Advertisement

ನಾಳೆ ಈದ್‌ ಮಿಲಾದ್‌: ಮೆರವಣಿಗೆಗಿಲ್ಲ ಅನುಮತಿ

10:22 AM Oct 18, 2021 | Team Udayavani |

ಕಲಬುರಗಿ: ಮುಸ್ಲಿಂರ ಪ್ರಮುಖ ಹಬ್ಬವಾದ ಈದ್‌ ಮಿಲಾದ್‌ ಅಂಗವಾಗಿ ಅ.19ರಂದು ನಗರದಲ್ಲಿ ನಡೆಯಬೇಕಿದ್ದ ಮೆರವಣಿಗೆಗೆ ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ಅನುಮತಿ ನೀಡಿಲ್ಲ. ಆದ್ದರಿಂದ ಸಮುದಾಯದ ಜನರಲ್ಲಿ ಅಸಮಾಧಾನ ಉಂಟಾಗಿದೆ.

Advertisement

ಪ್ರವಾದಿ ಮಹಮ್ಮದ್‌ ಪೈಗಂಬರ್‌ ಜನ್ಮ ದಿನದ ನಿಮಿತ್ತ ಈದ್‌ ಮಿಲಾದ್‌ ಆಚರಿಸಲಾಗುತ್ತದೆ. ಕೊರೊನಾ ಹಾವಳಿಯಿಂದ ಕಳೆದ ಎರಡು ವರ್ಷಗಳಿಂದ ಸರಳವಾಗಿ ಹಬ್ಬ ಆಚರಿಸಲಾಗಿತ್ತು. ಸದ್ಯ ಕೊರೊನಾ ಸೋಂಕಿನ ಕಾಟ ಕಡಿಮೆಯಾಗಿದೆ. ಆದ್ದರಿಂದ ಈದ್‌ ಮಿಲಾದ್‌ ಸರಳ ಆಚರಣೆಯೊಂದಿಗೆ ಮೆರವಣಿಗೆ ಮಾಡಲು ಉದ್ದೇಶಿಸಲಾಗಿತ್ತು. ಆದರೆ, ಕೊರೊನಾ ಭೀತಿ ಕಾರಣ ನೀಡಿ ಮೆರವಣಿಗೆಗೆ ಪೊಲೀಸರು ಅನುಮತಿ ಕೊಟ್ಟಿಲ್ಲ.

ಮುಸ್ಲಿಂ ಚೌಕ್‌ನಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಗೆ ನಡೆಸಲು ಕಳೆದ ಎರಡು ವಾರಗಳಿಂದ ಸಿದ್ಧತೆ ನಡೆಸಲಾಗಿತ್ತು. ಈ ನಿಟ್ಟಿನಲ್ಲಿ ಸಮುದಾಯದ ಮುಖಂಡರು ಎರಡ್ಮೂರು ಸಭೆ ನಡೆಸಿದ್ದರು. ಅಲ್ಲದೇ, ಹತ್ತು ದಿನಗಳ ಹಿಂದೆಯೇ ಮರ್ಕಜಿ ಸೀರತ್‌ ಸಮಿತಿ ಜಿಲ್ಲಾ ಕಾರ್ಯಾಧ್ಯಕ್ಷ ಮೊಹಮ್ಮದ್‌ ಅಸಗರ್‌ ಚುಲಬುಲ್‌ ಹಾಗೂ ಪ್ರಮುಖರ ನಿಯೋಗ ನಗರ ಪೊಲೀಸ್‌ ಆಯುಕ್ತ ಡಾ| ವೈ.ಎಸ್‌. ರವಿಕುಮಾರ ಅವರನ್ನು ಭೇಟಿ ಮಾಡಿ, ಮನವಿ ಪತ್ರ ಸಲ್ಲಿಸಿದ್ದರು. ಅಲ್ಲದೇ, ಅಪರ ಜಿಲ್ಲಾಧಿಕಾರಿ ಶಂಕರ ವಣಿಕ್ಯಾಳ ಅವರನ್ನು ಭೇಟಿಯಾಗಿ ಮೆರವಣಿಗೆಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದರು. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಮೆರವಣಿಗೆ ಮಾಡುವಂತಿಲ್ಲ ಎಂದು ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ತಿಳಿಸಿದೆ.

