Advertisement

ಇಂದು ಖಗ್ರಾಸ ಚಂದ್ರಗ್ರಹಣ

06:00 AM Jul 27, 2018 | Team Udayavani |

ಬೆಂಗಳೂರು: ಶುಕ್ರವಾರ ಖಗ್ರಾಸ ಚಂದ್ರ ಗ್ರಹಣ ಸಂಭವಿಸುವ ಕಾರಣ ರಾಜ್ಯದ ಕೆಲವು ದೇವಾಲಯಗಳಲ್ಲಿ ವಿಶೇಷ ಪೂಜೆ,
ಹವನ, ಹೋಮ ಆಯೋಜಿಸಲಾಗಿದೆ. 

Advertisement

ಬಹುತೇಕ ದೇವಾಲಯಗಳಲ್ಲಿ ಸಂಜೆಯ ನಂತರ ದರ್ಶನ, ಪೂಜೆ ಇರುವುದಿಲ್ಲ.ಗ್ರಹಣ ಮುಗಿದ ನಂತರ ಶನಿವಾರ
ಮುಂಜಾನೆ ವಿಶೇಷ ಪೂಜಾ ಕಾರ್ಯಗಳು ನಡೆಯಲಿವೆ.

ಶತಮಾನದ ದೀರ್ಘಾವಧಿ ಚಂದ್ರಗ್ರಹಣ: ಈ ಶತಮಾನದ ದೀರ್ಘಾವಧಿ ಚಂದ್ರಗ್ರಹಣ ಇದಾಗಿದೆ.ರಾತ್ರಿ 11.54ಕ್ಕೆ ಚಂದ್ರಗ್ರಹಣ ಆರಂಭವಾಗಲಿದೆ. ಮಧ್ಯರಾತ್ರಿ 1 ಗಂಟೆಯಿಂದ 2.43ರ ವರೆಗೆ ಸಂಪೂರ್ಣ ಗ್ರಹಣ ಗೋಚರಿಸಲಿದೆ. ಮುಂಜಾನೆ 3.49ಕ್ಕೆ ಗ್ರಹಣ ಬಿಡಲಿದೆ. ಈ ವಿದ್ಯಮಾನವನ್ನು ಬರಿಗಣ್ಣಿನಿಂದ ನೋಡ ಬಹುದು. ಭೂಮಿಯ ವಾತಾ ವರಣದಲ್ಲಿ ಹಾದು ಹೋಗುವ ಸೂರ್ಯನ ಕಿರಣಗಳಚದುರುವಿಕೆಯಿಂದ ಈ ಸಂದರ್ಭ ಚಂದ್ರ ರಕ್ತವರ್ಣದಲ್ಲಿ ಕಂಡು ಬರುತ್ತಾನೆ. ಇದರೊಂದಿಗೆ ಕಳೆದ 15 ವರ್ಷದ ಅವಧಿಯಲ್ಲೇ ಭೂಮಿಗೆ ಮಂಗಳ ಗ್ರಹ ಹತ್ತಿರದಲ್ಲಿದ್ದು, ಜು.27ರಂದು ಸೂರ್ಯ, ಭೂಮಿ ಮತ್ತು ಮಂಗಳ ಒಂದೇ ಸಾಲಿನಲ್ಲಿ ಬರಲಿವೆ. ಭೂಮಿ ಹಾಗೂ ಮಂಗಳ ಗ್ರಹಗಳ ನಡುವಿನ ಅಂತರ ಜು.31ರಂದು ಕಡಿಮೆ ಇರಲಿದ್ದು, ಆ ದಿನ ಮಂಗಳ ಗ್ರಹ ಪ್ರಕಾಶಮಾನ ವಾಗಿರುತ್ತದೆ ಎಂದು ಖಗೊಳ ತಜ್ಞರು ತಿಳಿಸಿದ್ದಾರೆ.

ಧಾರ್ಮಿಕ ಪಂಚಾಗದ ಪ್ರಕಾರ ಚಂದ್ರನಿಗೆ ಖಗ್ರಾಸ ಕೇತು ಗ್ರಹ ಣ ಸಂಭವಿಸುವ ಕಾರಣ ಉತ್ತರಾಷಾಢ ನಕ್ಷತ್ರ ಮಕರ ರಾಶಿ ಯಲ್ಲಿ ಸ್ಪರ್ಶ,ಶ್ರವಣ ನಕ್ಷತ್ರ ಮಕರ ರಾಶಿಯಲ್ಲಿ ಮೋಕ್ಷ ನಡೆ ಯಲಿದೆ.

