Advertisement

ಕರುನಾಡಲ್ಲಿ ಸಂಕ್ರಮಣದ ಪರ್ವಕಾಲ

10:01 AM Jan 17, 2020 | Lakshmi GovindaRaj |

“ಸುಗ್ಗಿ ಹಬ್ಬ’ ಎಂದೇ ಕರೆಯಲಾಗುವ ಮಕರ ಸಂಕ್ರಾಂತಿಯ ಹಬ್ಬವನ್ನು ರಾಜ್ಯದಾದ್ಯಂತ ಬುಧವಾರ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಹಬ್ಬದ ಸಂಭ್ರಮ ಎಲ್ಲೇ ಮೀರಿತ್ತು. ಜನ ಪರಸ್ಪರ ಎಳ್ಳು -ಬೆಲ್ಲ ಬೀರಿ ಹಬ್ಬದ ಶುಭಾಶಯ ಕೋರಿದರು. ಮಹಿಳೆಯರು, ಯುವತಿಯರು, ಸಣ್ಣ ಮಕ್ಕಳು ಹೊಸ ಉಡುಪು ಧರಿಸಿ ಸಂಭ್ರಮಿಸಿದರು.

Advertisement

ಮನೆ ಮುಂದಿನ ರಂಗೋಲಿ ಚಿತ್ತಾರ ಮನಸೂರೆಗೊಂಡಿತು. ದೇವಾಲಯಗಳಲ್ಲಿ ಹೊಸ ವರ್ಷವಿಡೀ ಸುಖ ಸಮೃದ್ಧಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಹಳೆ ಮೈಸೂರು ಭಾಗದಲ್ಲಿ ರಾಸುಗಳಿಗೆ ಮೈ ತೊಳೆದು, ಸಿಂಗಾರಗೊಳಿಸಿ, ಪೂಜೆ ಸಲ್ಲಿಸಲಾಯಿತು. ಕೆಲವೆಡೆ ಸೂರ್ಯಾಸ್ತದ ವೇಳೆ ಬೀದಿಗಳಲ್ಲಿ ಒಣ ಹುಲ್ಲು ಹಾಕಿ, ಬೆಂಕಿ ಹೊತ್ತಿಸಿ, ಹಸುಗಳನ್ನು ನೆಗೆಸುತ್ತಾ ಕಿಚ್ಚು ಹಾಯಿಸುವ ದೃಶ್ಯ ಮನಸೂರೆಗೊಂಡಿತು.

ಮೈದಳೆದ ಗ್ರಾಮೀಣ ಸೊಗಡು
ಬೆಂಗಳೂರು: ಮಕರ ಸಂಕ್ರಮಣದ ಶುಭ ಸಂಕ್ರಾಂತಿಯನ್ನು ಬುಧವಾರ ರಾಜ್ಯದ ಎಲ್ಲೆಡೆ ಸಡಗರ, ಸಂಭ್ರಮದಿಂದ ಆಚರಿಸ ಲಾಯಿತು. ಹಬ್ಬದ ಹಿನ್ನೆಲೆಯಲ್ಲಿ ನಗರ ಪ್ರದೇಶಗಳಲ್ಲೂ ಗಾಮೀಣ ಸೊಗಡು ಮೈದಳೆದಿತ್ತು.  “ಸಿಲಿಕಾನ್‌ ಸಿಟಿ’ ಬೆಂಗಳೂರು ನಗರದ ಹಳೆಯ ಭಾಗಗಳಲ್ಲಿ ಮನೆ ಮುಂಭಾಗ ರಂಗೋಲಿ ಹಾಕಿ ಸಿಂಗರಿಸಿದ್ದರು. ಸಂಕ್ರಾಂತಿ ಶುಭಾಶಯ ಎಂಬ ಅಡಿ ಬರಹ, ಕಬ್ಬು, ಎಳ್ಳು -ಬೆಲ್ಲಗಳ ವಿನಿಮಯದ ಸಂಭ್ರಮ ಜೋರಾಗಿತ್ತು. ಹೊಸ ಬಟ್ಟೆ ತೊಟ್ಟಿದ್ದ ಮಕ್ಕಳು ಸಂಜೆ ಆಗುತ್ತಿದ್ದಂತೆ ನೆರೆಯ ಮನೆಗಳಿಗೆ ತೆರಳಿ ಎಳ್ಳು ಬೆಲ್ಲ ವಿನಿಮಯ ಮಾಡಿಕೊಂಡರು. ಮನೆಯಲ್ಲಿ ಸಿಹಿ ಕಾರ ಪೊಂಗಲ್‌ ತಯಾರಿಸಿ ಸವಿದು ವರ್ಷದ ಮೊದಲ ಹಬ್ಬವನ್ನು ಸಂಭ್ರಮಿಸಿದರು.