ಮಹಾನಗರ ಪಾಲಿಕೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಸಾವಿರಾರು ಜನರನ್ನು ಒಟ್ಟಿಗೆ ಸೇರಿಸಿ ಪ್ರಚಾರ ಸಭೆ ಮತ್ತು ಮೆರವಣಿಗೆ ನಡೆಸಿವೆ. ಆಗ ಸುಮ್ಮನಿದ್ದ ಅಧಿಕಾರಿಗಳು ಮತ್ತು ಪೊಲೀಸರು, ಹಬ್ಬದ ಮೆರವಣಿಗೆಗೆ ತಡೆ ನೀಡುತ್ತಿರುವುದು ಏಕೆ? ಅಲ್ಲದೇ, ಸಾರ್ವಜನಿಕರ ಕಾರ್ಯಕ್ರಮಗಳು ಮತ್ತು ವ್ಯಾಪಾರ-ವಹಿವಾಟಿಗೂ ಅನುಮತಿ ಕೊಡಲಾಗಿದೆ. ಮೆರವಣಿಗೆಗೆ ಮಾತ್ರ ನಿರ್ಬಂಧಿಸುವುದು ಎಷ್ಟು ಸರಿ ಎಂದು ಮುಖಂಡರು ಪ್ರಶ್ನೆ ಮಾಡಿದ್ದಾರೆ.

ನೂರಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ ವಾಡಿ

Advertisement

ಈದ್‌ ಮಿಲಾದುನ್ನಬಿ ಹಬ್ಬವನ್ನು ಸಾಮಾಜಿಕ ಅಂತರದಡಿ ಸರಳವಾಗಿ ಆಚರಿಸಬೇಕು. ಮೊಹಲ್ಲಾಗಳಲ್ಲಿ ನಡೆಯುವ ಧಾರ್ಮಿಕ ಸಮಾರಂಭಗಳಲ್ಲಿ ನೂರಕ್ಕಿಂತ ಹೆಚ್ಚು ಜನ ಸೇರಬಾರದು. ಮೆರವಣಿಗೆ ಸಂಪೂರ್ಣ ನಿಷೇಧಿಸಲಾಗಿದೆ ಎಂದು ಪಿಎಸ್‌ಐ ವಿಜಯಕುಮಾರ ಭಾವಗಿ ಹೇಳಿದರು.

ಅ.20ರಂದು ಮುಸ್ಲಿಂ ಬಾಂಧವರಿಂದ ಆಚರಿಸಲಾಗುವ ಶ್ರದ್ಧಾ ಭಕ್ತಿಯ ಈದ್‌ ಮಿಲಾದ್‌ ಹಬ್ಬದ ನಿಮಿತ್ತ ರವಿವಾರ ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಏರ್ಪಡಿಸಲಾಗಿದ್ದ ಶಾಂತಿ ಸಭೆಯಲ್ಲಿ ಸರ್ಕಾರ ಹೊರಡಿಸಿದ 14 ಕೋವಿಡ್‌ ಮಾರ್ಗಸೂಚಿಗಳನ್ನು ವಿವರಿಸಿ ಅವರು ಮಾತನಾಡಿದರು.

