ಬೆಂಗಳೂರು: ರಾಜ್ಯದಲ್ಲಿ ವರ್ಗಾವಣೆ ದಂಧೆ ಶುರುವಾಗಿದ್ದು, ಪ್ರತಿ ಹುದ್ದೆಗೂ ರೇಟ್ ಫಿಕ್ಸ್ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.
ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ವಿವಿಧ ಜಿಲ್ಲೆಗಳ ಮುಖಂಡರ ಆತ್ಮಾವಲೋಕನ ಸಭೆಯ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.
ಹಿಂದಿನ ಬಿಜೆಪಿ ಸರಕಾರವನ್ನು ಟೀಕೆ ಮಾಡುತ್ತಿದ್ದ ಇದೇ ಕಾಂಗ್ರೆಸ್ ನಾಯಕರು ಈಗ ಪ್ರತಿ ಹುದ್ದೆಗೆ ರೇಟ್ ಫಿಕ್ಸ್ ಮಾಡಿದ್ದಾರೆ. ಹಿಂದಿನ ಮುಖ್ಯಮಂತ್ರಿಗಳ ಬಗ್ಗೆ ಇವರೇ ಪೇ ಸಿಎಂ ಎಂದು ಪ್ರಚಾರ ಮಾಡಿದರು. ಆದರೆ, ಅದಕ್ಕಿಂತ ಜಾಸ್ತಿ ಈ ಸರಕಾರ ನಡೆಯುತ್ತಿದೆ. ಇದನ್ನು ಎಷ್ಟು ಪರ್ಸೆಂಟ್ ಸರಕಾರ ಎಂದು ಕರೆಯಬೇಕು? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಇದನ್ನೂ ಓದಿ:ಐದು ವರ್ಷದ ಬಳಿಕ ಕೇಂದ್ರ ಗುತ್ತಿಗೆ ಪಡೆದ ನ್ಯೂಜಿಲ್ಯಾಂಡ್ ಬೌಲರ್ ಆ್ಯಡಂ ಮಿಲ್ನೆ
ಪೇ ಸಿಎಂ ಪ್ರಚಾರ ನಡೆಸಿದ್ದ ಇವರ ಬಗ್ಗೆಯೂ ನಾವು ಹಾದಿಬೀದಿಯಲ್ಲಿ ಪ್ರಚಾರ ನಡೆಸಬೇಕಿದೆ. ಗೋಡೆಗಳ ಮೇಲೆ ಪೋಸ್ಟರ್ ಅಂಟಿಸಬೇಕಿದೆ. ಸ್ವತಃ ಅಧಿಕಾರಿಗಳಲ್ಲೇ ರೇಟ್ ಫಿಕ್ಸ್ ಆಗಿದೆ ಎಂದು ಮಾತನಾಡುತ್ತಿದ್ದಾರೆ ಎಂದು ಅವರು ದೂರಿದರು.
ಈಗ ಇವರು ಏನು ಮಾಡುತ್ತಿದ್ದಾರೆ ಎನ್ನುವುದನ್ನು ಜನ ಗಮನಿಸುತ್ತಿದ್ದಾರೆ. ಇದನ್ನು ಸಾಬೀತು ಮಾಡಿ ಅಂದರೆ ಹೇಗೆ ಮಾಡೋದು? ಹಿಂದೆ 40% ಆರೋಪವನ್ನು ಸಾಬೀತು ಮಾಡಿದ್ದರಾ? ಎಂದು ಪ್ರಶ್ನಿಸಿದ ಅವರು, ಈಗ ಅವರದೇ ಸರಕಾರ ಬಂದಿದೆ, ಪರ್ಸೆಂಟೇಜ್ ಆರೋಪವನ್ನು ಸಾಬೀತು ಮಾಡಲಿ ಎಂದು ಸವಾಲು ಹಾಕಿದರು.