Advertisement

ತೀವ್ರ ನಿಗಾದಲ್ಲಿ 123 ಸೋಂಕಿತರಿಗೆ ಚಿಕಿತ್ಸೆ!

05:21 AM Jun 27, 2020 | Lakshmi GovindaRaj |

ಬೆಂಗಳೂರು: ನಗರದಲ್ಲಿ ಶುಕ್ರವಾರ 144 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಈ ಮೂಲಕ ಕೋವಿಡ್‌ 19 ಪ್ರಕರಣಗಳ ಸಂಖ್ಯೆ 1,935 ಏರಿಕೆಯಾಗಿದೆ. 123 ಸೋಂಕಿತರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದರಲ್ಲಿ  ಬಹುತೇಕರು 50 ವರ್ಷ ಮೇಲ್ಪಟ್ಟವರೇ ಇರುವುದು ಆತಂಕಕ್ಕೀಡು ಮಾಡಿದೆ.

Advertisement

ತಮಿಳುನಾಡಿನಿಂದ 51 ವರ್ಷದ ವ್ಯಕ್ತಿ ಹಾಗೂ ದುಬೈನಿಂದ ಬಂದಿರುವ ಮೂವರಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಂಪರ್ಕದಿಂದ 13, ತೀವ್ರ  ಉಸಿರಾಟದ ತೊಂದರೆಯಿಂದ 5, ವಿಷಮ ಶೀತ ಜ್ವರದಿಂದ 76 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಈ ಮಧ್ಯೆ ನಗರದ ಹೊರವಲಯದ ಬಾಷ್‌ ಕಂಪನಿಯಲ್ಲಿ ಕಾರ್ಯನಿರ್ವಹಿಸುವ 8 ಮಂದಿ ಕೋವಿಡ್‌ 19 ಪತ್ತೆಯಾಗಿದ್ದು, ಉಳಿದ  ನೌಕರರಲ್ಲಿ ಆತಂಕ ಮೂಡಿಸಿದೆ.

ಆರೋಪಿಗಳಿಗೂ ಸೋಂಕು: ಪೋಲಿಸ್‌ ಆಯ್ತು, ಈಗ ಆರೋಪಿಗಳ ಸರದಿ. ಇತ್ತೀಚೆಗೆ ದರೋಡೆಗೆ ಯತ್ನಿಸಿದ ಆರೋಪದಲ್ಲಿ ನಂದಿನಿ ಲೇಔಟ್‌ ಠಾಣೆ ವ್ಯಾಪ್ತಿಯಲ್ಲಿ ಬಂಧಿತರಾದ ನಾಲ್ವರಲ್ಲಿ ಇಬ್ಬರಿಗೆ  ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಪರ್ಕದಲ್ಲಿದ್ದ 10 ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ.

ಮಾಸ್ಕ್ ಧರಿಸದವರ ವಿರುದ್ಧ ಕಾರ್ಯಾಚರಣೆ: ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವ ಬಗ್ಗೆ ಶುಕ್ರವಾರ ಉತ್ತರ ವಿಭಾಗದ ಪೊಲೀಸರು ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಜತೆ  ಮಲ್ಲೇಶ್ವರದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದರು. ಕೋವಿಡ್‌ 19 ವ್ಯಾಪಕವಾಗಿ ಹರಡುತ್ತಿದ್ದು, ಆರೋಗ್ಯ ಇಲಾಖೆಯು ಮಾರ್ಗಸೂಚಿ ಉಲ್ಲಂ ಸಿ ವ್ಯಾಪಾರದಲ್ಲಿ ತೊಡಗಿರುವುದು ಪೊಲೀಸರ ಗಮನಕ್ಕೆ ಬಂದಿತ್ತು.

ಈ ಹಿನ್ನೆಲೆಯಲ್ಲಿ  ಶುಕ್ರವಾರ ಬೆಳಗ್ಗೆ ಉತ್ತರ ವಿಭಾಗದ ಡಿಸಿಪಿ ಎನ್‌. ಶಶಿಕುಮಾರ್‌, ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಜಂಟಿಯಾಗಿ, ಮಲ್ಲೇಶ್ವರದಲ್ಲಿನ ಐದಕ್ಕೂ ಅಧಿಕ ಅಂಗಡಿಗಳ ಮೇಲೆ ದಾಳಿ ನಡೆಸಿದರು. ಮುನ್ನೆಚ್ಚರಿಕಾ ಕ್ರಮಕೈಗೊಳ್ಳದೆ  ವ್ಯಾಪಾರ-ವಹಿವಾಟು ನಡೆಸುತ್ತಿದ್ದ ಅಂಗಡಿಗಳನ್ನು ಮುಚ್ಚಿಸಲಾಯಿತು. ನಿಯಮ ಉಲ್ಲಂಘನೆ ಮಾಡಿದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ಡಿಸಿಪಿ ತಿಳಿಸಿದರು.

