Advertisement

ಇಂದು ವಾಸ್ಕೊದ ಬೈನಾದಲ್ಲಿರುವ ಕನ್ನಡಿಗರ ಮನೆ ತೆರವು?

08:15 AM Sep 26, 2017 | Team Udayavani |

ಪಣಜಿ (ವಾಸ್ಕೊ): ವಾಸ್ಕೊದ ಬೈನಾದಲ್ಲಿ ಖಾಸಗಿ ಜಾಗದಲ್ಲಿರುವ ಕನ್ನಡಿಗರ 55 ಮನೆಗಳನ್ನು ಮಂಗಳವಾರ (ಸೆ.26) ತೆರವುಗೊಳಿಸಲು ದಕ್ಷಿಣ ಗೋವಾ ಉಪಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಕಳೆದ ವಾರವಷ್ಟೇ ಈ ಕನ್ನಡಿಗರ ಮನೆ ತೆರವಿಗೆ ತುರ್ತು ತಡೆ ನೀಡಿದ್ದ ಇದೇ ಉಪಜಿಲ್ಲಾಧಿಕಾರಿಗಳು ಇದೀಗ ಇದ್ದಕ್ಕಿದ್ದಂತೆ ಕನ್ನಡಿಗರ ಮನೆ ತೆರವಿಗೆ ಆದೇಶ ಹೊರಡಿಸಿದ್ದಾರೆ.

Advertisement

ಇದರಿಂದಾಗಿ ಬೈನಾದಲ್ಲಿನ ಕನ್ನಡಿಗರು ಮತ್ತೆ ಬೀದಿಗೆ ಬೀಳುವ ಆತಂಕ ಎದುರಾಗಿದೆ. ನಗರಪಾಲಿಕೆಯು ಬೈನಾ ಆಪರೇಶನ್‌ ತೆರವು ಕಾರ್ಯಾಚರಣೆ ಕೈಗೊಳ್ಳಲು ಸಜ್ಜಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಪರಿಸರದಲ್ಲಿಯೇ ಸುಮಾರು 40ಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯದಾದ ಬಸವಣ್ಣನ ಗುಡಿಯಿದೆ. ಈ ಗುಡಿ ಕೂಡ ತೆರವುಗೊಳ್ಳುವ ಸಾಧ್ಯತೆಯಿದೆ. ಬೈನಾದ ಖಾಸಗಿ ಜಮೀನಿನಲ್ಲಿ ಕಳೆದ 40 ವರ್ಷಗಳಿಂದ ಈ 55 ಕನ್ನಡಿಗರ ಕುಟುಂಬಗಳು ವಾಸಿಸುತ್ತಿದ್ದವು. ಇದು ಚರ್ಚ್‌ವೊಂದರ ಜಾಗವಾಗಿತ್ತು. ಹಲವು ವರ್ಷಗಳ ನಂತರ ಚರ್ಚ್‌ ಈ ಜಾಗವನ್ನು ಆನಂದ ಬೋಸ್‌ ಕಂಪನಿಗೆ ಮಾರಾಟ ಮಾಡಿತ್ತು.

ಈ ಜಾಗವನ್ನು ಮಾರಾಟ ಮಾಡುವ ಸಂದರ್ಭದಲ್ಲಿ ಇಲ್ಲಿ ವಾಸಿಸುವ ಕನ್ನಡಿಗರ ಕುಟುಂಬಗಳ ಜವಾಬ್ದಾರಿ ತೆಗೆದುಕೊಳ್ಳುವ ಕುರಿತಂತೆಯೂ ಕಂಪನಿಗೆ ಸೂಚಿಸಿತ್ತು ಎನ್ನಲಾಗಿದೆ. ಆದರೆ, ಸದ್ರಿ ಕಂಪನಿಯು ಅನೇಕ ವರ್ಷಗಳಿಂದ ವಾಸಿಸುತ್ತಿರುವ ಈ ಕನ್ನಡಿಗರಿಗೆ ಯಾವುದೇ ಪರಿಹಾರ ಅಥವಾ ಪುನರ್ವಸತಿಯನ್ನೂ ನೀಡದೆ ಮನೆ ತೆರವುಗೊಳಿಸಲು ಮುಂದಾಗಿದೆ. ವಾಸ್ಕೊ ಮುರಗಾಂವ ನಗರಪಾಲಿಕೆ ಬೈನಾದಲ್ಲಿರುವ 55 ಕನ್ನಡಿಗರ ಮನೆ ಮಾಲೀಕರಿಗೆ ಸೆ.7 ರಂದು ಮನೆ ಖಾಲಿ ಮಾಡುವಂತೆ ನೋಟಿಸ್‌ ಜಾರಿಗೊಳಿಸಿತ್ತು. ನಿವಾಸಿಗಳು ಇದರ ವಿರುದ್ಧ ಮುಂಬೈ ಹೈಕೋರ್ಟ್‌ನ ಗೋವಾ ಖಂಡಪೀಠದ ಮೆಟ್ಟಿಲೇರಿದ್ದರು. ಆದರೆ, ನ್ಯಾಯಾಲಯ ಈ ಪ್ರಕರಣವನ್ನು ರದ್ದುಗೊಳಿಸಿತ್ತು. ನಂತರ ನಗರಪಾಲಿಕೆ ಸೆ.15 ರಂದು ಮನೆಗಳನ್ನು ತೆರವುಗೊಳಿಸಲು ಸಿದ್ಧತೆ ನಡೆಸಿತ್ತು. ಈ ಸಂದರ್ಭದಲ್ಲಿ ಮನೆಗಳ ಮಾಲೀಕರು ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದುಕೊಳ್ಳಲು ಪ್ರಥಮವರ್ಗ ದಂಡಾಧಿ ಕಾರಿಗಳ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ಈ ಪ್ರಯತ್ನವೂ ಸಫಲವಾಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next