Advertisement

ಪ್ರವಾಸಿಗರನ್ನು ಕೈ ಬೀಸಿ ಕರೆಯುವ ರಾಜ್ಯದ ಅತ್ಯುತ್ತಮ ಪ್ರವಾಸಿ ತಾಣಗಳು

09:57 AM Jan 26, 2020 | Sriram |

ದೇಶ ಸುತ್ತು ಕೋಶ ಓದು ಎಂಬ ನಾಣ್ಣುಡಿ ಕೇಳದವರಿಲ್ಲ. ಜೀವನಾನುಭವ ಸಿಗುವುದೇ ದೇಶ ಸುತ್ತಿದಾಗ. ಮೈಮನಸ್ಸನ್ನು ಉಲ್ಲಾಸಗೊಳಿಸುವಲ್ಲಿ ಪ್ರವಾಸ-ಯಾತ್ರೆಗಳ ಪಾತ್ರ ದೊಡ್ಡದು. ಪ್ರವಾಸ ಎಂದರೆ ಹೊಸ ಜಗತ್ತಿನ ಮುಖಾಮುಖೀಯೆಂದೇ ಅರ್ಥ. ಮನೋರಂಜನೆ, ಶೈಕ್ಷಣಿಕ ಪ್ರವಾಸವೇ ಆಗಿರಬಹುದು. ಅವುಗಳು ನಮ್ಮೊಳಗೆ ತುಂಬುವ ಹೊಸ ಉತ್ಸಾಹ ಸಣ್ಣದಲ್ಲ. ಇಂದು ರಾಷ್ಟ್ರೀಯ ಪ್ರವಾಸೋದ್ಯಮ ದಿನ. ಹಾಗಾಗಿ ರಾಜ್ಯದ 10 ಅತ್ಯುತ್ತಮ ಪ್ರವಾಸಿ ತಾಣಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಜತೆಗೆ ಅಲ್ಲಿನ ವಿಶಿಷ್ಟತೆ ಏನು ಎಂಬುದನ್ನೂ ವಿವರಿಸಿದ್ದೇವೆ. ಜೀವನದಲ್ಲಿ ಒಮ್ಮೆ ನೋಡಿ ಬರಬೇಕೆನಿಸುವ ತಾಣಗಳಲ್ಲಿ ಕೆಲವೇ ಕೆಲವು ಇವು…

Advertisement

1. ಗೋಕರ್ಣ


ಗೋಕರ್ಣವೂ ಬಹಳ ಪ್ರಸಿದ್ಧ ತಾಣ. ಪುರಾಣ ಪ್ರಸಿದ್ಧ ಮಹಾಬಲೇಶ್ವರ ದೇಗುಲ ಒಂದು ಕಡೆಯಾದರೆ, ಇನ್ನುಪ್ರವಾಸಿಗರನ್ನು ಕೈ ಬೀಸಿ ಕರೆಯುವುದು ಇಲ್ಲಿನ ವಿಶಿಷ್ಟ ಬೀಚ್‌ಗಳು. ಹಾಗಾಗಿ ಇದನ್ನು ಒಂದು ರೀತಿಯಲ್ಲಿ “ಮಿನಿ ಗೋವಾ’ ಎಂದು ಕರೆಯುವುದುಂಟು. ಗೋವಾದಲ್ಲಿರುವ ಎಲ್ಲಾ ಮನೋರಂಜನೆಗಳು ಇಲ್ಲಿ ಇದ್ದು, ಸುತ್ತಲೂ ರಮಣೀಯ ತೆಂಗಿನ ತೋಟಗಳಿವೆ. ಓಂ ಬೀಚ್‌, ಗೋಕರ್ಣ ಬೀಚ್‌ ಮತ್ತು ಕುಡ್ಲೆ ಬೀಚ್‌ ಹೆಸರುವಾಸಿ.
ವಿಶೇಷತೆ:ಬೀಚ್‌ ಟ್ರಕ್ಕಿಂಗ್‌, ವಾಟರ್‌ ನ್ಪೋರ್ಟ್ಸ್, ಶಾಪಿಂಗ್‌, ಯೋಗ, ಬೋನ್‌, ಫೈರ್‌ಕ್ಯಾಂಪ್‌ಗ್ಳು.
ಸೂಕ್ತ ಸಮಯ:ಜೂನ್‌-ಅಗಸ್ಟ್‌ ಮಳೆಗಾಲ ಚೆಂದ. ಜತೆಗೆ ಅಕ್ಟೋಬರ್‌-ಮಾರ್ಚ್‌ ತಿಂಗಳೂ ಯೋಗ್ಯ.

