Advertisement

ನಗರೀಕರಣದ ನಡುವೆ ಹಸುರಿಗೆ ಮರಗಳೇ ಸಾಕ್ಷಿ

01:05 AM Dec 06, 2019 | mahesh |

ಮಹಾನಗರ: ಮಂಗಳೂರು ನಗರದಲ್ಲಿಯೂ ಅಭಿವೃದ್ಧಿ ಹೆಸರಿನಲ್ಲಿ ಅದೆಷ್ಟೋ ಮರಗಳು ಧರಾಶಾಯಿಯಾಗುತ್ತೀರಬೇಕಾದರೆ, ಅದೊಂದು ಮರ ಮಾತ್ರ ಮರುಹುಟ್ಟು ಎನ್ನುವ ರೀತಿಯಲ್ಲಿ ಚಿಗುರೊಡೆದು ಕಾಮಗಾರಿ ನೆಪದಲ್ಲಿ ಮರಗಳನ್ನು ಕಡಿದುರುಳಿಸುವರ ಪಾಲಿಗೆ ಒಂದು ಉತ್ತಮ ನಿದರ್ಶನವಾಗಿ ಬೆಳೆಯುತ್ತಿದೆ.

Advertisement

ಅಷ್ಟೇ ಅಲ್ಲ, ರಸ್ತೆ ಅಗಲೀಕರಣ, ಮನೆ- ಕಟ್ಟಡಗಳ ನಿರ್ಮಾಣದ ಹೆಸರಿನಲ್ಲಿ ಏಕಾಏಕೀ ಮರಗಳನ್ನು ಕಡಿದುರುಳಿಸಿ ಪರಿ ಸರ ನಾಶಕ್ಕೆ ಕಾರಣವಾಗುವವರಿಗೂ ಈ ಮರದ ಬದುಕು ಪಾಠ ಹೇಳುವಂತೆ ಇದೆ. ಹಾಗಾದರೆ, ನಗರೀಕರಣದ ಹೆಸರಿನಲ್ಲಿ ಹಸುರೀಕರಣ ಮಾಡುವ ಪರಿಸರ ಪಾಠ ಹೇಳುವುದಕ್ಕೆ ಹೊರಟಿರುವ ಆ ಮರ ಯಾವುದಿರಬಹುದು ಎನ್ನುವ ಕುತೂಹಲ ಮೂಡಿರಬಹುದು.

ಹೌದು! ನಗರದ ಹೃದಯಭಾಗವಾದ ಬಂಟ್ಸ್‌ ಹಾಸ್ಟೆಲ್‌ ವೃತ್ತದ ಬಳಿ ಸುಮಾರು ಒಂದು ಶತಮಾನದಿಂದ ಬೆಳೆದು ನಿಂತಿದ್ದ ಬೃಹತ್‌ ಅಶ್ವತ್ಥ ಮರವು ಆ ಜಾಗದಿಂದ ಕಣ್ಮರೆ ಯಾಗಿತ್ತು. ಈಗ ಅದೇ ಮರವು ಬೇರೆಡೆ ಸ್ಥಳಾಂತರಗೊಂಡು ವರ್ಷ ಕಳೆದಿದ್ದು, ಈಗ ಅಲ್ಲಿ ಯಶಸ್ವಿಯಾಗಿ ಬೆಳೆಯುವ ಮೂಲಕ ಮತ್ತೆ ಜನಾಕರ್ಷಣೆ ಪಡೆಯುವಂತೆ ಆಗಿರುವುದು ಗಮನಾರ್ಹ.

