Advertisement

Tirupati Laddu Case: ಅ.3ರವರೆಗೆ ಎಸ್‌ಐಟಿ ತನಿಖೆಗೆ ತಡೆ

05:49 PM Oct 01, 2024 | Team Udayavani |

ಹೈದರಾಬಾದ್:‌ ಆಂಧ್ರಪ್ರದೇಶದ ಪೊಲೀಸ್ ಮಹಾನಿರ್ದೇಶಕ (DGP) ದ್ವಾರಕಾ ತಿರುಮಲ ರಾವ್ ಅವರು ತಿರುಪತಿ ಲಡ್ಡು ಪ್ರಸಾದ ಪ್ರಕರಣಕ್ಕೆ (Tirupati Laddu Case) ಸಂಬಂಧಿಸಿದಂತೆ ವಿಶೇಷ ತನಿಖಾ ತಂಡದ (SIT) ತನಿಖೆಯನ್ನು ಅಮಾನತುಗೊಳಿಸಿದ್ದಾರೆ.

Advertisement

ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ಅಕ್ಟೋಬರ್ 3 ರವರೆಗೆ ತನಿಖೆಯನ್ನು ತಡೆಹಿಡಿಯಲಾಗಿದೆ. ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದ ತಯಾರಿಕೆಯಲ್ಲಿ ಕಲಬೆರಕೆ ನಡೆದಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸುವ ಹೊಣೆಯನ್ನು ಎಸ್‌ಐಟಿಗೆ ವಹಿಸಲಾಗಿತ್ತು.

ತನಿಖೆಯ ಸಮಗ್ರತೆಯನ್ನು ಕಾಪಾಡುವ ಮುನ್ನೆಚ್ಚರಿಕೆಯಾಗಿ ತನಿಖೆಯನ್ನು ವಿರಾಮಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಅಮಾನತು ಮಾಡುವುದರಿಂದ ಯಾವುದೇ ಸಂಭಾವ್ಯ ಕಾನೂನು ತೊಡಕುಗಳನ್ನು ತಡೆಗಟ್ಟುತ್ತದೆ. ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆಗಾಗಿ ಇದು ಮಾಡಲಾಗುತ್ತಿದೆ. ಸುಪ್ರೀಂ ಕೋರ್ಟ್ ತನ್ನ ಮಾರ್ಗದರ್ಶನ ನೀಡಿದ ನಂತರ, ಅದರಂತೆ ತನಿಖೆ ಮುಂದುವರಿಯುತ್ತದೆ ಎಂದು ಡಿಜಿಪಿ ರಾವ್ ಹೇಳಿದರು.

ಸುಪ್ರೀಂ ತರಾಟೆ

“ಮೇಲ್ನೋಟಕ್ಕೆ ತಿರುಪತಿ ಲಡ್ಡು ಪ್ರಸಾದದಲ್ಲಿ ಕಲಬೆರಕೆಯ ತುಪ್ಪವನ್ನೇ ಬಳಸಲಾಗಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ಇಲ್ಲ. ಧರ್ಮ ಮತ್ತು ರಾಜಕೀಯವನ್ನು ಯಾವತ್ತೂ ಬೆರೆಯಲು ಬಿಡಬಾರದು. ಕನಿಷ್ಠಪಕ್ಷ ದೇವರನ್ನಾದರೂ ನಿಮ್ಮ ರಾಜಕೀಯದಿಂದ ದೂರವಿಡಿ” ಎಂದು ಸುಪ್ರೀಂ ಕೋರ್ಟ್ ಸೋಮವಾರ ಆಂಧ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.

Advertisement

ತುಪ್ಪ ಕಲಬೆರಕೆಯಾಗಿದೆ ಎಂಬುದಕ್ಕಾಗಲಿ, ಕಲಬೆರಕೆಯಾಗಿದೆ ಎನ್ನಲಾದ ತುಪ್ಪದಿಂದಲೇ ಲಡ್ಡು ತಯಾರಿಸಲಾಗಿದೆ ಎಂಬುದಕ್ಕಾಗಲೀ ಸೂಕ್ತ ಪುರಾವೆಗಳಿಲ್ಲದ ಬಗ್ಗೆಯೂ ನ್ಯಾಯಪೀಠ ಆಕ್ಷೇಪ ವ್ಯಕ್ತಪಡಿಸಿದೆ. “ತನಿಖಾ ವರದಿ ಬರುವ ಮುನ್ನವೇ ಮಾಧ್ಯಮಗಳ ಮುಂದೆ ಹೋಗುವ ಆವಶ್ಯಕತೆ ಏನಿತ್ತು? ನೀವು ಸಾಂವಿಧಾನಿಕ ಹುದ್ದೆಯಲ್ಲಿ ಇರುವವರು. ರಾಜಕೀಯದಿಂದ ದೇವರನ್ನು ದೂರವಿಡಬೇಕೆಂದು ನಿರೀಕ್ಷಿಸುತ್ತೇವೆ. ಲ್ಯಾಬ್‌ ವರದಿ ಬಂದಿದ್ದು ಜುಲೈಯಲ್ಲಿ, ನಿಮ್ಮ ಹೇಳಿಕೆ ಬಿಡುಗಡೆಯಾಗಿದ್ದು ಸೆಪ್ಟಂಬರ್‌ನಲ್ಲಿ. ಅಲ್ಲದೆ ಲ್ಯಾಬ್‌ ವರದಿಯೂ ಸ್ಪಷ್ಟವಾಗಿಲ್ಲ. ಇದಕ್ಕೆ ನಿಮ್ಮ ಬಳಿ ಸಾಕ್ಷ್ಯ ಇದೆಯೇ? ಎಂದು ನ್ಯಾಯಪೀಠ ಪ್ರಶ್ನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next