Advertisement

ಪುಟ್ಟ ಕಂದಮ್ಮನ ಪ್ರಾಣ ಉಳಿಸಿದ ನಟ ಮಹೇಶ್ ಬಾಬು

03:13 PM Mar 31, 2021 | Team Udayavani |

ಹೈದರಾಬಾದ್ : ಟಾಲಿವುಡ್ ನಟ ಮಹೇಶ್ ಬಾಬು ರೀಲ್ ಅಲ್ಲ ರಿಯಲ್ ಲೈಫ್‍ಲ್ಲೂ ಹೀರೋ ಅನ್ನೋದು ಮತ್ತೊಂದು ಬಾರಿ ಸಾಬೀತು ಆಗಿದೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಪುಟ್ಟ ಕಂದಮ್ಮನಿಗೆ ಮರುಜನ್ಮ ನೀಡುವ ಮೂಲಕ ‘ಮಹರ್ಷಿ’ ಬಡವರ ಪಾಲಿಗೆ ಆಪ್ತರಕ್ಷಕರಾಗಿದ್ದಾರೆ.

Advertisement

ಸಿನಿಮಾಗಳಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿಯೂ ಪರೋಪಕಾರಿಯಾಗಿರುವ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಇದೀಗ ಟಿ.ಸುಪ್ರಿತಾ ಹೆಸರಿನ ಪುಟ್ಟ ಹುಡಗಿಗೆ ಮರುಜನ್ಮ ನೀಡಿದ್ದಾರೆ. ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಸುಪ್ರಿತಾಳಿಗೆ ಸಹಾಯ ಹಸ್ತ ಚಾಚಿ ಆಕೆಯ ಬದುಕಿಗೆ ಬೆಳಕಾಗಿದ್ದಾರೆ.

ತಮ್ಮ ಚಾರಿಟೇಬಲ್ ಟ್ರಸ್ಟ್ ಮೂಲಕ ಸಾಕಷ್ಟು ಸಾಮಾಜಿಕ ಕಾರ್ಯ ಕೈಗೊಂಡಿರುವ ಮಹೇಶ್ ಬಾಬು, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರಿಗೆ ಆರ್ಥಿಕ ಸಹಾಯ ಮಾಡಿ ಶಸ್ತ್ರ ಚಿಕಿತ್ಸೆ ಮಾಡಿಸುತ್ತಿದ್ದಾರೆ. ಈ ಕಾರ್ಯಕ್ಕೆ ಅವರ ಪತ್ನಿ ನಮ್ರತಾ ಕೂಡ ಕೈ ಜೋಡಿಸಿದ್ದಾರೆ.

ಇತ್ತೀಚಿಗೆ ಸುಪ್ರಿತಾ ಹೆಸರಿನ ಹುಡುಗಿ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿದ್ದರು. ಚಿಕಿತ್ಸೆ ಕೊಡಿಸಲು ಈಕೆಯ ಕುಟುಂಬ ಆರ್ಥಿಕವಾಗಿ ಶಕ್ತವಾಗಿರಲಿಲ್ಲ. ಇದು ಮಹೇಶ್ ಬಾಬು ಅವರ ಗಮನಕ್ಕೆ ಬಂದಿದೆ. ಕೂಡಲೇ ಸ್ಪಂದಿಸಿರುವ ಅವರು, ಆ ಮಗುವನ್ನು ಆಸ್ಪತ್ರೆಗೆ ಕರೆತಂದು, ಶಸ್ತ್ರ ಚಿಕಿತ್ಸೆ ಮಾಡಿಸಿದ್ದಾರೆ.

ಈ ವಿಚಾರವನ್ನು ಮಹೇಶ್ ಬಾಬು ಅವರ ಪತ್ನಿ ನಮ್ರತಾ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಶಸ್ತ್ರ ಚಿಕಿತ್ಸೆಯ ಬಳಿಕ ಸುಪ್ರಿತಾ ಆರೋಗ್ಯವಾಗಿದ್ದಾಳೆ ಹಾಗೂ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾಳೆ ಎಂದು ತಿಳಿಸಿದ್ದಾರೆ. ಈ ಯಶಸ್ವಿ ಚಿಕಿತ್ಸೆ ಕೈಗೊಂಡು ಆಂಧ್ರಪ್ರದೇಶ ಆಸ್ಪತ್ರೆಯ ವೈದ್ಯರಿಗೆ ಧನ್ಯವಾದ ತಿಳಿಸಿದ್ದಾರೆ.

Advertisement

ಇನ್ನು ಕೆಲ ದಿನಗಳ ಹಿಂದೆಯಷ್ಟೆ ಹೃದಯ ಸಂಬಂಧಿ ತೊಂದರೆಗೆ ಒಳಗಾಗಿದ್ದ ಒಂದು ತಿಂಗಳ ಮಗುವಿಗೆ ಮಹೇಶ್ ಬಾಬು ಕುಟುಂಬ ನೆರವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next