯಕ್ಕೆ ನೀರು ನುಗ್ಗಿ ಅವಾಂತರವಾಗಿದೆ. ಮಳೆಯಿಂದಾಗಿ ನೀರಿನ ಪ್ರಮಾಣ ಹೆಚ್ಚಾಗಿ ಬೆಳ್ಳಂದೂರು ಕೆರೆಯ ಯಮಲೂರು ಸಮೀಪ ಕೋಡಿಯಲ್ಲಿ ನೊರೆ ಹೆಚ್ಚಾಗುತ್ತಿದೆ. ಕೆರೆಯ ಕಟ್ಟೆಯಮೇಲಿರುವ ದುಗ್ಗಲಮ್ಮ ದೇವಾಲಯವು ಮಳೆಯಿಂದಾಗಿ ಸಂಪೂರ್ಣ ಜಲಾವೃತ್ತಗೊಂಡಿದೆ. ಯಮಲೂರು ಮುಖ್ಯರಸ್ತೆ ಹಾಗೂ ದೊಡ್ಡ ನಕ್ಕುಂದಿ ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. 

ನಗರದ ಬಹುತೇಕ ಕಾರ್ಖಾನೆಗಳು ಹಾಗೂ ಅಪಾರ್ಟ್‌ಮೆಂಟ್‌ಗಳ ರಾಸಾಯನಿಕ ಮಿಶ್ರಿತ ಕೊಳಚೆ ನೀರು ಬೆಳ್ಳಂದೂರು ಕೆರೆಗೆ ಬಂದು ಸೇರಿ ವಿಷ ಮಿಶ್ರಿತ ನೊರೆ ಕಾಣಿಸಿಕೊಂಡು ಬಾರಿ ಸುದ್ದಿಯಾದಾಗ ಹಸಿರು ನ್ಯಾಯ ಪೀಠ ಕೆರೆಯನ್ನು ಶುಚಿಗೊಳಿಸಲು ಅದೇಶ ನೀಡಿತ್ತು. ಆದರೆ ಬಿಬಿಎಂಪಿ ಹಾಗೂ ಬಿಡಿಎ ಅಧಿಕಾರಿಗಳು ಕೆರೆಯನ್ನು ಯಾವಮಟ್ಟಿಗೆ ಶುಚಿಗೊಳಿಸಿದ್ದಾರೆ ಎಂಬುದು ಸೋಮವಾರ ರಾತ್ರಿ ಸುರಿದ ಮಹಿಳೆಯಿಂದ ಬಹಿರಂಗವಾಯಿತು. ಸುದ್ದಿ ಚಿತ್ರ 15 ಎವ…ಹೆಚ್‌ಪುರ 1ರಲ್ಲಿ ಬೆಳ್ಳಂದೂರು ಕೆರೆ ಕೋಡಿಯ ಯಮಲೂರು ಸಮೀಪ ನೊರೆ ಹೆಚ್ಚಾಗಿರುವುದು

ಮನೆಗಳಿಗೇ ನುಗ್ಗಿದ ಶೌಚಾಲಯದ ಕೊಳಕು ನೀರು 
ಕೆಆರ್‌ಪುರ:
ಧಾರಾಕಾರ ಮಳೆಗೆ ಕೆ.ಆರ್‌.ಪುರದ ಕೆಲವೆಡೆ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ಥವ್ಯಸ್ಥಗೊಂಡಿತು. ಮನೆಗಳಿಗೆ ನುಗ್ಗಿದ ನೀರನ್ನುಜನ ರಾತ್ರಿಯಿಡಿ ಜಾಗರಣೆ ಇದ್ದು ಹೊರಹಾಕುವಂತಾಯಿತು. ಇಲ್ಲಿನ ದೇವಸಂದ್ರ ವಾರ್ಡ್‌ನ ನೇತ್ರಾವತಿ, ಬಸವನಪುರ ವಾರ್ಡ್‌ನ ಗಾಯಿತ್ರಿ ಬಡಾವಣೆಯ 200ಕ್ಕೂ ಹೆಚ್ಚು ಮನೆಗಳಿಗೆ ರಾತ್ರಿ ನೀರು ನುಗ್ಗಿತು. ಇಲ್ಲಿನ ರಾಜಕಾಲುವೆಗಳು, ಕೆರೆ ಕಟ್ಟೆಗಳು ಒತ್ತುವರಿಯಾಗಿರುವುದರಿಂದ ಪ್ರತಿಬಾರಿ ಭಾರಿ ಮಳೆ ಬಂದಾಗಲೂ ಇದೇ ಸನ್ನಿವೇಶ ಸೃಷ್ಟಿಯಾಗುತ್ತಿದೆ. 

