Advertisement

ಸಾರಿಗೆ ಸಂಚಾರ ಸ್ತಬ್ದ: ಖಾಸಗಿ ಬಸ್‌ ಆರ್ಭಟ

06:02 PM Apr 08, 2021 | Team Udayavani |

ಕಲಬುರಗಿ: ನೌಕರರ ಮುಷ್ಕರದಿಂದ ಜನರ ಸಂಚಾರ ನಾಡಿಯಾದ ಸಾರಿಗೆ ಬಸ್‌ಗಳ ಓಟಾಟ ಸಂಪೂರ್ಣ ಸ್ತಬ್ದವಾಗಿದೆ. ಹೀಗಾಗಿ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಸ್ಥಾನವಾದ ಕಲಬುರಗಿ ಕೇಂದ್ರ ಬಸ್‌ ನಿಲ್ದಾಣದಲ್ಲಿ ಬುಧವಾರ ಸರ್ಕಾರಿ ಬಸ್‌ಗಳ ಬದಲಿಗೆ ಖಾಸಗಿ ಬಸ್‌ಗಳ ಸದ್ದು ಕೇಳಿಸಿತು.

Advertisement

ನೌಕರರಿಗೆ ಸಡ್ಡು ಹೊಡೆಯುವ ನಿಟ್ಟಿನಲ್ಲಿ ಮುಷ್ಕರದ ಮೊದಲ ದಿನವೇ ಸರ್ಕಾರ ನಗರದ ಕೇಂದ್ರ ಬಸ್‌ ನಿಲ್ದಾಣದೊಳಗೆ ಖಾಸಗಿ ಬಸ್‌ಗಳನ್ನು ಬಿಟ್ಟಿತ್ತು. ಮುಷ್ಕರದ ನಡುವೆಯೂ ಬೆಳಗ್ಗೆ ಜೇವರ್ಗಿ ಕಡೆಗೆ ಒಂದೇ ಒಂದು ಬಸ್‌ ಸಂಚರಿಸಿತ್ತು. ವಿಜಯಪುರಕ್ಕೆ ಹೊರಡಲು ಬಸ್‌ವೊಂದು ನಿಲ್ದಾಣಕ್ಕೆ ಬಂದರೂ ಪ್ರಯಾಣ ಬೆಳಸದೇ ಡಿಪೋಕ್ಕೆ ಮರಳಿತು. ಆದರೆ, ಸಾರಿಗೆ ಬಸ್‌ ನಿಲ್ದಾಣದಿಂದಲೇ ಖಾಸಗಿ ಬಸ್ ಮತ್ತು ವಾಹನಗಳು ವಿವಿಧ ಭಾಗಗಳಿಗೆ ಸಂಚರಿಸಿದವು. ಈ ಪರ್ಯಾಯ ವ್ಯವಸ್ಥೆಯಿಂದ ಪ್ರಯಾಣಿಕರು ಕೊಂಚ ನಿರಾಳರಾದರು.

