Advertisement

ಇಂದಿನ ಮಕ್ಕಳೇ ನಾಳಿನ ಸಾಧಕರು

06:37 PM Jun 06, 2019 | mahesh |

ಅಂದು ಪುಟಾಣಿ ಸಂಜನಾ, ತನಗೆ ಶಾಲೆಯಲ್ಲಿ ಭಾವಗೀತೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂದ ಬಗ್ಗೆ ಚೈತ್ರಾ ಆಂಟಿಯ ಬಳಿ ಹೇಳಿ ಸಂಭ್ರಮಿಸುತ್ತಿದ್ದಳು. “ಹೌದಾ ಚಿನ್ನಿ? ಎಲ್ಲಿ, ಒಂದ್ಸಲ ಆ ಹಾಡನ್ನು ನಂಗಾಗಿ ಹಾಡ್ತೀಯಾ?’ ಅಂತ ಹುರಿದುಂಬಿಸಿದಳು. ಮರಿ ಕೋಗಿಲೆಯಂತೆ ಹಾಡತೊಡಗಿದ ಆ ಪುಟಾಣಿಯ ಹಾಡು ಕೇಳಲು ಸುಮಾರು ಜನ ನೆರೆದಿದ್ದರು. ಎಲ್ಲರಿಂದ ಚಪ್ಪಾಳೆ ಗಿಟ್ಟಿಸಿಕೊಂಡ ಸಂಜನಾಳನ್ನು ಚೈತ್ರಾ, “ನೀನು ಸಂಗೀತ ಕ್ಲಾಸ್‌ಗೆ ಹೋಗ್ತಿದ್ದೀಯಾ?’ ಅಂತ ಕೇಳಿದಾಗ, ಹುಡುಗಿಯ ಮುಖ ಸಪ್ಪಗಾಯಿತು. ಯಾಕೆ ಅಂತ ವಿಚಾರಿಸಿದಾಗ, ಸಂಜನಾ ಕೊಟ್ಟ ಉತ್ತರ ಕೇಳಿ ಚೈತ್ರಾಳಿಗೆ ಬೇಸರವಾಯಿತು.

Advertisement

“ಅಮ್ಮ ಬೆಳಿಗ್ಗೆ ಎದ್ದು, ನನ್ನನ್ನು ಎಬ್ಬಿಸಿ ಶಾಲೆಗೆ ರೆಡಿ ಮಾಡಿ, ಅಪ್ಪನ ಡಬ್ಬಿಗೂ ತಿಂಡಿ ತುಂಬಿ, ಅಪ್ಪನನ್ನು ಕಚೇರಿಗೆ, ನನ್ನನ್ನು ಶಾಲೆಗೆ ಕಳಿಸ್ತಾಳೆ. ಆಮೇಲೆ, ಅವಳೂ ಆಫೀಸಿಗೆ ಹೊರಡ್ತಾಳೆ. ಅಪ್ಪ-ಅಮ್ಮ ಬರೋದೇ ರಾತ್ರಿ 8 ಗಂಟೆಗೆ. ನಾನು ಶಾಲೆ ಮುಗಿಸಿ, ನೇರವಾಗಿ ಅಜ್ಜ-ಅಜ್ಜಿ ಮನೆಗೆ ಹೋಗ್ತಿàನಿ. ಅಲ್ಲಿಂದ ಸಂಗೀತ ಕ್ಲಾಸ್‌ಗೆ ತುಂಬಾ ದೂರ ಆಗುತ್ತೆ. ಅಜ್ಜ-ಅಜ್ಜಿಗೆ ನನ್ನ ಜೊತೆ ಅಲ್ಲಿಯ ತನಕ ನಡೆಯೋಕೆ ಆಗಲ್ಲ. ನಾನು ಒಬ್ಬಳೇ ಹೋಗೋದು ಬೇಡ ಅಂತಾಳೆ ಅಮ್ಮ. ಅಜ್ಜಿ ಮನೆಯ ಪಕ್ಕದಲ್ಲೇ ಇದೆ ಅಂತ ಕರಾಟೆ ಕ್ಲಾಸ್‌ಗೆ ಸೇರಿಸಿದ್ದಾರೆ ನನ್ನ. ನನಗೆ ಕರಾಟೆಗಿಂತ ಸಂಗೀತ ಕಲಿಯಬೇಕು ಅಂತ ಆಸೆ ಇದೆ’ ಎಂದಳು ಸಪ್ಪೆಯಾಗಿ.

