ಉಡುಪಿ: ಉಡುಪಿ ನಗರದಲ್ಲಿ ವಾಹನ ನಿಲುಗಡೆ ಸಮಸ್ಯೆ ಪರಿಹರಿಸಲು ಸಮರೋಪಾದಿಯಲ್ಲಿ ಸಂಚಾರಿ ಠಾಣೆಯ ಪೊಲೀಸರು ಹರ ಸಾಹಸ ನಡೆಸುತ್ತಿದ್ದರೂ ಸಾಧ್ಯವಾಗುತ್ತಿಲ್ಲ. ಉಡುಪಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಮೀಪ ಘನ ವಾಹನಗಳ ನಿಲುಗಡೆಯನ್ನು ತಡೆಯಲು ಟ್ರಾಫಿಕ್ಕೋನ್ಗಳನ್ನು ಹಾಕಿದ್ದರೂ ನಿಷ್ಪ್ರಯೋಜಕವಾಗಿದೆ.
ಎರಡೇ ದಿನದಲ್ಲಿ ಎಲ್ಲ ಕೋನ್ಗಳನ್ನು ತೆಗೆದು ಹಾಕಲಾಗಿದೆ.
ಈ ಕಾರ್ಯವನ್ನು ಸಂಚಾರಿ ಪೊಲೀಸರು ಮಾಡಿದ್ದಾರೆಯೇ ಅಥವಾ ಅತೃಪ್ತ ವಾಹನ ನಿಲುಗಡೆಗಾರರು ಮಾಡಿದರೆ ಎಂದು ಇನ್ನಷ್ಟೆ ತಿಳಿಯಬೇಕಾಗಿದೆ.
ಈ ಪ್ರದೇಶದಲ್ಲಿ ದ್ವಿಚಕ್ರ ವಾಹನ, ಚತುಷcಕ್ರ ವಾಹನಗಳ ಜತೆಗೆ ರಾತ್ರಿ ವೇಳೆ ಮಲ್ಟಿಎಕ್ಸೆಲ್ ಬಸ್ಗಳು ನಿಲುಗಡೆಗೊಳ್ಳುತ್ತಿದ್ದವು. ಇದರಿಂದ ಸರಕಾರಿ ಬಸ್ಗಳಿಗೆ ಬಸ್ ನಿಲ್ದಾಣದಿಂದ ನಿರ್ಗಮಿಸಲೂ ಕಷ್ಟವಾಗುತ್ತಿತ್ತು.
ಸ್ವಾಗತ
ಸಾವಿರಾಳು ಧೂಮಾವತಿ ಎದುರಿನ ರಸ್ತೆಯಲ್ಲಿ ಯಾವಾಗಲೂ ಟ್ರಾಫಿಕ್ ಜಾಮ್ ಆಗುತ್ತಿರುವುದನ್ನು ಗಮನಿಸಿದ ಟ್ರಾಫಿಕ್ ಪೊಲೀಸರು ಈ ಸ್ಥಳದಲ್ಲಿ ಕಬ್ಬಿಣದ ರಸ್ತೆ ದ್ವಿಭಾಜಕಗಳನ್ನು ಸ್ಥಾಪಿಸಿದ್ದಾರೆ. ಇದರಿಂದ ವಾಹನಗಳ ಸುಗಮ ಸಂಚಾರವಾಗುತ್ತಿದೆ. ಮೇಲಾಗಿ ಪಾದಚಾರಿಗಳೂ ನಿರ್ಭೀತರಾಗಿ ರಸ್ತೆಯನ್ನು ದಾಟುವಂತಾಗಿದೆ.
ನಗರಸಭೆಯ ತೀವ್ರ ಆಸಕ್ತಿಯಿಂದ ಈ ಪರಿಸರದಲ್ಲಿ ತಳ್ಳುಗಾಡಿಗಳ ಉಪಟಳ ನಿಯಂತ್ರಣಕ್ಕೆ ಬಂದಿದೆ. ರವಿವಾರ ಅಥವಾ ರಜಾದಿನಗಳಲ್ಲಿ ಈ ಪರಿಸರದಲ್ಲಿ ತಳ್ಳುಗಾಡಿಗಳು ನಿಲ್ಲುತ್ತವೆ. ಅದನ್ನೂ ನಿಯಂತ್ರಿಸಿದಲ್ಲಿ ಈ ಪ್ರದೇಶದಲ್ಲಿ ಮತ್ತಷ್ಟು ಸುಗಮ ಸಂಚಾರಕ್ಕೆ ಸಾಧ್ಯವಾಗುತ್ತದೆ.