Advertisement

ಬಿಡಾಡಿ ದನಗಳಿಂದ ಸಂಚಾರಕ್ಕೆ ಸಂಚಕಾರ

12:25 PM Dec 31, 2019 | Suhan S |

ಸುರಪುರ: ನಗರದ ಪ್ರಮುಖ ರಸ್ತೆ, ತರಕಾರಿ ಮಾರುಕಟ್ಟೆ, ಗಾಂಧಿ ವೃತ್ತ, ಬಸ್‌ ನಿಲ್ದಾಣ ಸೇರಿದಂತೆ ನಗರದೆಲ್ಲೆಡೆ ಬಿಡಾಡಿ ದನಗಳದ್ದೇ ದರ್ಬಾರು. ರಾಜಾರೋಷವಾಗಿ ಸಂಚರಿಸುವ ಬಿಡಾಡಿ ದನಗಳಿಂದ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ದನಗಳನ್ನು ನಿಯಂತ್ರಿಸುವಲ್ಲಿ ನಗರಸಭೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎನ್ನುವ ಆರೋಪಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.

Advertisement

ಸುರಪುರ ನಗರದ ಹಾದಿ ಬೀದಿಗಳೆಲ್ಲೆಡೆ ಬಿಡಾಡಿ ದನಗಳು ಎಗ್ಗಿಲ್ಲದೇ ತಿರುಗಾಡುತ್ತವೆ. ಹಿಂಡು ಹಿಂಡಾಗಿ ಬರುವ ದನಗಳು ದಿನವಿಡೀ ರಸ್ತೆ ಮೇಲೆಯೇ ಸಂಚರಿಸುತ್ತಿದ್ದು, ವಾಹನ ಸವಾರರಿಗೆ ತುಂಬ ಕಿರಿಕಿರಿಯಾಗುತ್ತಿದೆ. ಬೈಕ್‌ ಸವಾರರು, ವಾಹನ ಚಾಲಕರು ಎಷ್ಟೇ ಶಬ್ದ ಮಾಡಿದರೂ ದನಗಳು ಮಾತ್ರ ಜಾಗದಿಂದ ಒಂದಿಂಚು ಕದಲುವುದಿಲ್ಲ. ಚಾಲಕರೇ ವಾಹನದಿಂದ ಕೆಳಗಿಳಿದು ದನಗಳನು ಓಡಿಸುವ ಪರಿಸ್ಥಿತಿ ಎದುರಾಗುತ್ತಿದೆ.

ಡಿಸಿ ಆದೇಶಕಿಲ್ಲ ಕಿಮ್ಮತ್ತು: ಬಿಡಾಡಿ ದನಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದರು. ಆದೇಶದ ಹಿನ್ನೆಲೆಯಲ್ಲಿ ಕಾಟಾಚಾರಕ್ಕೆ ಎನ್ನುವಂತೆ ನಗರಸಭೆ ಅಧಿಕಾರಿಗಳು ಬಿಡಾಡಿ ದನಗಳನ್ನು ಹಿಡಿಯುವ ನಟನೆ ಮಾಡಿದ್ದು, ಬಿಟ್ಟರೆ ಇನ್ನೇನು ಮಾಡಿಲ್ಲ ಹಾಗೂ ದನಗಳ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳ ಆದೇಶಕ್ಕೆ ನಗರಸಭೆ ಅಧಿಕಾರಿಗಳು ಕಿಮ್ಮತ್ತು ನೀಡುತ್ತಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ಅಧಿಕಾರಿಗಳಿಂದ ಉಡಾಫೆ ಉತ್ತರ: ಬಿಡಾಡಿ ದನಗಳ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕರು ಪ್ರಶ್ನಿಸಿದರೆ ನಗಸಭೆ ಅಧಿಕಾರಿಗಳು ಬರೀ ಉಡಾಫೆ ಉತ್ತರ ನೀಡುತ್ತಾರೆ. ಯಾರೇ ಆರೋಪ ಮಾಡಿದರೂ ಏನು ಆಗುವುದಿಲ್ಲ. ಇವನ್ನೆಲ್ಲ ಯಾರು ಹಿಡಿ ಯಬೇಕು? ಎಂದು ದರ್ಪದ ಮಾತುಗಳನ್ನಾಡುತ್ತಾರೆ ಎನ್ನುವುದು ಜನರ ಆರೋಪ.

