Advertisement

ಇಂದು ಚೆನ್ನಕೇಶವ ರಥೋತ್ಸವ

11:56 AM Jan 10, 2018 | Team Udayavani |

ಸುಳ್ಯ : ಶ್ರೀ ಚೆನ್ನಕೇಶವ ದೇವರ ಸನ್ನಿಧಿಯಲ್ಲಿ ಪೂರ್ವಶಿಷ್ಟ ಸಂಪ್ರದಾಯದಂತೆ ನಡೆಯುವ ವರ್ಷಾವಧಿ ಜಾತ್ರೆಯಲ್ಲಿ ಜ. 10 ರಂದು ರಾತ್ರಿ ರಥೋತ್ಸವ ನಡೆಯಲಿದೆ. ಮಂಗಳವಾರ ದೇವಸ್ಥಾನ ಹಾಗೂ ಸಂತೆ ಮಳಿಗೆಗಳಲ್ಲಿ ಸಾಕಷ್ಟು ಜನಸಂದಣಿ ಇತ್ತು. ರಥಬೀದಿಯಿಂದ ಎಪಿಎಂಸಿ ತನಕದ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಿ, ಪಾದಚಾರಿಗಳ ಬಳಕೆಗೆ ಸೀಮಿತಗೊಳಿಸಲಾಗಿತ್ತು.

Advertisement

ಬುಧವಾರ ಬೆಳಗ್ಗೆ ದೊಡ್ಡ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಲಿದೆ. ರಾತ್ರಿ ಕಲ್ಕುಡ ದೈವಗಳ ಭಂಡಾರ ಬಂದ
ಅನಂತರ ಧಾರ್ಮಿಕ ಕಾರ್ಯಕ್ರಮಗಳು ಮುಗಿದು ವೈಭವದ ರಥೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಸುಮಾರು 12 ಗಂಟೆಯ ಹೊತ್ತಿಗೆ ದೇಗುಲದ ಪ್ರಾಂಗಣದಿಂದ ತೇರನ್ನು ಎಳೆಯಲಾಗುತ್ತದೆ. ರಥಬೀದಿಯಲ್ಲಿ ಸಾಗಿ, ಮುಖ್ಯ ರಸ್ತೆಯ ದೇವರ ಕಟ್ಟೆಯ ತನಕ ಸಂಚರಿಸಿ, ಅನಂತರ ರಥ ದೇವಾಲಯಕ್ಕೆ ಹಿಂದಿರುಗುವ ಸಂಪ್ರದಾಯ. ಸಾವಿರಾರು
ಸಂಖ್ಯೆಯಲ್ಲಿ ನೆರೆದ ಭಕ್ತರು ರಥ ಎಳೆಯುವ ಪುಣ್ಯಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆ.

ಸಂಚಾರ ನಿಷೇಧ
ಸುರಕ್ಷತೆಯ ದೃಷ್ಟಿಯಿಂದ ಮುಖ್ಯ ರಸ್ತೆಯಿಂದ ರಥಬೀದಿ ಸಂಪರ್ಕ ರಸ್ತೆಯನ್ನು ಎಪಿಎಂಸಿ ತನಕ ಮಂಗಳವಾರ ಸಂಜೆಯೇ ಬಂದ್‌ ಮಾಡಿ, ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ರಥಬೀದಿ ರಸ್ತೆಯ ಎರಡು ಬದಿಗಳಲ್ಲಿ ಸಂತೆ ಮಾರುಕಟ್ಟೆ ಇದ್ದು, ಜನಜಂಗುಳಿ ಇರುತ್ತದೆ. ರಥ ಸಂಚಾರವೂ ಇದೇ ರಸ್ತೆಯಲ್ಲಿ ಸಾಗುವ ಕಾರಣ ವಾಹನ
ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿಲ್ಲ.

ತಾಲೂಕು ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸುವ ಭಕ್ತರು, ಮುಖ್ಯ ರಸ್ತೆಯ ಒಂದು ಬದಿಗಳಲ್ಲಿ ಮಾತ್ರ ವಾಹನ
ನಿಲ್ಲಿಸಬಹುದು. ಬೈಕ್‌ ಹೊರತುಪಡಿಸಿ ಮಿಕ್ಕ ವಾಹನಗಳನ್ನು ಪ್ರತ್ಯೇಕ ಸ್ಥಳದಲ್ಲಿ ನಿಲುಗಡೆ ಮಾಡಬೇಕಿದೆ ಎಂದು ನಗರ ಠಾಣಾ ಪೊಲೀಸರು ತಿಳಿಸಿದ್ದಾರೆ.