ಹಬ್ಬದ ಹಿನ್ನೆಲೆಯಲ್ಲಿ ದೇವಾಲಯ ಗಳನ್ನು ವಿಶೇಷ ರೀತಿಯಲ್ಲಿ ಅಲಂಕರಿಸಲಾಗಿತ್ತು. ಮುಂಜಾನೆಯಿಂದಲೇ ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜ ನೇಯ ದೇವಸ್ಥಾನ, ಬಸವನಗುಡಿಯ ದೊಡ್ಡ ಬಸವಣ್ಣ ದೇವಸ್ಥಾನ, ಕೆ.ಆರ್‌.ಮಾರುಕಟ್ಟೆಯ ಕೋಟೆ ಪ್ರಸನ್ನ ವೆಂಕಟ ರಮಣ ದೇವಸ್ಥಾನ, ಜೆಪಿ ನಗರದ ರಾಗಿ ಗುಡ್ಡ ಆಂಜನೇಯ ದೇವಸ್ಥಾನ, ಬನ ಶಂಕರಿಯ ದೇವಗಿರಿ ವೆಂಕಟೇಶ್ವರ ದೇವಾ ಲಯ ಸೇರಿದಂತೆ ನಗರದ ವಿವಿಧ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದವು.ಹೊಸಕೆರೆ ಹಳ್ಳಿಯ ಸುತ್ತಮುತ್ತ ಸಂಕ್ರಾಂತಿಯನ್ನು ಪ್ರತೀತಿಯಂತೆ ಕಾಟುಂರಾಯ ಹಬ್ಬ ಎಂದು ಆಚರಿಸಿ ದುದು ವಿಶೇಷ.

ಸ್ವಗೃಹದಲ್ಲಿ ಸಿಎಂ ಪೂಜೆ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಶಿಕಾರಿಪುರದ ಸ್ವಗೃಹದಲ್ಲಿ ಕುಟುಂಬದವರೊಂದಿಗೆ ಸಂಕ್ರಾಂತಿ ಪೂಜೆ ಸಲ್ಲಿಸಿ, ಬೇವು-ಬೆಲ್ಲ ವಿತರಿಸಿದರು. ನಂತರ, ಶ್ರೀ ಹುಚ್ಚರಾಯ ಸ್ವಾಮಿ ದೇವಾ ಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ಬಳಿಕ, ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಸ್ವತ: ತಾವೇ ಪೂಜೆ ನೆರವೇರಿಸಿದರು.

Advertisement

ಹಲವೆಡೆ ರಾಸುಗಳಿಗೆ ಕಿಚ್ಚು: ಮೈಸೂರಿನ ಸಿದ್ದಲಿಂಗಪುರದಲ್ಲಿ ಸಂಜೆಯ ವೇಳೆ ಶೃಂಗಾರಗೊಂಡ ರಾಸುಗಳಿಗೆ ಚಂದ್ರಮೌಳೇಶ್ವರ ದೇಗುಲದ ಅರ್ಚಕರು ಪೂಜೆ ಸಲ್ಲಿಸಿದ ಬಳಿಕ ಎಲ್ಲಾ ರಾಸುಗಳನ್ನು ಕಿಚ್ಚು ಹಾಯಿಸುವ ಸ್ಥಳಕ್ಕೆ ಕರೆತರಲಾಯಿತು. ಬಳಿಕ, ಮಾರು ಸಾಲಿನ ಹುಲ್ಲಿನ ರಾಶಿಗೆ ಪೂಜೆ ಸಲ್ಲಿಸಿ ಬೆಂಕಿ ಹಚ್ಚಲಾ ಯಿತು. ಸಿಂಗಾರಗೊಂಡು ಸರದಿಗಾಗಿ ಎದುರು ನೋಡುತ್ತಿದ್ದ ರಾಸುಗಳು ಕಿಚ್ಚು ಹಾಯುತ್ತಿದ್ದಂತೆ ಎಲ್ಲೆಡೆ ಹರ್ಷೋದ್ಘಾರ ಕೇಳಿ ಬಂತು. ಈ ವೇಳೆ, ಬೆಂಗಳೂರು- ಮೈಸೂರು ರಸ್ತೆಯಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಇದೇ ವೇಳೆ, ಕೆ.ಆರ್‌.ಪೇಟೆ, ಭಾರತಿನಗರ, ಚಿಕ್ಕಬಳ್ಳಾಪುರ, ಗುಂಡ್ಲುಪೇಟೆ, ನಂಜನಗೂಡು ಸೇರಿದಂತೆ ಹಳೆ ಮೈಸೂರು ಭಾಗದಾದ್ಯಂತ ಕಿಚ್ಚು ಹಾಯಿಸುವ ಸಂಪ್ರದಾಯ ನಡೆಯಿತು.