2. ಹಂಪಿ


ಹಂಪಿ ಇಲ್ಲೇ ಇದೆಯಲ್ಲ ಎನಿಸಬಹುದು. ಆದರೂ ನೋಡದಿರುವ ಸಾಧ್ಯತೆಗಳೇ ಹೆಚ್ಚು. ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು ಹಂಪಿ. ಇದು ವಿಶ್ವಸಂಸ್ಥೆಯ ಪಾರಂಪರಿಕ ತಾಣ.ಇಲ್ಲಿನ ವಿರೂಪಾಕ್ಷ ದೇಗುಲ, ಕಡಳೆಕಾಳು ಗಣಪ, ಸಾಸಿವೆಕಾಳು ಗಣಪ, ಉಗ್ರ ನರಸಿಂಹ, ಅಕ್ಕ ತಂಗಿ ಕಲ್ಲು ಎಲ್ಲವೂ ಜಗತ್‌ ಪ್ರಸಿದ್ಧಿ ಪಡೆದವು. ಹಂಪಿಯ ಕಲ್ಲಿನ ರಥ, ಪುರಂದರ ಮಂಟಪದ ಸೊಗಸು ಅನುಭವಿಸಲೇಬೇಕು.
ಸೂಕ್ತ ಸಮಯ: ಅಕ್ಟೋಬರ್‌-ಫೆಬ್ರವರಿ.
ವಿಶೇಷತೆ: ರೋಯಿಂಗ್‌ ಕೋರಾಕಲ್ಸ್‌, ಬೈಕ್‌ ರೈಡ್‌, ಕ್ಲಿಫ್ ಜಂಪಿಂಗ್‌ ಮೊದಲಾದವುಗಳಿವೆ.

3. ದಾಂಡೇಲಿ


ಒಂದು ಕಡೆ ಬಿದಿರಿನ ಮೆಳೆಗಳ ಓಲಾಟ, ಇನ್ನೊಂದೆಡೆ ಕಾಳಿ ನದಿಯ ಜುಳುಜುಳು ನಿನಾದ, ಅಲ್ಲೇ ಹತ್ತಿರದಲ್ಲಿ ಪಕ್ಷಿಗಳ ಕಲರವ, ಆ ಅರಣ್ಯದಲ್ಲಿ ಅಪರೂಪಕ್ಕೆ ಕಾಣಸಿಗುವ ವನ್ಯ ಜೀವಿಗಳು ಇಂತಹ ಪ್ರಾಕೃತಿಕ ಚಿತ್ರಣವನ್ನು ನೋಡ ಸಿಗುವುದು ದಾಂಡೇಲಿಯಲ್ಲಿ. ಈ ಅಭಯಾರಣ್ಯ ಉತ್ತರಕನ್ನಡ ಜಿಲ್ಲೆಯಲ್ಲಿದ್ದು, 475.02 ಚದರ ಕಿ.ಮೀ ಹರಡಿದೆ. ಪರಿಸರ ಪ್ರೇಮಿಗಳಿಗೆ ಇದು ಹೇಳಿ ಮಾಡಿಸಿದ ತಾಣವಾಗಿದ್ದು, ಪ್ರಾಕೃತಿಕ ದೃಶ್ಯಗಳು, ಸಮೃದ್ಧ ಅರಣ್ಯ ಇಲ್ಲಿನ ಸೊಬಗು.
ವಿಶೇಷತೆ : ರಿವರ್‌ ರಾಫ್ಟಿಂಗ್‌, ಪ್ರಕೃತಿ ನಡಿಗೆ, ರಾತ್ರಿ ಕ್ಯಾಂಪ್‌, ಮೂನ್ಲ„ಟ್‌ ಬೋಟ್‌ ರೈಡ್‌, ಜಂಗಲ್‌ ಸಫಾರಿ, ಪಕ್ಷಿ ವೀಕ್ಷಣೆ ಇತ್ಯಾದಿ
ಸೂಕ್ತ ಸಮಯ : ಇಲ್ಲಿಗೆ ಪ್ರವಾಸ ಕೈಗೊಳ್ಳುವುದಕ್ಕೆ ಮಾರ್ಚ್‌ನಿಂದ ಅಕ್ಟೋಬರ್‌ ತಿಂಗಳು ಸೂಕ್ತವಾಗಿದ್ದು, ಬೆಳಿಗ್ಗೆ 6ಗಂಟೆಯಿಂದ ಸಂಜೆ 6ಗಂಟೆಯವರೆಗೆ ಈ ಅಭಯಾರಣ್ಯ ತೆರೆದಿರುತ್ತದೆ.

