Advertisement
ಕೊರೊನಾ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಅದ್ಧೂರಿಯಾಗಿ ರಥೋತ್ಸವ ಹಾಗೂ 11 ದಿನಗಳ ಕಾಲ ವೈಭದವ ಜಾತ್ರಾ ಮಹೋತ್ಸವ ನಡೆದಿರಲಿಲ್ಲ. ಆದರೆ ಈ ಸಲ 200ನೇ ಮಹಾ ರಥೋತ್ಸವಕ್ಕೆ ಸಡಗರ ಮನೆ ಮಾಡಿದೆ. ಐತಿಹಾಸಿಕ, ಮಹಾಪುರುಷ ಶರಣಬಸವೇಶ್ವರರ ಈ ಸಲದ 200ನೇ ಮಹಾಜಾತ್ರಾ ಮಹೋತ್ಸವಕ್ಕೆ ಮತ್ತಷ್ಟು ವೈಭವ ತರುವ ನಿಟ್ಟಿನಲ್ಲಿ ರವಿವಾರ ಶರಣಬಸವೇಶ್ವರ ಮಹಾಸಂಸ್ಥಾನ ಹಾಗೂ ಶರಣರ ದೇವಾಲಯ ಪ್ರಾಂಗಣದಲ್ಲಿ ಆಯೋಜಿಸಲಾಗಿದ್ದ ಲಕ್ಷ ದೀಪೋತ್ಸವ ಇತಿಹಾಸ ಸೃಷ್ಟಿಸಿತು.
ರವಿವಾರ ಸಂಜೆ ನಡೆದ ಲಕ್ಷ ದೀಪೋತ್ಸವಕ್ಕೆ ಶರಣಬಸವೇಶ್ವರ ಮಹಾದಾಸೋಹಿ ಸಂಸ್ಥಾನದ 8ನೇ ಪೀಠಾಧಿಪತಿ ಪೂಜ್ಯ ಡಾ| ಶರಣಬಸವಪ್ಪ ಅಪ್ಪ, 9ನೇ ಪೀಠಾಧಿಪತಿ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ಹಾಗೂ ಪೂಜ್ಯ ಡಾ| ದಾಕ್ಷಾಯಣಿ ಅವ್ವ ಚಾಲನೆ ನೀಡಿದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಹಾಗೂ ಮುಂತಾದವರು ಇದ್ದರು. ಹರಿದು ಬಂದ ಭಕ್ತ ಸಾಗರ:
ಲಕ್ಷ ದೀಪೋತ್ಸವ ಅಂಗವಾಗಿ ಮಹಾನಗರವಲ್ಲದೇ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು. ಈ ವೇಳೆ ಭಕ್ತರಿಂದ ಶರಣಬಸವೇಶ್ವರ ಮಹಾರಾಜ್ ಕೀ ಜೈ ಎನ್ನುವ ಜೈಕಾರ ಮೊಳಗಿದವು. ಜಾತ್ರಾ ಮಹೋತ್ಸವ ನಿಮಿತ್ತ ವಿವಿಧ ಮನೋರಂಜನೆ ಹಾಗೂ ವಿವಿಧ ಅಂಗಡಿಗಳನ್ನು ಹಾಕಲಾಗಿತ್ತು. ಜಾತ್ರಾ ಮಹೋತ್ಸವಕ್ಕೆ ಈಗಾಗಲೇ ವಿವಿಧ ಭಾಗಗಳಿಂದ ಭಕ್ತ ಸಮೂಹ ಆಗಮಿಸುತ್ತಿದೆ.