Advertisement

ರಸ್ತೆ ಬದಿ ಮರ ತೆರವು: ಮಾತಿನ-ಚಕಮಕಿ

01:54 AM Feb 25, 2020 | Team Udayavani |

ಉಡುಪಿ: ಉಡುಪಿ ತಾ.ಪಂ.ನಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆ ಶಾಸಕರ ಹಾಗೂ ಅರಣ್ಯಾಧಿಕಾರಿ ನಡುವಿನ ಜಟಾಪಟಿಗೆ ವೇದಿಕೆ ಯಾಯಿತು. ಸಭೆಯಲ್ಲಿ ಅಗೌರವ ದಿಂದ ನಡೆದುಕೊಂಡಿದ್ದಾರೆ ಎಂದು ಶಾಸಕ ರಘುಪತಿ ಭಟ್‌ ಅರಣ್ಯಾಧಿಕಾರಿ ಯವರನ್ನು ತೀವ್ರವಾಗಿ ತರಾಟೆಗೆತ್ತಿ ಕೊಂಡರಲ್ಲದೆ ಅಧಿಕಾರಿ ವಿರುದ್ಧ ಶಿಸ್ತು ಕ್ರಮಕ್ಕೆ ಸಭೆ ಸರ್ವಾನುಮತದಿಂದ ನಿರ್ಧಾರ ತೆಗೆದುಕೊಂಡಿತು.

Advertisement

ಅಭಿವೃದ್ಧಿಗೆ ಅಡ್ಡಿ
ಹೆಜಮಾಡಿ ರಸ್ತೆ ಅಭಿವೃದ್ಧಿ ಹಾಗೂ ವಿಸ್ತರಣೆ ಸಂಬಂಧಿಸಿ ರಸ್ತೆ ಬದಿ ಮರಗಳ ತೆರವಿಗೆ ಸಂಬಂಧಿಸಿ ತಾ.ಪಂ ಸದಸ್ಯ ಲಕ್ಷ್ಮೀನಾರಾಯಣ ಪ್ರಭು ಅವರು ವಿಷಯ ಪ್ರಸ್ತಾವಿಸಿದರು. ಈ ವೇಳೆ ಉಡುಪಿ ಅರಣ್ಯ ವಲಯಾಧಿಕಾರಿ ಕ್ಲಿಫ‌ರ್ಡ್‌ ಲೋಬೋ ಉತ್ತರಿಸಿ ರಸ್ತೆ ಬದಿಯ ಅಪಾಯಕಾರಿ ಮರಗಳ ಪಟ್ಟಿ ಮಾಡಿ ಕುಂದಾಪುರ ವಿಭಾಗಕ್ಕೆ ಅನುಮೋದನೆಗೆ ಕಳಿಸಿದ್ದೇವೆ ಎಂದು ಉತ್ತರಿಸಿದರು. ಆಗ ಶಾಸಕ ರಘುಪತಿ ಭಟ್‌ ಅವರು ಬ್ರಹ್ಮಾವರ ರಸ್ತೆ ಬದಿಯಲ್ಲಿ ಮರಗಳ ತೆರವು ವಿಚಾರವಾಗಿ ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಕುಂಜಾರು ರಸ್ತೆ ಬದಿಯ ಮರಗಳ ತೆರವು ವಿಚಾರವಾಗಿ ಏನು ಕ್ರಮ ಕೈಗೊಂಡಿದ್ದೀರಿ ಎಂದು ಸಭೆಯಲ್ಲಿದ್ದ ಹೆಬ್ರಿ ವಿಭಾಗದ ಅಧಿಕಾರಿಗಳ ಬಳಿ ಮಾಹಿತಿ ಕೇಳಿದರು. ಆಗ ವಲಯಾರಣ್ಯಾಧಿಕಾರಿ ಮುನಿರಾಜ್‌ ಉತ್ತರಿಸಿ ಕೆಲವೊಂದು ಕಾನೂನು ಸಮಸ್ಯೆ ಇದೆ ಎಂದರು. ಇದಕ್ಕೆ ಶಾಸಕರು ಸ್ಪಷ್ಟನೆ ಕೇಳತೊಡಗಿದಾಗ ಅಧಿಕಾರಿ ಸ್ಪಷ್ಟನೆ ನೀಡತೊಡಗಿದರು. ಇದು ಪರಸ್ಪರ ಮಾತಿಗೆ ಕಾರಣವಾಗಿದ್ದು ಶಾಸಕರು ತೀವ್ರ ಅಸಮಾಧಾನಗೊಂಡರು.