4. ಪಟ್ಟದಕಲ್ಲು


ಬಾದಾಮಿ ತಾಲೂಕಿನಲ್ಲಿರುವ ಪಟ್ಟದಕಲ್ಲು ಪುಟ್ಟಹಳ್ಳಿ. ಬಾದಾಮಿಯಿಂದ 22 ಕಿ.ಮೀ ದೂರದಲ್ಲಿ ಮಲಪ್ರಭಾ ನದಿಯ ಎಡದಂಡೆಯಲ್ಲಿರುವ ಐತಿಹಾಸಿಕ ಪ್ರಸಿದ್ಧ ಸ್ಥಳವೇ ಪಟ್ಟದಕಲ್ಲು. ಚಾಲುಕ್ಯರು ಬಾದಾಮಿಗೆ ಹತ್ತಿರ ಇರುವ ಈ ಸ್ಥಳದಲ್ಲಿ ತಮ್ಮ ಪಟ್ಟ ಬಂಧ ಮಹೋತ್ಸವ ನಡೆಸುತ್ತಿದ್ದರಿಂದ ಪಟ್ಟದಕಲ್ಲು ಎಂಬ ಹೆಸರು ಬಂದಿತು ಎಂದು ಹೇಳಲಾಗುತ್ತದೆ. ಈ ಐತಿಹಾಸಿಕ ತಾಣವು ಇಂದು ದೇಶದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿ ಬೆಳೆದಿದ್ದು, ಮಲಪ್ರಭಾ ನದಿ ಇಲ್ಲಿ ಉತ್ತರಗಾಮಿಯಾಗಿ ಪ್ರವಹಿಸುತ್ತಿರುವುದರಿಂದ ಇದನ್ನು ದಕ್ಷಿಣ ಕಾಶಿ’ಎಂದೂ ಕರೆಯುತ್ತಾರೆ. ಇತಿಹಾಸದ ಕುರಿತು ಆಸಕ್ತಿ ಇರುವವರಿಗೆ ಇದು ಉತ್ತಮ ಪ್ರೇಕ್ಷಣೀಯ ಸ್ಥಳವಾಗಿದ್ದು, ಐತಿಹಾಸಿಕ ಘಟನೆಗಳ ಕುರಿತು ಮಾಹಿತಿ ಲಭ್ಯವಾಗಲಿದೆ.
ವಿಶೇಷತೆ : ಸಂಗಮೇಶ್ವರ ದೇವಾಲಯ, ವಿರೂಪಾಕ್ಷ ದೇವಾಲಯ ಇದನ್ನು ಚಾಲುಕ್ಯ ಇಮ್ಮಡಿ ವಿಕ್ರಮಾದಿತ್ಯ ಮಹಾರಾಣಿ ಲೋಕ ಮಹಾದೇವಿ ಮತ್ತು ತ್ತೈಲೋಕ್ಯ ಮಹಾದೇವಿ ಇತಿಹಾಸ ದೇವಾಲಯ.

