Advertisement

ತೆರೆದ ವಾಹನಗಳಲ್ಲಿ ಅಪಾಯಕಾರಿ ಸರಕು ಸಾಗಾಟ: ಅಪಾಯಕ್ಕೆ ಆಹ್ವಾನ

11:38 AM Feb 24, 2023 | Team Udayavani |

ಮಹಾನಗರ: ತೆರೆದ ವಾಹನಗಳಲ್ಲಿ ಕಬ್ಬಿಣ ದಂತಹ ಅಪಾಯಕಾರಿ ವಸ್ತುಗಳನ್ನು ಕೊಂಡೊಯ್ದು ಅಪಾಯ ತಂದೊಡ್ಡುತ್ತಿರುವ ಘಟನೆಗಳು ನಗರ, ಗ್ರಾಮಾಂತರದಲ್ಲಿ ಆಗಾಗ್ಗೆ ಸಂಭವಿಸುತ್ತಿದ್ದು, ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.

Advertisement

ಹಗಲು ಮತ್ತು ರಾತ್ರಿ ವೇಳೆ ಟಿಪ್ಪರ್‌, ಪಿಕಪ್‌ ವಾಹನಗಳಲ್ಲಿ ಕಬ್ಬಿಣ, ಸಿಮೆಂಟ್‌, ಕಲ್ಲು, ಮರಳು, ಮಣ್ಣು, ಜಲ್ಲಿ, ವಿದ್ಯುತ್‌ ಕಂಬ, ಅಲ್ಯುಮಿನಿಯಂ ಪಟ್ಟಿಗಳು ಸೇರಿದಂತೆ ವಿವಿಧ ಅಪಾಯಕಾರಿ ವಸ್ತುಗಳನ್ನು ಯಾವುದೇ ರಕ್ಷಣೆ ಇಲ್ಲದೆ ಕೊಂಡೊಯ್ಯಲಾಗುತ್ತಿದೆ. ಕೆಲವೊಂದು ಜಂಕ್ಷನ್‌ಗಳಲ್ಲಿ ಪೊಲೀಸರು ಇದ್ದರೂ, ಇದನ್ನು ತಡೆಯಲು ಸಾಧ್ಯವಾಗುತ್ತಿಲ್ಲ.

ಪಿಕಪ್‌ ವಾಹನದಲ್ಲಿ ಸಾಗಿಸುತ್ತಿದ್ದ ಅಲ್ಯುಮಿನಿಯಂ ಪಟ್ಟಿಗಳು ಕಾರಿನ ಒಳಗೆ ಹೊಕ್ಕು ಕಾರು ಚಾಲಕ ಪವಾಡ ಸದೃಶವಾಗಿ ಪಾರಾದ ಘಟನೆ ನಗರದ ನಂತೂರು ಜಂಕ್ಷನ್‌ನಲ್ಲಿ ಬುಧವಾರ ಸಂಜೆ ಸಂಭವಿಸಿತ್ತು. ನಂತೂರು ಜಂಕ್ಷನ್‌ನಲ್ಲಿ ಕಾರು ಚಾಲಕ ಬ್ರೇಕ್‌ ಹಾಕಿದಾಗ ಪಿಕ್‌ಅಪ್‌ನಲ್ಲಿದ್ದ ಪಟ್ಟಿಗಳು ಕಾರಿನ ಹಿಂಭಾಗದಿಂದ ಒಳಗೆ ಹೊಕ್ಕಿವೆ. ಪಟ್ಟಿಗಳು ಹಿಂಭಾಗದ ಸೀಟುಗಳನ್ನು ದಾಟಿ ಬಂದು ಚಾಲಕನ ಸೀಟಿಗೆ ತಾಗಿ ನಿಂತು ಕಾರಿಗೆ ಹಾನಿಯಾಗಿತ್ತು.

ಅದೇ ರೀತಿ, ಕೆಲವು ವರ್ಷಗಳ ಹಿಂದೆ ಕುದ್ರೋಳಿ ಬಳಿ ತೆರೆದ ಟಿಪ್ಪರ್‌ನಲ್ಲಿ ವಿದ್ಯುತ್‌ ಕಂಬ ತೆಗೆದುಕೊಂಡು ಹೋಗುವ ಸಮಯ ಯಾವುದೇ ಮುಂಜಾಗ್ರತೆ ವಹಿಸದ ಕಾರಣ, ಹಿಂದಿನಿಂದ ಬರುತ್ತಿದ್ದ ಆಟೋ ರಿಕ್ಷಾಕ್ಕೆ ಹಾನಿ ಉಂಟಾದ ಘಟನೆ ನಡೆದಿತ್ತು. ಬಿಜೈ ಬಳಿ ಗೂಡ್ಸ್‌ ರಿಕ್ಷಾದಲ್ಲಿ ಕಬ್ಬಿಣದ ಸರಳು ಕೊಂಡೊಯ್ಯುವಾಗ ರಿಕ್ಷಾ ಚಾಲಕ ತತ್‌ ಕ್ಷಣ ಬ್ರೇಕ್‌ ಹಾಕಿದಾಗ ಸಂಚರಿಸುತ್ತಿದ್ದ ಕಾರಿನೊಳಗೆ ಕಬ್ಬಿಣದ ರಾಡ್‌ ಹೊಕ್ಕಿತ್ತು. ಅದೃಷ್ಟವಶಾತ್‌ ಅಪಾಯ ಸಂಭವಿಸಿರಲಿಲ್ಲ. ಉಪ್ಪಿನಂಗಡಿ, ಬಂಟ್ವಾಳದಲ್ಲಿಯೂ ಕೆಲವು ವರ್ಷಗಳ ಹಿಂದೆ ಇದೇ ರೀತಿಯ ಘಟನೆ ನಡೆದಿತ್ತು.