ಇಂದು ಬಹುತೇಕ ತಾಯಂದಿರಿಗೆ ನೌಕರಿಗೆ ಹೋಗುವುದು ಅನಿವಾರ್ಯ. ದಿನನಿತ್ಯ ಮನೆ, ಕಚೇರಿ, ಮಕ್ಕಳನ್ನು ಶಾಲೆಗೆ ಕಳುಹಿಸುವ ಸಿದ್ಧತೆಯಲ್ಲಿ ಬ್ಯುಸಿಯಾಗಿರುವ ಅವರಿಗೆ, ಮಕ್ಕಳ ಜೊತೆಗೆ ಸಮಯ ಕಳೆಯಲು ಟೈಮ್‌ ಇಲ್ಲ. ಅಡುಗೆ ಮಾಡಿ, ಮಕ್ಕಳಿಗೆ ತಿನ್ನಿಸಿ, ಅವರನ್ನು ಶಾಲೆಗೆ ಕಳುಹಿಸಿ, ಹೋಂವರ್ಕ್‌ ಮಾಡಿಸಿದರೆ ದೊಡ್ಡ ಜವಾಬ್ದಾರಿ ಕಳೆದಂತೆ ಎಂದು ಭಾವಿಸುವ ಅವರಿಗೆ ತಮ್ಮ ಮಗುವಿನಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ, ಪೋಷಿಸಲು ಸಾಧ್ಯವಾಗದೇ ಇರಬಹುದು.

ಎಲ್ಲ ಮಕ್ಕಳಲ್ಲೂ ಪ್ರತಿಭೆಯೊಂದು ಅಡಗಿರುತ್ತದೆ. ಅದನ್ನು ಮೊದಲು ಗುರುತಿಸಬೇಕಾದವರು ಹೆತ್ತವರು. ಆಗ ಮಾತ್ರ ಮಕ್ಕಳಲ್ಲಿ ಒಬ್ಬ ಮಹಾನ್‌ ಸಂಗೀತಕಾರ, ನಿರ್ದೇಶಕ, ಕ್ರೀಡಾಪಟು ಬೆಳೆಯುತ್ತಾನೆ. ಕೆಲಸದ ಒತ್ತಡದಲ್ಲಿ ಪೋಷಕರು, ಮಕ್ಕಳನ್ನು ಸರಿಯಾಗಿ ಅರಿತುಕೊಳ್ಳದಿದ್ದರೆ ಅವರ ಪ್ರತಿಭೆ ಹೊರಬರಲು ಸಾಧ್ಯವಿಲ್ಲ. ಹಾಗಂತ ಮಕ್ಕಳ ಮೇಲೆ ಸಲ್ಲದ ಒತ್ತಡ ಹೇರುವುದೂ ಸರಿಯಲ್ಲ. ಯಾವ ಕ್ಷೇತ್ರದಲ್ಲಿ ಮಕ್ಕಳು ಆಸಕ್ತಿ ತೋರಿಸುತ್ತಾರೋ, ಅದರಲ್ಲಿಯೇ ಮುಂದುವರಿಯುವಂತೆ ಪ್ರೇರೇಪಿಸಿದರೆ ಒಳ್ಳೆಯದು.

Advertisement

Udayavani is now on Telegram. Click here to join our channel and stay updated with the latest news.

Next