Advertisement

ಕಾರು ಡಿಕ್ಕಿ: ಓಮ್ನಿ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡು ಬಾಲಕಿ ಸಜೀವ ದಹನ, 7 ಜನರಿಗೆ ಗಾಯ

01:15 PM Apr 22, 2024 | Team Udayavani |

ಬೆಂಗಳೂರು:  ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಓಮ್ನಿ ಕಾರು ಪಲ್ಟಿಯಾಗಿ 14 ವರ್ಷ ಬಾಲಕಿ ಸಜೀವ ದಹನವಾಗಿ, 7 ಮಂದಿ ಗಾಯಗೊಂಡಿರುವ ಹೃದಯ ವಿದ್ರಾವಕ ಘಟನೆ ಮಾದವಾರ ಬಳಿ ಭಾನುವಾರ ರಾತ್ರಿ ನಡೆದಿದೆ.

Advertisement

ದಾಸನಪುರ ನಿವಾಸಿ ದಿವ್ಯಾ(14) ಮೃತಪಟ್ಟಿದ್ದು, ಸುನೀತಾ, ಮಂಜುಳಾ, ಮಾಯಾಂಕ್‌, ನಮನ್‌ ಎಂಬುವರ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹೇಶ್‌, ತರುಣ್‌, ಶಾಂತಿಲಾಲ್‌ ಎಂಬುವರು ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಉತ್ತರ ಭಾರತ ಮೂಲದ ಶಾಂತಿಲಾಲ್‌ ಕುಟುಂಬ ಹಲವು ವರ್ಷಗಳಿಂದ ದಾಸನಪುರದಲ್ಲಿ ವಾಸವಾಗಿತ್ತು. ಅಬ್ಬಿಗೆರೆಗೆ ಕಾರ್ಯನಿಮಿತ್ತ ಇಡೀ ಕುಟುಂಬ ಓಮ್ನಿ ಕಾರಿನಲ್ಲಿ ತೆರಳಿತ್ತು. ರಾತ್ರಿ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್‌ ದಾಸನಪುರಕ್ಕೆ ಬರುವಾಗ ಮಾರ್ಗ ಮಧ್ಯೆ ಮಾದವಾರ ಬಳಿ ಅತೀ ವೇಗವಾಗಿ ಬಂದ ಬೊಲೆನೊ ಕಾರು ಓಮ್ನಿ ಕಾರಿಗೆ ಡಿಕ್ಕಿ ಹೊಡಿದ ಪರಿಣಾಮ ಓಮ್ನಿ ಪಲ್ಟಿ ಆಗಿದೆ. ಆಗ ಸ್ಪಾರ್ಕ್‌ ಉಂಟಾಗಿ ಓಮ್ನಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ದಿವ್ಯಾ ಸಜೀವ ದಹನವಾಗಿದ್ದಾಳೆ. ಇತರರಿಗೆ ಗಂಭೀರ ಸುಟ್ಟ ಗಾಯಗಳಾಗಿದೆ. ಕೂಡಲೇ ಸ್ಥಳೀಯರು ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಒಂದು ವಾಹನ ಜತೆ ಸ್ಥಳಕ್ಕೆ ಬಂದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಿ ದಿವ್ಯಾ ಸಂಪೂರ್ಣ ದಹನವಾಗಿದ್ದಾಳೆ. ಇತರರನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೊಲೆನೊ ಕಾರು ಚಾಲಕ ಕಾರು ಬಿಟ್ಟು ಪರಾರಿಯಾಗಿದ್ದಾನೆ. ನೆಲಮಂಗಲ ಸಂಚಾರ ಠಾಣೆಯಲ್ಲಿ ಪ್ರಕತಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next