Advertisement

ಹೆಚ್ಚುತ್ತಿದೆ ಅಕ್ರಮ ಮರಳು ದಂಧೆ

11:44 AM Feb 15, 2020 | Naveen |

ತೀರ್ಥಹಳ್ಳಿ: ತಾಲೂಕಿನಲ್ಲಿ ಸರ್ಕಾರ ನಿಗದಿ ಪಡಿಸಿರುವ ಕೆಲವು ಮರಳು ಕ್ವಾರಿಗಳು ಇನ್ನು ತೆರೆಯದಿರುವ ಕಾರಣ ಅಕ್ರಮ ಮರಳು ಲೂಟಿಕೋರರಿಗೆ ಪ್ರತಿದಿನ ಹಬ್ಬದೂಟವಾಗುತ್ತಿದೆ. ಆದರೆ ಪಾದಚಾರಿಗಳಿಗೆ, ವಾಯು ವಿಹಾರಕ್ಕೆ ಹೋಗುವವರಿಗೆ, ವಾಹನ ಸವಾರರಿಗೆ ಬೆಳಗಿನ ಮುಸುಕಿನ ಜಾವದಲ್ಲಿ ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ಉದ್ಭವವಾಗಿದೆ.

Advertisement

ಅಕ್ರಮ ಮರಳು ದಂಧೆ ತಡೆಯಬೇಕಾದ ಅಧಿಕಾರಿಗಳು ಕಾಂಚಾಣ ಜಣ ಜಣದ ಆಟ ಕಂಡು ಜಾಣ ಮೌನ ವಹಿಸಿದ್ದಾರೆ. ಈ ಜಾಣ ಮೌನದ ಹಿಂದಿನ ಗುಟ್ಟೇನು ಎಂದು ಅಧಿಕಾರಿಗಳೇ ತಿಳಿಸಬೇಕಾಗಿದೆ. ಕಳೆದ ವರ್ಷ ಸುರಿದ ಭಾರೀ ಮಳೆಯಿಂದ ತುಂಗಾ ನದಿಯ ಅಕ್ಕಪಕ್ಕ ಭಾರೀ ಪ್ರಮಾಣದ ಮರಳು ಶೇಖರಣೆಯಾಗಿದ್ದು ಪ್ರತಿದಿನ ಹಗಲು- ರಾತ್ರಿಯೆನ್ನದೆ ತುಂಗಾ ನದಿಯ ಪಾತ್ರದಿಂದ ಹೊರಬೈಲು, ಕೌರಿಬೈಲು, ಬುಕ್ಲಾಪುರ, ಕುಶಾವತಿ, ಸಂಕದಹೊಳೆ,
ಕಿತ್ತಿನಗದ್ದೆ, ಮೇಳಿಗೆ, ರಂಜದಕಟ್ಟೆ, ಕುರುವಳ್ಳಿ ತೋಟಗಾರಿಕಾ ಇಲಾಖೆ, ಹೆಗ್ಗೇಬೈಲು, ತುಂಬಡಿ, ಹುಣಸವಳ್ಳಿಯ ನದಿ ಪಾತ್ರದಿಂದ ಅಕ್ರಮವಾಗಿ ಪಿಕಪ್‌, ಟ್ರ್ಯಾಕ್ಟರ್‌ಗಳನ್ನು ಬಳಸಿ ಮರಳು ತೆಗೆಯಲಾಗುತ್ತಿತ್ತು.

ಇದರಿಂದ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ಆದಾಯ ಕುಂಠಿತವಾಗುತ್ತಿದೆ. ಈ ಬಗ್ಗೆ ಇತ್ತೀಚೆಗೆ ಶಿವಮೊಗ್ಗ ಕೆಡಿಪಿ ಸಭೆಯಲ್ಲಿ ಶಿವಮೊಗ್ಗ ಜಿಲ್ಲೆ ಉಸ್ತುವಾರಿ ಸಚಿವರಾದ ಈಶ್ವರಪ್ಪ ಮತ್ತು ಶಾಸಕರ ಉಪಸ್ಥಿತಿಯಲ್ಲೂ ಹಾಗೂ ತೀರ್ಥಹಳ್ಳಿ ಕೆಡಿಪಿ ಸಭೆಯಲ್ಲೂ ಬಿಸಿಬಿಸಿ ಚರ್ಚೆಯಾದರೂ ಚರ್ಚೆಯ ವಿಷಯ ಕೇವಲ ಮೀಟಿಂಗ್‌ ಹಾಗೂ ಪತ್ರಿಕೆಗಳಲ್ಲಿ ಪ್ರಕಟವಾಗಿದೆಯೇ ಹೊರತು ಅಕ್ರಮ ಮರಳು ಸಾಗಾಟ ಮಾತ್ರ ನಿಂತಿಲ್ಲ.

ಕೆಲವು ಭಾಗಗಳಲ್ಲಿ ರಾತ್ರಿ ಮರಳು ತೆಗೆಯುವುದರಿಂದ ಅದರ ಶಬ್ದದಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗಿದೆ ಗ್ರಾಮಸ್ಥರು ಸಂಬಂಧಪಟ್ಟ ಗ್ರಾಪಂಗಳಿಗೆ ತಿಳಿಸಿದರೂ ಸಹ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಗ್ರಾಮಸ್ಥರು ಪೊಲೀಸ್‌, ಅರಣ್ಯ ಮತ್ತು ಗಣಿ ಇಲಾಖೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂಬ ಮಾತು ಸಾರ್ವಜನಿಕರಿಂದ ಕೇಳಿಬರುತ್ತಿದೆ.