ದನದ ಕೊಟ್ಟಿಗೆಯಂತಾದ ಬಸ್‌ ನಿಲ್ದಾಣ: ನಗರದ ಬಸ್‌ ನಿಲ್ದಾಣದಲ್ಲಿ ಬಿಡಾಡಿ ದನಗಳ್ಳದ್ದೇ ದರ್ಬಾರು. ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಮಲಗಿ ಸಗಣಿ ಹಾಕುತ್ತವೆ. ಮೂತ್ರ ವಿಸರ್ಜನೆ ಮಾಡಿ ನಿಲ್ದಾಣ ಗಲೀಜು ಮಾಡುತ್ತಿವೆ. ಕೆಲವು ಬಾರಿ ಪ್ರಯಾಣಿಕರ ಲಗೇಜುಗಳಿಗೆ ಬಾಯಿ ಹಾಕುತ್ತಿವೆ. ಸ್ವಲ್ಪ ಯಾಮಾರಿದರೆ ಸಾಕು ಪ್ರಯಾಣಿಕರ ಲಗೇಜುಗಳು ಚೆಲ್ಲಾಪಿಲ್ಲಿಯಾಗುವುದಂತೂ ಶತಸಿದ್ಧ. ದೂರದ ಪ್ರಯಾಣಿಕರು ಮಕ್ಕಳಿಗಾಗಿ ತೆಗೆದುಕೊಂಡಿದ್ದ ತಿನಿಸುಗಳ ಪೊಟ್ಟಣಗಳು ದನಗಳ ಪಾಲಾಗುತ್ತಿರುವ ಘಟನೆಗಳು ಸಾಮಾನ್ಯವಾಗಿವೆ. ದನಕರುಗಳಿಗೆ ಹೆದರಿ ಪ್ರಯಾಣಿಕರು ನಿಲ್ದಾಣದ ಆಸನಗಳಲ್ಲಿ ಕೂಡಲು ಹಿಂದೇಟು ಹಾಕುತ್ತಾರೆ. ಹೀಗಾಗಿ ಪ್ಲಾಟ್‌ಫಾರಂ ಬಳಿ ನಿಲುವುದು ಸಾಮಾನ್ಯ. ಆಸನಗಳಲ್ಲಿ ಕುಳಿತುಕೊಂಡು ಬಸ್‌ ವೀಕ್ಷಿಸಲು ಹೋಗಿ ಬರುವಷ್ಟರಲ್ಲಿ ಲಗೇಜು ಚೆಲ್ಲಾಪಿಲ್ಲಿಯಾಗಿರುತ್ತದೆ. ಹೀಗಾಗಿ ಬಹುತೇಕ ಪ್ರಯಾಣಿಕರು ಆಸನಗಳಿಗೆ ಮೊರೆ ಹೋಗುವುದು ವಿರಳ.