ಸಭೆಯಲ್ಲಿ ಗೊಂದಲ
ತಾ.ಪಂ ಅಧ್ಯಕ್ಷೆ ನೀತಾ ಗುರುರಾಜ್‌ ಪೂಜಾರಿ ಸಹಿತ ಸದಸ್ಯರು ಅಧಿಕಾರಿ ನಡವಳಿಗೆ ಬೇಸರ ವ್ಯಕ್ತಪಡಿಸಿದರು. ಅಂತಿಮವಾಗಿ ಅಧಿಕಾರಿ ಸಭೆಗೆ ಹಾಗೂ ಶಾಸಕರಿಗೆ ಅಗೌರವ ತೋರಿದ್ದಾರೆ ಎಂದು ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.

ವಾರದೊಳಗೆ
ಮರಳು ಸಮಸ್ಯೆ ನಿವಾರಣೆ
ಸದಸ್ಯ ದಿನೇಶ್‌ ಕೋಟ್ಯಾನ್‌ ಮರಳು ಕೊರತೆಯಿರುವ ಬಗ್ಗೆ ಸಭೆಯಲ್ಲಿ ಪ್ರಸ್ತಾವಿಸಿದರು. ಇದಕ್ಕೆ ಶಾಸಕರು ಉತ್ತರಿಸಿ ಹೊಸದಾಗಿ 9 ಲಕ್ಷ ಟನ್‌ ಮರಳು ಸಂಗ್ರಹಕ್ಕೆ ಶಾಂಭವಿ, ಬಾಕೂìರು, ಕಟಪಾಡಿ, ಭಾರ್ಗವಿ, ಪಾಂಗಾಳ, ಹೆಜಮಾಡಿ ನದಿಗಳನ್ನು ಗುರುತಿಸಲಾಗಿದೆ. ಕೆಸಿಝೆಡ್‌ಎಂಎ ಅನುಮೋದನೆಯೂ ದೊರಕಿದೆ.

ಮುಂದೆ ಡಿಸಿ ಅಧ್ಯಕ್ಷತೆಯ ಜಿಲ್ಲಾ ಮರಳು ನಿರ್ವಹಣ ಸಮಿತಿಯಲ್ಲಿ ಚರ್ಚೆ ನಡೆಸಿ 171 ಪರವಾನಿಗೆದಾರರಿಗೆ ಸಂಗ್ರಹಣೆಗೆ ಅವಕಾಶ ನೀಡಲಾಗುವುದು. ಆ್ಯಪ್‌ ಮೂಲಕ ಮರಳು ವಿತರಣೆ ಮಾಡಲಾಗುವುದು. ಇದು ಜಿಲ್ಲೆಗೆ ವಿಸ್ತರಣೆಯಾಗಲಿದೆ. ವಾರದೊಳಗೆ ಮರಳು ಸಮಸ್ಯೆ ನಿವಾರಣೆಯಾಗಲಿದೆ ಎಂದರು.

Advertisement

ವಾರಾಹಿ ನೀರು ಯೋಜನೆ ವಿಸ್ತರಣೆ
ವಾರಾಹಿ ಯೋಜನೆಯಲ್ಲಿ ಉಡುಪಿ ವಿಧಾನ ಸಭಾ ಕ್ಷೇತ್ರದ 23 ಗ್ರಾ.ಪಂ ನೀರಿನ ಯೋಜನೆಗೆ ಒಳಪಟ್ಟಿವೆ. ಇನ್ನು 7 ಹೆಚ್ಚುವರಿ ಗ್ರಾ.ಪಂಗಳನ್ನು ಸೇರ್ಪಡೆಗೊಳಿಸಿ ವಿಸ್ತರಿಸಲು ಉದ್ದೇಶಿಸಲಾಗಿದೆ. ಇದಕ್ಕೆ 15 ಕೋಟಿ ಹೆಚ್ಚುವರಿ ವೆಚ್ಚ ತಗುಲಲಿದೆ ಎಂದು ಶಾಸಕರು ಹೇಳಿದರು. ಸಾಸ್ತಾನ ರಾ.ಹೆ ಟೋಲ್‌ಗೇಟ್‌ ವಿನಾಯಿತಿಯನ್ನು ಮಾಬುಕಳ ಸೇತುವೆಯಿಂದ ಬ್ರಹ್ಮಾವರದ ತನಕ ವಿಸ್ತರಿಸುವಂತೆ ಸದಸ್ಯ ಸುಧೀರ್‌ ಕುಮಾರ್‌ ಶೆಟ್ಟಿ ಆಗ್ರಹಿಸಿದರು.

