Advertisement

ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಲು ಮುಂದಾಗಿ: ಸ್ವಾಮಿ

05:06 PM May 25, 2018 | |

ಚಿತ್ರದುರ್ಗ: ಸಮಾಜದಲ್ಲಿನ ಹಿರಿಯರು ಪರಿಸರದ ಹಬ್ಬ ಆಚರಿಸುತ್ತಾ ಹೋದರೆ ಮಕ್ಕಳಲ್ಲಿ ಪರಿಸರದ ಜಾಗೃತಿ ಮೂಡುತ್ತದೆ ಎಂದು ಪರಿಸರವಾದಿ ಡಾ| ಎಚ್‌.ಕೆ.ಎಸ್‌. ಸ್ವಾಮಿ ಹೇಳಿದರು.

Advertisement

ನಗರದ ಶಾರದಾ ಸಭಾ ಭವನದಲ್ಲಿ ಸಂಸ್ಕಾರ ಭಾರತಿ ಸಂಘಟನೆ ವತಿಯಿಂದ ಭೂ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಪರಿಸರ ಸಂರಕ್ಷಣೆಗೆ ಮಾರ್ಗೊಪಾಯಗಳು ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಅವರು
ಮಾತನಾಡಿದರು. ಶಾಲಾ-ಕಾಲೇಜುಗಳಲ್ಲಿ ಪರಿಸರದ ದಿನಾಚರಣೆ ಗಂಭೀರವಾಗಿ ಪರಿಗಣಿಸಿ ಪರಿಸರದ ಹಬ್ಬಗಳನ್ನು ಮಕ್ಕಳಿಗೆ ಪರಿಚಯಿಸಬೇಕು ಎಂದರು.
 
 ಪ್ರೌಢಶಾಲೆಗೆ ಬಂದ ಮಕ್ಕಳಿಗೂ ಪರಿಸರದ ಹಬ್ಬಗಳ ಉದ್ದೇಶ ಅರ್ಥವಾಗುತ್ತಿಲ್ಲ. ವಿಶ್ವ ಜೀವ ವೈವಿಧ್ಯ ದಿನಾಚರಣೆ, ಭೂ ದಿನಾಚರಣೆ, ವಿಶ್ವ ಜಲ ದಿನಾಚರಣೆ, ವಿಶ್ವ ಪರಿಸರ ದಿನಾಚರಣೆ, ವಿಶ್ವ ಅರಣ್ಯ ದಿನಾಚರಣೆ, ಹೀಗೆ ತಿಂಗಳಿಗೊಂದು ಹಬ್ಬವನ್ನು ಶಾಲೆಗಳಲ್ಲಿ ಆಚರಿಸಬಹುದು. ಇಂತಹ ಹಬ್ಬಗಳು ಜನಸಾಮಾನ್ಯರಿಗೆ ತಲುಪಿಯೇ ಇಲ್ಲ
ಎಂದು ಹೇಳಿದರು. 

ಗಾಂಧೀಜಿಯವರ ಚಿಂತನೆಗಳಾದ ಸರಳತೆ, ಸ್ವದೇಶಿ, ಅಸಂಗ್ರಹ, ದೈಹಿಕ ಶ್ರಮ, ಇವೆಲ್ಲವೂ ಪರಿಸರದ ಸಂರಕ್ಷಣೆಗೆ ಅನುಕೂಲಕರ ತತ್ವಗಳು. ಜೀವನ ಶೈಲಿಯಲ್ಲಿ ಸರಳತೆ ತಂದು, ಗ್ರಾಮೀಣ ವಸ್ತುಗಳನ್ನು ಹೆಚ್ಚು ಬಳಸಿಕೊಳ್ಳುತ್ತ ಹೋದಾಗ, ಪರಿಸರ ತನ್ನಿಂದ ತಾನೇ ಸುಧಾರಿಸಿಕೊಳ್ಳಲು ಅವಕಾಶ ದೊರೆಯುತ್ತದೆ. ಕೈಗಾರಿಕೆಗಳಿಂದ ವಾಯು, ಜಲ, ಮಣ್ಣು, ಶಬ್ದ ಮಾಲಿನ್ಯಗಳು ಉಂಟಾಗಿವೆ. ಗಾಂಧೀಜಿಯವರ ಚಿಂತನೆಗಳನ್ನು, ಮಕ್ಕಳಿಗೆ, ಯುವ ಸಮುದಾಯಕ್ಕೆ ಮಾದರಿಗಳ ಮುಖಾಂತರ ಪ್ರಸ್ತುತ ಪಡಿಸಿದರೆ ಬದಲಾವಣೆ ಕಾಣಬಹುದು ಎಂದರು.