Advertisement

ಠಾಣೆ ಮುಂದೆ ಸೋಂಕಿತ ಸಾವು: ಕೋವಿಡ್‌ 19 ಸೋಂಕಿತರನ್ನು ಆಸ್ಪತ್ರೆಯಲ್ಲಿ ದಾಖಲಿಸುವ ಸಂಬಂಧ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಶುಕ್ರವಾರ 52 ವರ್ಷದ ಸೋಂಕಿತ ವ್ಯಕ್ತಿ  ಕಲಾಸಿಪಾಳ್ಯ ಠಾಣೆ ಮುಂಭಾಗದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಕ್ವಾರಂಟೈನ್‌ ಕೇಂದ್ರದಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಲು ತೆರಳಿದ್ದರು. ಆದರೆ, ವ್ಯಕ್ತಿಯನ್ನು ದಾಖಲು ಮಾಡಿಕೊಂಡಿರಲಿಲ್ಲ. ಹೀಗಾಗಿ, ಆತ ಮತ್ತೆ  ಕ್ವಾರಂಟೈನ್‌ ಕೇಂದ್ರಕ್ಕೆ ಹೋಗುವಾಗ ಕಲಾಸಿಪಾಳ್ಯ ಠಾಣೆಯ ಮುಂಭಾಗ ಮೃತಪಟ್ಟಿದ್ದಾರೆ.

ಸೋಂಕಿತೆ ಆತ್ಮಹತ್ಯೆ: ಸೋಂಕಿನಿಂದ ಬಳಲುತ್ತಿದ್ದ ಮಹಿಳೆ ಖಿನ್ನತೆಯಿಂದ ಕೆ.ಸಿ ಜನರಲ್‌ ಆಸ್ಪತ್ರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜಗೋಪಾಲ ನಗರದ 60 ವರ್ಷದ ಮಹಿಳೆ ಮೃತರು. ಕುಣಿಗಲ್‌ ಮೂಲದ ಮೃತ ಮಹಿಳೆ  ಆಕೆಯ ಸೊಸೆ, ಮೊಮ್ಮಗನಿಗೆ ಸೋಂಕು ಧೃಡಪಟ್ಟ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಕೆ.ಸಿ ಜನರಲ್‌ ಆಸ್ಪತ್ರೆಗೆ ದಾಖಲಾಗಿದ್ದರು. ಎಲ್ಲರಿಗೂ ಕೋವಿಡ್‌ 19 ವಾರ್ಡ್‌ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಶುಕ್ರವಾರ ಮಧ್ಯಾಹ್ನ ವಾರ್ಡ್‌ ನಲ್ಲಿನ  ಶೌಚಾಲಯಕ್ಕೆ ತೆರಳಿದ್ದು, ಸೀರೆಯಿಂದಲೇ ನೇಣಿಗೆ ಶರಣಾಗಿದ್ದಾರೆ. ಬಳಿಕ ಆತ್ಮಹತ್ಯೆ ಬೆಳಕಿಗೆ ಬಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಆಸ್ಪತ್ರೆಗಳ ಶಾಖೆ ಮೀಸಲಿಡಲು ನಿರ್ದೇಶನ: ನಗರದಲ್ಲಿ ಸೋಂಕು ಏರಿಕೆಯಾಗುತ್ತಿರುವ ಹಿನ್ನೆಲೆ ಹೆಚ್ಚು ಶಾಖೆಗಳನ್ನು ಹೊಂದಿರುವ ಕಾರ್ಪೊರೇಟ್‌, ಚಾರಿಟೆಬಲ್‌ ಆಸ್ಪತ್ರೆಗಳು ತಮ್ಮ ಒಂದು ಶಾಖೆಯನ್ನು ಸಂಪೂರ್ಣ ಸೋಂಕಿತರ ಚಿಕಿತ್ಸೆಗೆ ಮೀಸಲಿಡುವಂತೆ ಆರೋಗ್ಯ ಇಲಾಖೆ ನಿರ್ದೇಶನ ನೀಡಿದೆ. ಈ ಸಂಬಂಧ ಅಪೊಲೋ, ಫೋರ್ಟೀಸ್‌, ಮಣಿಪಾಲ್‌, ನಾರಾಯಣ, ಕೊಲಂಬಿಯಾ ಏಷ್ಯಾ, ಸಕ್ರ, ವಿಕ್ರಂ, ಸ್ಪರ್ಶ್‌ ಸೇರಿದಂತೆ ಹೆಚ್ಚಿನ ಶಾಖೆಗಳನ್ನು ಹೊಂದಿರುವ  16ಕ್ಕೂ ಹೆಚ್ಚು ಪ್ರಮುಖ ಖಾಸಗಿ ಆಸ್ಪತ್ರೆಗಳು ಹಾಗೂ ಆರೋಗ್ಯ ಸಂಸ್ಥೆಗಳಿಗೆ ತಮ್ಮ ಸಂಸ್ಥೆಯ ಒಂದು ಆರೋಗ್ಯ ಶಾಖೆಯನ್ನು ಸಂಪೂರ್ಣ ಕೋವಿಡ್‌ ಚಿಕಿತ್ಸಾ ಕೇಂದ್ರವಾಗಿ ಪರಿವರ್ತಿಸುವಂತೆ ನಿರ್ದೇಶನ ನೀಡಿರುವ ಆರೋಗ್ಯ  ಇಲಾಖೆ ಆಯುಕ್ತ ಪಂಕಜ್‌ ಕುಮಾರ್‌ ಪಾಂಡೆ, ಸೂಚಿಸಿದ್ದಾರೆ.

