Advertisement

ಹುಟ್ಟು ಸಾಯುವುದಕ್ಕಲ್ಲ , ಸಾಧಿಸುವುದಕ್ಕೆ

01:53 AM Mar 25, 2021 | Team Udayavani |

ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಹುಟ್ಟುತ್ತಲೇ ಮಾನವ ಜೀವಿ ಜಗತ್ತಿನ ಎಲ್ಲ ಕಷ್ಟ-ನಷ್ಟ ಗಳಿಗೆ ಸ್ಪಂದಿಸ‌ಬೇಕಾದ ಅನಿವಾರ್ಯತೆ. ಯಾರೂ ಹುಟ್ಟುವಾಗ ಯಾರನ್ನೂ ಕೇಳಿ ಹುಟ್ಟಿರುವುದಿಲ್ಲ. ಹುಟ್ಟಿದ ಮಗುವಿಗೆ ಜಗತ್ತಿನ ನೋವು-ನಲಿವುಗಳು ಏನೆಂದು ತಿಳಿದಿರುವುದಿಲ್ಲ. ಹುಟ್ಟಿದ ತಪ್ಪಿಗೆ ಬದುಕಲೇ ಬೇಕು ತಾನೇ?

Advertisement

ವ್ಯಕಿಯೊಬ್ಬ ಹುಟ್ಟಲು ಇರುವ ಅವಕಾಶಗಳೆಷ್ಟು? ಎನ್ನುವ ಪ್ರಶ್ನೆಗೆ ಇರುವ ಉತ್ತರ ಒಂದೇ ಒಂದು ತಾನೇ? ಹಾಗಾಗಿ ನಮಗೆ ಆ ಭಗವಂತ ಕಲ್ಪಿಸಿದ ಒಂದು ಸುಂದರ ಅವಕಾಶವನ್ನು ಸಸೂತ್ರವಾಗಿ ಉಪಯೋಗಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ.

“ಜೀನಾ ಹೈ ತೋ ಖುಷೀ ಸೆ ಜೀನಾ ಹೈ’ ಎನ್ನುವ ಹಿಂದಿ ಕವಿಯೊಬ್ಬರ ಮಾತಿನಂತೆ ಬದುಕೆಂಬ ಬಾನಿನಲ್ಲಿ ಬೆಳಗುತ್ತಿರುವ ನಕ್ಷತ್ರದಂತೆ ಸುಂದರ‌ ಬಾಳುವೆ ನಮ್ಮ ದಾಗಬೇಕು. ಬದಲಾಗುತ್ತಿರುವ ಆಧುನಿಕ ಯುಗದಲ್ಲಿ ಬದಲಾವಣೆ ಅನಿವಾರ್ಯ. ಆದರೆ ಬದುಕನ್ನೇ ಬದಲಾಯಿಸಲು ಹೊರಟಿರುವ ಈಗಿನ ಯುವಜನಾಂಗಕ್ಕೆ ಏನು ಹೇಳಬೇಕು ಎಂಬುದು ತಿಳಿಯುತ್ತಿಲ್ಲ.

ಇವರಿಗೆಲ್ಲ ಬದುಕು ಬರಡಾಗಿ ಪರಿಣಮಿಸಿದ್ದಾದರೂ ಹೇಗೆ? ಅವ ರನ್ನು ಕಾಡುತ್ತಿರುವ ಸಮಸ್ಯೆಗಳು ಯಾವುವು? ಎನ್ನುವ ಕುರಿತು ಸ್ಪಷ್ಟ ಉತ್ತರ ಕೊಡುವುದು ಕಷ್ಟವಾದರೂ ಮೇಲ್ನೋಟಕ್ಕೆ ಹೇಳುವುದಾದರೆ ಇವರೆಲ್ಲ ಬದುಕನ್ನು ಸವಾಲಾಗಿ ಸ್ವೀಕರಿಸದೇ ಸಮಸ್ಯೆಯಾಗಿ ಸ್ವೀಕರಿಸಿದ್ದು.

ಅರಳುವ ಹೂವುಗಳೇ ಇತ್ತಕಡೆ ಗಮನ ಕೊಡಿ -ಸಮಸ್ಯೆಗಳು ಎದು ರಾದಾಗ ಕೂಡಲೇ ಪರ್ವತವೇ ತಲೆಗೆರಗಿದಂತೆ ಅಳುತ್ತಾ ಕೂರದೇ, ಸಮಸ್ಯೆಯ ಮೂಲ ಮತ್ತು ಅದಕ್ಕಿರುವ ಪರಿಹಾರದ ಕುರಿತು ಯೋಚಿಸಬೇಕು. ಅದಕ್ಕೆ ಹೇಳುವುದು “ಅಳು ಸಮಸ್ಯೆಗೆ ಪರಿಹಾರ ಅಲ್ಲ’ ಎಂದು. ನಮಗೆ ನಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲವೆಂದು ತಿಳಿದರೆ ಪರಿಹಾರ ನೀಡಬಲ್ಲ ಅಥವಾ ತಾತ್ಕಾಲಿಕ ಸಮಾಧಾನವ‌ನ್ನಾದರೂ ಹೇಳುವ ನಮ್ಮ ಹತ್ತಿರದವರು ಎನ್ನಿಸುವವರಲ್ಲಿ, ಹೇಳಿ ಕೊಳ್ಳುವ ಕೆಲಸವಾದರೂ ಆಗಬೇಕು.