ಮಸೀದಿ ಮತ್ತು ದರ್ಗಾಗಳಲ್ಲಿ ನಮಾಜ್‌ ಸಲ್ಲಿಸುವಾಗ ಮಾಸ್ಕ್ ಧರಿಸಿ ಪರಸ್ಪರ ದೈಹಿಕ ಅಂತರ ಕಾಯ್ದುಕೊಳ್ಳಬೇಕು. ಸಾರ್ವಜನಿಕ ಪ್ರದೇಶಗಳಲ್ಲಿ ಧ್ವನಿವರ್ಧಕ ಅಥವಾ ಡಿಜೆ ಬಳಕೆ ಮಾಡುವಂತಿಲ್ಲ. 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರು ಮತ್ತು 10 ವರ್ಷದೊಳಗಿನ ಮಕ್ಕಳು ಮನೆಯಲ್ಲೇ ಹಬ್ಬ ಆಚರಿಸಬೇಕು. ಮಸೀದಿಗಳ ದ್ವಾರದಲ್ಲಿ ಸ್ಯಾನಿಟೈಜೇಷನ್‌ ಮತ್ತು ಹ್ಯಾಂಡ್‌ ವಾಷಿಂಗ್‌ ವ್ಯವಸ್ಥೆ ಕಡ್ಡಾಯವಾಗಿ ಮಾಡಿರಬೇಕು. ನಮಾಜ್‌ ನಂತರ ಈದ್‌ ಶುಭಾಶಯ ಹೇಳುವ ನೆಪದಲ್ಲಿ ಹಸ್ತಲಾಘವ ಹಾಗೂ ಪರಸ್ಪರ ಆಲಿಂಗನ ಮಾಡುವಂತಿಲ್ಲ. ಮಸೀದಿಗಳನ್ನು ಹೊರತುಪಡಿಸಿ ಸಾರ್ವಜನಿಕ ಸ್ಥಳ, ಸಭಾಂಗಣ, ಸಮುದಾಯ ಭವನ, ಶಾದಿ ಮಹಲ್‌ ಸೇರಿದಂತೆ ಮತ್ತಿತರ ತೆರೆದ ಜಾಗಗಳಲ್ಲಿ ಈದ್‌ ಮಿಲಾದ್‌ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ ಆಯೋಜಿಸುವಂತಿಲ್ಲ. ಖಬರಸ್ಥಾನಗಳಲ್ಲಿ ಯಾವುದೇ ಆಚರಣೆಗೆ ಅವಕಾಶ ಇರುವುದಿಲ್ಲ. ಕೋವಿಡ್‌ ಮಾರ್ಗಸೂಚಿಗಳನ್ನು ಉಲ್ಲಂಘಿಸದೆ ಶಾಂತಿ ಸೌಹಾರ್ಧತೆಯಿಂದ ಸರಳವಾಗಿ ಈದ್‌ ಆಚರಿಸಬೇಕು ಎಂದು ಹೇಳಿದರು.

ಬಂಜಾರಾ ಸಮಾಜದ ಅಧ್ಯಕ್ಷ ಶಿವರಾಮ ಪವಾರ, ಮುಸ್ಲಿಂ ಸಮಾಜದ ಮುಖಂಡ ಬಾಬುಮಿಯ್ನಾ, ಬೌದ್ಧ ಸಮಾಜದ ಖಜಾಂಚಿ ಚಂದ್ರಸೇನ ಮೇನಗಾರ ಮಾತನಾಡಿದರು.

ಕ್ರೈಂ ಪಿಎಸ್‌ಐ ತಿರುಮಲೇಶ, ಪ್ರೊಬೆಷನರಿ ಪಿಎಸ್‌ಐ ಅಮೋಜ್‌ ಕಾಂಬಳೆ, ಪುರಸಭೆ ಸದಸ್ಯ ಶರಣು ನಾಟೇಕರ, ಮುಖಂಡರಾದ ಮಹ್ಮದ್‌ ಜಾಫರ್‌, ಮಹ್ಮದ್‌ ಇಕ್ಬಾಲ್‌ ಆಜಾದ್‌, ರಹೆಮಾನ ಖುರೇಶಿ, ರವಿ ಕಾರಬಾರಿ, ಶರಣಬಸು ಸಿರೂರಕರ, ಹರಿ ಗಲಾಂಡೆ, ಶಿವಶಂಕರ ಕಾಶೆಟ್ಟಿ, ಅಲ್ತಾಫ್‌ ಸೌದಾಗರ, ಮಹ್ಮದ್‌ ಅಶ್ರಫ್‌ ಖಾನ್‌, ಗಿರಿಮಲ್ಲಪ್ಪ ಕಟ್ಟಿಮನಿ, ಶೇಖ ಮಹೆಬೂಬ, ಮಹ್ಮದ್‌ ರಶೀದ್‌, ನಾಸೀರ ಹುಸೇನ ಪಾಲ್ಗೊಂಡಿದ್ದರು.

ಪ್ರಾರ್ಥನೆಗೆ ಮಾತ್ರ ಅನುಮತಿ

ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಮೆರವಣಿಗೆಗೆ ಮತ್ತು ಬಹಿರಂಗವಾಗಿ ಮೈದಾನದಲ್ಲಿ ಪ್ರಾರ್ಥನೆಗೆ ಅವಕಾಶ ನೀಡಿಲ್ಲ. ಆದರೆ, ಮಸೀದಿಗಳಲ್ಲಿ ಪ್ರಾರ್ಥನೆಗೆ ಅನುಮತಿ ಮತ್ತು ಸಣ್ಣ ಪ್ರಮಾಣದಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಸೀದಿಗಳಲ್ಲಿ ಗರಿಷ್ಠ 100 ಜನರು ಮಾತ್ರ ಪ್ರಾರ್ಥನೆ ಸಲ್ಲಿಸಬಹುದಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಡಾ| ವೈ.ಎಸ್‌.ರವಿಕುಮಾರ ತಿಳಿಸಿದ್ದಾರೆ.