Advertisement

ತರಕಾರಿಗೆ ಬಾಯಿ: ತರಕಾರಿ ಮಾರಾಟಗಾರರಿಗೆ ದನಕರುಗಳದ್ದೇ ದೊಡ್ಡ ತಲೆನೋವು. ಗ್ರಾಹಕರು-ಮಾರಾಟಗಾರರು ವಸ್ತುಗಳನ್ನು ಕೊಳ್ಳುವುದು-ಮಾರಾಟ ಮಾಡುವಾಗ ಸ್ವಲ್ಪ ಯಾಮಾರಿದರೆ ಸಾಕು ಎಲ್ಲ ತರಕಾರಿ ದನಕರುಗಳ ಪಾಲಾಗುತ್ತದೆ. ಮಾರುಕಟ್ಟೆ ಕರ ವಸೂಲಿ ಮಾಡುವ ನಗರಸಭೆಯವರು ಮಾರಾಟಗಾರರಿಗೆ ಯಾವುದೇ ಸೌಲಭ್ಯ ಒದಗಿಸಿಲ್ಲ. ಸಂತೆ ಕಟ್ಟೆ ನಿರ್ಮಿಸಿಲ್ಲ. ರಸ್ತೆ ಮೇಲೆ ಕುಳಿತುಕೊಂಡು ತರಕಾರಿ ಮಾರಾಟ ಮಾಡುವ ಪರಿಸ್ಥಿತಿ ಇದೆ ಎನ್ನುತ್ತಾರೆ ವ್ಯಾಪಾರಸ್ಥರು. ತರಕಾರಿ ಮಾರುಕಟ್ಟೆಯಲ್ಲಿ ಬಿಡಾಡಿ ದನಗಳು ಜನರ ಮೈಮೇಲೆ ನುಗ್ಗಿ ಬರುತ್ತವೆ. ಕೈ ಚೀಲದಲ್ಲಿ ಖರೀದಿಸಿಟ್ಟ ತರಕಾರಿ ಚೀಲಗಳಿಗೆ ಬಾಯಿ ಹಾಕುತ್ತವೆ. ಯಾಮಾರಿದರೆ ಖರೀದಿಸಿದ ತರಕಾರಿ ಕ್ಷಣಾರ್ಧದಲ್ಲಿ ದನಕರುಗಳ ಪಾಲಾಗುತ್ತದೆ. ದಿನಂಪ್ರತಿ ಇಂತಹ ಘಟನೆಗಳು ನಡೆಯುವುದು ಇಲ್ಲಿ ಸಾಮಾನ್ಯವಾಗಿದ್ದು, ಇದಕ್ಕೆ ಆಡಳಿತ ವರ್ಗ ಯಾವಾಗ ಪರಿಹಾರ ಸೂಚಿಸುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಸುರಪುರ ಬಸ್‌ ನಿಲ್ದಾಣಕ್ಕೆ ಬರಲು ತುಂಬ ಬೇಸರವಾಗುತ್ತದೆ. ದನಕರುಗಳ ತೊಂದರೆಯಿಂದ ಸಾಕಾಗಿದೆ. ಸುರಪುರದಲ್ಲಿ ದನಗಳನ್ನು ನಿಯಂತ್ರಿಸುವಲ್ಲಿ ಆಡಳಿತ ವರ್ಗ ಏಕೆ ಹಿಂದೇಟು ಹಾಕುತ್ತಿದೆಯೋ ತಿಳಿಯುತ್ತಿಲ್ಲ. ಬಿಡಾಡಿ ದನಗಳು ರಸ್ತೆಗೆ ಅಡ್ಡಲಾಗಿ ಮಲಗುತ್ತಿದ್ದು ಇದರಿಂದ ಸಂಚಾರಕ್ಕೆ ತುಂಬ ತೊಂದರೆಯಾಗಿದೆ. ಹೀಗಾಗಿ ಒಮ್ಮೊಮ್ಮೆ ಬಸ್‌ ನಿಲ್ದಾಣಕ್ಕೆ ಬರಲಾರದೇ ಬೈಪಾಸ್‌ ಮೂಲಕ ಹೋಗಿ ಬಿಡುತ್ತೇವೆ. ನಿಂಗಪ್ಪ, ಸಾರಿಗೆ ಇಲಾಖೆ ಚಾಲಕ

 

ಸಿದ್ದಯ್ಯಪಾಟೀಲ

Advertisement

Udayavani is now on Telegram. Click here to join our channel and stay updated with the latest news.

Next