ಬೆಳಗ್ಗೆಯಿಂದಲೇ “ಸಾರಿಗೆ’ ಸ್ತಬ್ದ: ಸಾರಿಗೆ ನೌಕರರಿಗೆ ಆರನೇ ವೇತನ ಆಯೋಗದ ಸಂಬಳ ಜಾರಿ ಮಾಡಬೇಕೆಂದು ಆಗ್ರಹಿಸಿ ಮುಷ್ಕರ ಕೈಗೊಳ್ಳಲಾಗಿದೆ. ಹೀಗಾಗಿ ನೌಕರರು ಡಿಪೋಗಳು ಮತ್ತು ಬಸ್‌ ನಿಲ್ದಾಣದ ಕಡೆಗೆ ಸುಳಿಯಲೇ ಇಲ್ಲ. ರಾತ್ರಿ ಹೊರ ಭಾಗದಿಂದ ಬಂದ ಬಸ್‌ಗಳಿಗೆ ಅಧಿಕಾರಿಗಳು ಡಿಪೋದಲ್ಲಿ ನಿಲ್ಲಿಸಲು ಬಿಡದೇ ಓಡಿಸಲು ಪ್ರಯತ್ನಿಸಿದರು. ಆದರೆ, ಅದು ಫಲಿಸಲಿಲ್ಲ. ನಿಮ್ಮ ಬಸ್‌ಗಳು ನಿರ್ದಿಷ್ಟ ದೂರ ಸಂಚರಿಸಿಲ್ಲ. ನಿಗದಿತ ಮಾರ್ಗಗಳಿಗೆ ಬಸ್‌ಗಳನ್ನು ತೆಗೆದುಕೊಂಡು ಹೋಗಿ ಎಂದು ಅಧಿಕಾರಿಗಳು ಒತ್ತಡ ಹೇರುವ ಯತ್ನಿಸಿದರು. ಆದರೆ, ಚಾಲಕರು ಮತ್ತು ನಿರ್ವಾಹಕರು ಅಧಿಕಾರಿಗಳ ಮಾತು ಕೇಳದೆ ಮುಷ್ಕರ ಬೆಂಬಲಿಸಿದರು. ಹೀಗಾಗಿ ಬೆಳಗ್ಗೆಯಿಂದಲೇ ಸಾರಿಗೆ ಬಸ್‌ಗಳ ಸ್ತಬ್ದವಾಗಿತ್ತು. ಇಡೀ ಕೇಂದ್ರ ಬಸ್‌ ನಿಲ್ದಾಣ ಬಿಕೋ ಎನ್ನಲು ಶುರುವಾಯಿತು.

ಖಾಸಗಿ ವಾಹನಗಳ ಮೊರೆ: ಮುಷ್ಕರಕ್ಕೆ ಇಳಿದಿರುವ ನೌಕರರಿಗೆ ಜಗ್ಗದೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಸಾರಿಗೆ ಅಧಿಕಾರಿಗಳು ಖಾಸಗಿ ವಾಹನಗಳ ಮೊರೆ ಹೋಗಬೇಕಾಯಿತು. ಖಾಸಗಿ ಬಸ್‌ಗಳು ಮತ್ತು ವಾಹನಗಳಿಗೆ ಸಾರಿಗೆ ಬಸ್‌ನಿಂದಲೇ ಓಡಿಸುವ ಅನುಮತಿ ಕಲ್ಪಿಸಲಾಯಿತು. ಆದ್ದರಿಂದ ಖಾಸಗಿ ವಾಹನಗಳು ಬಸ್‌ ನಿಲ್ದಾಣದೊಳಗೆ ನುಗ್ಗಿ ಬಂದವು. ನಗರದ ಕೇಂದ್ರ ಬಸ್‌ ನಿಲ್ದಾಣದಿಂದಲೇ ಅನೇಕ ಬಸ್‌ಗಳು
ಹಾಗೂ ವಾಹನಗಳು ಸಂಚರಿಸಿದವು. ಬೀದರ್‌, ವಿಜಯಪುರ, ಬಸವಕಲ್ಯಾಣ, ಜೇವರ್ಗಿ, ಚಿಂಚೋಳಿ, ಸುರಪುರ, ಶಹಪುರ, ಕಾಳಗಿ ಹಾಗೂ ಹಲವೆಡೆ ಖಾಸಗಿ ಬಸ್‌ಗಳು ಪ್ರಯಾಣಿಸಿದವು.

