ರಾಯಚೂರು: ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಚಾಮಲಾಪುರದ ಕೂಲಿ ಕಾರ್ಮಿಕರ 13 ವರ್ಷದ ಮಗಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ಹಾಗೂ ಯಾದಗಿರಿ ಜಿಲ್ಲೆಯ ಹುಣಸಗಿಯಲ್ಲಿ ಅಪ್ರಾಪ್ತ ಬಾಲಕನನ್ನು ಅಪಹರಿಸಿ ಕೊಲೆಗೈದ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಉಪ್ಪಾರ ನವ ಯುವಕರ ಸಮಾಜ ಸೇವಾ ಸಂಘ ಪ್ರತಿಭಟನೆ ನಡೆಸಿತು.
ಈ ಕುರಿತು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಸಂಘದ ಸದಸ್ಯರು, ಚಾಮಲಾಪುರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಬಾಲಕಿಯು ತಮ್ಮ ಮನೆಯಲ್ಲಿ ಒಬ್ಬಳೆ ಇರುವುದನ್ನು ಗಮನಿಸಿದ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೇ ಕೊಲೆ ಮಾಡಿದ್ದಾರೆ. ಇದು ನಾಗರಿಕ ಸಮಾಜವೇ ತಲೆತಗ್ಗಿಸುವಂಥ ಘಟನೆಯಾಗಿದೆ. ರಾಜ್ಯದಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿದ್ದರೂ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ದೂರಿದರು.
ಇನ್ನೂ ಯಾದಗಿರಿ ಜಿಲ್ಲೆಯಲ್ಲೂ ಅಪ್ರಾಪ್ತ ಬಾಲಕನನ್ನು ಅಪಹರಿಸಿ ಕೊಲೆ ಮಾಡಲಾಗಿದೆ. ಈ ಎರಡು ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ತಕ್ಷಣ ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಮೃತ ಮಕ್ಕಳ ಕುಟುಂಬಗಳಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಘದ ಅಧ್ಯಕ್ಷ ಜೂಕುರ್ ಶ್ರೀನಿವಾಸ, ಕಾರ್ಯದರ್ಶಿ ಆರ್.ಶ್ರೀನಿವಾಸ, ಮುಖಂಡರಾದ ಮದಿಕೇರಿ ಈರಣ್ಣ, ಎಂ.ಚಂದ್ರಶೇಖರ್, ಆದಿರಾಜ್, ವರಮುನೀಂದ್ರ, ಶ್ರೀನಿವಾಸ ಗಟ್ಟು, ಶ್ರೀನಿವಾಸ, ಸರ್ಜಾಪುರ ವೆಂಕೋಬ, ದೇವನಪಲ್ಲಿ ರಾಮಪ್ಪ, ಸಂತೋಷ ಸಾಗರ ಸಿದ್ಧಲಿಂಗ್, ಹಾಲವಿ ಶ್ರೀನಿವಾಸ, ಲಕ್ಷ್ಮಿಪತಿ ಬಸವರಾಜ್, ನರಸಿಂಹಲು, ಶರಣಬಸವ, ನಾಗರಾಜ್, ಬಸವರಾಜ್, ಅನಿಲಕುಮಾರ್,
ಅಂಬರೀಷ್ ಸಾಗರ್, ಆರ್.ಸುರೇಶ ಸೇರಿ ಅನೇಕರು ಪಾಲ್ಗೊಂಡಿದ್ದರು.