ಪಿಂಚಣಿ ಸಮರ್ಪಕವಾಗಿ ಪಾವತಿಯಾಗುತ್ತಿಲ್ಲ ಎಂದು ಸದಸ್ಯೆ ಡಾ| ಸುನೀತಾ ಶೆಟ್ಟಿ ಸಭೆಯ ಗಮನಕ್ಕೆ ತಂದರು. ಪಲಿಮಾರು ತೆಕ್ಕಟ್ಟೆ ಬಳಿ ಹಳೆ ತೋಡಿನ ಹೂಳು ಎತ್ತದ ಕಾರಣ ಸಮಸ್ಯೆಯಾಗಿದೆ ಎಂದು ಸದಸ್ಯ ದಿನೇಶ್‌ ಕೋಟ್ಯಾನ್‌ ಸಭೆಯ ಗಮನಕ್ಕೆ ತಂದರು. ಕ್ರಮ ಕೈಗೊಳ್ಳಲು ಅಧಿಕಾರಿಗೆ ಸೂಚಿಸುವುದಾಗಿ ತಾ.ಪಂ ಇ.ಒ. ಮೋಹನ್‌ ರಾಜ್‌ ಹೇಳಿದರು. ಕಲ್ಯಾಣಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ನಳ್ಳಿ ನೀರು 5 ದಿನಗಳಿಂದ ನೀರು ಬರುತ್ತಿಲ್ಲ ಎಂದು ಸದಸ್ಯ ಧನಂಜಯ ಕುಂದರ್‌ ಹೇಳಿದರು. ಹೆಜಮಾಡಿ ಭಾಗದಲ್ಲಿ ಟೋಲ್‌ಗೇಟ್‌ನಿಂದ ನಿರ್ವಸಿತರಾದ ಕೆಲವು ಕುಟುಂಬಗಳಿಗೆ ಮಂಜೂರಾದ ಮನೆಗಳ ನಿರ್ಮಾಣ ಇನ್ನು ಪೂರ್ಣಗೊಂಡಿಲ್ಲ. 4 ವರ್ಷದಿಂದ ಸಮಸ್ಯೆ ಇರುವ ಕುರಿತು ಸದಸ್ಯೆ ರೇಣುಕಾ ಸಭೆಯ ಮುಂದಿಟ್ಟರು. ತಾ.ಪಂ. ಇಒ ಮತ್ತು ನಿರ್ಮಿತಿ ಕೇಂದ್ರದ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಕ್ರಮಜರಗಿಸುವಂತೆ ಶಾಸಕರು ಸೂಚಿಸಿದರು. ಉಪ್ಪೂರು ಪ್ರೌಢಶಾಲೆಯಲ್ಲಿ ಹೆಚ್ಚುವರಿ ಒಂದು ಶೌಚಾಲಯ ಆವಶ್ಯಕತೆ ಬಗ್ಗೆ ಸದಸ್ಯ ದಿನಕರ ಹೇರೂರು ಪ್ರಸ್ತಾವಿಸಿದಾಗ ಬ್ರಹ್ಮಾವರ ಬಿಎಒ ಅವರು ಅನುದಾನದ ಕೊರತೆಯಿದೆ ಎಂದರು. ಹಲವು ವಿಚಾರಗಳ ಕುರಿತು ಚರ್ಚೆ ನಡೆಯಿತು.
ತಾ.ಪಂ. ಅಧ್ಯಕ್ಷೆ ನೀತಾ ಗುರುರಾಜ್‌ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಭಜುಂಗ ಶೆಟ್ಟಿ, ಸಾಮಾಜಿಕ ನ್ಯಾಯ ಸಮಿತಿಯ ಶರತ್‌ಕುಮಾರ್‌, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಮೋಹನ್‌ರಾಜ್‌ ಉಪಸ್ಥಿತರಿದ್ದರು.

ಬ್ರಹ್ಮಾವರ ಪುರಸಭೆ: ಸಿಎಂ ಒಪ್ಪಿಗೆ
ಬ್ರಹ್ಮಾವರ ಪುರಸಭೆ ಶೀಘ್ರ ರಚನೆಯಾಗಲಿದೆ. ಈಗಿನ 18 ಗ್ರಾಮಗಳು ಹಾಗೂ 4 ಪಂಚಾಯತು ಸೇರಿಸಿಕೊಂಡು ಹೊಸದಾದ ಪುರಸಭೆ ರಚಣೆಗೆ ರೂಪುರೇಷೆ ಸಿದ್ಧವಾಗಿದೆ. ಈ ಸಂಬಂಧ ಜನಪ್ರತಿನಿಧಿಗಳ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿಯಾಗಿತ್ತು. ಈ ಸಾಲಿನಲ್ಲಿ ಪುರಸಭೆಯಾಗಿ ಘೋಷಿಸುವಂತೆ ಮುಖ್ಯಮಂತ್ರಿಗಳು ಪತ್ರ ನೀಡಿದ್ದಾರೆ. 2011 ಜನಗಣತಿ ಯಂತೆ ಪುರಸಭೆಗೆ 35,790 ಜನಸಂಖ್ಯೆ ಹೊಂದಿರಬೇಕು ಎಂದು ಶಾಸಕ ರಘುಪತಿ ಭಟ್‌ ಸಭೆಗೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next