Advertisement

ಒಳ್ಳೆಯದು ಮತ್ತು ಕೆಟ್ಟದನ್ನು ಸಮಾನವಾಗಿ ಸ್ವೀಕರಿಸಲು ಕಷ್ಟವಾದರೂ ಎರಡನ್ನೂ ಸ್ವೀಕರಿಸಲು ಮಾನಸಿಕವಾಗಿ ಸಿದ್ಧರಾಗಬೇಕು. ಆತ್ಮವಿಶ್ವಾಸ ಬೇಕು ಆದರೆ ಅತಿಯಾದ ಆತ್ಮವಿಶ್ವಾಸ ಬೇಡ. ಈ ಕೆಲಸವನ್ನು ನಾನು ಹೀಗೆ ಮಾಡಬಲ್ಲೆ ಎನ್ನುವ ಛಲವಿರಲಿ. ಆದರೆ ಇದು ಹೀಗೆಯೇ ಆಗಬೇಕು ಎನ್ನುವ ಹಠಮಾರಿತನ ಸಲ್ಲದು. ಏಕೆಂದರೆ ನಾವೆಣಿಸಿದಂತೆ ಎಲ್ಲವೂ ಆಗುವುದಿಲ್ಲ ತಾನೇ? ಜೀವನವೆಂಬ ತಿರುಗು ಚಕ್ರದಲ್ಲಿ ಒಮ್ಮೆ ಮೇಲ್ಭಾಗದಲ್ಲಿರುವ ಭಾಗ, ಮತ್ತೂಮ್ಮೆ ಕೆಳಗೆ ಇಳಿಯಲೇ ಬೇಕು. ಇದು ಪ್ರಕೃತಿ ಸಹಜ ಎನ್ನುವುದನ್ನು ತಿಳಿದರೆ ಬದುಕು ಬರಡಾಗಲು ಖಂಡಿತಾ ಸಾಧ್ಯವಿಲ್ಲ. “ಆಗುವುದು ಎಲ್ಲ ಒಳ್ಳೆಯದಕ್ಕೆ’ ಎಂದು ಭಾವಿಸಿ ಮುನ್ನಡೆಯಬೇಕು.

ತನ್ನನ್ನು ತಾನು ಅತಿಯಾಗಿ ಪ್ರೀತಿಸುವವನಿಗೆ ಪ್ರೇಮಪತ್ರ ಬರೆಯುವ ಪ್ರಮೇಯವೇ ಬರುವುದಿಲ್ಲವಂತೆ. ಮೊದಲಿಗೆ ನಾವು ನಮ್ಮನ್ನು ಪ್ರೀತಿಸುವುದನ್ನು ಕಲಿತರೆ ಬದುಕನ್ನು ಪ್ರೀತಿಸುವುದು ತನ್ನಿಂದ ತಾನೇ ಬರುತ್ತದೆ ಎನ್ನುವುದರಲ್ಲಿ ಸಂಶಯ ವಿಲ್ಲ. ಆದುದರಿಂದ ನಾವು ಬದು ಕಿಯೂ ಸತ್ತಂತೆ ಇರುವುದಕ್ಕಿಂತ ಜೀವನದ ಅಲ್ಪಾವಧಿಯಲ್ಲಿ ಸಾಧನೆಯತ್ತ ಮುನ್ನಡೆದು ಬದುಕುವಂಥವರಾಗಬೇಕು. “ಹುಟ್ಟು ಕೇವಲ ಸಾಯುವುದಕ್ಕಲ್ಲ , ಸಾಧಿಸುವುದಕ್ಕೆ’ ಎನ್ನುವುದನ್ನು ತಿಳಿದು ಉನ್ನತವಾದ ಚಿಂತನೆಗಳೊಂದಿಗೆ ಉತ್ತಮವಾದ ಗುರಿ ಹೊಂದಿ ಉತ್ತರೋತ್ತರ ಶ್ರೇಯಸ್ಸಿಗೆ ಇಂದೇ ಅಡಿ ಇಡೋಣ.

- ವಾಣಿಶ್ರೀ ಅಮ್ಮುಂಜೆ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next