Advertisement
ಈ ಬಿಳಿ ಕತ್ತಿನ ಗರುಡ (ಬ್ರಾಹ್ಮಿಣಿ ಕೈಟ್) ಫೆ. 9ರಂದು ಉಡುಪಿಯ ಶ್ರೀಕೃಷ್ಣ ಮಠದ ಸಮೀಪ, ಪೇಜಾವರ ಮಠದ ಆವರಣದಲ್ಲಿರುವ ಮರದಿಂದ ಕೆಳಕ್ಕೆ ಬಿತ್ತು. ಇದನ್ನು ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಗಮನಕ್ಕೆ ತಂದಾಗ ಅದಕ್ಕೆ ಕಣ್ಣು ಕಾಣದಿರುವ ಸ್ಥಿತಿಯನ್ನು ತಿಳಿದು ಪ್ರಾಥಮಿಕ ಆರೈಕೆ ಮಾಡಿದ್ದರು. ಬಳಿಕ ಪ್ರಸಾದ್ ನೇತ್ರಾಲಯದ ಆಡಳಿತ ನಿರ್ದೇಶಕ ಡಾ| ಕೃಷ್ಣಪ್ರಸಾದ್ ಅವರನ್ನು ಸಂಪರ್ಕಿಸಿ, ಪಕ್ಷಿಗೆ ಚಿಕಿತ್ಸೆ ನೀಡುವಂತೆ ಕೋರಿದರು. ಅದರಂತೆ ಫೆ. 10ರ ಬೆಳಗ್ಗೆ ಗರುಡ ಪಕ್ಷಿಯನ್ನು ಪ್ರಸಾದ್ ನೇತ್ರಾಲಯಕ್ಕೆ ಕೊಂಡೊಯ್ಯಲಾಯಿತು.
ತಪಾಸಣೆ ನಡೆಸಿದ ಬಳಿಕ ಡಾ| ಕೃಷ್ಣಪ್ರಸಾದ್ ಅವರು ಗರುಡನ ಕಣ್ಣಿನ ಕಪ್ಪುಗುಡ್ಡೆ ಶುದ್ಧಗೊಳಿ ಸುವ ಹಾಗೂ ಕಣ್ಣಿನ ಒತ್ತಡ ಕಡಿಮೆ ಮಾಡುವ ಔಷಧಿಯನ್ನು ಹಾಕಿದ್ದಾರೆ. ವೈದ್ಯರ ಸಲಹೆಯಂತೆ ಪ್ರತಿದಿನ ಮಠದಲ್ಲಿಯೇ ಐ ಡ್ರಾಪ್ ಹಾಕಲಾಗುತ್ತದೆ.
Related Articles
ಮಾಹಿತಿ ಪಡೆದ ವನ್ಯಜೀವಿ ವಿಭಾಗದ ಅಧಿ ಕಾರಿಗಳು ಮಠಕ್ಕೆ ಭೇಟಿ ಕೊಟ್ಟು ನಿಯಮದಂತೆ ನೀವಿದನ್ನು ಇಟ್ಟುಕೊಳ್ಳುವಂತಿಲ್ಲ ಎಂದು ಸೂಚಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪೇಜಾವರ ಶ್ರೀಗಳು ಹಕ್ಕಿಯನ್ನು ನೀವೇ ಕೊಂಡೊಯ್ದು ಆರೈಕೆ ಮಾಡಿ ಎಂದರು. ಆದರೆ ವನ್ಯಜೀವಿ ವಿಭಾಗದ ಅಧಿಕಾರಿಗಳು ಅನಂತರ “ಈಗ ನೀವೇ ಆರೈಕೆ ಮಾಡಿ’ ಎಂದು ಹೇಳಿ ಹೋಗಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಹಕ್ಕಿಗಳು ಹೀಗೆ ಸಿಕ್ಕಿದಾಗ ಏನು ಮಾಡಬೇಕು. ವನ್ಯಜೀವಿ, ಪಕ್ಷಿಗಳಿಗೆ ಒದಗಿದ ತುರ್ತು ಸಂದರ್ಭಗಳಲ್ಲಿ ಹೇಗೆ ಸ್ಪಂದಿಸಬೇಕು ಎನ್ನುವ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸಬೇಕು ಎಂದು ಪೇಜಾವರ ಶ್ರೀಗಳು ವಿನಂತಿಸಿಕೊಂಡಿದ್ದಾರೆ.
Advertisement
ಕಾನೂನಿನ ತೊಡಕಾಗದೇ?