ಇಲಾಖಾ ಅಧಿಕಾರಿಗಳೇ ಅಕ್ರಮ ದಂಧೆಕೋರರೊಂದಿಗೆ ಶಾಮೀಲಾಗಿದ್ದಾರೆಂದು ಜನರು ಅಂಗಡಿ- ಮುಂಗಟ್ಟುಗಳಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಅನೇಕ ವರ್ಷಗಳ ಹಿಂದೆ ಗಂಧ ಸಾಗಾಟದ ದಂಧೆಯಿದ್ದಾಗಲೂ ಇದೇ ರೀತಿಯಲ್ಲಿ ಜನರ ನೆಮ್ಮದಿ ಕೆಡಿಸುತ್ತಿತ್ತು. ಈಗ ಅಕ್ರಮ ಮರಳಿನ ದಂಧೆಯಾಗಿದೆ. ಆದ್ದರಿಂದ ಜನರು ಸ್ಯಾಂಡಲ್‌ ಹೋಗಿದೆ ಸ್ಯಾಂಡ್‌ ಬಂದಿದೆ ಎಂಬ ಮಾತುಗಳನ್ನಾಡುತ್ತಿದ್ದಾರೆ.

Advertisement

ತೀರ್ಥಹಳ್ಳಿಯಿಂದ ಪಿಕಪ್‌ ಮತ್ತು ಟ್ರ್ಯಾಕ್ಟರ್‌ ಗಳಲ್ಲಿ ಈ ದಂಧೆಕೋರರು ಒಂದು ಕಡೆ ಕಾಟಿಂಗ್‌ ಮಾಡಿ ಕಾಟಿಂಗ್‌ ಮಾಡಿದ ಮರಳನ್ನು ಟಿಪ್ಪರ್‌ ಮತ್ತು ಲಾರಿಗೆ ತುಂಬಿಕೊಂಡು ಹೋಗುತ್ತಿದ್ದಾರೆ. ಪ್ರತಿ ದಿನ ಅಕ್ರಮ ಮರಳು ಸಾಗಾಟದ ವಾಹನಗಳು ತೀರ್ಥಹಳ್ಳಿ ಪಟ್ಟಣದ ಮುಖಾಂತರ ಮಾಳೂರು ಠಾಣೆ ಹಾಗೂ ಮಂಡಗದ್ದೆ ಅರಣ್ಯ ಇಲಾಖೆ ಕಚೇರಿ ಎದುರೇ ಯಾವುದೆ ಭಯಭೀತಿ ಇಲ್ಲದೇ ಸಂಚರಿಸುತ್ತಿವೆ ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ತೀರ್ಥಹಳ್ಳಿ ಮತ್ತು ಶಿವಮೊಗ್ಗದ ನಡುವಿನ ಗಾಜನೂರಿನ ಫಾರೆಸ್ಟ್‌ ಗೇಟ್‌ ಬಳಿ ಈ ಅಕ್ರಮ ಮರಳು ಸಾಗಾಟದ ಟಿಪ್ಪರ್‌ ಲಾರಿ ಹೋಗುತ್ತಿದ್ದಂತೆ ಲಾರಿಯನ್ನು ತಡೆದು ತಪಾಸಣೆ ಮಾಡದೆ ಲಾರಿಯೊಂದಕ್ಕೆ ಎರಡು ಸಾವಿರ ರೂ. ಹಣ ಪಡೆದುಕೊಂಡು ಗೇಟ್‌ನಿಂದ ಬಿಡುತ್ತಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಟಿಪ್ಪರ್‌ ಚಾಲಕರೊಬ್ಬರು ಮಾಹಿತಿ ನೀಡಿದ್ದಾರೆ.

ರಾತ್ರಿ ಮತ್ತು ಬೆಳಗಿನ ಹೊತ್ತು ಅಕ್ರಮ ಮರಳು ಸಾಗಾಟದ ವಾಹನಗಳು ರಸ್ತೆಯಲ್ಲಿ ಅತಿ ವೇಗ ಮತ್ತು ಪೈಪೋಟಿಯಿಂದ ಸಂಚರಿಸುತ್ತಿರುವುದರಿಂದ ಬೆಳಗಿನ ಸಮಯದಲ್ಲಿ ಓಡಾಡುವ ಪಾದಚಾರಿಗಳಿಗೆ, ವಾಹನ ಸವಾರರಿಗೆ ಕಂಟಕ ಕಟ್ಟಿಟ್ಟ ಬುತ್ತಿ. ಈ ಬಗ್ಗೆ ಶಿವಮೊಗ್ಗ ಜಿಲ್ಲಾ ರಕ್ಷಣಾ ಧಿಕಾರಿಗಳು ತೀರ್ಥಹಳ್ಳಿಯ ಡಿವೈಎಸ್‌ಪಿ ರವಿಕುಮಾರ್‌, ಸರ್ಕಲ್‌ ಇನ್ಸೆಪೆಕ್ಟರ್‌ ಗಣೇಶಪ್ಪ, ಸಬ್‌ ಇನ್ಸೆಪೆಕ್ಟರ್‌ ಸುಷ್ಮಾ ಅವರು ತಕ್ಷಣ ಗಮನಿಸಿ ಅಕ್ರಮ ಮರಳು ತುಂಬಿ ಅತಿ ವೇಗದ ಸಾಗಾಟಕ್ಕೆ ತಡೆ ನೀಡಲು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next