ಮಹಾಕೂಟದಲ್ಲಿ ಭಕ್ತರ ಪುಣ್ಯಸ್ನಾನ
ಬಾದಾಮಿ: ಮಕರ ಸಂಕ್ರ ಮಣ ನಿಮಿತ್ತ ಸಹಸ್ರಾರು ಭಕ್ತರು ತಾಲೂಕಿನ ಮಹಾಕೂಟ, ಬನಶಂಕರಿ ದೇವಿಯ ಹರಿದ್ರಾತೀರ್ಥ ದಲ್ಲಿ ಕುಟುಂಬ ಸಮೇತ ಪುಣ್ಯಸ್ನಾನ ಮಾಡಿ ಪುನೀತರಾದರು. ಮಕರ ಸಂಕ್ರಮಣದ ದಿನ ಐತಿಹಾಸಿಕ ತಾಣದಲ್ಲಿ ಪುಣ್ಯಸ್ನಾನ ಮಾಡಿದರೆ ಮಾಡಿದ ಪಾಪದಿಂದ ಮುಕ್ತರಾಗುತ್ತಾರೆ ಎಂಬ ಪ್ರತೀತಿ ಇದೆ. ಮಕರ ಸಂಕ್ರಮಣದ ನಿಮಿತ್ತ ಸಾರ್ವತ್ರಿಕ ರಜೆ ಹಾಗೂ ಬನಶಂಕರಿದೇವಿ ಜಾತ್ರೆ ಇರುವ ಕಾರಣ ರಾಜ್ಯದ ವಿವಿಧ ಭಾಗದಿಂದ ಜನಸಾಗರವೇ ಹರಿದು ಬಂದಿತ್ತು.

ಕೂಡಲ ಸಂಗಮದಲ್ಲಿ ಪುಣ್ಯಸ್ನಾನ
ಕೂಡಲಸಂಗಮ: ದಕ್ಷಿಣದ ಕಾಶಿ ಎಂದೇ ಖ್ಯಾತಿ ಪಡೆದಿರುವ ಬಸವಣ್ಣನ ಐಕ್ಯ ಸ್ಥಳ ಹಾಗೂ ಕೃಷ್ಣ, ಮಲಪ್ರಭೆ ನದಿಗಳ ಸಂಗಮವಾದ ಸುಕ್ಷೇತ್ರ ಕೂಡಲಸಂಗಮಕ್ಕೆ ಮಕರ ಸಂಕ್ರಾಂತಿ ನಿಮಿತ್ತ ಬುಧವಾರ ವಿವಿಧ ರಾಜ್ಯಗಳಿಂದ ಲಕ್ಷಕ್ಕೂ ಅ ಧಿಕ ಭಕ್ತರು ಆಗಮಿಸಿ, ಪುಣ್ಯ ಸ್ನಾನ ಮಾಡಿ ಪುನೀತರಾದರು. ಬಳಿಕ ಹಲವು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿ, ಕ್ಷೇತ್ರಾಧಿ ಪತಿ ಸಂಗಮನಾಥನ ದರ್ಶನ ಪಡೆದು ಪರಸ್ಪರ ಕುಸರೆಳ್ಳು ವಿನಿಯೋಗ ಮಾಡಿ ಸಂಕ್ರಾತಿ ಶುಭಾಶಯ ಕೋರಿದರು. ದೇವಾಲಯದ ಹೊರ ಆವರಣದ ಉದ್ಯಾನವನದಲ್ಲಿ ಭೋಜನ ಸವಿದು ಸಂಭ್ರಮಿಸಿದರು.

ಗವಿ ಗಂಗಾಧರ, ಚಂದ್ರಮೌಳೇಶ್ವರನ ಮೇಲೆ ಸೂರ್ಯನ ಕಿರಣಾಭಿಷೇಕ: ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದಲ್ಲಿರುವ ಐತಿಹಾಸಿಕ ಕಾಶಿ ಚಂದ್ರಮೌಳೇಶ್ವರ ಸ್ವಾಮಿ ದೇವಸ್ಥಾನದ ಗರ್ಭಗುಡಿಯಲ್ಲಿರುವ ಶಿವಲಿಂಗದ ಮೇಲೆ ಉಂಟಾದ ಸೂರ್ಯ ಕಿರಣಗಳ ಸ್ಪರ್ಶವನ್ನು ನೂರಾರು ಭಕ್ತರು ಕಣ್ತುಂಬಿಕೊಂಡರು. ಬೆಳಗ್ಗೆ 7.30ರ ವೇಳೆ ಶಿವಲಿಂಗ ಹಾಗೂ ಪಾರ್ವತಿ ದೇವಿಯ ಮೇಲೆ ಸೂರ್ಯ ಕಿರಣಗಳು ಸ್ಪರ್ಶಿಸಿದವು. ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಸಂಜೆ 5.20-5.34ರ ಸಮಯದಲ್ಲಿ ಸೂರ್ಯ ರಶ್ಮಿಗಳು ಶಿವಲಿಂಗವನ್ನು ಸ್ಪರ್ಶಿಸಿದ ಕೌತುಕವನ್ನು ಭಕ್ತರು ಕಣ್ತುಂಬಿಕೊಂಡರು.