ರಸ್ತೆ ವಿಸ್ತರಣೆ ಹಾಗೂ ಕರಂಗಲ್ಪಾಡಿ ವೃತ್ತ ಅಭಿವೃದ್ಧಿ ಹಿನ್ನೆಲೆಯಲ್ಲಿ ಕಡಿಯಲು ಉದ್ದೇಶಿಸಲಾಗಿದ್ದ ಬಂಟ್ಸ್‌ ಹಾಸ್ಟೆಲ್‌ ವೃತ್ತದ ಬಳಿ ಇದ್ದ ಸುಮಾರು 100 ವರ್ಷಗಳ ಹಳೆಯ ಬೃಹತ್‌ ಅಶ್ವತ್ಥ ಮರವನ್ನು ಮಹಾ ನಗರ ಪಾಲಿಕೆ ಸಹಕಾರದಿಂದ ಕಳೆದ ವರ್ಷ ಬುಡಸಮೇತ ಸ್ಥಳಾಂತರಿಸಲಾಗಿತ್ತು. ಸುಮಾರು 100 ಟನ್‌ ಭಾರ ಇದ್ದ ಮರವನ್ನು ಕ್ರೇನ್‌, ಜೇಸಿಬಿ ಸಹಾಯದ ಮೂಲಕ ಬುಡ ಸಮೇತ ಕಾರ್ಯಾಚರಣೆ ನಡೆಸಿ ಕದ್ರಿ ರಸ್ತೆಯ ಸಿ.ವಿ. ನಾಯಕ್‌ ಹಾಲ್‌ ಮುಂಭಾಗದ ಪಾಲಿಕೆಯ ಖಾಲಿ ಸ್ಥಳಕ್ಕೆ ಮರ ಸ್ಥಳಾಂತರಿಸಲಾಗಿತ್ತು.

ಸುಮಾರು 1.70 ಲಕ್ಷ ರೂ. ವೆಚ್ಚದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಸ್ಥಳಾಂತರಿಸಿದ ಕೆಲವೇ ತಿಂಗಳಲ್ಲಿ ಮರ ಚಿಗುರೊಡೆದಿದೆ. ಆದರೆ, ಮರ ಸ್ಥಳಾಂತರಿಸಿದ ಅನಂತರ ಮಹಾನಗರ ಪಾಲಿಕೆ ಕೈಕಟ್ಟಿ ಕೂತಿದ್ದು, ಮರಕ್ಕೆ ನೀರಿನ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸುತ್ತಿಲ್ಲ. ಸ್ಥಳೀಯರು ನೀರು ಹಾಯಿಸುತ್ತಿದ್ದಾರೆ.

Advertisement

ಇನ್ನು, ಎಂಎಸ್‌ಇಝಡ್‌ ವಲಯದಲ್ಲಿ ಸುಮಾರು 100 ಟನ್‌ ಗಾತ್ರದ ಆಲದ ಮರ ವನ್ನು ಅಲ್ಲೇ ಪಕ್ಕದ 200 ಮೀಟರ್‌ ಮುಂಭಾಗಕ್ಕೆ ಸ್ಥಳಾಂತರಿಸಲಾಗಿದೆ. ಸುಮಾರು 2.5 ಲಕ್ಷ ರೂ. ವೆಚ್ಚದಲ್ಲಿ ಮರ ಸ್ಥಳಾಂತರ ನಡೆದಿದ್ದು, ಸದ್ಯ ಮರ ಚಿಗುರೊಡೆದಿದೆ. ಪಿಲಿಕುಳ ದ್ವಿಪಥ ರಸ್ತೆ ವಿಸ್ತರಣೆ ವೇಳೆ ದೇವದಾರು, ಬಸವನ ಪಾದ ಸಹಿತ ಒಟ್ಟು 9 ಸಣ್ಣ ಗಾತ್ರದ ಮರಗಳನ್ನು ಸ್ಥಳಾಂತರಿಸಲಾಗಿತ್ತು. ಇದರಲ್ಲಿ 4 ಮರಗಳು ಮಾತ್ರ ಬದುಕುಳಿದಿವೆ. ವ್ಯವಸ್ಥಿ ತವಾಗಿ ನೀರು ಹಾಯಿಸದ ಕಾರಣ ಉಳಿದ ಮರಗಳು ಸತ್ತಿವೆ. ಇಷ್ಟೇ ಅಲ್ಲದೆ, ಸಂಚಾರಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ನಗರದ ಲೇಡಿಹಿಲ್‌ ರಸ್ತೆ ತಿರುವಿನಲ್ಲಿ ಪೆಲ್ವೋಫೋರಂ ಜಾತಿಗೆ ಸೇರಿದ ಮರವೊಂದನ್ನು ಅಲ್ಲೇ ಪಕ್ಕದಲ್ಲಿರುವ ಉರ್ವ ಚರ್ಚ್‌ ಬಳಿಗೆ ಸ್ಥಳಾಂತರ ಮಾಡಲಾಗಿದ್ದು, ಸದ್ಯ ಮರ ಬದುಕುಳಿದು ಹಸುರಿನಿಂದ ಕೂಡಿದೆ.