ಮುಖ್ಯವಾಗಿ ನಗರದ ಬಂದರು, ನಂತೂರು, ಪಂಪ್‌ ವೆಲ್‌. ಬಿಕರ್ನಕಟ್ಟೆ, ಕಂಕನಾಡಿ, ಗುರುಪುರ ಸೇರಿದಂತೆ ವಿವಿಧ ಕಡೆಗಳಲ್ಲಿ, ರಾಷ್ಟ್ರೀಯ ಹೆದ್ದಾರಿ ಸಂಪರ್ಕಿತ ರಸ್ತೆಗಳಲ್ಲಿ ಹೆಚ್ಚಾಗುತ್ತಿದೆ. ಸಾರಿಗೆ ಇಲಾಖೆಯ ನಿಯಮಗಳ ಪ್ರಕಾರ ತೆರೆದ ವಾಹನಗಳಲ್ಲಿ ಯಾವುದೇ ಅಪಾಯಕಾರಿ ವಸ್ತುಗಳನ್ನು ಸಾಗಾಟ ಮಾಡುವಂತಿಲ್ಲ. ಕಬ್ಬಿಣದ ಸರಳುಗಳನ್ನು ಅದರ ಗಾತ್ರಕ್ಕೆ ತಕ್ಕಂತೆ ಇರುವ ವಾಹನಗಳಲ್ಲೇ ಸಾಗಿಸಬೇಕು. ಆದರೆ, ಈ ನಿಯಮ ಪಾಲನೆಯಾಗುತ್ತಿಲ್ಲ.

Advertisement

ಈ ರೀತಿಯ ವಸ್ತುಗಳನ್ನು ಸಾಗಾಟ ಮಾಡುವಾಗ ಅಪಾಯದ ಮುನ್ಸೂಚನೆಗಾಗಿ ಯಾವುದೇ ಬಟ್ಟೆಯನ್ನೂ ಕಟ್ಟುತ್ತಿಲ್ಲ. ನಿಯಮ ಉಲ್ಲಂಘಿಸಿದರೆ ವಾಹನಗಳನ್ನು ಅಮಾನತ್ತಿನಲ್ಲಿಡಲು ಅವಕಾಶ ಇದೆ. ಈ ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಾಗಬೇಕು. ಟಾರ್ಪಲ್‌ ಮುಚ್ಚದೆ ಸಾಗಾಟ ನಗರದ ಕೆಲವೊಂದು ಕಡೆಗಳಲ್ಲಿ ಟಾರ್ಪಲ್‌ ಮುಚ್ಚದ ಲಾರಿಗಳಲ್ಲಿ ಮರಳು, ಜಲ್ಲಿ ಕಲ್ಲು, ಮಣ್ಣುಗಳನ್ನು ಸಾಗಾಟ ಮಾಡಲಾಗುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನಹರಿಸುತ್ತಿಲ್ಲ. ಈ ಹಿಂದೆ ನಡೆದ ಪೊಲೀಸ್‌ ಫೋನ್‌ -ಇನ್‌ ಕಾರ್ಯಕ್ರಮದಲ್ಲಿಯೂ ಸಾರ್ವಜನಿಕರು ಈ ಬಗ್ಗೆ ದೂರು ನೀಡಿದ್ದು, ಇನ್ನೂ ನಿಯಂತ್ರಣಕ್ಕೆ ಬರಲಿಲ್ಲ. ಇದೇ ರೀತಿ, ಲಾರಿಯಿಂದ ರಸ್ತೆಗೆ ಬಿದ್ದ ಮರಳುಗಳಿಂದಾಗಿ ವಾಹನ ಸವಾರರು ಅಪಘಾತಕ್ಕೊಳಗಾಗುವ ಸಾಧ್ಯತೆಯೂ ಹೆಚ್ಚಾಗಿದೆ.

ಕಾರ್ಯಾಚರಣೆ ಇನ್ನಷ್ಟು ಮುಂದುವರಿಯಲಿದೆ
ಯಾವುದೇ ರೀತಿಯ ಮುನ್ನೆಚ್ಚರಿಕೆ ವಹಿಸಿಕೊಳ್ಳದೆ ಅಪಾಯಕಾರಿ ವಸ್ತುಗಳನ್ನು ಸಾಗಾಟ ಮಾಡುವುದು ತಪ್ಪು. ಈ ರೀತಿ ನಿಯಮ ಉಲ್ಲಂಘನೆ ಮಾಡುವ ವಾಹನಗಳ ವೇಲೆ ಸಾರಿಗೆ ಇಲಾಖೆಯಿಂದಲೂ ದಂಡ ವಿಧಿಸಲಾಗುತ್ತಿದೆ. ಕಾರ್ಯಾಚರಣೆ ಮುಂದುವರಿಯಲಿದೆ.
– ಭೀಮನಗೌಡ ಪಾಟೀಲ್‌,
ಆರ್‌ಟಿಒ ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next