ಕೆ.ಆರ್.ನಗರ: ತಾಲೂಕು ಯುವ ಜೆಡಿಎಸ್ ಮತ್ತು ನಗರ ಜೆಡಿಎಸ್ ಘಟಕ ಹಾಗೂ ಸಾ.ರಾ.ಯುವ ಸೇನೆಯ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಜೆಡಿಎಸ್ ಯುವ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್ ಹೇಳಿದರು.
ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ¸ವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಸಾ.ರಾ.ಮಹೇಶ್ ಅವರ ಕೈ ಬಲಪಡಿಸುವ ಮುಖ್ಯ ಉದ್ದೇಶದಿಂದ ಪಟ್ಟಣದ ಡಾ.ರಾಜ್ ಬಾನಂಗಳದಲ್ಲಿ ಯುವ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
ತಾಲೂಕಿನ ಜೆಡಿಎಸ್ ಮುಖಂಡರು ಮತು ಕಾರ್ಯಕರ್ತರೊಡಗೂಡಿ ಪಟ್ಟಣದ ಅಂಬೇಡ್ಕರ್ ಪುತ್ಥಳಿಯಿಂದ ಮೆರವಣಿಗೆ ಹೊರಟು, ಪುರಸಭೆ ವೃತ್ತದ ಮೂಲಕ ಸಿಎಂ ರಸ್ತೆ ಸೇರಿದಂತೆ ಇತರೆ ಮುಖ್ಯರಸ್ತೆಗಳ ಮೂಲಕ ತೆರಳಿ ಡಾ.ರಾಜ್ ಬಾನಂಗಳದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಗುವುದು ಎಂದು ತಿಳಿಸಿದರು.
ಮುಖಂಡರು ಭಾಗಿ: ಶಾಸಕ ಸಾ.ರಾ.ಮಹೇಶ್ ಅವರು ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದು, ರಾಜ್ಯ ಯುವ ಜನತಾದಳದ ಅಧ್ಯಕ್ಷ ಮಧುಬಂಗಾರಪ್ಪ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಂಸದ ಹೆಚ್.ವಿಶ್ವನಾಥ್, ಮಂಡ್ಯ ಲೋಕಸಭಾ ಸಂಸದ ಸಿ.ಎಸ್.ಪುಟ್ಟರಾಜು, ಹೆಚ್.ಡಿ.ಕೋಟೆ ಯುವ ಜೆಡಿಎಸ್ ಮುಖಂಡ ಅನಿಲ್ ಚಿಕ್ಕಮಾಧು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಯಶಸ್ವಿಗೊಳಿಸಿ: ಜೆಡಿಎಸ್ ಯುವ ಕಾರ್ಯಕರ್ತರ ಸಮಾವೇಶಕ್ಕೆ ತಾಲೂಕಿನ ಹಾಲಿ ಮತ್ತು ಮಾಜಿ ಚುನಾಯಿತ ಜನಪ್ರತಿನಿಧಿಗಳು, ಸಹಕಾರಿ ಸಂಘಗಳ ಹಾಲಿ ಮತ್ತು ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು, ಜೆಡಿಎಸ್ ಮುಖಂಡರು, ಕಾರ್ಯಕರ್ತರು, ಎಲ್ಲಾ ಸಮಾಜದ ಮುಖಂಡರುಗಳು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ನಂತರ ಪುರಸಭೆ ಸದಸ್ಯ ಹಾಗೂ ನಗರ ಘಟಕದಯುವ ಜೆಡಿಎಸ್ ಅಧ್ಯಕ್ಷ ಉಮೇಶ್ ಮಾತನಾಡಿ, ಶುಕ್ರವಾರ ನಡೆಯುವ ಜೆಡಿಎಸ್ ಯುವ ಕಾರ್ಯಕರ್ತರ ಸಮಾವೇಶಕ್ಕೆ ಸುಮಾರು ಹತ್ತು ಸಾವಿರದಷ್ಟು ಕಾರ್ಯಕರ್ತರು ಮತ್ತು ಮುಖಂಡರು ಭಾಗವಹಿಸುವ ನಿರೀಕ್ಷೆಯಲ್ಲಿದ್ದು, ಆಗಮಿಸುವ ಎಲ್ಲರಿಗೂ ಕುಳಿತುಕೊಳ್ಳಲು ಆಸನ ಹಾಗೂ ಮಧ್ಯಾಹ್ನದ ಊಟ, ಜತೆಗೆ ಹಿರಿಯ ಮುಖಂಡರಿಗೆ ವೇದಿಕೆಯ ಮುಂಭಾಗದಲ್ಲಿ ವಿಶೇಷ ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಮಧುಚಂದ್ರ, ಉಪಾಧ್ಯಕ್ಷ ನಾಗೇಶ್, ಕಾರ್ಯದರ್ಶಿ ಕುಚೇಲ, ಸಾ.ರಾ.ಯುವ ಸೇನೆಯ ಅಧ್ಯಕ್ಷ ಶಾಂತರಾಜ್, ಸಾಲಿಗ್ರಾಮ ಹೋಬಳಿ ಘಟಕದ ಅಧ್ಯಕ್ಷ ಮಹೇಶ್, ಮಿರ್ಲೆ ಹೋಬಳಿ ಘಟಕದ ಅಧ್ಯಕ್ಷ ವಾಸು, ಮುಖಂಡರಾದ ಕಾಂತ್ರಾಜು, ವಿಜಯಕುಮಾರ್ ಭಾಗವಹಿಸಿದ್ದರು.