ಪಂಪ್‌ವೆಲ್‌ ಬಳಿ ಕಳೆದ ಒಂದೂವರೆ ವರ್ಷಗಳ ಹಿಂದೆ ಹುಣಸೆ ಮರವನ್ನು ಸ್ಥಳಾಂತರಿಸಲಾಗಿತ್ತು. ಕೆಲ ದಿನಗಳಲ್ಲೇ ಮರ ಚಿಗುರೊಡೆದಿತ್ತಾದರೂ ಆ ಮರ ಸದ್ಯ ಬೆಳವಣಿಗೆ ಹಂತದಲ್ಲಿಲ್ಲ.
ಯಾವ ರೀತಿ ನಡೆಯುತ್ತದೆ ಮರ ಸ್ಥಳಾಂತರ ಅಂದಹಾಗೆ, ಮರ ಸ್ಥಳಾಂತರ ಪ್ರಕ್ರಿಯೆಯು 24 ಗಂಟೆಯೊಳಗೆ ನಡೆದರೆ ಉತ್ತಮ. ಕಾಮಗಾರಿ ಉದ್ದೇಶದಿಂದ ಮರ ಸ್ಥಳಾಂತರಕ್ಕೆ ಇಚ್ಛೆ ಪಡುವ ಮಂದಿ ತಮ್ಮ ಪರಿಸರದಲ್ಲಿ ಮರ ಸ್ಥಳಾಂತರ ಮಾಡು ವಂತಹವರನ್ನು ಸಂಪರ್ಕಿಸಬಹುದು. ಅವರು ಮರವನ್ನು ವೀಕ್ಷಿಸಿ ತಗುಲುವ ಅಂದಾಜು ಹಣದ ಬಗ್ಗೆ ಲೆಕ್ಕಾಚಾರ ನೀಡುತ್ತಾರೆ. ಮರಗಳ ಗಾತ್ರದ ಆಧಾರದಲ್ಲಿ ಜೇಸಿಬಿ, ಹಿಟಾಚಿ, ಕ್ರೇನ್‌ ಮುಖೇನ ಮರ ಸ್ಥಳಾಂತರ ಮಾಡಲಾಗುತ್ತದೆ. ಮರ ಸ್ಥಳಾಂತರಕ್ಕೂ ಮುನ್ನ ಸ್ಥಳಾಂತರ ಮಾಡ ಬೇಕಾಗಿದ್ದ ಮರಗಳ ಸುತ್ತಲೂ ದೊಡ್ಡದಾದ ಗುಂಡಿ ತೆಗೆಯಲಾಗುತ್ತದೆ. ಮರದ ಕೊಂಬೆಗಳನ್ನು ಕಡಿದು ಹಿಟಾಚಿ ಮತ್ತು ಕ್ರೇನ್‌ ಸಹಾಯದಿಂದ ಮರ ಸ್ಥಳಾಂತರಿಸಲಾಗುತ್ತದೆ.