ಪೂಜೆ-ಹೋಮಕ್ಕೆ ಮೊರೆ ಹೋದ ರಾಜಕೀಯ ನಾಯಕರು
ಬೆಂಗಳೂರು:
ಕೇತುಗ್ರಸ್ಥ ಚಂದ್ರ ಗ್ರಹಣದಿಂದ ಕೆಲವು ರಾಶಿಯವರಿಗೆ ಕೆಡಕು ಉಂಟಾಗಲಿದೆ ಎಂಬ ಜ್ಯೋತಿಷಿಗಳ ಹೇಳಿಕೆಯಿಂದ ಆತಂಕಗೊಂಡಿರುವ ರಾಜಕೀಯ ನಾಯಕರು ಗುಟ್ಟಾಗಿ ಪೂಜೆ-ಹೋಮ ಆಯೋಜಿಸಿದ್ದಾರೆ. ಎಚ್‌.ಡಿ. ಕುಮಾರಸ್ವಾಮಿ ಸಹಿತ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕುಟುಂಬ ಗುರುವಾರ ತಿರುಪತಿಗೆ ಭೇಟಿ ನೀಡಿ ವೆಂಕಟೇಶ್ವರನ ದರ್ಶನ ಪಡೆದಿದೆ.

Advertisement

ಶುಕ್ರವಾರ ಸಚಿವ ಎಚ್‌.ಡಿ.ರೇವಣ್ಣ ಅವರು ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ವಿಶೇಷ ಹೋಮ ಆಯೋಜಿಸಿದ್ದಾರೆ.

ಪ್ರತಿಪಕ್ಷ ನಾಯಕ ಯಡಿಯೂರಪ್ಪ ಅವರು ಈಗಾಗಲೇ ಉಡುಪಿಯ ಜುತ್ಯಾರು ಆನೆಗುಂದಿ ಮಠ ಬಳಿ ಕುಟುಂಬ ಸಮೇತ ಶತಚಂಡಿಕಾಯಾಗ ಮತ್ತು ಅತಿರುದ್ರ ಮಹಾಯಾಗ ನಡೆಸಿದ್ದಾರೆ. ಹೆಸರು, ನಕ್ಷತ್ರ, ಗೋತ್ರ ಹೇಳಿದರೆ ಸಂಬಂಧಪಟ್ಟವರು ಸ್ಥಳದಲ್ಲಿ ಇಲ್ಲದಿದ್ದರೂ ಅವರ ಹೆಸರಿನಲ್ಲಿ ವಿಶೇಷ ಪೂಜೆ, ಹೋಮ ನೆರವೇರಿಸಲಾಗುತ್ತದೆ. ಹೀಗಾಗಿ, ಕೆಲವರು ತಮಿಳುನಾಡು ಹಾಗೂ ಕೇರಳದ ದೇವಾಲಯಗಳಲ್ಲಿ ಪೂಜೆ ನಿಗದಿಪಡಿಸಿದ್ದಾರೆ. ಕೆಲವೆಡೆ ಆನ್‌ ಲೈನ್‌ ಮೂಲಕವೂ ಪೂಜೆ ಮತ್ತು ಹೋಮ ಮಾಡಿಸಲು ಮುಂಗಡ ಬುಕ್ಕಿಂಗ್‌ ಮಾಡಲಾಗಿದೆ.

ಚಾಮುಂಡಿಬೆಟ್ಟದಲ್ಲಿ ರಾತ್ರಿ 9.30ಕ್ಕೆ ಬಾಗಿಲು ಬಂದ್‌
ಮೈಸೂರು:
ಚಾಮುಂಡಿಬೆಟ್ಟದ ಶ್ರೀಚಾಮುಂಡೇಶ್ವರಿ ದೇವಸ್ಥಾನದ ಬಾಗಿಲನ್ನು ಶುಕ್ರವಾರ ಮುಂಜಾನೆ 5.30ಕ್ಕೆ ತೆರೆದು ರಾತ್ರಿ 9.30ಕ್ಕೆ ಅಭಿಷೇಕದ ನಂತರ ಮುಚ್ಚಲಾಗುತ್ತದೆ. 