ಕೊಳಚೆ ನೀರು ಹರಿಯುವ ಬೃಹತ್‌ ಚರಂಡಿಗಳಲ್ಲಿ ಹೂಳು, ಕಸ, ಪ್ಲಾಸ್ಟಿಕ್‌ ತ್ಯಾಜ್ಯ ತುಂಬಿಕೊಂಡು ನೀರು ಸರಗವಾಗಿ ಹರಿಯಲು ತೊಂದರೆಯಾಗುತ್ತಿದೆ. ಚರಂಡಿಗಳಲ್ಲಿ ಹರಿಯದ ನೀರು ಮನೆಗಳಿಗೆ ನುಗ್ಗಿದೆ. ದೇವರ ಮನೆ, ಅಡುಗೆ ಮನೆ, ರೂಂ, ಹಾಲ್‌ನಲ್ಲಿ ಶೌಚಾಲಯದ ನೀರೇ ತುಂಬಿಕೊಂಡಿದೆ. ಮನೆಗಳಲ್ಲಿ ಶೇಖರಿಸಿಟ್ಟಿದ್ದ ರೇಷನ್‌, ಮಕ್ಕಳ ಪಠ್ಯ ಪುಸ್ತಕಗಳು ಕೊಳಕು ನೀರಲ್ಲಿ ಹಾಳಾಗಿವೆ. 

ಕೆಆರ್‌ಪುರದಲ್ಲಿ ಉಂಟಾದ ಮಳೆ ಅವಾಂತರ ಸುದ್ದಿ ತಿಳಿದು ಬಡಾವಣೆಗಳಿಗೆ ಭೇಟಿ ನೀಡಿದ ಶಾಸಕ ಬಿ.ಎ.ಬಸವರಾಜ್‌ ಮತ್ತು ಪಾಲಿಕೆ ಸದಸ್ಯ ಶ್ರೀಕಾಂತ್‌ ನಿವಾಸಿಗಳ ಸಮಸ್ಯೆ ಆಲಿಸಿದರು. ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಶೀಘ್ರವೇ ಪರಿಹಾರ ಕಂಡುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಒತ್ತುವರಿಯಾಗಿರುವ ಕಾಲುವೆಗಳನ್ನು ತಹಶೀಲ್ದಾರ್‌ರೊಂದಿಗೆ ಚರ್ಚಿಸಿ ತೆರವು ಮಾಡಲಾಗುವುದು.

ಮಳೆಯಿಂದ ಹಾನಿಗೊಳಗಾಗುತ್ತಿರುವ ಪ್ರದೇಶಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಈಗಾಗಲೇ 45ಕೋಟಿ ರೂ. ವೆಚ್ಚದ ಟೆಂಡರ್‌ ಕರೆದಿದ್ದು, ಮೂರು ತಿಂಗಳೊಳಗೆ ಸಮಸ್ಯೆಗಳಿಗೆ ಇತಿಶ್ರೀ ಹಾಡುವುದಾಗಿ ಎಂದು ಭರವಸೆ ನೀಡಿದರು. ಮಳೆ ನೀರಿನಿಂದ ಹೆಚ್ಚು ಸಮಸ್ಯೆ ಅನುಭವಿಸಿದ ಕುಟುಂಬಗಳಿಗೆ ಶಾಸಕರು ವೈಯಕ್ತಿಕವಾಗಿ ಪರಿಹಾರ ನೀಡಿದರು. ರೈತ ಮತ್ತು ವ್ಯಾಪಾರಿ ಸಂಘದ ಸದಸ್ಯರು ನೇತ್ರಾವತಿ ಹಾಗೂ ಗಾಯಿತ್ರಿ ಬಡಾವಣೆಗಳಲ್ಲಿ ಮನೆ ಮತ್ತು ರಸ್ತೆಯ ಮೇಲಿದ್ದ ಚರಂಡಿ ನೀರನ್ನು ಸ್ವಯಂ ಪ್ರೇರಣೆಯಿಂದ ಸ್ವಚ್ಚಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next