ಅಡಿಕೆ ಮರದ ಸ್ಥಳಾಂತರವೂ ಸಾಧ್ಯ
ಪರ್ಯಾಯ ಕೃಷಿ ಉದ್ದೇಶದಿಂದ ಅಡಿಕೆ ಮರಗಳನ್ನು ಕಡಿಯುವವರಿದ್ದಾರೆ. ಈಗ ಅಡಿಕೆ ಮರಗಳನ್ನೂ ಬೇರೆಡೆಗೆ ಸ್ಥಳಾಂತರ ಮಾಡಲು ಸಾಧ್ಯವಿದೆ. ಈ ಪ್ರಯತ್ನವು ಇತ್ತೀಚೆಗೆಯಷ್ಟೇ ಪುತ್ತೂರಿನ ಮುಂಡೂರಿನಲ್ಲಿ ನಡೆದಿತ್ತು. ಮನೆ ನಿರ್ಮಿಸುವ ಉದ್ದೇಶದಿಂದ ಅಡಿಕೆ ಮರ ಕಡಿಯುವ ಅವಶ್ಯ ಇದ್ದಾಗ ಕೆಲವೊಂದು ಮರ ಗಳನ್ನು ಹಿಟಾಚಿ ಮುಖೇನ ಬೇರೆಡೆಗೆ ಸ್ಥಳಾಂತರ ಮಾಡಲಾಗಿದ್ದು, ಈಗಲೂ ಫಸಲು ನೀಡುತ್ತಿದೆ.

ಪರಿಸರ ಉಳಿಸುವ ಜವಾಬ್ದಾರಿ
ಮುಂದಿನ ಪೀಳಿಗೆಗೆ ಪರಿಸರ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಗರದಲ್ಲಿ ಈಗಾಗಲೇ ಹದಿನೈದಕ್ಕೂ ಹೆಚ್ಚಿನ ಮರ ಸ್ಥಳಾಂತರ ನಡೆದಿದೆ. ಹೆಚ್ಚಿನ ಮರಗಳು ಚಿಗುರೊಡೆದಿವೆ. ಮರ ಸ್ಥಳಾಂತರದ ಬಳಿಕ ಅದನ್ನು ಸರಿಯಾದ ವಿಧಾನದಲ್ಲಿ ಪೋಷಿಸಬೇಕು. ಆಗ ಮರ ಬದುಕುಳಿಯುತ್ತದೆ.  - ಜೀತ್‌ ಮಿಲನ್‌ರೋಶ್‌, ಪರಿಸರ ಪ್ರೇಮಿ

ಸ್ಥಳೀಯ ಮರಗಳ ಸ್ಥಳಾಂತರಕ್ಕೆ ಅವಕಾಶ
ಅರಣ್ಯ ಇಲಾಖೆಯಿಂದ ಇತ್ತೀಚಿನ ದಿನಗಳಲ್ಲಿ ಮರ ಕಡಿಯಲು ಅನುಮತಿ ನೀಡುತ್ತಿಲ್ಲ. ಅನಿವಾರ್ಯ ಕಾರಣ ಇದ್ದರೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಹಲಸು, ಹೆಬ್ಬ ಲಸು ಸಹಿತ ಅತೀ ಹೆಚ್ಚು ವರ್ಷದ ಸ್ಥಳೀಯ ಮರಗಳ ಸ್ಥಳಾಂತ ರಕ್ಕೆ ಅವಕಾಶ ನೀಡಬಹುದು. ಅರಣ್ಯ ಇಲಾಖೆಯಿಂದ ಯಾವುದೇ ರೀತಿಯ ಅನುದಾನ ಸಿಗುವುದಿಲ್ಲ.
– ಶ್ರೀಧರ್‌, ವಲಯ ಅರಣ್ಯಾಧಿಕಾರಿ, ಮಂಗಳೂರು ವಲಯ

ಸ್ಥಳಾಂತರಕ್ಕೆ ಆದ್ಯತೆ
ಪಾಲಿಕೆ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಯುವ ವೇಳೆ ಅತ್ಯಂತ ಹೆಚ್ಚು ವರ್ಷದ ಮರ ಕಡಿಯುವ ಅನಿವಾರ್ಯತೆ ಬಂದರೆ ಖಂಡಿತವಾಗಿಯೂ ಮರ ಸ್ಥಳಾಂತರಕ್ಕೆ ಆದ್ಯತೆ ನೀಡುತ್ತೇವೆ.
 - ಶಾನಾಡಿ ಅಜಿತ್‌ ಕುಮಾರ್‌ ಹೆಗ್ಡೆ, ಪಾಲಿಕೆ ಆಯುಕ್ತ

  ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next