ಶ್ರೀರಂಗನಾಥಸ್ವಾಮಿಗೆ ಲಕ್ಷ ದೀಪೋತ್ಸವ: ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದ ಮುಂದೆ ಮಕರ ಸಂಕ್ರಾಂತಿ ಪ್ರಯುಕ್ತ 30ನೇ ವರ್ಷದ ಲಕ್ಷ ದೀಪೋತ್ಸವವನ್ನು ವೈಭವಯುತವಾಗಿ ನೆರವೇರಿಸಲಾಯಿತು. ಬುಧವಾರ ಸಂಜೆ ಸೂರ್ಯಾಸ್ತಮಯ ಗೋಧೂಳಿ ಲಗ್ನದಲ್ಲಿ ಜ್ಯೋತಿಷಿ ಡಾ.ಭಾನುಪ್ರಕಾಶ್‌ ಸಾನ್ನಿಧ್ಯದಲ್ಲಿ, ಶಾಸಕ ರವೀಂದ್ರ ಶ್ರೀಕಂಠಯ್ಯ ಉಪಸ್ಥಿತಿಯಲ್ಲಿ ದೇವಾಲಯದ ಆವರಣದಲ್ಲಿ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು. ಲಕ್ಷ ದೀಪೋತ್ಸವದ ಅಂಗವಾಗಿ ದೇವಾಲಯದಿಂದ ಬಾತುಕೋಳಿ ಸರ್ಕಲ್‌ವರೆಗೆ 300 ಮೀಟರ್‌ ದೂರದವರೆಗೆ ಭಕ್ತರು ಲಕ್ಷಾಂತರ ದೀಪ ಹೊತ್ತಿಸಿ ಭಕ್ತಿಭಾವ ಮೆರೆದರು.

ಹಂಪಿಯಲ್ಲಿ ಜನ ಸಾಗರ
ಹೊಸಪೇಟೆ: ಮಕರ ಸಂಕ್ರಾಂತಿ ನಿಮಿತ್ತ ಐತಿಹಾಸಿಕ ಹಂಪಿಗೆ ಆಗಮಿಸಿದ ದೇಶ-ವಿದೇಶಿ ಭಕ್ತರು ಬುಧವಾರ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ಹಾಗೂ ಪಂಪಾದೇವಿಯ ದರ್ಶನ ಪಡೆದರು. ಸಾವಿರಾರು ಭಕ್ತರು ನಸುಕಿನಲ್ಲೇ ತುಂಗಭದ್ರಾ ನದಿಯಲ್ಲಿ ಉತ್ತರಾಯಣ ಕಾಲದ ಪುಣ್ಯ ಸ್ನಾನ ಮಾಡಿದರು. ನಂತರ, ವಿರೂಪಾಕ್ಷೇಶ್ವರ ಸ್ವಾಮಿ, ಪಂಪಾದೇವಿ ಹಾಗೂ ಭುವನೇಶ್ವರಿ ದೇವಿಯ ದರ್ಶನ ಪಡೆದು, ಹೂ-ಹಣ್ಣು ಕಾಣಿಕೆ ಸಲ್ಲಿಸಿದರು. ಸಂಕ್ರಾಂತಿ ಪ್ರಯುಕ್ತ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಗೆ ಅಭಿಷೇಕ ನೆರವೇರಿಸಿ, ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಸ್ಥಾನದ ಅರ್ಚಕರಾದ ಶ್ರೀನಾಥ ಶರ್ಮಾ, ಮುರುಳೀಧರ ಶಾಸ್ತ್ರಿ ಸೇರಿದಂತೆ ಇತರರು ಪೂಜಾ ಕಾರ್ಯ ನೆರವೇರಿಸಿದರು. ರಾಜ್ಯ ಸೇರಿದಂತೆ ಆಂಧ್ರ, ತೆಲಂಗಾಣಗಳಿಂದ ಅನೇಕ ಜನ ಆಗಮಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next