ಕೆಮರಾ ಕಣ್ಗಾವಲು
ಈ ಬಾರಿ ಜಾತ್ರಾ ಸುರಕ್ಷತೆಗೆ ಅತ್ಯಾಧುನಿಕ ಸಿಸಿ ಕೆಮರಾಗಳು ಸಾಥ್‌ ನೀಡಲಿವೆ. ನಗರದ ಆಯಕಟ್ಟಿನ ನಾಲ್ಕು ಸ್ಥಳಗಳಲ್ಲಿ ಹದಿನಾರು ಸಿಸಿ ಕೆಮರಾ ಅಳವಡಿಸಿದ್ದು, ಠಾಣೆಯಿಂದಲೇ ಸಂಚಾರ, ಇನ್ನಿತರ ಕಾನೂನು ಸಂಬಂಧಿ ಚಟುವಟಿಕೆಯನ್ನು ಗಮನಿಸಲಾಗುತ್ತದೆ. ಇದು ಭದ್ರತೆಗೆ ಇನ್ನಷ್ಟು ಸಹಕಾರ ನೀಡಲಿದೆ.

Advertisement

ವಾಲಸಿರಿ ಉತ್ಸವ
ಮಂಗಳವಾರ ಬೆಳಗ್ಗೆ ಜಾತ್ರೆಯ ಹಿನ್ನೆಲೆಯಲ್ಲಿ ಪೂಜಾ ಕಾರ್ಯಕ್ರಮಗಳು ನಡೆದವು. ಅಜ್ಜಾವರ ಶ್ರೀ ಶಂಕರ ಭಾರತೀ
ವೇದ ಪಾಠಶಾಲಾ ವಿದ್ಯಾರ್ಥಿಗಳಿಂದ ವೇದ ಪಾರಾಯಣ ನಡೆಯಿತು. ರಾತ್ರಿ ಮಿತ್ತೂರು ದೈವಗಳ ಭಂಡಾರ ಮತ್ತು
ಕಾನತ್ತಿಲ ದೈವಗಳ ಭಂಡಾರ ಆಗಮಿಸಿ, ಅನಂತರ ವಾಲಸಿರಿ ಉತ್ಸವ ನಡೆಯಿತು. ಈ ಸಂದರ್ಭ ಆಡಳಿತ ಮೊಕ್ತೇಸರ ಡಾ| ಹರಪ್ರಸಾದ್‌ ತುದಿಯಡ್ಕ ಸಹಿತ ಸಮಿತಿ ಸದಸ್ಯರು, ನೂರಾರು ಭಕ್ತರು ಉಪಸ್ಥಿತರಿದ್ದರು.

ಕೃಷಿ ವಸ್ತುಪ್ರದರ್ಶನಕ್ಕೆ ಚಾಲನೆ
ಜಾತ್ರೆ ಅಂಗವಾಗಿ ಕೃಷಿ ಇಲಾಖೆಯಿಂದ ಗುರುಭವನದ ವಠಾರದಲ್ಲಿ ಆಯೋಜಿಸಿದ ಕೃಷಿ ವಸ್ತು ಪ್ರದರ್ಶನಕ್ಕೆ ಚಾಲನೆ
ನೀಡಲಾಯಿತು. ವಸ್ತು ಪ್ರದರ್ಶನವನ್ನು ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ಉದ್ಘಾಟಿಸಿದರು. ತಾ.ಪಂ. ಸದಸ್ಯ ತೀರ್ಥರಾಮ, ಸಹಾಯಕ ಕೃಷಿ ನಿರ್ದೇಶಕ ಕೆ.ಜಿ. ಪಾಲಿಚಂದ್ರ, ತಾಂತ್ರಿಕ ಅಧಿಕಾರಿ ಮೋಹನ್‌ ನಂಗಾರ್‌ ಉಪಸ್ಥಿತರಿದ್ದರು.

ಹೆಚ್ಚುವರಿ ಪೊಲೀಸ್‌
ಜಾತ್ರೆಗೆ ಭದ್ರತಾ ದೃಷ್ಟಿಯಿಂದ ಪುತ್ತೂರು ಸಬ್‌ ಡಿವಿಜನ್‌ ವ್ಯಾಪ್ತಿಯಿಂದ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಗೃಹರಕ್ಷಕ ದಳ, ಪೊಲೀಸರು ಸೇರಿ 150ಕ್ಕೂ ಅಧಿಕ ಮಂದಿ ಭದ್ರತಾ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ ಎಂದು ಸುಳ್ಯ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಮಂಜುನಾಥ ‘ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next