Advertisement

5. ಕೊಡಗು


ಪ್ರವಾಸೋದ್ಯಮದಲ್ಲಿ ಕೊಡಗು ತುಂಬಾ ವೇಗವಾಗಿ ಬೆಳೆಯುತ್ತಿದೆ. ಇಲ್ಲಿಯ ನಿಸರ್ಗ ಸೌಂದರ್ಯ, ತಂಪಾದ ವಾತಾವರಣ, ವಿಭಿನ್ನ ಸಂಸ್ಕೃತಿ ಇವೆಲ್ಲಾ ಪ್ರವಾಸಿಗರನ್ನು ಸೆಳೆಯುತ್ತಿರುವ ಪ್ರಮುಖ ಅಂಶಗಳಾಗಿವೆ. ಕೊಡಗಿನ ಸೌಂದರ್ಯಕ್ಕೆ ತಾಯಿ ಕಾವೇರಮ್ಮಳೇ ಸಾಟಿ. ಅಲ್ಲಿ ಹರಿಯುತ್ತಿರುವ ಕಾವೇರಿ ನದಿ, ಧುಮ್ಮಿಕ್ಕುವ ಅಬ್ಬಿ, ಇರುಪ್ಪು, ಮಲ್ಲಳ್ಳಿ ಜಲಪಾತ, ಹಸಿರಿನಿಂದ ಕಂಗೊಳಿಸುವ ಬೆಟ್ಟಗಳು, ಕಾಫಿ, ಕಿತ್ತಳೆ, ಕಾಳುಮೆಣಸಿನ ತೋಟಗಳು ಇವೆಲ್ಲಾ ಪ್ರವಾಸಿಗನ ಮನಸ್ಸಿಗೆ ನವ ಚೈತನ್ಯ ತುಂಬುವಂತೆ ಮಾಡುತ್ತವೆ.
ವಿಶೇಷತೆ : ಜಂಗಲ್‌ ಕ್ಯಾಂಪ್‌, ಎಲಿಫ‌ಂಟ್‌ ರೈಡ್‌, ರಿವರ್‌ ರ್ಯಾಫ್ಟಿಂಗ್‌, ಆಫ್ ರೋಡ್‌ ರೈಡಿಂಗ್‌, ಫೈರ್‌ ಕ್ಯಾಂಪ್‌, ಚಾರಣ ಪ್ರಿಯರಿಗೆ ತಡಿಯಂಡ್‌ ಮೋಳ್‌, ಮಾಂದಲ್‌ ಪಟ್ಟಿ, ಪುಷ್ಪಗಿರಿ ಬೆಟ್ಟ .
ಸೂಕ್ತ ಸಮಯ : ನವೆಂಬರ್‌ನಿಂದ ಫೆಬ್ರವರಿ ಬೆಸ್ಟ್‌ ಸಮಯ. ಈ ಸಮಯದಲ್ಲಿ ಮಂಜು ಅದರಲ್ಲೂ ಡಿಸೆಂಬರ್‌ ತಿಂಗಳಿನಲ್ಲಿ ಮಂಜಿನಿಂದ ಆವೃತ್ತವಾಗಿರುವ ಮಡಿಕೇರಿ ನೋಡುವುದೇ ಚೆಂದ.

6. ಜೋಗ್‌ಫಾಲ್ಸ್‌


ಕರ್ನಾಟಕದಲ್ಲೇ ಅತೀ ಎತ್ತರದ ಜಲಪಾತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜೋಗ ಜಲಪಾತದ ಅದ್ಭುತ ರಮಣೀಯ ದೃಶ್ಯ ನೋಡಬೇಕಾದರೆ ಮಳೆಗಾಲವೇ ಬೆಸ್ಟ್‌. ಎತ್ತರದಿಂದ ಧುಮ್ಮುಕ್ಕುವ ಜಲಪಾತವನ್ನು ಒಮ್ಮೆಯಾದರೂ ನೋಡಲೇ ಬೇಕು. ಶರಾವತಿ ನದಿಯಲ್ಲಿ ರಚಿಸಲಾದ ಜೋಗ್‌ ಫಾಲ್ಸ್‌ ಅನ್ನು ಗೆರುಸೊಪ್ಪೆ ಫಾಲ್ಸ್‌, ಗೆರುಸೊಪ್ಪಾ ಫಾಲ್ಸ್‌ ಮತ್ತು ಜೋಗದ ಗುಂಡಿ ಎಂಬೆಲ್ಲಾ ಪರ್ಯಾಯ ಹೆಸರುಗಳಿಂದಲೂ ಕರೆಯಲಾಗುತ್ತದೆ.
ವಿಶೇಷತೆ : ಕಯಾಕಿಂಗ್‌, ರಾಪ್ಟಿಂಗ್‌ ಹಾಗೂ ಬೋಟಿಂಗ್‌.
ಸೂಕ್ತ ಸಮಯ : ಆಗಸ್ಟ್‌ ಮತ್ತು ಡಿಸೆಂಬರ್‌ ತಿಂಗಳುಗಳ ನಡುವೆ ಭೇಟಿ ನೀಡಲು ಉತ್ತಮ ಸಮಯವಾಗಿದೆ.