ಖಾಸಗಿ ಬಸ್‌ಗಳಿಂದ ಲೂಟಿ: ಸಾರಿಗೆ ನೌಕರರ ಮುಷ್ಕರವನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಬಸ್‌ ಮತ್ತು ವಾಹನಗಳ ಮಾಲೀಕರು ಸಾರ್ವಜನಿಕರಿಂದ ಹಣ ಲೂಟಿ ಮಾಡಿದರು. ಸಾರಿಗೆ ಬಸ್‌ ದರದಷ್ಟೇ ಟಿಕೆಟ್‌ ದರ ಪಡೆಯಬೇಕೆಂದು ಖಾಸಗಿಯವರಿಗೆ ಅಧಿ ಕಾರಿಗಳು ಸೂಚಿಸಿದ್ದರು. ಆದರೂ, ಹೆಚ್ಚಿನ ಹಣ ಪಡೆಯುವ ಬಗ್ಗೆ ದೂರು ಕೇಳಿ ಬಂದಿದ್ದವು. ಖಾಸಗಿ ಬಸ್‌ನವರು ಸರ್ಕಾರಿ ಟಿಕೆಟ್‌ ದರಕ್ಕಿಂತ ಹೆಚ್ಚು ಹಣ ಪಡೆಯಲಾಗುತ್ತಿದೆ. ಕಲಬುರಗಿಯಿಂದ ಸುರಪುರಕ್ಕೆ ಸಾರಿಗೆಯ ಸಾಮಾನ್ಯ ಬಸ್‌ ದರ 73ರೂ. ಇದೆ. ಆದರೆ, ಖಾಸಗಿ ಬಸ್‌ನವರು 100ರೂ. ಕೇಳುತ್ತಿದ್ದಾರೆ ಎಂದು ಪ್ರಯಾಣಿಕ ರವಿ ಎನ್ನುವವರು ಕೇಂದ್ರ ಬಸ್‌ ನಿಲ್ದಾಣದಲ್ಲಿ ಸಾರಿಗೆ ಅಧಿಕಾರಿಗಳ ಮುಂದೆಯೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಕ್ರಮದ ಎಚ್ಚರಿಕೆ: ನೌಕರರ ಮುಷ್ಕರ ಕಾರಣ ಖಾಸಗಿ ಮತ್ತು ವಾಹನಗಳಿಗೆ ಅವಕಾಶ ಕಲ್ಪಿಸಲಾಗಿದೆ. ಸರ್ಕಾರಿ ಬಸ್‌ ದರವನ್ನೇ ಪಡೆಯಬೇಕೆಂದು ಸೂಚಿಸಿ ಅನುಮತಿ ನೀಡಲಾಗಿದೆ. ಇದನ್ನು ಮೀರಿ ಯಾವುದೇ ಖಾಸಗಿಯವರು ಹೆಚ್ಚಿನ ಪ್ರಯಾಣ ದರ ತೆಗೆದುಕೊಂಡರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಲಬುರಗಿ ವಿಭಾಗದ ಸಾರಿಗೆ ಇಲಾಖೆ ಜಂಟಿ ಆಯುಕ್ತ ಸಿ. ಮಲ್ಲಿಕಾರ್ಜುನ “ಉದಯವಾಣಿ’ಗೆ ತಿಳಿಸಿದರು.

ಕಲಬುರಗಿ ಜಿಲ್ಲೆಯಲ್ಲಿ 1100 ಮ್ಯಾಕ್ಸಿಕ್ಯಾಬ್‌ಗಳು ಇವೆ. ಹತ್ತಾರು ಖಾಸಗಿ ಬಸ್‌ಗಳು ಇವೆ. ಬಸ್‌ ನಿಲ್ದಾಣದಿಂದ ಸಂಚರಿಸಲು ಅವುಗಳಿಗೆ ಇಲಾಖೆಯಿಂದ ಅನುಮತಿ ಪತ್ರ ನೀಡಲಾಗುತ್ತಿದೆ. 300ಕ್ಕೂ ಹೆಚ್ಚು ಶಾಲಾ ಬಸ್‌ಗಳು ಇವೆ. ಇವುಗಳನ್ನು ಬಳಸಿಕೊಳ್ಳುವ ಚಿಂತನೆ ನಡೆದಿದೆ. ಜತೆಗೆ ಅಗತ್ಯ ಬಿದ್ದರೆ ಹೊರ ರಾಜ್ಯದ ಬಸ್‌ಗಳನ್ನು ಬಳಕೆ ಮಾಡಲಾವುದು ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next