ಚಿಕ್ಕಬಳ್ಳಾಪುರ: ತಂಬಾಕು ಉತ್ಪನ್ನಗಳ ಸೇವನೆಯಿಂದ ಮಾನವನ ಆರೋಗ್ಯದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ಹಿನ್ನೆಲೆಯಲ್ಲಿ ತಾಲೂಕಿನ ನಂದಿ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ಕೋಟ್ಪಾ ಕಾಯ್ದೆಯಡಿ ಗ್ರಾಮದ ವಿವಿಧ ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿ ತಂಬಾಕು ಉತ್ಪನ್ನಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಾಬುರೆಡ್ಡಿ ಹಾಗೂ ತಾಲೂಕು ಅರೋಗ್ಯಾಧಿಕಾರಿ ಡಾ.ಮಂಜುಳಾ ಅವರ ನೇತೃತ್ವದಲ್ಲಿ ತಾಲೂಕಿನ ನಂದಿ ಗ್ರಾಮ ವ್ಯಾಪ್ತಿಯಲ್ಲಿ ವಿವಿಧ ಅಂಗಡಿಗಳ ಮಳಿಗೆಗಳ ಮೇಳೆ ದಾಳಿ ನಡೆಸಿ ನಿಷೇಧಿತ ಪ್ರದೇಶದಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಮಾಲಿಕರಿಗೆ ದಂಡ ವಿಧಿಸಲಾಯಿತು.
ಗ್ರಾಮದ ಚಹಾದ ಅಂಗಡಿ, ಕಾಂಡಿ ಮೆಂಟ್ಸ್, ಸರಕು ಮಾರಾಟ ಅಂಗಡಿಗಳ ಮೇಲೆ ಆಂದೋಲನದ ರೀತಿಯಲ್ಲಿ ಕಾರ್ಯಕ್ರಮ ನಡೆಸಲಾ ಯಿತು. ತನಿಖಾ ತಂಡದ ಜೊತೆ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು. ಈ ವೇಳೆ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಸೇವನೆ ಬಗ್ಗೆ ಕಾನೂನು ತಿಳಿವಳಿಕೆ ನೀಡಿ ಶಾಲಾ, ಕಾಲೇಜುಗಳ ಸಮೀಪ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡಬಾರದು. 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನ ಮಾರಾಟ ಮಾಡಬಾರದೆಂದು ಎಚ್ಚರಿಕೆ ನೀಡಲಾಯಿತು. ತಂಬಾಕು ಉತ್ಪನ್ನಗಳು ಕ್ಯಾನ್ಸರ್ಗೆ ಮಾರಕ ಎಂಬುದನ್ನು ದೊಡ್ಡ ದೊಡ್ಡ ನಾಮಫಲಕಗಳಲ್ಲಿ ಮಳಿಗೆಗಳ ಮುಂದೆ ಕಡ್ಡಾಯ ವಾಗಿ ಪ್ರದರ್ಶಿಸಬೇಕು, ಶಾಲಾ, ಕಾಲೇಜುಗಳ ಸಮೀಪ ಕನಿಷ್ಠ 100 ಮೀಟರ್ ಅಂತರದಲ್ಲಿ ತಂಬಾಕು ಉತ್ಪನ್ನ ಮಾರಾಟಕ್ಕೆ ಅವಕಾಶವಿಲ್ಲ ಎಂದರು.
184 ಪ್ರಕರಣ ದಾಖಲು: ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ಬಾಬುರೆಡ್ಡಿ ನೇತೃತ್ವದಲ್ಲಿ ತಂಬಾಕು ನಿಯಂತ್ರಣ ಪ್ರಾಧಿಕಾರದ ಸದಸ್ಯರು, ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ತಂಬಾಕು ಉತ್ಪನ್ನಗಳ ಸೇವನೆ ದುಷ್ಪರಿಣಾಮದ ಬಗ್ಗೆ ತಿಳಿವಳಿಕೆ ಕಾನೂನು ಉಲ್ಲಂಘಟಿಸಿ ತಂಬಾಕು ಮಾರಾಟ ಮಾಡುತ್ತಿದ್ದವರ ಮೇಲೆ ಬರೋಬ್ಬರಿ ಒಟ್ಟು 184 ಪ್ರಕರಣಗಳನ್ನು ದಾಖಲಿಸಿ ಸಾವಿರಾರು ರೂ, ದಂಡ ವಿಧಿಸಿ ಎಚ್ಚರಿಕೆ ನೀಡಿದರು.