7. ಮೈಸೂರು


ಸಾಂಸ್ಕೃತಿಕ ನಗರಿ ಎಂದೇ ಖ್ಯಾತಿಯಾಗಿರುವ ಮೈಸೂರು ಕರ್ನಾಟಕದ ಪ್ರಮುಖ ಪ್ರವಾಸಿ ತಾಣವಾಗಿದೆ. ಮೈಸೂರು ದಸರಾವಂತೂ ವಿಶ್ವ ವಿಖ್ಯಾತಿ ಪಡೆದಿದೆ. ಮೈಸೂರಿನ ಅರಮನೆ ಮತ್ತು ಐತಿಹಾಸಿಕ ಪರಂಪರೆ ಹಿನ್ನಲೆ ಇರುವ ಚಾಮುಂಡೇಶ್ವರಿ ದೇವಾಲಯ ಇಲ್ಲಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿದ್ದು, ಮೈಸೂರು ದಕ್ಷಿಣ ಭಾರತದಲ್ಲಿ ತನ್ನ ವೈಭವೋಪೇತ ಮತ್ತು ಸಮೃದ್ಧ ಸನ್ನಿವೇಶಕ್ಕೆ ಪ್ರಸಿದ್ಧವಾಗಿರುವ ಒಂದು ಉತ್ತಮ ಪ್ರವಾಸಿ ತಾಣವಾಗಿದೆ.
ವಿಶೇಷತೆ :ಬೃಂದಾವನ ಗಾರ್ಡನ್‌, ಚಾಮುಂಡೇಶ್ವರಿ ದೇವಸ್ಥಾನ, ಮೈಸೂರು ಅರಮನೆ, ಚಾಮರಾಜೇಂದ್ರ ಮೃಗಾಲಯ, ನೈಸರ್ಗಿಕ ಇತಿಹಾಸದ ವಸ್ತು ಸಂಗ್ರಹಾಲಯ, ಜಯಚಾಮರಾಜೇಂದ್ರ ಆರ್ಟ್‌ ಗ್ಯಾಲರಿ.
ಸೂಕ್ತ ಸಮಯ : ಮಾರ್ಚ್‌ನಿಂದ ಅಕ್ಟೋಬರ್‌ ತಿಂಗಳು ಸೂಕ್ತ.

8. ಸಕಲೇಶಪುರ


ಬಡವರ ಊಟಿಯೆಂದೇ ಈ ಜಾಗ ಫೇಮಸ್‌. ವೀಕೆಂಡ್‌ನ‌ಲ್ಲಿ ಚಿಕ್ಕ ಟ್ರಿಪ್‌ ಹೋಗಿ ರಿಲ್ಯಾಕ್ಸ್‌ ಆಗಿ ಬರಬೇಕೆಂದು ಬಯಸುವುದಾದರೆ ಇದು ಬೆಸ್ಟ್‌ ಜಾಗ. ಅದರಲ್ಲೂ ಟ್ರಕ್ಕಿಂಗ್‌ ಪ್ರಿಯರಿಗಂತೂ ಈ ಸ್ಥಳ ತುಂಬಾನೇ ಇಷ್ಟವಾಗುವುದು. ಪ್ರದೇಶವನ್ನು ಸುತ್ತವರಿದ ಕಾಫಿ ಎಸ್ಟೇಟ್‌, ಹಸಿರು ಕಣ್ತುಂಬಿಕೊಳ್ಳುತ್ತಾ ಮಾಡುವ ಟ್ರಕ್ಕಿಂಗ್‌ ಹೊಸ ಅನುಭವ ನೀಡುತ್ತದೆ. ಇನ್ನು ಅಲ್ಲಿಯ ಇತರ ಸ್ಥಳಗಳನ್ನು ಸುತ್ತಾಡಿಕೊಂಡು ಬರಬೇಕೆಂದು ಬಯಸುವುದಾದರೆ ಬಾಡಿಗೆ ಜೀಪ್‌ಗ್ಳು ಲಭ್ಯವಿದೆ.
ವಿಶೇಷತೆ : ಮಂಜರಾಬಾದ್‌ ಕೋಟೆ, ಮಂಜೆಹಳ್ಳಿ ಜಲಪಾತ, ಹೊಯ್ಸಳರ ಕಾಲದ ದೇವಾಲಯ.
ಸೂಕ್ತ ಸಮಯ : ಜುಲೈ – ಜನವರಿ ತಿಂಗಳು ಇಲ್ಲಿಗೆ ಭೇಟಿ ನೀಡಲು ಉತ್ತಮ.