ಇಡೀ ಮನುಕುಲದ ಅಳಿವು ಉಳಿವು ಗುಡ್ಡ ಬೆಟ್ಟಗಳ ಮೇಲೆ ಅವಲಂಬಿಸಿದೆ. ಆದರೆ, ನಾವು ನಮ್ಮೂರಿನ ಗುಡ್ಡ ಬೆಟ್ಟಗಳ ಅಳಿವು ಉಳಿವು ಎಲ್ಲ ತಂತ್ರಜ್ಞಾನದ ಯಂತ್ರಗಳ ಕೈಯಲ್ಲಿ ಕೊಟ್ಟಿದ್ದೇವೆ. ಭೂಮಿ ನಮ್ಮ ತಾತ ಮುತ್ತಾತರಿಂದ ಬಳುವಳಿಯಾಗಿ ಬಂದಿಲ್ಲ. ಇದನ್ನು ನಾವು ಮುಂದಿನ ಪೀಳಿಗೆಯಿಂದ ಸಾಲವಾಗಿ ಪಡೆದದ್ದು ಎಂಬ ಅರಿವನ್ನು ಇಟ್ಟುಕೊಳ್ಳಬೇಕಾಗುತ್ತದೆ. ಹಾಗಾಗಿ ಸಾಲವನ್ನು ಸರಿಯಾಗಿ ಮರು ಪಾವತಿಸಬೇಕಾದ್ದು ನಮ್ಮ ಕರ್ತವ್ಯ ಎಂದರು.

ಸಂಸ್ಕಾರ ಭಾರತಿ ವಿಭಾಗ ಸಂಚಾಲಕ ರಾಜೀವ್‌ ಲೋಚನ್‌ ಮಾತನಾಡಿ, ಭಾರತೀಯ ಸಂಸ್ಕೃತಿ ಅತ್ಯಂತ ಪುರಾತನ ಸಂಸ್ಕೃತಿ. ಅದನ್ನು ಆಳವಾಗಿ ಅಧ್ಯಯನ ಮಾಡುವಂತ ಯುವಕರನ್ನ ತಯಾರು ಮಾಡಬೇಕಾಗಿದೆ. ಅವರಿಗೆ ಶಿಕ್ಷಣ ನೀಡಿ, ಪ್ರೋತ್ಸಾಹಿಸುವುದು ಇಂದಿನ ಅವಶ್ಯಕತೆಯಾಗಿದೆ. ಸಂಸ್ಕಾರ ಭಾರತೀಯ ಉದ್ದೇಶ ಜನರಲ್ಲಿರುವ ಸಾಂಸ್ಕೃತಿಕ, ಆಧ್ಯಾತ್ಮಿಕ, ಚಿಂತನೆಗಳನ್ನ ಬೆಳಕಿಗೆ ತರುವುದು, ಮಕ್ಕಳಲ್ಲಿರುವ ಕಲೆ, ಸಂಗೀತ, ನಾಟಕ, ಯಕ್ಷಗಾನ, ಕವಿತೆ, ಬರವಣಿಗೆ, ಹೊರತರಲು ಸಹಾಯಕವಾಗಿದೆ ಎಂದರು. ಸಂಚಾಲಕ ಎ.ಎನ್‌. ಮೋಹನ್‌
ಕುಮಾರ್‌ ಮಾತನಾಡಿ, ನಾವೀಗ ಬಾಹ್ಯಾಕಾಶ ಯುಗದಲ್ಲಿದ್ದೇವೆ. ಹಾಗೆಂದು ಭೂಮಿಯ ಯುಗವನ್ನು ಮರೆತುಬಿಟ್ಟರೆ ಹೇಗೆ? ಪಂಚ ಭೂತಗಳ ಪೈಕಿ ಅಗ್ನಿ, ನೀರು ಮತ್ತು ಭೂಮಿಯನ್ನು ಪೂಜಿಸುವ ನಾವು, ಗಾಳಿ ಮತ್ತು ಆಕಾಶವನ್ನು ಕಡೆಗಣಿಸುತ್ತಿದ್ದೇವೆ. ಆಕಾಶವನ್ನು ಕಸದ ತೊಟ್ಟಿಯಂತೆ ಬಳಸಲು ಶುರು ಮಾಡಿದ್ದೇವೆ. ನಿಸರ್ಗದ ಮೇಲೆ ಮನುಷ್ಯನ ಆಕ್ರಮಣ ಅತಿಯಾಗುತ್ತಿದೆ. ಭೂಮಿಯ ಎಲ್ಲ ಸಂಪನ್ಮೂಲಗಳನ್ನು ಮನುಷ್ಯರ ಭೋಗಕ್ಕೆ ಸಿದ್ಧಪಡಿಸಿ, ಮಾರಿ ಹಣ ಗಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.

Advertisement

ಸಂಸ್ಕಾರ ಭಾರತೀಯ ಅಧ್ಯಕ್ಷ ಟಿ.ಆರ್‌.ನಾಗರಾಜ್‌ ಮಾತನಾಡಿ, ಸಂಸ್ಕಾರ ಭಾರತೀಯ ಕಾರ್ಯಕ್ರಮಗಳಲ್ಲಿ ಗ್ರಾಮೀಣ ಮತ್ತು ಸ್ವದೇಶಿ ವಸ್ತ್ರವಾದ ಖಾದಿಯನ್ನು ಹೆಚ್ಚು ಬಳಸುತ್ತೇವೆ ಎಂದು ಭರವಸೆ ನೀಡಿದರು.

ಚಾರ್ಟೆಡ್‌ ಅಕೌಂಟೆಂಟ್‌ ಮುರಳಿಧರ್‌ ರಾವ್‌, ಪ್ರೇಮಾ, ದೇಸಾಯಿ, ಜಯಾ ಪ್ರಾಣೇಶ್‌, ಗುರುರಾಜ್‌, ರವಿಶಂಕರ್‌, ಲಕ್ಷ್ಮೀ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next