ಬೀದರ: ಹೈ.ಕ. ಭಾಗಕ್ಕೆ 371 ಕಲಂ ಜಾರಿಗೊಂಡರೂ ಸಾರಿಗೆ ನೌಕರರ ಹುದ್ದೆಗಳ ನೇಮಕಾತಿ ಮತ್ತು ಮುಂಬಡ್ತಿಯಲ್ಲಿ ತೊಂದರೆಯಾಗುತ್ತಿದೆ. ಈ ವಿಷಯದಲ್ಲಿ ವಿಧಾನಸಭೆ ಒಳಗೆ ಹಾಗೂ ಹೊರಗೆ ಹೋರಾಟ ನಡೆಸಿ ಸರ್ಕಾರದ ಗಮನ ಸೆಳೆಯುವುದಾಗಿ ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ ಹೇಳಿದರು.
ನಗರದ ಭವಾನಿ ಮಂದಿರ ಸಭಾಂಗಣದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ ಸಂಘ ಹಮ್ಮಿಕೊಂಡಿದ್ದ ಸಂಘದ 62ನೇ ಸಂಸ್ಥಾಪನಾ ದಿನಾಚರಣೆ, ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ಸಿಬ್ಬಂದಿಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಅಧಿಕಾರವಧಿಯಲ್ಲಿ ಈ ಭಾಗದ ಬಸ್ ನಿಲ್ದಾಣಗಳ ಅಭಿವೃದ್ಧಿಯಾಗಿದೆ. ಸಾರಿಗೆ ನೌಕರರು ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಸೇವೆ ಸಲ್ಲಿಸಿ ಸಂಸ್ಥೆಗೆ ಕೀರ್ತಿತರುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಸಾರಿಗೆ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.
ರಾಷ್ಟ್ರೀಯತೆ ಭಾವ ಮೂಡಿಸಲು ಸಂಘ ರಚನೆಯಾಗಿದ್ದು, ಒಂದು ಕೋಟಿಗೂ ಅಧಿಕ ನೋಂದಾಯಿತ ಸದಸ್ಯರಿದ್ದಾರೆ. ಕಾರ್ಮಿಕರೆಲ್ಲರೂ ರಾಷ್ಟ್ರೀಕರಣಗೊಳ್ಳಬೇಕು. ಕೈಗಾರಿಕೆಗಳೂ ರಾಷ್ಟ್ರೀಕರಣವಾದರೆ ಮಾಲೀಕ-ಕಾರ್ಮಿಕ ಎಂಬ ಭೇದಭಾವ ಇರುವುದಿಲ್ಲ. ಕಾರ್ಮಿಕ ಮತ್ತು ಮಾಲೀಕ ಒಂದೇ ಕುಟುಂಬದವರಂತೆ ಬದುಕುತ್ತಾರೆ. ಈ ನಿಟ್ಟಿನಲ್ಲಿ ಸಂಘ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಬೀದರ ಬಸ್ ಘಟಕದ ವ್ಯವಸ್ಥಾಪಕ ಭದ್ರಪ್ಪಾ ಹುಡುಗೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈಶ್ವರಸಿಂಗ ಠಾಕೂರ, ವಿಎಚ್ಪಿ ಅಧ್ಯಕ್ಷ ರಾಮಕೃಷ್ಣ ಸಾಳೆ, ಆರ್ಎಸ್ಎಸ್ ಪ್ರಮುಖ ನಾಗೇಶ ರೆಡ್ಡಿ, ಬಿಜೆಪಿ ಮುಖಂಡ ರವಿ ಸ್ವಾಮಿ, ಕಾರ್ಮಿಕ ಕಲ್ಯಾಣ ಇಲಾಖೆಯ ಪ್ರಸನ್ನಕುಮಾರ, ವಿಭಾಗೀಯ ಕಾರ್ಯಾಧೀಕ್ಷಕ ಅಶೋಕ ಪಾಟೀಲ, ಬಿಎಂಎಸ್ ಅಧ್ಯಕ್ಷ ಬಸವರಾಜ ಬುಳ್ಳಾ, ವಿವಿಧ ಸಂಘ ಸಂಸ್ಥೆಗಳ ಪ್ರಮುಖರಾದ ಕಿರಣ ಪಾಟೀಲ, ವೀರಶೆಟ್ಟಿ ಖ್ಯಾಮಾ, ವಿಜಯರೆಡ್ಡಿ, ಶಿವಪುತ್ರ ಬೆಳಮಗಿ, ದೇವರಾಜ ಚೌರ್, ಮಹೇಶ ಬಿರಾದಾರ, ಕವಿರಾಜ ಮೂಳೆ, ಧನಶೆಟ್ಟಿ ಮಮದಾಪೂರೆ, ಶಿವಪುತ್ರಪ್ಪ ಪಾಟೀಲ, ಸಂತೋಷ, ಬಾಬು, ಬಸವರಾಜ ಬಳತ
ವೇದಿಕೆಯಲ್ಲಿದ್ದರು.
ಇದೇ ವೇಳೆ ಹುತಾತ್ಮ ಸೈನಿಕರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಪರಮೇಶ್ವರ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಬಸವರಾಜ ಚಾಮರೆಡ್ಡಿ ನಿರೂಪಿಸಿದರು. ಗಣಪತಿ ಸಕ್ರೇಪನೋರ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ನಿವೃತ್ತ ನೌಕರರಿಗೆ ನೆನಪಿನ ಕಾಣಿಕೆ ನೀಡಿ ಸತ್ಕರಿಸಲಾಯಿತು.