9. ಚಿಕ್ಕಮಗಳೂರು


ಚಿಕ್ಕಮಗಳೂರು ಕರ್ನಾಟಕದಲ್ಲಿನ ಪ್ರಮುಖ ಆಕರ್ಷಣೀಯ ಪ್ರವಾಸಿ ತಾಣವಾಗಿದೆ. ಹಚ್ಚಹಸಿರಿನ ಗಿರಿಧಾಮಗಳು, ಬೆಟ್ಟಗಳು, ಜಲಪಾತಗಳನ್ನು ಹೊಂದಿರುವ ಈ ಜಿಲ್ಲೆಯು ಫ್ಯಾಮಿಲಿ ಜತೆ ಪ್ರವಾಸ ಕೈಗೊಳ್ಳಲು ಸೂಕ್ತ ತಾಣವಾಗಿದೆ. ಚಿಕ್ಕಮಗಳೂರಿನಲ್ಲಿರುವ ಅದ್ಭುತ ತಾಣಗಳು ಚಾರಣಕ್ಕೂ ಪ್ರಸಿದ್ಧವಾಗಿದೆ. ಚಿಕ್ಕಮಗಳೂರಿನ ಪ್ರಕೃತಿ ಸೌಂದರ್ಯದ ನಡುವೆ ಫ್ಯಾಮಿಲಿ ಜತೆ ರಜಾದಿನಗಳನ್ನು ಕಳೆಯಲು ಹೇಳಿ ಮಾಡಿಸಿದ ಜಾಗ.
ವಿಶೇಷತೆ : ಮುಳ್ಳಯ್ಯನಗಿರಿ, ಜರಿ/ಮಜ್ಜಿಗೆ ಜಲಪಾತ, ಬಾಬಾ ಬುಡಂಗಿರಿ, ಮಾಣಿಕ್ಯ ಧಾರಾ ಜಲಪಾತ, ಹಿರೆಕೋಳಲೆ ಸರೋವರ ಇತ್ಯಾದಿ.
ಸೂಕ್ತ ಸಮಯ : ಅಕ್ಟೋಬರ್‌ ನಿಂದ ಮೇ

10. ಕುದುರೆಮುಖ


ಕುದುರೆಮುಖ ಒಂದು ಪ್ರಖ್ಯಾತ ಗಿರಿಧಾಮವಾಗಿದೆ. ಇಲ್ಲಿನ ಪರಿಸರವನ್ನು ಅಸ್ವಾದಿಸಿದಾಗ ಮಾತ್ರ ಅದರ ಅಂದದ ಅರಿವಾಗುವುದು. ಮೋಡಗಳ ಮುಸುಕಿನಲ್ಲಿ ಕಂಗೊಳಿಸುವ ಹಸಿರು ಬೆಟ್ಟ ರಾಶಿಗಳು, ಕಾನನದ ನಡುವೆ ಬೆರುಗುಗೊಳಿಸುವ ಸುಂದರ ಮಾರ್ಗ. ಎರಡು ಬೆಟ್ಟಗಳನು ಛೇದಿಸಿದೆ ಎಂಬಂತೆ ಮೊನಚಾಗಿ ಹರಿಯುತ್ತಿರುವ ನದಿ ಪ್ರವಾಸಿಗರ ಮನಸ್ಸಿಗೆ ಮುದ ನೀಡುತ್ತವೆ.
ವಿಶೇಷತೆ : ಹನುಮನಗುಂಡಿ, ಅಂಬಾ ತೀರ್ಥ ನದಿ, ಕುದುರೆಮುಖ ನ್ಯಾಷನಲ್‌ ಪಾರ್ಕ್‌, ವರಾಹ ಪರ್ವತ, ಗಂಗಾಮೂಲ ಇತ್ಯಾದಿ
ಸೂಕ್ತ ಸಮಯ : ಕುದುರೆಮುಖವು ವರ್ಷಾದ್ಯಂತ ಅನುಕೂಲಕರ ವಾತಾವರಣವನ್ನೇ ಹೊಂದಿರುತ್ತದೆ. ಅದರಲ್ಲೂ ಅಕ್ಟೋಬರ್‌ನಿಂದ ಮೇ ವರೆಗೆ ಭೇಟಿ ನೀಡಿದರೆ ನೀವು ಸಾಹಸಮಯ ಕ್ರೀಡೆಗಳನ್ನು ಎಂಜಾಯ್‌ ಮಾಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next