ಇದನ್ನೂ ಓದಿ: ಗಡಿಕೇಶ್ವಾರದಲ್ಲಿ ಸಿಸ್ಮೋಮಿಟರ್‌ ಅಳವಡಿಕೆ

ಕೊರೊನಾ ಕಾರಣ ಯಾವುದೇ ಮೆರವಣಿಗೆಗೆ ಅನುಮತಿ ಕೊಟ್ಟಿಲ್ಲ. ಪ್ರಾರ್ಥನೆ ಸಂದರ್ಭದಲ್ಲಿ ಸಾಮಾಜಿಕ ಅಂತರ ಸೇರಿದಂತೆ ಕೊರೊನಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಹಬ್ಬದ ನಿಮಿತ್ತ ಅ.19ರಂದು ಪೊಲೀಸ್‌ ಬಿಗಿ ಭದ್ರತೆ ಕೈಗೊಳ್ಳಲಾಗುತ್ತದೆ. ಇಬ್ಬರು ಡಿಸಿಪಿ ಮತ್ತು ಏಳು ಜನ ಎಸಿಪಿ, 600 ಜನ ಸಿಬ್ಬಂದಿ, ಮೂರು ಕೆಎಸ್‌ಆರ್‌ಪಿ ತುಕಡಿ ಮತ್ತು ನಾಲ್ಕು ಸಿಆರ್‌ ತುಕಡಿಗಳನ್ನು ಬಂದೋಬಸ್ತ್ಗೆ ನಿಯೋಜಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಈದ್‌ ಮಿಲಾದ್‌ ಮೆರವಣಿಗೆಗೆ ಅನುಮತಿ ನೀಡುವಂತೆ ಈಗಾಗಲೇ ಜಿಲ್ಲಾಡಳಿತ, ಪೊಲೀಸ್‌ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಸೋಮವಾರ ಮತ್ತೊಮ್ಮೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮೆರವಣಿಗೆಗೆ ಅವಕಾಶ ಕೋರಲಾಗುವುದು. ಸಾಂಕೇತಿಕ ಮೆರವಣಿಗೆ ನಡೆಸಲಿಕ್ಕಾದರೂ ಜಿಲ್ಲಾಡಳಿತ ಅನುಮತಿ ನೀಡಬೇಕು. ಮೊಹಮ್ಮದ್‌ ಅಸಗರ್‌ ಚುಲಬುಲ್‌ ಜಿಲ್ಲಾ ಕಾರ್ಯಾಧ್ಯಕ್ಷ, ಮರ್ಕಜಿ ಸೀರತ್‌ ಸಮಿತಿ ಕೊರೊನಾ ಸೋಂಕು ಇಳಿಮುಖ ಆಗಿದ್ದರಿಂದ ಎಲ್ಲ ರಾಜಕೀಯ ಪಕ್ಷಗಳು ಹಾಗೂ ಇತರ ಸಮಾಜದವರಿಗೆ ಮೆರವಣಿಗೆ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಸ್ವಾಗತಾರ್ಹ. ಆದರೆ ಮುಸ್ಲಿಂ ಸಮುದಾಯದ ಪವಿತ್ರ ಹಬ್ಬವಾದ ಈದ್‌ ಮಿಲಾದ್‌ ಮೆರವಣಿಗೆಗೆ ತಡೆ ನೀಡಿರುವುದು ಖಂಡನೀಯ. ಈದ್‌ ಮಿಲಾದ್‌ ಮೆರವಣಿಗೆಗೆ ಜಿಲ್ಲಾಡಳಿತ ಅವಕಾಶ ಮಾಡಿಕೊಡಬೇಕು. -ಸಚಿನ್‌ ಫರಹತಾಬಾದ್‌, ಅಧ್ಯಕ್ಷ, ಜೈಕನ್ನಡಿಗರ ರಕ್ಷಣಾ ವೇದಿಕೆ

Advertisement

Udayavani is now on Telegram. Click here to join our channel and stay updated with the latest news.

Next