ಆಷಾಢ ಶುಕ್ರವಾರಗಳಲ್ಲಿ ರಾತ್ರಿ 11.30ರವರೆಗೂ ಭಕ್ತಾದಿಗಳಿಗೆ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗುತ್ತಿತ್ತು. ಆದರೆ, ಎರಡನೇ ಆಷಾಢ ಶುಕ್ರವಾರವೇ ಚಂದ್ರಗ್ರಹಣ ಸಂಭವಿಸುತ್ತಿರುವುದರಿಂದ ರಾತ್ರಿ 9.30ಕ್ಕೆ ದೇವಸ್ಥಾನಕ್ಕೆ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಶನಿವಾರ ಬೆಳಗ್ಗೆ 8.30ಕ್ಕೆ ಎಂದಿನಂತೆ ಬಾಗಿಲು ತೆರೆದು ಶುದ್ಧ ಕಾರ್ಯದ ನಂತರ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ದೇವಸ್ಥಾನದ ಪ್ರಧಾನ ಆಗಮಿಕ ಡಾ.ಶಶಿಶೇಖರ ದೀಕ್ಷಿತ್‌ ತಿಳಿಸಿದ್ದಾರೆ. ಲಲಿತ್‌ ಮಹಲ್‌ ಹೆಲಿಪ್ಯಾಡ್‌ ನಿಂದ ಚಾಮುಂಡಿಬೆಟ್ಟಕ್ಕೆ ಕಲ್ಪಿಸಿರುವ ಉಚಿತ ಬಸ್‌ ಸಂಚಾರ ಸಂಜೆ 6 ಗಂಟೆಗೆ ಸ್ಥಗಿತಗೊಳ್ಳಲಿದೆ. 

ಧರ್ಮಸ್ಥಳ ಪೂಜೆಯಲ್ಲಿ ಬದಲಾವಣೆಯಿಲ್ಲ
ಬೆಳ್ತಂಗಡಿ:
ಗ್ರಹಣ ಪ್ರಯುಕ್ತ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನ ಹಾಗೂ ಪೂಜೆ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಎಂದಿನಂತೆ ಪೂಜೆಗಳು ನಡೆಯಲಿದ್ದು, ಅನ್ನಪೂರ್ಣಛತ್ರದಲ್ಲಿ ಸಂಜೆ 6.30ರಿಂದ 8ರ ವರೆಗೆ ಮಾತ್ರ ಅನ್ನದಾನ ನಡೆಯುತ್ತದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ಸಂಜೆ 6ರ ಬಳಿಕ ದರ್ಶನವಿಲ್ಲ
ಶ್ರೀರಂಗಪಟ್ಟಣ:
ಶ್ರೀರಂಗಪಟ್ಟಣದ ಪುರಾತನ ರಂಗನಾಥ ಸ್ವಾಮಿ ದೇವಾಲಯ, ನಿಮಿಷಾಂಬ, ಚಂದ್ರವನ ಆಶ್ರಮದ ಚಂದ್ರಮೌಳೇಶ್ವರ ದೇವಾಲಯಗಳಲ್ಲಿ ಸಂಜೆ 6 ಗಂಟೆಯ ಬಳಿಕ ದೇವರ ದರ್ಶನ ಇರುವುದಿಲ್ಲ.ಶನಿವಾರ ಬೆಳಗ್ಗೆ 6 ಗಂಟೆಯಿಂದ ದೇವರಿಗೆ ವಿಶೇಷ ಪೂಜೆ ನಡೆಯಲಿದೆ .

ಬನಶಂಕರಿ ದೇವಿಗೆ ಜಲಾಭಿಷೇಕ
ಬಾಗಲಕೋಟೆ:
ಚಂದ್ರಗ್ರಹಣ ಹಿನ್ನೆಲೆಯಲ್ಲಿ ಶುಕ್ರವಾರ ಬಾದಾಮಿ ಬನಶಂಕರಿ ದೇವಿ ದೇವಸ್ಥಾನದಲ್ಲಿ ಎಂದಿನಂತೆ ಪೂಜೆ-ಪುನಸ್ಕಾರಗಳು ನಡೆಯಲಿದ್ದು,ದರ್ಶನದಲ್ಲಿ ಯಾವುದೇ ವ್ಯತ್ಯಯ ಆಗಲ್ಲ. ಆದರೆ, ಗ್ರಹಣ ವೇಳೆ ಜಲಾಭಿಷೇಕ ನಡೆಸಲಾಗುವುದು. ಗ್ರಹಣದ ವೇಳೆ ಗರ್ಭ ಗುಡಿಯೊಳಗೆ ಭಕ್ತರಿಗೆ ಪ್ರವೇಶ ನಿಷಿದ್ಧ ಎಂದು ಅರ್ಚಕ ಮಹೇಶ ಪೂಜಾರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next