ಪ್ರಾಣಿ, ಪಕ್ಷಿ ಪ್ರಭೇದಗಳ ರಕ್ಷಣೆ ಕುರಿತಂತೆ ಪ್ರತ್ಯೇಕ ಕಾನೂನು ಇರುವುದರಿಂದ ಕಾನೂನಿನ ತೊಡಕಾಗದೇ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಚರ್ಚಿಸಿದ್ದೇನೆ. ವೈದ್ಯನಾಗಿ ಮೊದಲು ಜೀವ ಉಳಿಸುವುದು ನನ್ನ ಕರ್ತವ್ಯ. ನಾನು ಉಚಿತವಾಗಿ ಗರುಡನಿಗೆ ಚಿಕಿತ್ಸೆ ನೀಡಲಿದ್ದೇನೆ. ಮನುಷ್ಯನ ಕಣ್ಣಿಗಿಂತ ಸಣ್ಣ ಕಣ್ಣಾಗಿರುವ ಕಾರಣ ಕ್ಲಿಪ್ ಸಣ್ಣದಾಗಬೇಕು. ಗರುಡನ ಕಣ್ಣಿನ ಶಸ್ತ್ರಚಿಕಿತ್ಸೆಗೆ ಬೇಕಾಗಬಹುದಾದ ಸಣ್ಣ ಸಲಕರಣೆಗಳನ್ನು ತಯಾರಿಸಿ ಕೊಡಲು ಕಂಪೆನಿಗೆ ತಿಳಿಸಿದ್ದೇನೆ. ಪಕ್ಷಿಯ ಸಂರಕ್ಷಣೆ ದೃಷ್ಟಿಯಲ್ಲಿ ಚಿಕಿತ್ಸೆ, ಪಾಲನೆ ಮಾಡುತ್ತಿರುವ ಕಾರಣ ಕಾನೂನು ತೊಡಕಾಗದು ಎಂದು ಡಾ| ಕೃಷ್ಣಪ್ರಸಾದ್ ಹೇಳುತ್ತಾರೆ. ಗರುಡ: ಸಾಕುವುದೂ ಬಿಡುವುದೂ ಕಷ್ಟ
ಗರುಡ ಮಾಂಸಾಹಾರಿ. ತರಕಾರಿ, ಹಣ್ಣು ತಿನ್ನುವುದಿಲ್ಲ. ಹಾಗಾಗಿ ಅದನ್ನು ಸಾಕುವುದು ಕಷ್ಟ. ದೃಷ್ಟಿ ಕಳೆದುಕೊಂಡಿರುವ ಈ ಗರುಡನನ್ನು ಹಾಗೆಯೇ ಬಿಡುವುದು ಕೂಡ ಕಷ್ಟ. ಇನ್ನು ಅದು ವನ್ಯಜೀವಿಯಾಗಿ ಈ ಹಿಂದಿನಂತೆ ಬದುಕುವುದು ಕಷ್ಟಸಾಧ್ಯ. ಮನುಷ್ಯನಿಗೆ ನಿಕಟವಾಗಿ ಬದುಕಿದರೂ ಅಚ್ಚರಿ ಪಡಬೇಕಾಗಿಲ್ಲ. ವಲಸೆ ಹಕ್ಕಿಗಳಾದರೆ ಆಹಾರ ಸಿಗದಿದ್ದರೂ ದೇಹದಲ್ಲಿ ಶೇಖರವಾಗಿರುವ ಕೊಬ್ಬನ್ನು ಕರಗಿಸಿ ಬಳಸುತ್ತಾ ಹಲವು ದಿನಗಳ ವರೆಗೆ ಚೈತನ್ಯಭರಿತವಾಗಿ ಬದುಕುತ್ತವೆ. ಆದರೆ ಗಿಡುಗ- ಗರುಡಗಳು ನಿತ್ಯ ಆಹಾರ ಬಯಸುವುದರಿಂದ ಅದರ ದೇಹದ ಕೊಬ್ಬಿನಂಶದ ಮೇಲೆ ಬದುಕುವ ರೀತಿ ಅವಲಂಬನೆಯಾಗುತ್ತದೆ.
ಡಾ| ಎನ್.ಎ. ಮಧ್ಯಸ್ಥ, ಪಕ್ಷಿ ಶಾಸ್ತ್ರಜ್ಞ 15 ದಿನಗಳ ಚಿಕಿತ್ಸೆಯ ಬಳಿಕ ಶಸ್ತ್ರಚಿಕಿತ್ಸೆ
ಬೆಳ್ಳಗಾಗಿ ಕಣ್ಣುಗಳನ್ನು ಆವರಿಸಿರುವ ಕಪ್ಪುಗುಡ್ಡೆಯು ಔಷಧದಿಂದಲೇ ಸರಿಹೋದರೆ ಗರುಡನಿಗೆ ಶೇ. 60-70 ರಷ್ಟು ದೃಷ್ಟಿ ಸಾಮರ್ಥ್ಯ ಮರಳ ಬಹುದು. ಹೀಗಾದರೆ ಶಸ್ತ್ರಚಿಕಿತ್ಸೆಯ ಅಗತ್ಯವಿರುವುದಿಲ್ಲ. ಕರಿಗುಡ್ಡೆ ಕಪ್ಪಾಗಿ ಪರಿವರ್ತನೆಗೊಂಡೂ ಹೊರಗಡೆಯಿಂದ ಪೊರೆ ಆವರಿಸಿ ಕಣ್ಣು ಕಾಣದೆ ಇದ್ದರೆ 15 ದಿನಗಳ ಬಳಿಕ ಶಸ್ತ್ರಚಿಕಿತ್ಸೆ ಮಾಡಲಾಗು ವುದು. ಪಶುವೈದ್ಯರ ಜತೆಗೆ ಚರ್ಚಿಸ ಲಾಗಿದ್ದು, ಶಸ್ತ್ರಚಿಕಿತ್ಸೆಯ ಅಗತ್ಯ ಉಂಟಾದರೆ ಅವರ ಸಹಕಾರ ಪಡೆಯಲಾಗುವುದು. ಗರುಡ, ಮಠದಲ್ಲಿಯೇ ಆರೈಕೆ ಪಡೆಯು ತ್ತಾನೆ, ಅಲ್ಲಿಗೇ ತೆರಳಿ ಚಿಕಿತ್ಸೆ ನೀಡಲಿದ್ದೇನೆ ಎಂದು ಡಾ| ಕೃಷ್ಣಪ್ರಸಾದ್ ಹೇಳಿದ್ದಾರೆ.