ಬಿಎಂಟಿಸಿ: 6 ಮಂದಿಗೆ ಸೋಂಕು: ಬಿಎಂಟಿಸಿಯಲ್ಲಿ ಮತ್ತೆ 6 ಜನ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ ಐವರು ಚಾಲಕರು ಮತ್ತೂಬ್ಬ ಸಂಚಾರ  ನಿಯಂತ್ರಕ. ಎಲ್ಲರನ್ನು ನಿಗದಿತ ಆಸ್ಪತ್ರೆಗೆ ದಾಖಲಿಸ ಲಾಗಿದೆ. ಇವರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಪತ್ತೆ ಕಾರ್ಯವನ್ನು ಬಿಬಿಎಂಪಿ ನಡೆಸುತ್ತಿದೆ. ಕೆಲವರಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈಚೆಗೆ ಆಯ್ದ ಘಟಕಗಳಲ್ಲಿ 50 ವರ್ಷ ಮೇಲ್ಪಟ್ಟ ಸಿಬ್ಬಂದಿಗೆ ನಡೆಸಿದ ರ್‍ಯಾಂಡಮ್‌ ಪರೀಕ್ಷೆ ನಡೆಸಲಾಗಿತ್ತು. 1,776 ಮಂದಿ ಪರೀಕ್ಷೆಗೊಳಪಟ್ಟು, ಒಟ್ಟು ಸೋಂಕಿತರ ಸಂಖ್ಯೆ 22 ಆಗಿದ್ದು, ಇದರಲ್ಲಿ ಐವರು ಗುಣ ಮುಖರಾಗಿ ಮನೆಗೆ ತೆರಳಿದ್ದಾರೆ  ಎಂದು ಪ್ರಕಟಣೆ ತಿಳಿಸಿದೆ.

ಎಪಿಎಂಸಿ; ಆರೋಗ್ಯ ಶಿಬಿರ: ಯಶವಂತಪುರ ಎಪಿಎಂಸಿಯಲ್ಲಿ ಅಲ್ಲಿನ ಸಿಬ್ಬಂದಿಗಳಿಗೆ ಮತ್ತು ಮಳಿಗೆ ವರ್ತಕರಿಗೆ ಶುಕ್ರವಾರ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಸೋಂಕು ನಗರದೆಲ್ಲೆಡೆ ತೀವ್ರಗತಿಯಲ್ಲಿ  ಹರಡಯತ್ತಿರುವ ಹಿನ್ನೆಲೆ  ಪಿಎಂಸಿಯಲ್ಲಿನ ಸಿಬ್ಬಂದಿಗಳ, ಮಳಿಗೆ ವರ್ತಕರು ಹಾಗೂ ಹಮಾಲಿಗಳು ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿದ್ದರು. ಯಶವಂತಪುರ ಎಪಿಎಂಸಿ ಮಾರುಕಟ್ಟೆ ಕಾರ್ಯದರ್ಶಿ ಅನಿಲಾ ಕುಮಾರಿ ಮಾತನಾಡಿ,  ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿ 3 ಜನಕ್ಕೆ ಕೋವಿಡ್‌ 19 ಪಾಸಿಟಿವ್‌ ಪತ್ತೆಯಾದ ಹಿನ್ನೆಲೆ ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ರಾಜೀವ್‌ಗಾಂಧಿ ಆಸ್ಪತ್ರೆ; ನಾಲ್ವರಿಗೆ ಕೋವಿಡ್‌ 19: ರಾಜೀವ್‌ ಗಾಂಧಿ ಆಸ್ಪತ್ರೆಯ ಆಡಳಿತಾಧಿಕಾರಿ ಕಚೇರಿಯಲ್ಲಿ ಕೆಲಸ ನಿರ್ವಹಿಸುವ ನಾಲ್ವರು ಸಿಬ್ಬಂದಿಗೂ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿ ಕಚೇರಿಯನ್ನು  ಸೀಲ್‌ ಡೌನ್‌ ಮಾಡಲಾಗಿದ್ದು, ಕಚೇರಿಯ ಕಾರ್ಯಗಳಿಗೆ ತೊಂದರೆಯಾಗದಂತೆ ಬೇರೆಡೆ ವ್ಯವಸ್ಥೆ ಕಲ್ಪಿಸಲಾಗಿದೆ. ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕ  ಡಾ. ನಾಗರಾಜ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next